ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರಿಯಾಲಿಟಿ ಶೋ'ಗಳ ರಿಯಾಲಿಟಿ

-ಜಿ ಎನ್ ಮೋಹನ್ ‘ಅರ್ಬುದ ಕಾಡು’ ನಾಟಕ ಮಾಡುತ್ತಿದ್ದೇವೆ ಬನ್ನಿ ಅಂತ ‘ವಿಜಯನಗರ ಬಿಂಬ’ದ ಶೋಭಾ ವೆಂಕಟೇಶ್ ಅವರು ಕರೆದಾಗ ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ…’ ನೆನಪಿಗೆ ಬಂತು. ಯಾಕೆಂದರೆ ‘ಅರ್ಬುದ’ ಎಂಬ ಹೆಸರೇ ಹಾಗೇ..ಅದು ಪುಣ್ಯಕೋಟಿಯನ್ನೂ, ಅದು ಸತ್ಯವಾಕ್ಯ ಪರಿಪಾಲನೆ ಮಾಡಿದ್ದನ್ನು ನೋಡಿ ಮನನೊಂದು ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟ ಆ ಅರ್ಬುದನನ್ನೂ ನೆನಪಿಸಿಬಿಡುತ್ತದೆ. ಎಸ್ ವಿ ಕಶ್ಯಪ್ ಅರ್ಬುದ ಇದ್ದ ಕಾಡನ್ನು ತಮ್ಮ ನಾಟಕದ ವಸ್ತುವಾಗಿ ಕೈಗೆತ್ತಿಕೊಂಡಿದ್ದಾರೆ ಎಂದು ಗೊತ್ತಾದಾಗ ಇದು ಅಗೈನ್ ಅದೇ ಪುಣ್ಯಕೋಟಿ-ಹುಲಿರಾಯನ ಕಥೆಗೆ ಕೊಟ್ಟ ಮತ್ತೊಂದು ರೀತಿಯ ವ್ಯಾಖ್ಯಾನ ಅಷ್ಟೇ ಎಂದುಕೊಂಡಿದ್ದೆ. ಆದರೂ ಈ ನಾಟಕ ನೋಡಲು ನನಗೆ ಕುತೂಹಲ ಇದ್ದದ್ದು ಯಾಕೆಂದರೆ ಎಸ್ ವಿ ಸುಷ್ಮಾ ಈ ನಾಟಕ ನಿರ್ದೇಶಿಸುತ್ತಿದ್ದಾರೆ ಎಂಬ ಕಾರಣಕ್ಕೆ. ಸುಷ್ಮಾ ಈ ಹಿಂದೆ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಹೂ ಅರಳುವ ಸಮಯ’ವನ್ನು ರಂಗಕ್ಕೆ ತಂದು ಕೂರಿಸಿದ ರೀತಿ ನೋಡಿ ದಂಗಾಗಿ ಹೋಗಿದ್ದೆ. ಮಕ್ಕಳ ಒಳಗಿನ ಆ ನವಿರುತನವನ್ನು ಹಾಗಾಗೇ ಎತ್ತಿ ಕೊಟ್ಟು ಬಿಡುವ ಸುಷ್ಮಾ ರಂಗದ ಮೇಲೆ ಒಂದು ಮ್ಯಾಜಿಕ್ ಸಾಧಿಸಿದ್ದರು. ಆ ಕಾರಣದಿಂದ ನಾಟಕಕ್ಕೆ ಹೋದ ನನಗೆ ಒಂದು ರೀತಿಯಲ್ಲಿ ನನ್ನನ್ನೇ ಕಟಕಟೆಯಲ್ಲಿ ನಿಲ್ಲಿಸಲು ನೋಡುತ್ತಿದ್ದಾರೇನೋ ಎನ್ನುವ ಅನುಭವವಾಯಿತು. ಅರ್ಬುದ ಕಾಡನ್ನು ಕಶ್ಯಪ್ ಕಂಡ ರೀತಿಯೇ ಭಿನ್ನ. ‘ಶುದ್ಧಗೆ’ ಬರೆದ ಕಶ್ಯಪ್ ಭಾಷೆಗೆ ಒಂದು ಚಂದಾದ ಅರ್ಥ ಕೊಟ್ಟಿದ್ದಾನೆ ಎಂದು ಕೇಳಿ ಗೊತ್ತಿತ್ತು. ಆದರೆ ‘ಅರ್ಬುದ ಕಾಡು’ ನೋಡಿದಾಗ ಎ ಎಸ್ ಮೂರ್ತಿ ಅವರ ಕುಟುಂಬದಲ್ಲಿ ಸಮರ್ಥ ನಾಟಕಕಾರನ ಆಗಮನವಾಗಿದೆ ಎಂಬುದಂತೂ ಗೊತ್ತಾಗಿ ಹೋಗುತ್ತದೆ. ‘ಅರ್ಬುದ ಕಾಡು’ವಿನ ಥೀಮ್ ಇಷ್ಟೇ. ಸತ್ಯ ವಾಕ್ಯ ಪರಿಪಾಲನೆ ಮಾಡುವುದಕ್ಕೆ ಒಂದು ಕ್ಯಾನ್ವಾಸ್ ಒದಗಿಸಿದ ಅದೇ ಕಾಡಿಗೆ ಈಗ ನುಗ್ಗಿರುವವರು ನಮ್ಮ ಟೆಲಿವಿಷನ್ ‘ರಿಯಾಲಿಟಿ ಷೋ’ಗಳ ಒಡೆಯರು. ಸತ್ಯ ವಾಕ್ಯದ ಹಿಂದೆ ಬಲವಾಗಿ ನಿಂತಿದ್ದ ಕಾಡು ಹೇಗೆ ಒಂದು ರಿಯಾಲಿಟಿ ಷೋದಿಂದಾಗಿ ಸತ್ಯದ ವಿರುದ್ಧ ತಿರುಗಿ ಬೀಳುತ್ತಾ  ಹೋಗುತ್ತದೆ ಎಂಬುದು ಕಥೆ. ಟೆಲಿವಿಷನ್ ಚಾನಲ್ ಗಳಿಂದಾಗಿ ಸತ್ಯ ಹೇಗೆ ಸುಳ್ಳಾಗುತ್ತಾ ಹೋಗುತ್ತದೆ, ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಹೊಸೆಯುವ ತಂತ್ರಗಳು, ರಿಯಾಲಿಟಿ ಷೋ ತೀರ್ಪಿನ ಹಿಂದೆ ಅಡಗಿರುವ ಹುನ್ನಾರಗಳು..ಇವುಗಳೆಲ್ಲವೂ ಕೊನೆಗೆ ಬಾಂಧವ್ಯವನ್ನೂ, ಗೆಳೆತನವನ್ನೂ, ಕೊನೆಗೆ ನೆಮ್ಮದಿಯನ್ನೂ ನಾಶ ಮಾಡುತ್ತಾ ಹೋಗುತ್ತದೆ. ನೋಡುವ ನಾವು ಹೇಗೆ ಒಂದು ದಾಳವಾಗಿ ಬದಲಾಗುತ್ತಾ ಹೋಗುತ್ತೇವೆ ಎನ್ನುವ ಅನಾವರಣ ಇಲ್ಲಿದೆ. ಕಶ್ಯಪ್ ಅರ್ಬುದ ಕಾಡನ್ನೇ ಆ ಆಧುನಿಕ ಥೀಮ್ ನ ಕಥೆ ಹೇಳಲು ಆರಿಸಿಕೊಂಡಿರುವುದರಿಂದ ಮಕ್ಕಳಿಗೆ ಬೇಕಾದ ಫ್ಯಾಂಟಸಿ ಲೋಕವನ್ನು ಕೊಡುತ್ತಲೇ ಮಾಧ್ಯಮದ ಒಳಿತು ಕೆಡುಕುಗಳನ್ನು ಹೇಳಲು ದಾರಿಯಾಗುತ್ತದೆ. ಇದನ್ನು ಬರೀ ಒಂದು ಟೆಲಿವಿಷನ್ ಲೋಕದ ಕಥೆಯಾಗಿ ಮಾಡಿದ್ದಿದ್ದರೆ ಇದು ಎಲ್ಲರನ್ನೂ ಹಿಡಿದಿಡುವ, ಆಲೋಚನೆಗೆ ಹಚ್ಚುವ ನಾಟಕ ಆಗುತ್ತಿತ್ತೋ ಇಲ್ಲವೋ.. ಆದರೆ ಕಶ್ಯಪ್ ಇಲ್ಲಿ ಗೆದ್ದಿದ್ದಾರೆ. ಸುಷ್ಮಾ ಇದನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂಬುದು ನಾಟಕ ನೋಡಿದ ಯಾರಿಗಾದರೂ ಗೊತ್ತಾಗಿ ಹೋಗುತ್ತದೆ. ಸುಷ್ಮಾಗೆ ನಾಟಕ ಎನ್ನುವುದು ನೀರು ಕುಡಿದಷ್ಟು ಸಲೀಸು. ಸ್ಕ್ರಿಪ್ಟನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಬೆರಳೆಣಿಕೆಯ ನಿರ್ದೇಶಕರಲ್ಲಿ ಸುಷ್ಮಾ ಒಬ್ಬರು. ಮಾಲತೇಶ್ ಬಡಿಗೇರ್ ಮಾಡಿದ ರಂಗ ವಿನ್ಯಾಸ ‘ಆಹಾ”’ ಎನ್ನುವಂತಿದೆ. ಸಂಗೀತವೇ ಯಾಕೋ ಅಷ್ಟಕ್ಕಷ್ಟೇ ಎನ್ನುವಂತೆ ಇತ್ತು. ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಆಡಿ ಹಾಡಿ ಕುಣಿದು ಕುಪ್ಪಳಿಸಿ ಇನ್ನಿಲ್ಲದಷ್ಟು ಚಪ್ಪಾಳೆ ಗಿಟ್ಟಿಸಿಕೊಂಡುಬಿಟ್ಟರು. ವಿಜಯನಗರ ಬಿಂಬ ಸಂಪರ್ಕ – ಶೋಭಾ ವೆಂಕಟೇಶ್ – 98452 65967]]>

‍ಲೇಖಕರು avadhi

13 February, 2011

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. veeranna manthalkar

    Riyality Shogala riyality, atyanta maarmika baravnige satyada arivannu mahtvapurnavagide. shobha venkatesh, &G.N.mohan avarige dhnyavadagalu. Avdhiyalli bareyuva kutuhalvide. Hege bareyabeku yambudu tilisidare upakarvagutte. Kaarana Naanu saahityabhini, kaviyagiddake Asakti ede.
    V.H.Veeranna manthalkar
    mo: 9019991066

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading