ಡಾ. ಮೈಸೂರು ಮಂಜುನಾಥ್, ಎಸ್ ಸುರೇಂದ್ರನಾಥ್, ಶ್ರೀನಿವಾಸ ಪ್ರಭು, ಎಸ್ ಜಿ ವಾಸುದೇವ್ ಮತ್ತು 20 ಯುವ ಸಂಗೀತಗಾರರ ಮೇಳದೊಂದಿಗೆ.
ಭೂಮಿಜಾ ಟ್ರಸ್ಟ್ ಆರೋಹ, ಸಂಗೀತ-ನಾಟಕವನ್ನು, ಆಗಸ್ಟ್ 23 ಮತ್ತು 24ರಂದು ರಂಗ ಶಂಕರದಲ್ಲಿ ಪ್ರದರ್ಶಿಸುತ್ತಿದೆ. ಈ ಪ್ರಯೋಗದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಾಜ ಡಾ. ಮೈಸೂರು ಮಂಜುನಾಥ್ ಅವರು ಸಂಗೀತವನ್ನು ಸಂಯೋಜಿಸಿ, ನಿರ್ವಹಿಸಿದಲ್ಲಿ, ಎಸ್ ಸುರೇಂದ್ರನಾಥ್ ಅದರ ಸುತ್ತ ನಾಟಕವನ್ನು ರಚಿಸಿ ಇಡೀ ಕಾರ್ಯಕ್ರಮವನ್ನು ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯ ಅತ್ಯುತ್ತಮ ನಟರಾದ ಶ್ರೀನಿವಾಸ ಪ್ರಭು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಾರೆ. ಪ್ರದರ್ಶನ ಪ್ರತಿ ದಿನ ಸಂಜೆ 7.30ಕ್ಕೆ. 3೦೦ ರೂಪಾಯಿಯ ಟಿಕೇಟುಗಳು ರಂಗ ಶಂಕರದಲ್ಲೂ, ಆನ್ಲೈನ್ ಟಿಕೇಟುಗಳು bookmyshow.com.ನಲ್ಲೂ ದೊರೆಯುತ್ತವೆ.
ಇಡೀ ಪ್ರಯೋಗ 2೦ ಯುವ ಸಂಗೀತಗಾರರ ಮೇಳದ ಸುತ್ತ ಕಟ್ಟಲಾಗಿದೆ. ಈ ಮೇಳವನ್ನು ಡಾ ಮಂಜುನಾಥ್ ಅವರು ನಿರ್ವಹಿಸುತ್ತಾರಲ್ಲದೇ, ಮುಖ್ಯ ವಯೋಲಿನ್ ವಾದಕರಾಗಿಯೂ ಭಾಗವಹಿಸುತ್ತಾರೆ. ಕರ್ನಾಟಕ ಸಂಗೀತದ ಜನಪ್ರಿಯ ಕೃತಿಗಳಲ್ಲದೇ, ಡಾ ಮಂಜುನಾಥ್ ಅವರೇ ಸಂಯೋಜಿಸಿದ ಅಪ್ರತಿಮ ಕೃತಿಗಳೂ ಈ ಪ್ರಯೋಗದ ಮುಖ್ಯ ಅಂಶಗಳು.
ಸುರೇಂದ್ರನಾಥ್ ಈ ಸಂಗೀತದ ಸುತ್ತ ಕನ್ನಡದ ಹಾಗೂ ಜಗತ್ತಿನ ಹಲವಾರು ಸಾಹಿತ್ಯದ ತುಣುಕುಗಳನ್ನು ಬಳಸಿ ಪ್ರೀತಿ-ದಾಂಪತ್ಯ-ದೈವತ್ವ-ಸಂಗೀತದ ಸುತ್ತ ಒಂದು ನಾಟಕವನ್ನು ಹೆಣೆದು ನಿರ್ದೇಶಿಸಿದ್ದಾರೆ. ಶ್ರೀನಿವಾಸ ಪ್ರಭು ಅವರು ಸೂತ್ರಧಾರರಾಗಿ ಇಡೀ ಪ್ರಯೋಗವನ್ನು ನಡೆಸಿ ಕೊಡುತ್ತಾರೆ. ಪ್ರಯೋಗಕ್ಕೆ ಎಸ್ ಜಿ ವಾಸುದೇವ್ ಅವರ ಹಿನ್ನೆಲೆಯಿದೆ. ಸುರೇಂದ್ರನಾಥ್ ಬೆಳಕು ಮತ್ತು ರಂಗ ಸಜ್ಜಿಕೆಯನ್ನು ವಿನ್ಯಾಸಗೊಳಿಸಿದ್ದಾರೆ.

ಮೇಳದಲ್ಲಿ 12 ವಯೋಲಿನ್ ವಾದಕರಲ್ಲದೇ ಸಾರಂಗಿ, ಚೆಲ್ಲೋ, ಬಾಂಸುರಿ, ಮ್ಯಾಂಡೋಲಿನ್ ಮತ್ತು ಇತರ ತಾಳವಾದ್ಯಗಳು ಇವೆ. ಮೇಳದ ಸಂಗೀತಗಾರರು 25 ವಯಸ್ಸಿನೊಳಗಿದ್ದಾರೆ.
ಭೂಮಿಜಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಗಾಯತ್ರಿ ಕೃಷ್ಣ ಅವರ ಪ್ರಕಾರ: “ನಮ್ಮ ಪ್ರಯತ್ನ ಉತ್ತಮ ಯುವ ಸಂಗೀತಗಾರರನ್ನು ಒಬ್ಬ ಸಂಗೀತ ದಿಗ್ಗಜರ ನಿರ್ದೇಶನದಲ್ಲಿ ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳಲು ಸಹಾಯ ಮಾಡುವುದು. ಈ ಬಾರಿ ಈ ಪ್ರಯತ್ನ ಹೊಸ ಆಯಾಮದೊಂದಿಗೆ ಹೊರಮೂಡಲಿದೆ. ಮೊಟ್ಟಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಯುತ್ತಿರುವುದಂತೂ ಖಂಡಿತ. ಇದರಲ್ಲಿ ಅನೇಕ ಹೆಸರಾಂತರು ಭಾಗವಹಿಸುತ್ತಿರುವುದು ಒಂದು ವಿಶೇಷ. ರಂಗ ಶಂಕರದಲ್ಲಿ ಈ ವಿಶಿಷ್ಠ ಪ್ರಯೋಗ ನಡೆಯುತ್ತಿರುವುದಂತೂ ಅತ್ಯಂತ ಸಂತೋಷದ ವಿಷಯ.”






0 Comments