ಚೇತನಾ ತೀರ್ಥಹಳ್ಳಿ
ಕೃಷ್ಣ, ಬಿದಿರ ಕೊಳವೆಯೂದಿದ.
ಕೊಳಲಾಗಿಸಿದಳು ರಾಧೆ!
ಹೌದು. ಗೀತಾ ಮಾಸ್ತರು ಕೃಷ್ಣನ ಕೊಳಲಿಗೆ ದನಿ ತುಂಬಿದ್ದೇ ಅವಳು.
ಹಾಗವಳು ಸುಮ್ಮಸುಮ್ಮನೆ ರಾಧೆಯಾದವಳಲ್ಲ.
ಆರಾಧನೆಯೇ ಅವಳಾಗಿ, ವ್ಯಾಕರಣದ ಮೂಲಧಾತುಗಳೆಲ್ಲ ಬಸಿದಿಳಿದು, ‘ರಾಧಾ’ ಉಳಿದಳು, ರಾಧೆಯಾದಳು.
ಕಥೆಯೋ, ಕಲ್ಪನೆಯೋ… ಹಾಗೊಬ್ಬಳಿದ್ದಳು ಅಂದುಕೊಳ್ಳುವುದೆ ಎಷ್ಟು ಸೊಗಸು!
ಹಾಗಂತ, ಈ ರಾಧೆಯ ಕಥೆ ಅಷ್ಟು ಸಲೀಸಲ್ಲ.
ಕೃಷ್ಣನ್ನ ತಬ್ಬಿಕೊಂಡು ಮರ ಸುತ್ತುವುದಕ್ಕೇ ಅದು ಮುಗಿಯೋದಿಲ್ಲ.
ಅವಳಿಗೊಂದು ಮನೆಯೂ ಇತ್ತು.
ಜಟಿಲೆ, ಕುಟಿಲೆಯರೆಂಬ ಅತ್ತೆ, ನಾದಿನಿಯರೂ ಇದ್ದರು, ಅವರ ಕಾಟವೂ ಇತ್ತು.
ಹೌದು.
ರಾಧೆಗೆ ಮದುವೆಯಾಗಿತ್ತು!
ಕೃಷ್ಣ ರಾಧೆಯನ್ನ ಪ್ರೀತಿಸಿದ್ದ. ಸುಳ್ಳಲ್ಲ.
“ಸಂಭವಾಮಿ ಯುಗೇ ಯುಗೇ…” ಮಾತು ನಡೆಸಬೇಕಿತ್ತು.
ಎಲ್ಲ ಸಾಧನೆಗೂ ಹೆಣ್ಣು ಅಡ್ಡಿ. ಅವಳು ಬೇರೆ ತನ್ನವಳಲ್ಲ!
ಗೊಲ್ಲರ ಹುಡುಗಿ ರಾಧೆ, ರಾಣಿಯಾಗಬಹುದಿತ್ತಾದರೂ ಹೇಗೆ?
ಕೃಷ್ಣನ ಹುಟ್ಟು ಕೊಟ್ಟಿಗೆಯಲ್ಲಲ್ಲ.
ಅಂತೂ ಅಂವ ಹೊರಟ.
ರಾಧೆ ಏನಾದಳೋ….?
ಹುಚ್ಚಾದಳೋ, ಬೆಪ್ಪಾದಳೋ, ಭೈರಾಗಿಯೇ ಆಗಿಹೋದಳೋ!?
ಬರೆಯಲಿಲ್ಲ ಯಾರೂ… ಬರೆದವರು ಗಂಡಸರು.
ಅವಳ ಪ್ರೇಮವನ್ನ “ಭಕ್ತಿ” ಅಂದು ತಿಪ್ಪೆ ಸಾರಿಸಿದರು.
ವೃಂದಾವನ ಕಟ್ಟಿ ಕೈ ಮುಗಿದರು.
ಕೊಳಲಿನ ಕಣ್ಣು ಕಟ್ಟಿತು.
ಕೊನೆಗೂ,
ಧರ್ಮ ಸ್ಥಾಪನೆಯಾಯಿತು!



Nice poem.. Keep it up
Malli
http://www.nannahaadu.blogspot.com
ಕೊಳಲಿನ ಕಣ್ಣು ಕಟ್ಟಿತು…
ಕೊನೆಗೂ ಧರ್ಮ ಸ್ಥಾಪನೆಯಾಯಿತು!
ಎಂಥ ವ್ಯಂಗ್ಯ!?
ಚೆನ್ನಾಗಿದೆ ಚೇತನಾ. ಇನ್ನೂ ಬರೆಯಿರಿ. ಬರೆಯುತ್ತಿರಿ.
ಅವಧಿ, ಮುದ್ದಾಗಿದೆ.