ಮೊನ್ನೆ ಅವಧಿ ಯಲ್ಲಿ ಈ ಚಿತ್ರ ಪ್ರಕಟಿಸಿ, ಚಿತ್ರದ ವ್ಯಕ್ತಿಗಳನ್ನು ಗುರುತಿಸಿ ಎ೦ದು ಕೇಳಲಾಗಿತ್ತು.
ಈ ಚಿತ್ರ ಪಟದ ಒ೦ದು ಭಾಗವಾಗಿರುವ ಗೋಪಾಲ ವಾಜಪೇಯಿಯವರು ಈ ಚಿತ್ರ ದ ಬಗ್ಗೆ ಬರೆಯುತ್ತಾರೆ :
– ಗೋಪಾಲ ವಾಜಪೇಯಿ
೧೯೭೭-೭೮ರಲ್ಲಿ ನಾನು ‘ಕರ್ಮವೀರ’ ಸಾಪ್ತಾಹಿಕದಲ್ಲಿ ಉಪಸಂಪಾದಕ. ರಂಗಭೂಮಿಯ ಬಗ್ಗೆ ಅಪಾರ ಒಲವಿದ್ದವ. ಹೀಗಾಗಿ, ‘ಸಿನೆಮಾ-ರಂಗಭೂಮಿ’ ಪುಟಗಳ ಜವಾಬ್ದಾರಿ ನನ್ನದೇ ಆಗಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ ನಾಟಕಕಾರ ಗಿರೀಶ್ ಕಾರ್ನಾಡ ನಿರ್ದೇಶನದ, ಜಡಭರತರಂಥ ಹಿರಿಯ ನಾಟಕಕಾರರು ಸಂಭಾಷಣೆ ಬರೆದ, ಮತ್ತೊಬ್ಬ ಸುಪ್ರಸಿದ್ಧ ನಾಟಕಕಾರ-ಕವಿ ಚಂದ್ರಶೇಖರ ಕಂಬಾರ ಅವರ ಗೀತೆಗಳಿದ್ದ ವಿಭಿನ್ನ ಚಿತ್ರ ‘ಒಂದಾನೊಂದು ಕಾಲದಲ್ಲಿ…’ ನಾಗಾಭರಣ-ಸುಂದರರಾಜ್ ಅವರಂಥ ತರುಣರು ಸಹಾಯಕ ನಿರ್ದೇಶಕರಾಗಿದ್ದ, ವಿಖ್ಯಾತ ಬೆಳಕು ವಿನ್ಯಾಸ ತಜ್ಞ ವಿ. ರಾಮಮೂರ್ತಿ, ಕಂಚಿನ ಕಂಠದ ಸುಂದರಕೃಷ್ಣ ಅರಸು, ವಸಂತರಾವ್ ನಾಕೋಡರಂಥವರು ನಟಿಸಿದ್ದ ಆ ಚಿತ್ರದ ಬಗ್ಗೆ ಸಹಜವಾಗಿಯೇ ಜನರಲ್ಲಿ ಕುತೂಹಲವಿತ್ತು. ಹುಬ್ಬಳ್ಳಿಯಿಂದ ಬೆಳಗಾವಿಗೆ ಹೋಗುವ ರಸ್ತೆಯಲ್ಲಿ, ಕಿತ್ತೂರಿನಿಂದ ಸ್ವಲ್ಪ ಮುಂದೆ ಬಲಕ್ಕೆ ಇರುವ ತೂರಮರಿ ಎಂಬಲ್ಲಿ ಅದರ ಚಿತ್ರೀಕರಣ ನಡೆದಿತ್ತು. ಆ ಬಗ್ಗೆ ವರದಿ ಮಾಡಲು, ಆ ಪ್ರತಿಭಾವಂತರ ಸಂದರ್ಶನ ಪಡೆಯಲು ಒಂದೆರಡು ಬಾರಿ ಹೋಗಿದ್ದೆ. ನಾನೂ ರಂಗಭೂಮಿಯವನೆ ಆದ್ದರಿಂದ, ಚಿತ್ರದ ಸಹನಿರ್ದೇಶಕರಾಗಿದ್ದ ಗೆಳೆಯ ಕಾನಕಾನಹಳ್ಳಿ ಗೋಪಿಯವರು ಶಂಕರ್ ನಾಗ್ ಜೊತೆಗಿನ ಒಂದು ಸಣ್ಣ ಸನ್ನಿವೇಶದಲ್ಲಿ ಕ್ಯಾಮರಾ ಎದುರಿಸಲು ನನಗೂ ಒಂದು ಅವಕಾಶವಿತ್ತರು. ಅದು ಮುಗಿದ ಮೇಲಿನ ಸ್ಟಿಲ್ ಇದು. ಕನ್ನಡದಲ್ಲಿ ಶಂಕರ್ ಅವರ ಮೊಟ್ಟಮೊದಲ ಪತ್ರಿಕಾ ಸಂದರ್ಶನವನ್ನು ಮಾಡಿದವ ನಾನು. ಅಂದಿನಿಂದ ಶಂಕರ್ ನನಗೆ ಆತ್ಮೀಯರಾದರು. ಅಂದಹಾಗೆ, ಈ ಚಿತ್ರದಲ್ಲಿ ಶಂಕರ್ ಬಲಗಡೆ ಕೈಕಟ್ಟಿ ನಿಂತಿರುವ ಇನ್ನೊಬ್ಬರು ಅಂತಾರಾಷ್ಟ್ರೀಯ ಖ್ಯಾತಿಯ ಸಿನೆಮಾಟೋಗ್ರಫರ್ ಮತ್ತು ಓಡಿಶಾ ಭಾಷೆಯ ಚಲನಚಿತ್ರ ನಿರ್ದೇಶಕ ಅಪೂರ್ವ ಕಿಶೋರ್ ಬೀರ್ ಅಥವಾ ಎ.ಕೆ. ಬೀರ್. ಅವರು ‘ಘರೊಂದಾ,’ ’27 Down’ನಂಥ ಅನೇಕ ಚಿರಸ್ಮರಣೀಯ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ. ಚಿತ್ರ ನಿರ್ದೇಶನಕ್ಕೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.]]>






0 Comments