ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಘವೇಂದ್ರ ಬೆಟ್ಟಕೊಪ್ಪ ಓದಿದ ‘ಹನಿ‌ ಹನಿ‌ ಸೇರಿದಾಗ’

ಶಿಕ್ಷಕರು ಬರೆದ ವಿದ್ಯಾರ್ಥಿ ಜೀವನ ಕಥನ…

ರಾಘವೇಂದ್ರ ಬೆಟ್ಟಕೊಪ್ಪ

ಇದೊಂದು ಅಪರೂಪದ‌ ಕೃತಿ. ಪಾಲಕರು ಓದಿದರೆ ಬಾಲ್ಯದ ನೆನಪು, ಮಕ್ಕಳು ಓದಿದರೆ ಅಂದಿನ‌ ಶಿಕ್ಷಣ ಪಡೆಯಲು ಪಟ್ಟ ಸಂಕಷ್ಟ ಹಾಗೂ ಇಂದಿನ ಸುಲಭ ಮಾರ್ಗ ಎರಡೂ‌ ಕಾಣುತ್ತದೆ.

ಈ ಎರಡೂ ಕಾಣಿಸುವ ಈ ಕೃತಿ ಹೆಸರೂ ಹನಿ‌ ಹನಿ‌ ಸೇರಿದಾಗ. ಹನಿ ಹನಿ‌ ಸೇರಿಯೇ ಬದುಕಿನ ಸಾಗರ ಆಗುವ ಕೌತುಕವೂ ಹೌದು. ಬದುಕಿನ ಪಾಠವಾಗಿಸುವ ಮೌಲ್ಯಗಳ ಸುತ್ತ ರಚನೆಗೊಂಡ ಕೃತಿ. ಬಿಡಿ ಬಿಡಿ ಬರಹಗಳ ಮೂಲಕ ಇಡಿಯಾಗಿಸಿದ ಕೃತಿ.

ಶಿಕ್ಷಕ ಗಂಗಾಧರ ನಾಯ್ಕ‌ ಪುರದಮಠ ಅವರು ಬರೆದ ಹನಿ‌ ಹನಿ‌ ಸೇರಿದಾಗ ವಿದ್ಯಾರ್ಥಿ ಜೀವನದ ಅನುಭವ ಕಥನ. ಇದು ಅನೇಕ‌ ಕಾರಣಕ್ಕೆ ಇಷ್ಟವಾಗುವ ಕೃತಿ. ಓದುಗರಿಗೆ ಬಾಲ್ಯವನ್ನು ನೆನಪಿಸಿ ಮನಸ್ಸನ್ನು ಮತ್ತೆ ಎಳಯದಾಗಿಸುತ್ತದೆ.‌ ಎಳೆಯ‌ ಮನಸ್ಸುಗಳಿಗೆ ಪಾಲಕರ ಕಷ್ಟ, ಸವಾಲು ಅರ್ಥ ಮಾಡಿಸುತ್ತದೆ. ಅಂದಿನ ಮಾಹಿತಿಯ ಕೊಡು ಕೊಳ್ಳುವಿಕೆ ಇಲ್ಲಿದೆ.

ಭೂಮಿ‌ ಪ್ರಕಾಶನ ಪ್ರಕಟಿಸಿದ ಈ ಕೃತಿಗೆ ೧೪೨ ಪುಟಗಳು ಇದ್ದು ೧೫೦ ರೂ‌. ಇಡಲಾಗಿದೆ. ನಾರಾಯಣ ಭಾಗವತ ಅವರ‌ ಆಕರ್ಷಕ ಮುಖಪುಟ, ಮನೋಜ ಪಾಲೇಕರ ಅವರ ಒಳ ಚಿತ್ರ ಕೃತಿಯ ಅರ್ಥ ಹೆಚ್ಚಿಸಿದೆ.

ಪುರಸ್ಕಾರದ ಸಭಾಂಗಣದಲ್ಲಿ ಲೇಖನದ ಮೂಲಕ ಆರಂಭಗೊಂಡ ಈ ಕೃತಿಯಲ್ಲಿ ನಾನು ನಿಮ್ಮ ವಿರಾಜ್, ಆರೋಗ್ಯವೇ ಭಾಗ್ಯ, ನಲಿ ಕಲಿ ಎಂಬ ನರ್ತನಾಲಯ, ರಾಷ್ಟ್ರೀಯ ಹಬ್ಬಗಳ ವೈಭವ, ಧೈರ್ಯ ತುಂಬಿದ‌ ಪ್ರವೇಶ ಪರೀಕ್ಷೆಗಳು, ಪ್ರತಿಭಾ ಕಾರಂಜಿಯ ವೇದಿಕೆಯಲ್ಲಿ, ಪ್ರವಾಸ ಎಂಬ ಮಧುರಾನುಭವ, ಅಂದಿನ ಪಾಠ ಅಂದೇ ಕಲಿಕೆ, ಅಜ್ಜಿ ಕಥೆಯ ಕಾಲ್ಪನಿಕ ಲೋಕದಲ್ಲಿ, ಸೋಲಲು ಕಲಿಸಿದ ಅಪ್ಪ, ಸಾಧಕರ ಸ್ಪೂರ್ತಿ, ಆತ್ಮ ಬಲ ವೃದ್ದಿಸಿದ ಪ್ರಾರ್ಥನಾ ಅವಧಿ, ಒಳ್ಳೆಯ ತನಕೆ ಸಿಕ್ಕ ವಿನಾಯ್ತಿಯಿಂದ ಸಂಜೀವಿನಿಯಾದ ಸನ್ಮಾನಗಳು ತನಕ ಒಟ್ಟೂ ೭೦ ಬರಹಗಳಿವೆ. ಈ ಕೃತಿಯಲ್ಲಿ ಒಂದು ಒಳ್ಳೆಯ ಕೆಲಸ ಬರೆಯುವ ಕುರಿತೂ ಬರಹ ಆಪ್ತಾವಾಗಿದೆ.

ಓದು ಕೇವಲ‌ ಅಂಕ ಗಳಿಕೆ ಮಾತ್ರವಲ್ಲ, ಮಾನವೀಯ ಮೌಲ್ಯ ಬೆಳಸಿಕೊಳ್ಳಲೂ ಹೌದು ಎಂಬುದನ್ನು ಈ‌ ಕೃತಿ‌ ಪದೇ ಪದೇ ಋಜುವಾತುಗೊಳಿಸುತ್ತದೆ.

ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ದಿವಾಕರ ಶೆಟ್ಟಿ ಅವರ‌ ಮುನ್ನುಡಿ, ಬೆನ್ನುಡಿ ಇದೆ. ಈ ಕೃತಿಯನ್ನು ಗಂಗಾಧರರು ವರ್ಷದ ಹಿಂದೆ ಅಗಲಿದ ಅಪ್ಪನಿಗೆ ಅರ್ಪಿಸಿದ್ದಾರೆ. .

ಮಕ್ಕಳು, ಶಿಕ್ಷಕರು, ಶಿಕ್ಷಕರು ಅಲ್ಲದವರೂ ಓದಬೇಕಾದ ಪುಸ್ತಕ. ಶಿಕ್ಷಕರೊಬ್ಬರು ನಾಲ್ಕು ಗೋಡೆಯ ಆಚೆಗೂ ನೋಡ್ತಾರಲ್ಲ, ಅದೂ ವಿಶೇಷ..ಗಂಗಾಧರ ನಾಯ್ಕ ಈ‌ ಕಾರಣಕ್ಕೆ ಅವರು ಹಾಗೂ ಅವರ ಕೃತಿ ಇವೆರಡೂ ಎದ್ದು ಕಾಣುತ್ತದೆ.

‍ಲೇಖಕರು Admin

25 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading