ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಕ್ರಿಯೆ ವ್ಯಾಕರಣದ ಹೊಸ ವ್ಯಾಖ್ಯಾನವಿತ್ತ 'ಹಸಿದ ಕಲ್ಲುಗಳು'

ಸಂತೋಷ್ ನಾಯಕ್ ಪಟ್ಲ

ಉಡುಪಿಯ ಸಾಂಸ್ಕೃತಿಕ ವಲಯದ ಮುಂಚೂಣಿ ರಂಗ ಸಂಸ್ಥೆ ರಥಬೀದಿ ಗೆಳೆಯರು ಇವರ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ‘ಥಿಯೇಟರ್ ಸಮುರಾಯ್’ ಅಭಿನಯದಲ್ಲಿ ರಂಗ ಪ್ರಸ್ತುತಿಗೊಂಡ ರವೀಂದ್ರನಾಥ್ ಠಾಗೂರರ ‘ಹಂಗ್ರಿ ಸ್ಟೋನ್’ ಕಥೆ ಆಧಾರಿತ ನಾಟಕ ‘ಹಸಿದ ಕಲ್ಲುಗಳು’ ಇತ್ತೀಚೆಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಹಲವು ಕಾರಣಗಳಿಗಾಗಿ ಈ ನಾಟಕ ಇವತ್ತಿನ ರಂಗ ಪ್ರಸ್ತುತಿಗಳಲ್ಲಿ ಒಂದು ಮೈಲಿಗಲ್ಲು ಎಂದು ನನಗನಿಸುತ್ತದೆ.
ಕಳೆದ ಕೆಲವು ವರ್ಷಗಳಿಂದ ಪ್ರಯೋಗ ರಂಗಭೂಮಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಎಲ್ಲೋ ಒಂದು ಕಡೆ ನಟನೆ, ರಂಗ ವಿನ್ಯಾಸ, ರಂಗ ಸಂಗೀತ, ಮತ್ತು ಭಾಷೆಗಳ ಬಳಕೆಯಲ್ಲಿ ಏಕತಾನತೆಯತ್ತ ಸಾಗುತ್ತಿದೆಯೋ ಎಂದು ಅನಿಸುತ್ತಿದ್ದಾಗ, ಹೈಸ್ನಾಂ ತೋಂಬಾ ನಿರ್ದೇಶನದ ಹಸಿದ ಕಲ್ಲುಗಳು ನಾಟಕ ರಂಗಕ್ರಿಯೆಯ ಒಂದು ಹೊಸ ಆಯಾಮವನ್ನು ನಮ್ಮ ಮುಂದಿಟ್ಟಿದೆ. ಅದರಲ್ಲೂ ನಟರನ್ನು ದುಡಿಸಿಕೊಂಡಿರುವ ರೀತಿ, ಮತ್ತು ರಂಗಕ್ರಿಯೆಗಳನ್ನು ಜೋಡಿಸಿರುವ ರೀತಿ, ರಂಗಕ್ರಿಯೆಯ ಹೊಸ ಪರಿಕಲ್ಪನೆಯತ್ತ ನಮ್ಮನ್ನು ಆಲೋಚಿಸುವಂತೆ ಮಾಡಿದೆ. ಆದ್ದರಿಂದ ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರಿಗೆ ಇದೊಂದು ಅಭ್ಯಾಸದ ಒಂದು ಮಾದರಿಯಾಗಿಯೂ ಕಾಣಿಸುತ್ತಿದೆ.

ನಿಜಾಮರ ಪ್ರತಿನಿಧಿಯಾದ ಟ್ಯಾಕ್ಸ್ ಕಲೆಕ್ಟರ್ ಒಮ್ಮೆ ಹಳೆಯ ಮತ್ತು ಶಿಥಿಲ ಅರಮನೆಯೊಂದರಲ್ಲಿ ಕಾವಲುಗಾರನ ಎಚ್ಚರಿಕೆಯನ್ನು ಧಿಕ್ಕರಿಸಿ ಅಲ್ಲೆ ಉಳಿಯಲು ನಿರ್ಧರಿಸುತ್ತಾನೆ. ಅಲ್ಲಿಯ ವಾಸ್ತುಶಿಲ್ಪದ ಮೋಡಿಗೊಳಗಾಗಿ ಅರೇಬಿಯನ್ ನೈಟ್ಸ್ ನ ಪಶರ್ಿಯನ್ ಕನ್ಯೆಯರನ್ನು ತಮಾಶೆಗೆಂದು ನೆನಪಿಸಿಕೊಳ್ಳುತ್ತಲೇ ತನ್ನ ಕಲ್ಪನಾ ಲೋಕದಲ್ಲಿ ನಿಜವೆನ್ನುವಂತೆ ಬೆರೆತು ಹೋಗುತ್ತಾನೆ. ಅಲ್ಲಿನ ಸ್ತ್ರೀರೂಪಿ ಪ್ರತಿಮೆಗಳು ರಾತ್ರಿಯಾಗುತಿದ್ದಂತೆ, ಜೀವ ತಳೆದು ಮಾಯಾಂಗನೆಯರಂತಾಗಿ ಅವನನ್ನು ಉನ್ಮತ್ತತೆಯಲ್ಲಿ ಮುಳುಗಿಸುತ್ತವೆ. ಒಂದೊಂದು ಸ್ತ್ರೀ ಪ್ರತಿಮೆಯೂ ಒಂದೊಂದು ಯಾತನಾಮಯ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಹಿಸಲಾಗದ ತಮ್ಮ ಹೆಣ್ಣುಜೀವದ ನೋವನ್ನು ಬಿಚ್ಚಿಡುತ್ತಾ ಗಂಡಸಿನ ಕಲ್ಪನಾ ಲೋಕದಲ್ಲಿ ನಿಮರ್ಾಣಗೊಂಡ ತಮ್ಮ ನಿಜ ಜಗತ್ತಿನ ಕರಾಳತೆಯನ್ನು ಕಾಣಿಸುತ್ತಾ ಹೋಗುತ್ತವೆ.
ಕಲ್ಪನೆ ಮತ್ತು ನಿಜದ ಸಂಗತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವ ನಿದರ್ೇಶಕ ಹೈಸ್ನಾಂ ತೋಂಬ, ಹೆಣ್ಣು ಮತ್ತು ಕುದುರೆಗಳ ಪ್ರತಿಮೆಗಳನ್ನಿಟ್ಟುಕೊಂಡು ಗಂಡಿನ ಭಾವನಾತ್ಮಕ ಹಾದರವನ್ನು, ದಬ್ಬಾಳಿಕೆಯನ್ನು ರಂಗದ ಮೇಲೆ ಅದ್ಭುತವಾಗಿ ಕಟ್ಟಿ ಕೊಡುತ್ತಾರೆ. ನಾವು ಹೆಂಗಸರು ಅನಾದಿ ಕಾಲದಿಂದ ಪಾರಾಗಿ ಬಂದಿದ್ದೇವೆ ಬರಿದೆ ಕಲ್ಲಿನ ವಿಗ್ರಹದಂತೆ . ಬರಿದೆ ಕಲ್ಲಿನಂತೆ ಜೀವಿತಾವಧಿಯನ್ನು ಕಳೆದಿದ್ದ ಪ್ರತಿಮೆಗಳು ಅಂತರಂಗವನ್ನು ಬಿಚ್ಚಿಡುವ ರೀತಿ, ಗಂಡಸಿನ ಕಲ್ಪನಾಲೋಕದಲ್ಲಿ ಗರಿಗೆದರುವ ಕಾಮನೆಗಳು ಇವೆಲ್ಲವನ್ನೂ ವರ್ತಮಾನದ ಕಾಲಘಟ್ಟದಲ್ಲಿ ಸಮೀಕರಿಸಿರುವ ರೀತಿ ಒಂದು ಗಂಭೀರ ಸಿನೆಮಾದಲ್ಲಿ ಜೋಡಿಸಿದ ದೃಶ್ಯಗಳಂತೆ ಬಂದು ಹೋಗುತ್ತವೆ.
ಗಂಭೀರವಾದ ಮೌನದೊಂದಿಗೆ ಆರಂಭಗೊಳ್ಳುವ ನಾಟಕವು ಪ್ರತಿಮೆಗಳ ಸ್ಥಿರಗೊಳ್ಳುವಿಕೆಯಿಂದ ಆರಂಭವಾಗುತ್ತದೆ. ರಂಗದ ಮೇಲೆ ಏನೂ ಮಾಡದೆ ಇರಬಹುದಾದುದೂ ಒಂದು ರಂಗಕ್ರಿಯೆ ಎಂಬ ಪ್ರಸನ್ನರ ಮಾತಿನಂತೆ, ದೀರ್ಘಕಾಲದವರೆಗೆ ಪಾತ್ರಗಳು ರಂಗದ ಮೇಲೆ ಸ್ಥಿರಗೊಳ್ಳುವುದು, ಒಡಲೊಳಗೆ ನೋವಿನ ಸರಮಾಲೆಯನ್ನೇ ಇಟ್ಟುಕೊಂಡು ಪ್ರದಶರ್ಿಸುವ ರಂಜನೆಯ ಹಾವಭಾವಗಳು, ಕಿರಿಕಿರಿಯಾದರೂ ಮತ್ತೆ ತನ್ನ ಕಲ್ಪನಾ ಲೋಕದಲ್ಲಿ ಹರಿದಾಡುವ, ಮತ್ತೆ ಮತ್ತೆ ಅದೇ ಅನುಭೂತಿ ಪಡೆಯಲು ಬಯಸುವ ಕಲೆಕ್ಟರ್ ನಿಜ ಮತ್ತು ಕಲ್ಪನೆಗಳ ನಡುವೆ ಸಿಲುಕಿ ಇವೆಲ್ಲದರಿಂದ ಹೊರಬರಬೇಕೆಂದರೂ ಹೊರಬರಲಾಗದೆ ನಾನು ಇಲ್ಲಿಂದ ಪಾರಾಗುವದಾರಿ ತೋರಿಸಿ ಎಂದು ಬೊಬ್ಬಿಡುತ್ತಾ ಕೊನೆಗೆ ಹೆಣ್ಣೆನಲ್ಲಿ ಕಂಡುಕೊಳ್ಳುವ ನಿಜದ ಮಾತೃಪ್ರೇಮದ ಸಂವೇದನೆ ಇವೆಲ್ಲವೂ ಸ್ಪಷ್ಟವಾದ ರಂಗಕ್ರಿಯೆಗಳ ಮೂಲಕ ಸ್ಥಾಪಿತಗೊಳ್ಳುತ್ತವೆ.

ಈ ನಾಟಕದ ಪಾತ್ರಗಳ ನಟನೆಯ ಹಿಂದೆ ಒಂದು ಧ್ಯಾನಸ್ಥ ಸ್ಥಿತಿ ಕಂಡು ಬರುತ್ತದೆ. ಈ ಧ್ಯಾನಸ್ಥ ಸ್ಥಿತಿ ಇಲ್ಲದಿರುತಿದ್ದರೆ ಒಂದೊಂದು ಅನುಭೂತಿಯನ್ನು ಅಷ್ಟೊಂದು ತೀವ್ರವಾಗಿ ದಾಟಿಸಲು ಸಾಧ್ಯವಾಗುತ್ತಿರಲಿಲ್ಲವೇನೋ. ಸಾಮಾನ್ಯವಾದ ನಟನೆಯ ಭಾಷೆಗಿಂತ ತುಸು ಭಿನ್ನವಾದ ನಟನೆಯ ವ್ಯಾಕರಣ ಈ ನಾಟಕದ ವೈಶಿಷ್ಟ್ಯ ತುಸು ಧೀರ್ಘವಾದ, ತೀವ್ರವಾಗಿ ಸ್ಪಂದಿಸುವ, ಮೈಯ ಕಸುವಿನೊಂದಿಗೆ ಜಿದ್ದಾಡುವ ದೇಹಭಾಷೆಯನ್ನು ರಂಗಭಾಷೆಯಾಗಿಸಿ ಕೊಂಡ ಈ ಪ್ರಯೋಗ ಬಹಳದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹುದು.
ರಂಗದ ಮೇಲೆ ಅತೀಕಡಿಮೆ ಮಾತಾಡುವ ಪಾತ್ರಗಳು ದೇಹಭಾಷೆಯ ಮೂಲಕ ಪ್ರೇಕ್ಷಕರೊಂದಿಗೆ ಸಂವಹನ ನಡೆಸುತ್ತವೆ. ಸಂಗೀತ ಮತ್ತು ಬೆಳಕನ್ನು ಬಹಳ ಸಂಯಮದಿಂದ ಬಳಸುವ ನಿದರ್ೇಶಕ ನಾಟಕವನ್ನು ತಾಂತ್ರಿಕವಾಗಿ ವಿಜೃಂಭಿಸದೆ ನಟರುಗಳ ಶಕ್ತಿಯ ಮೇಲೆ ನಾಟಕ ಕಟ್ಟುವ ಪ್ರಯತ್ನ ಮಾಡಿರುವುದು ಸ್ತುತ್ಯಾರ್ಹ. ಒಂದು ಹೊಸ ರಂಗಪ್ರಯೋಗ ಎನ್ನುವುದರಲ್ಲಿ ಸಂಶಯವಿಲ್ಲ. ಪ್ರೇಕ್ಷಕರ ತಾಳ್ಮೆಯನ್ನೂ ಪರೀಕ್ಷಿಸುವ ಈ ನಾಟಕ ನಮ್ಮ ನಡುವೆ ಇರುವ ರಂಗವ್ಯಾಕರಣವನ್ನು ಒಡೆದು ಕಟ್ಟಿದೆ. ನಟನೆಯ ಭಾಷೆ, ಮತ್ತು ರಂಗಕ್ರಿಯೆಗಳ ಜೋಡಣೆ ಮತ್ತು ಪ್ರಸ್ತುತಿಯಲ್ಲಿ ಈ ನಾಟಕವನ್ನು ಆಧಾರವಾಗಿಸಿ ಯೋಚಿಸಲು ಅವಕಾಶ ನೀಡಿದೆ. ನಮ್ಮ ಆಲೋಚನೆಗಳನ್ನು ಜಾಗೃತಗೊಳಿಸಿದ, ಹೊಸ ರಂಗಾನುಭೂತಿಯನ್ನು ನೀಡಿದ ಹೈಸ್ನಾಂ ತೋಂಬ ಮತ್ತು ಥಿಯೇಟರ್ ಸಮುರಾಯ್ ತಂಡದ ಎಲ್ಲ ರಂಗ ಗೆಳೆಯರಿಗೆ ಧನ್ಯವಾದಗಳು.
 

‍ಲೇಖಕರು G

14 May, 2015

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading