‘ಲಬಸಾ’- ಇದೇನಿದು ಹೊಸದು? ಎನ್ನುವವರಿಗೆ ಇಲ್ಲಿದೆ ಉತ್ತರ. ಯಶವಂತ ಚಿತ್ತಾಲರ ‘ಲಬಸಾ’ಗಳ ಸಂಗ್ರಹ ‘ದಣಪೆಯಾಚಿನ ಓಣಿ’ಯನ್ನು ಪ್ರಿಸಂ ಹೊರತಂದಿದೆ.
ತಾನು ಕಾವ್ಯ ಬರೆಯಲು ಸಾಧ್ಯವೇ? ಎಂದು ಅನುಮಾನಗೊಂಡ ಚಿತ್ತಾಲರು ಹುಡುಕಿದ ಕಾವ್ಯ ಪೂರ್ವ ಪ್ರಯೋಗವೇ ಲ. ಬ. ಸಾ. ಅಂದರೆ ಲಯಬದ್ದ ಸಾಲುಗಳು.
‘ನಾನು ಕವಿತೆ ಬರೆಯಲಾರೆ. ಅಣ್ಣನಿಗೆ ಮೀಸಲಾದ ಕ್ಷೇತ್ರವದು. ಅಲ್ಲಿ ಕಾಲಿಡುವ ಧೈರ್ಯವಿಲ್ಲ. ಅರ್ಹತೆಯೂ ಇಲ್ಲ’ ಎಂದು ತೀರ್ಮಾನಿಸಿದ ಯಶವಂತ ಚಿತ್ತಾಲರು ಬರೆದದ್ದು ಲಬಸಾ ಗಳನ್ನು. ಅವರನ್ನೂ ಕವಿತೆಗೆ ಕೈ ಹಚ್ಚುವಂತೆ ಮಾಡಿದ್ದು ಜಯಂತ್, ಎಂ ಎಸ್ ಶ್ರೀರಾಮ್ ಹಾಗೂ ವಿವೇಕ ಶಾನಭಾಗ್.
ಮಾಯಾ ದರ್ಪಣ ಎಂಬ ಹೆಸರಿನಲ್ಲಿ ಮ್ಯಾಜಿಕ್ ರಿಯಲಿಸಂ ಕುರಿತ ಸಂಚಿಕೆ ತರಲು ಎಲ್ಲಾ ಸಜ್ಜಾಗಿದ್ದರು. ಅದರ ಯೋಜನೆಯೇ ಮಜವಾಗಿತ್ತು. ಲೇಖಕರಿಂದ ಅವರು ಈವರೆಗೆ ಕೈಯಾಡಿಸದ ಸಾಹಿತ್ಯ ಪ್ರಕಾರದಲ್ಲಿ ಬರೆಸುವುದು. ಅಂತೂ ಚಿತ್ತಾಲರು ‘ಬ್ಯಾಂಡ್ ಸ್ಟಾಂಡಿನ ಬಂಡೆಗಳು’ ಎಂಬ ಲಬಸಾ ಬರೆದೇಬಿಟ್ಟರು. ಆದರೆ ಮಾಯ ದರ್ಪಣವೇ ಪ್ರಕಟವಾಗಲಿಲ್ಲ.
ಇರಲಿಬಿಡಿ, ಆಗ ಚಿತ್ತಾಲರಿಗೆ ಇವರೆಲ್ಲಾ ಸೇರಿ ಒಂದು ಗೀಳು ಹುಟ್ಟಿಸಿದರಲ್ಲ ಅದು ಈಗ ಫಲ ಕೊಟ್ಟಿದೆ. ಪ್ರಿಸಮ್ ‘ದಣಪೆಯಾಚಿನ ಓಣಿ’ಯನ್ನು ನೋಡುವಂತೆ ಮಾಡಿದೆ.






0 Comments