ಕವಿತೆ
ರಂಜನಿ ಪ್ರಭು
**
1
ಎರಡು ರೆಕ್ಕೆ ತಾನೇ ಬೇಕು ಹಾರಾಡಲು ಹಕ್ಕಿಗೆ
ಎರಡು ಸಾಲು ಸಾಲದೇನು ಮನತಾಗುವ ಕವಿತೆಗೆ?
2
ಕವಿತೆ ಎಂದರೆ
ಗಾಣಕ್ಕೆ ಕಟ್ಟಿದ ಎತ್ತಲ್ಲ
ಹಸಿರು ಹುಲ್ಲನು ಕಂಡು ಜಿಗಿಜಿಗಿದು ಬರುವ ಕರು.
3
ಪ್ರತಿಬಾರಿ ಅಲೆಗಳು
ಎದ್ದಾಗಲೂ
ದಡದ ಬಂಡೆ ಕಾಯುತ್ತದೆ ಕಾತರದಿಂದ
ಒಂದು ಅಲೆ ತನ್ನನ್ನು ಅಪ್ಪಿಕೊಂಡೇ ಬಿಡುತ್ತದೆಂದು.
4
ಕೆಚ್ಚಲನು ಗುಮ್ಮುವ ಎಳೆಗರುವಿನ ಕಣ್ಣಲ್ಲಿ
ಹಸಿವಿನ ವೇದನೆ
ಹಸುವಿಗೋ ಕೆಚ್ಚಲಲಿ
ಹಾಲಿಲ್ಲದ ವೇದನೆ.
5
ಬೆಳ್ಳಂಬೆಳಕಿನ ಆಗಸದ ಕೆಂಪು
ನಗುವ ತಾರೆಗಳನ್ನೆಲ್ಲ
ನಿರ್ಮೂಲ ಮಾಡಿದ
ರಣಭೂಮಿಯಂತಿದೆ.
6
ಕೋಡುಗಲ್ಲಿನ ತುತ್ತತುದಿಯ
ಶಿಖರ ಏರಲಾಗದು
ಎಂದು ನಿಲ್ಲುವುದು ಬೇಡ
ಏರಲಾಗುವಷ್ಟು ಮೆಟ್ಟಲುಗಳನ್ನಾದರೂ ಏರೋಣ ಬಾ
7
ಬದುಕನ್ನು ಅವಲೋಕಿಸಿದರೆ
ಅದರ ಪ್ರತಿ ಮಗ್ಗುಲಲ್ಲೂ
ಬದಲಾವಣೆಯ ಆತಂಕ
ಹೊಂದಾಣಿಕೆಯ ತಲ್ಲಣ…
ನೆಮ್ಮದಿಯ ದಿನಗಳೆಲ್ಲಿ??
8
ಜೀವನದ ನಿರ್ದೇಶಕ
ಒಪ್ಪಿಸಿದ ಪಾತ್ರಗಳನ್ನೆಲ್ಲ
ಮುತುವರ್ಜಿಯಿಂದ
ಒಪ್ಪಿಕೊಂಡೆ,
ಪ್ರಾಮಾಣಿಕವಾಗಿಯೇ
ನಿರ್ವಹಿಸಿದೆ..
ಆದರೆ…
ಯಾವ ಪಾತ್ರಕ್ಕೂ ಅತ್ಯುತ್ತಮ
ಪ್ರಶಸ್ತಿ ಬರಲೇ ಇಲ್ಲ!
0 ಪ್ರತಿಕ್ರಿಯೆಗಳು