ಪಾ ವೆಂ ಆಚಾರ್ಯ ಅವರ “ಪದಾರ್ಥ ಚಿಂತಾಮಣಿ” ಪುಸ್ತಕದ ಬಗ್ಗೆ ಕೇಳಿಯೇ ಇರುತ್ತೀರಿ. ಕುತೂಹಲಕ್ಕೆಂದು ಅದರಲ್ಲಿ ಕಣ್ಣಾಡಿಸುತ್ತಿದ್ದಾಗ “ರೈತ” ಶಬ್ದ ಕುರಿತ ವಿವರಣೆ ಗಮನ ಸೆಳೆಯಿತು. ಸ್ವಾರಸ್ಯಕರವಾಗಿದೆ.
*
ರೈತ ಶಬ್ದ ನಮ್ಮಲ್ಲಿ ಇಂದು ಎಷ್ಟು ವ್ಯಾಪಕವಾಗಿದೆಯೆಂದರೆ, ಅದನ್ನು ಅಚ್ಚಕನ್ನಡವೆಂದೇ ಭ್ರಮಿಸುವ ಸಂಭವವಿದೆ. ಸಾಮಾನ್ಯವಾಗಿ ಕೃಷಿಕ ಮತ್ತು ವಿಶೇಷವಾಗಿ ಗೇಣಿಗೆ ಜಮೀನು ಮಾಡುವವನೆಂದಾಗಲಿ ಕೆಲವು ಪ್ರದೇಶಗಳಲ್ಲಿ ಸ್ವತಂತ್ರವಾಗಿ ಸರಕಾರಕ್ಕೆ ಕಂದಾಯ ಕೊಟ್ಟು ಹೊಲ ಮಾಡುವ ಕೃಷಿಕನೆಂದಾಗಲಿ ಅದಕ್ಕೆ ಅರ್ಥಗಳು ಬಂದಿವೆ. ರೈತವಾರಿ ಎಂಬುದನ್ನು ಜಮೀನ್ದಾರಿಗೆ ವಿರುದ್ಧವಾದ ಆರ್ಥಿಕ ಸಂಬಂಧವನ್ನು ಸೂಚಿಸಲು ಬಳಸುವುದುಂಟು. ಹಿಂದೀ ಮುಂತಾದ ಉತ್ತರದ ಭಾಷೆಗಳಲ್ಲಿ ಈ ಪದ ಉಂಟು. ಆದರೆ ಪ್ರಾಚೀನ ಕೋಶಗಳಲ್ಲಿ ಇದನ್ನು ನಾವು ಕಾಣೆವು. ನಿಜಕ್ಕೂ ಇದು ಭಾರತದಲ್ಲಿ ಮುಸ್ಲಿಮ್ ಆಳಿಕೆಯದಾಗಿದೆ. ಅರಬ್ಬೀ ಭಾಷೆಯಲ್ಲಿ ರ ಅಯ್ಯತ್ ಎಂದರೆ ಅಧೀನ ಕೃಷಿಕ ಅಥವಾ ಕೇವಲ ಪ್ರಜೆ ಎಂದರ್ಥ. ಪ್ರಧಾನವಾಗಿ ಕುರಿಗಾಹಿಗಳಿಗೆ ಅನ್ವಯಿಸುವ ರಯಾ ಶಬ್ದದಿಂದ ಅದು ಉದ್ಭವಿಸಿದೆ. ಅನಂತರದ ಕಾಲದಲ್ಲಿ ತಲೆ ತೆರಿಗೆಗೆ ಅರ್ಹನಾದ (ತುರ್ಕಿ ಸುಲ್ತಾನನ) ಮುಸ್ಲಿಮೇತರ ಪ್ರಜೆ ಎಂಬರ್ಥದಲ್ಲಿ ಅದು ಚಲಾವಣೆಗೆ ಬಂತು. ಬಹುಶಃ ಭಾರತದಲ್ಲಿಯೂ ಇದೇ ಅರ್ಥದಲ್ಲಿ – ಮುಸ್ಲಿಮ್ ರಾಜರ ಹಿಂದೂ ಪ್ರಜೆಗಳು – ಎಂಬುದರಿಂದ ಆರಂಭಿಸಿ ಅರ್ಥ ಸಂಕೋಚ ಹೊಂದಿ ಹಿಂದೂ ಕೃಷಿಕರಿಗೆ ಅದು ಅನ್ವಯಿಸಿರಬಹುದು. ಹಿಂದಿ ಬಂಗಾಲಿಗಳಲ್ಲಿ ಜಮೀನ್ದಾರರ ಒಕ್ಕಲುಗಳನ್ನು ಪ್ರಜಾ ಎಂದೂ ಕರೆಯುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿ ರೈತ ಕ್ರಿ.ಶ. ೧೬೬೫ರಲ್ಲಿ ಮೊದಲು ತಲೆಹಾಕಿತು.
*
ಪ್ರೊ. ಜಿ ವೆಂಕಟಸುಬ್ಬಯ್ಯ ಅವರು ತಮ್ಮ “ಎರವಲು ಪದಕೋಶ”ದಲ್ಲಿ ರೈತ ಶಬ್ದದ ಹಿಂದಿ ಮತ್ತು ಮರಾಠಿ ಮೂಲಗಳನ್ನೂ ಉಲ್ಲೇಖಿಸಿದ್ದಾರೆ. ಹಿಂದಿ ಮೂಲ: ರಯತ್, ರಯ್ಯತ್, ರಯ್ಯತ್ತಿ. ಮರಾಠಿಯಲ್ಲಿ ಕೂಡ ರಯತ್ ಎಂದೇ ಇದೆ.
*
ಒಂದ್ನಿಮಿಷ ಸ್ವಾಮೀ
ಯಾರೋ ಕರೆದಂತಾಯಿತು ಅಂದಿರಾ? ಅದು, ನಾ ಕಸ್ತೂರಿಯವರ “ಅನರ್ಥ ಕೋಶ”. ಅದು ರೈತರ ಕುರಿತು ಕೊಡುವ ಡೆಫಿನಿಷನ್ನೇ ಬೇರೆ. ಅದು ತಮಾಷೆಯದ್ದಾ, ಕಟು ವಾಸ್ತವದ ಬಿಂಬವಾ ಅಂತಾ ಗ್ರಹಿಸೋದು ಅವರವರ ಭಾವಕ್ಕೆ ಬಿಟ್ಟಿದ್ದು.
“ಅನರ್ಥ ಕೋಶ”ದ ಪ್ರಕಾರ, ರೈತರು ಎಂದರೆ-
ಬೇಸಾಯವನ್ನು ತೊರೆದು, ಪಟ್ಟಣಗಳನ್ನು ಸೇರಿ ಕೆಡುತ್ತಿರುವ ಜನಸ್ತೋಮ.
thats true