ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

||ರವೀಶಾರ್ಣವ ಚರಿತ||

rajaram tallur low res profile

ರಾಜಾರಾಂ ತಲ್ಲೂರು

ಪೊಲೀಸ್ ಅಧಿಕಾರಿಯಾಗಿದ್ದ ಸ್ನೇಹಿತರೊಬ್ಬರು ಹೇಳಿದ ಒಂದು ಮಾತು ನೆನಪಾಗುತ್ತದೆ. “ಕಾನೂನು ನೀರಿನ ಟ್ಯಾಪ್ ಇದ್ದಹಾಗೆ. ನೀರನ್ನ ಎಷ್ಟು ವೇಗವಾಗಿ ಬಿಡಬೇಕು ಮತ್ತು ಎಷ್ಟು ನಿಧಾನವಾಗಿ ಬಿಡಬೇಕು ಎಂಬುದನ್ನು ನಾವು ನಿರ್ಧರಿಸ್ತೇವೆ.”

ಇಂತಹದೇ ಒಂದು ಇಂಟರ್ಪ್ರೆಟೇಶನ್ ನ ಫಲವಾಗಿ ಬುಧವಾರದಂದು NDTV ಒಂದು ದಿನದ ಮಟ್ಟಿಗೆ ಇಲ್ಲವಾಗುತ್ತಿದೆ.

avadhi-column-tallur-verti- low res- cropಯುದ್ಧರಂಗದಿಂದ ವರದಿಗಾರಿಕೆಗೆ ನಮ್ಮಲ್ಲಿ ಮಹಾಭಾರತದ ಸಂಜಯನನ್ನು ಬಿಟ್ಟರೆ ಮತ್ತೆ ಉದಾಹರಣೆ ಸಿಗುವುದು ಕಾರ್ಗಿಲ್ಲಿನಲ್ಲೇ. ಆ ಮಧ್ಯದಲ್ಲೆಲ್ಲೂ ಸೇನೆಯ ಕೆಲಸಗಳ ನಡುವೆ ಮಾಧ್ಯಮದ ಬಾಯಿಹಾಕುವಿಕೆಯ ದೊಡ್ಡ ಚರಿತ್ರೆ ಭಾರತದಲ್ಲಿ ಇದ್ದಂತಿಲ್ಲ. ಇದಕ್ಕೆ 60-70ರ ದಶಕದ ಭೌಗೋಳಿಕ, ತಂತ್ರಜ್ನಾನ ಸಂಬಂಧಿ ಕಾರಣಗಳೆಲ್ಲ ಇದ್ದಿರಬಹುದು.

ಗಮನಿಸಬೇಕಾದ ಸಂಗತಿ ಎಂದರೆ, ಅಂದು ಕಾರ್ಗಿಲ್ ಕದನದ ವೇಳೆ ಅಧಿಕಾರದಲ್ಲಿದ್ದುದು, ಮತ್ತೀಗ ಸರ್ಜಿಕಲ್ ಸ್ಟ್ರೈಕು ಮತ್ತು ಸ್ಟ್ರೈಕೋತ್ತರ ‘ಗಡಿ’ಬಿಡಿಗಳೆರಡರ ವೇಳೆಯೂ ಅಧಿಕಾರದಲ್ಲಿರುವುದು ಒಂದೇ ಮನಃಸ್ಥಿತಿ. ಇಡಿಯ ದೇಶದ ಗಮನ ತುರ್ತಾಗಿ ಸೆಳೆದು ‘ಅಟೆನ್ಷನ್ ಪ್ಲೀಸ್’ ಎನ್ನುವುದಕ್ಕೆ ‘ಗಡಿ’ಬಿಡಿಗಿಂತ ಅನುಕೂಲಕರ ಸಂಗತಿ ಬೇರೊಂದಿಲ್ಲ ಎಂಬುದು ಜಾಗತಿಕ ಸತ್ಯ.

ಸರ್ಜಿಕಲ್ ಸ್ಟ್ರೈಕ್ ಎಂಬ ಗಡಿಗದ್ದಲದ ಬಳಿಕ ಟಮ್ಸ್ ನೌ ಚಾನೆಲ್ಲಿನಲ್ಲಿ ಎಕ್ಸ್ ಕ್ಲೂಸಿವ್ ಆದಂತಹ ಹಲವು ಕ್ಲಿಪಿಂಗ್ ಗಳು ಮೊತ್ತಮೊದಲಬಾರಿಗೆ ಪ್ರಸಾರ ಆಗಿವೆ. ಸೇನೆ ಮತ್ತು ಸರ್ಕಾರಗಳ ‘ಒಲವಿನ ಮೀಟರ್’ ಬೇರೆ ಚಾನಲ್ಲುಗಳಿಗೆ ಹೋಲಿಸಿದರೆ ಎದ್ದುಕಾಣುವಷ್ಟು ಮಟ್ಟಿಗೆ ಟೈಮ್ಸ್ ನೌ ಪರವಾಗಿಯೇಇತ್ತು. ಮಾಧ್ಯಮಗಳಿಗೆ ಸೌತ್ ಬ್ಲಾಕ್ ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಿರುವ ಸರ್ಕಾರವೊಂದು, ಸರ್ಕಾರಿ ಚಾನಲ್ಲನ್ನು ಬಿಟ್ಟು, ತನ್ನ ಆಯ್ಕೆಯ ಖಾಸಗಿ ಚಾನಲ್ಲಿಗೆ ಸೇನಾಚಟುವಟಿಕೆಗಳ ಪ್ರಸಾರದ ಅವಕಾಶ ಕೊಟ್ಟದ್ದು, ಗಟ್ಟಿಸ್ವರದಲ್ಲಿ ಪ್ರಶ್ನೆ ಆಗಲೇ ಇಲ್ಲ.

ಆದರೆ ಜನವರಿಯಲ್ಲಿ ಪಠಾನ್ ಕೋಟ್ ಗಡಿ ಚಕಮಕಿ ನಡೆದಾಗ, NDTV  ಅದನ್ನು ಪ್ರಸಾರ ಮಾಡಿದ ರೀತಿಗಾಗಿ, ಅವರ ವಿರುದ್ಧ ಕಾನೂನು ಬಿಗಿಯಾಗಿ ಹರಿಹಾಯ್ದಿದೆ. ಗುಜರಾತ್ ಗಲಭೆಗಳ ವರದಿ ಮಾಡಿದ್ದಕ್ಕಾಗಿ NDTV  ಬೆಲೆ ತೆರುತ್ತಿದೆ ಎಂಬುದು ಈಗ ಕೇಳಿಬರುತ್ತಿರುವ ಮಾತು.

ಇದೆಲ್ಲ ಗೌಜಿ-ಗದ್ದಲಗಳ ನಡುವೆ ನಾವು ಮರೆಯಬಾರದ ಕೆಲವು ಸಂಗತಿಗಳೂ ಇವೆ.

ndtv-ban-cartoon2ದೇಶದ ಟೆಲಿವಿಷನ್ ಚಾನೆಲ್ ಗಳ ಈವತ್ತಿನ ಸುಗ್ಗಿಯನ್ನು ಹಿಂದೆ ಸ್ವಾತಂತ್ರ್ಯ ಹೋರಾಟದ ವೇಳೆ ನಡೆಸುತ್ತಿದ್ದ ಸುದ್ದಿಪತ್ರ ಪತ್ರಿಕೋದ್ಯಮದ ಜೊತೆ ಹೋಲಿಸಿ ನೋಡುವ ತಪ್ಪು ಆಗಬಾರದು. ಒಂದು ಟೆಲಿವಿಷನ್ ಚಾನಲ್ ಅಂದರೆ ಏನಿಲ್ಲ ಎಂದರೂ 100-150 ಕೋಟಿ ರೂಪಾಯಿಗಳ ಮೇಲಿನ ವ್ಯವಹಾರ. ಈ ಪ್ರಮಾಣದ ದುಡ್ಡಿನ ಮೂಲಗಳನ್ನು ಅರಸಿಕೊಂಡು ಹೋದಾಗ ಮನಸ್ಸಿಗೆ ಹಿತವಾದದ್ದೇನೂ ಸಿಗುವುದಿಲ್ಲ.

ನ್ಯಾಯವಾದಿ, ಅಂದಿನ ಸಂಸದ ರಾಮ್ ಜೇಠ್ಮಲಾನಿ ಅವರು 2013ರ ಡಿಸೆಂಬರಿನಲ್ಲಿ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಪತ್ರವೊಂದನ್ನು ಬರೆದು, ನ್ಯೂಡೆಲ್ಲಿ ಟೆಲಿವಿಷನ್ ಲಿಮಿಟೆಡ್ (NDTV)  ಸಂಸ್ಥೆಗೆ ಸುಮಾರು 300 ಮಿಲಿಯ ಪೌಂಡ್ ಕಪ್ಪುಹಣ ಬಂಡವಾಳ ರೂಪದಲ್ಲಿ ಹರಿದುಬಂದ ಬಗ್ಗೆ ವಿವರಿಸಿ, ನೇರವಾಗಿ ಚಿದಂಬರಂ ಅವರನ್ನೇ ಅದಕ್ಕೆ ಹೊಣೆಯೆಂದು ದೂರುತ್ತಾರೆ; NDTVಯ ಪ್ರಣಯ್ ರಾಯ್, ಬರ್ಖಾ ದತ್ ಮತ್ತಿತರರ ಮೇಲೆ ತೆರಿಗೆಗಳ್ಳತನದ ಆಪಾದನೆ ಮಾಡುತ್ತಾರೆ. ಇವೆಲ್ಲ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆ ಆಗುವುದೇ ಇಲ್ಲ.

ಈವತ್ತು ದೇಶದ ಯಾವುದೇ ಟೆಲಿವಿಷನ್ ಚಾನೆಲ್ ತೆಗೆದುಕೊಂಡರೂ ಇಂತಹದೊಂದು ಮುಖ ಅವುಗಳಿಗೆ ಇದ್ದೇ ಇದೆ. ಚಾನಲ್ಲಿನ ಎದುರು ತೋರುವ ಮುಖ ಒಂದಾದರೆ, ಅದಕ್ಕೆ ಹಣ ಸುರಿದು, ಹಿಂದಿನಿಂದ ತನ್ನ ಮೂಗಿನ ನೇರಕ್ಕೆ ನಡೆಸುವ ಮುಖವೂ ಒಂದಿರುತ್ತದೆ.

ಚಾನೆಲ್ಲುಗಳ ಪರ-ವಿರುದ್ಧ ನಿಲ್ಲುವ ಭರದಲ್ಲಿ ಈ ವಾಸ್ತವಗಳನ್ನೆಲ್ಲ ಮರೆಯುವುದು ತಪ್ಪಾಗುತ್ತದೆ ಎಂಬುದನ್ನು ನೆನಪಿಟ್ಟುಕೊಂಡೇ ಮುಂದುವರಿಯುವುದು ಬಹಳ ಮುಖ್ಯ.

‍ಲೇಖಕರು Admin

7 November, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading