ರಾಸುಮ ಭಟ್
ಪ್ರಸ್ತುತ ಬಿಸಿಲಿನ ಜಳ ಹೆಚ್ಚಾಗುತ್ತಿದ್ದು , ಎಪ್ರಿಲ್ ಮತ್ತು ಮೇ ನಲ್ಲಿ ಬಿಸಿಲು ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ .ಮಲೆನಾಡಿನ ಮಳೆ ಜಗತ್ತಿನಲ್ಲಿ ಪ್ರಸಿದ್ದಿಯಾಗಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಮಳೆರಾಯನ ಆಗಮನ ಮಲೆನಾಡಿಗೆ ಆಗಮನವಾಗಿ ಮೊದಲ ಮಳೆಯ ಹನಿಗಳ ಸಿಂಚನದಿಂದ ಮಲೆನಾಡಿನ ಸೊಬಗಿಗೆ ಗರಿ ಮೂಡಿದ ಅನುಭವಾಗುತ್ತಿದೆ..
ಮಳೆಯೆಂದರೆ ಪ್ರೀತಿ, ಭಕ್ತಿ, ಖುಷಿ, ಸ್ಪೂರ್ತಿ, ಮಳೆಯೆ ಜೀವಿಗಳ ಉಗಮಕ್ಕೆ ಕಾರಣ, ಬಿಸಿಲಿಗೆ ಬೆಂದು ಬರಡಾದ ಭೂಮಿ, ನೀರಿಗಾಗಿ ಪರಿತಪ್ಪಿಸುವ ಪ್ರಾಣಿ ಪಕ್ಷಿಗಳು, ಮಳೆ ಬಂತೆದರೆ ವಾತಾವರಣದಲ್ಲಾಗುವ ಬದಲಾವಣೆ ತುಂಬಾ ಹಿತಕರವಾದ ಅನುಭವ ಉಂಟು ಮಾಡುತ್ತದೆ.
ಮಳೆಯ ಆಗಮನದೊಂದಿಗೆ ನೆನಪುಗಳು ಬುತ್ತಿ ತೆರೆದುಕೊಳ್ಳುತ್ತದೆ. ಬಾಲ್ಯದಲ್ಲಿ ಮಳೆಯೊಂದಿಗೆ ಆಟವಾಡಿದ್ದು, ಅಲಿ ಕಲ್ಲು ಗಳನ್ನು ಅರಿಸಿಕೊಂಡು ರುಚಿ ನೋಡಿದ್ದು, ಕೆಸರಿನಲ್ಲಿ ಅಟವಾಡಿ ಅಪ್ಪನ ಬಳಿ ತಿಂದ ಪೆಟ್ಟು, ಮಳೆ ಬರುವಾಗ ನದಿಯಲ್ಲಿ ಈಜಿದ ಅನುಭವ ಬಣ್ಣಿಸಲು ಆಸಾದ್ಯ.
ಮಲೆನಾಡಿನವನಾದ ನನಗೆ ಮಳೆಯೊಂದಿಗೆ ವಿಶೇಷ ನಂಟು ಎಂದರೆ ತಪ್ಪಾಗಲಾರದು, ಹಚ್ಚ ಹಸಿರಿನಿಂದ ಕೂಡಿದ ಮರಗಳಿಂದ ಕೂಡಿದ ಬೆಟ್ಟ ಗುಡ್ಡಗಳ ಮೇಲೆ ಬೀಳುವ ಮಳೆಯ ಹನಿಗಳ ಗುಂಪು ಮುತ್ತಿನ ಹಾರದಂತೆ ಕಂಗೊಳಿಸುತ್ತದೆ ಮತ್ತು ರಕ್ತ ಹೀರುವ ಜಿಗಣೆಗಳು ಮಳೆಗಾಲದಲ್ಲಿ ಕಾಣಸಿಗುತ್ತವೆ.

ಕಳೆದ ಕೆಲವು ದಶಕಗಳ ಹಿಂದಿನ ಮಳೆಗಾಲಕ್ಕು, ಇತ್ತೀಚಿನ ಮಳೆಗಾಲಕ್ಕು ತುಂಬಾ ವ್ಯತ್ಯಾಸವಿದೆ. ಮಲೆನಾಡಿನ ಮಳೆ ಹಿಡಿದರೆ ನಾಲ್ಕು ತಿಂಗಳುಗಳ ಕಾಲ ಬಿಡುವು ಕೊಡದೆ ಸುರಿಯುತ್ತಿದ್ದ ಮಳೆ ಇತ್ತಿಚಿಗೆ ಕಡಿಮೆಯಾಗಿರುವುದು ದೃರದೃಷ್ಟಕರವಾಗಿದೆ.
ಮಲೆನಾಡಿನ ಮಳೆಗಾಲದಲ್ಲಿ ಕಂಡು ಬರುತ್ತಿದ್ದ ದೊಡ್ಡ ಹಸಿರು ಬಣ್ಣದ ಕಪ್ಪೆಗಳ ಸಂಖ್ಯೆಯು ಕಡಿಮೆಯಾಗಿದ್ದು , ಮಳೆಗಾಲದಲ್ಲಿ ಕಪ್ಪೆಗಳ ವಟಗುಡುವ ಶಬ್ದ ಮಕ್ಕಳಿಗೆ ಭಯ ಮೂಡಿಸುತ್ತಿತ್ತು. ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿ, ತೊರೆಗಳು ಸುಂದರ ವಾತಾವರಣವನ್ನು ನಿರ್ಮಾಣ ಮಾಡುತ್ತುದ್ದವು.
ಮಳೆ ಹಿಡಿದ ಕೆಲವೆ ದಿನಗಳಲ್ಲಿ ಅಣೆಕಟ್ಟುಗಳೆ ಭರ್ತಿಯಾಗುತ್ತಿದ್ದ ದಿನಗಳು ಈಗ ನೆನಪು ಮಾತ್ರ.ಮಲೆನಾಡಿನ ಚಿಕ್ಕಮಗಳೂರಿನವನಾದ ನನಗೆ ಭದ್ರಾ ಅಣೆಕಟ್ಟಿನ ಸೊಬಗು ಮಳೆಗಾಲದಲ್ಲಿ ಹೆಚ್ಚಾಗುತ್ತಿದ್ದ ಅನುಭವ ಕಂಡು ಹಲವು ವರ್ಷಗಳಾಗಿವೆ.ಮಳೆಗಾಲದಲ್ಲಿ ಜೋಗದ ಸಿರಿಯನ್ನು ವರ್ಣಿಸಲು ಪದಗಳೆ ಸಾಲದು . ಮೊದಲ ಮಳೆಯ ಅಗಮನ ಮನಸ್ಸಿನಲ್ಲಿ ಅಹ್ಲಾದಕರ ಅನುಭವ ನಿಡುವುದು ಸುಳ್ಳಲ್ಲ.
ಮಳೆ ಬಂತೆದರೆ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಗರಿಗೆದುತ್ತದೆ, ರೈತರು ಬೇಸಾಯ ಮಾಡುವಾಗ ಮಣ್ಣಿನಲ್ಲಿ ಇರುವ ಹುಳಗಳನ್ನು ತಿನ್ನಲು ಬರುವ ಬೆಳ್ಳಕ್ಕಿ ಯ ಸಾಲುಗಳು, ಹಸಿರು ಬಣ್ಣದ ದೊಡ್ಡ ಗಾತ್ರದ ಕಪ್ಪೆಗಳು, ಇವುಗಳ ನಡುವೆ ತಲೆಯ ಮೇಲೆ ಗೋಣಿ ಚೀಲ ಹೊದ್ದಿಕೊಂಡು ನಾಟಿ ಮಾಡುವುದು ನೋಡುವುದು ಕಣ್ಣಿಗೆ ಮುದ ನೀಡುತ್ತದೆ.
ಮಳೆಗಾಲದಲ್ಲಿ ಮಲೆನಾಡಿನಲ್ಲಿ ವಿಶೇಷ ಭಕ್ಷ್ಯಗಳನ್ನು ಸವಿಯಲಾಗುತ್ತದೆ. ಬೇಸಿಗೆಯಲ್ಲಿ ಹಷ್ಪಳ, ಸಂಡಿಗೆ, ಮಜ್ಜಿಗೆ ಮೆಣಸುಗಳನ್ನು ಒಣಗಿಸಿ, ಮಳೆಗಾಲದಲ್ಲಿ ಸವಿಯುವುದು ಆಹ್ಲಾದಕರವಾಗಿರಯತ್ತದೆ. ಮಳೆಗಾಲದ ಕೆಂಪು ಚಟ್ನಿ, ತಿಳಿಸಾರು ಚಳಿಯಿಂದ ದೇಹವನ್ನು ಬೆಚ್ಚಗಿಡುತ್ತದೆ.
ಬಿಸಿಯಾದ ಚಹದೊಂದಿಗೆ, ಮೆಣಸಿನಕಾಯಿ ಬೋಂಡಾ, ಸುಟ್ಟ ಜೋಳದ ಮೇಲೆ ಕಾರದಪುಡಿ ಅಥವಾ ಹಸಿ ಮೆಣಸಿನಕಾಯಿಯ ಚಟ್ನಿ ಹಚ್ಚಿ ಸವಿಯುವುದರ ಮುಂದೆ ಬೇರೆ ರುಚಿ ಬೇಕೆ.
ಮಳೆಗೆ ಪ್ರತಿಯೊಂದು ಧರ್ಮದಲ್ಲು ವಿಶೇಷ ಸ್ಥಾನ ನೀಡಲಾಗಿದೆ . ಹಿಂದು ಧರ್ಮ ದಲ್ಲಿ ಮಳೆಯನ್ನು ದೇವರೆಂದು ಪೂಜಿಸಲಾಗುತ್ತದೆ. ಮಳೆಯ ದೇವರು “ವರುಣ”, ವೇದಗಳ ಕಾಲದಲ್ಲಿ ಜನರು ಮಳೆಯನ್ನು ದೇವರು ಜನರಿಗೆ ಕೊಡುವ ಉಡುಗೊರೆ ಎಂದು ಭಾವಿಸಿದ್ದರು.
ಹಿಂದು, ಜೈನ, ಬೌದ್ಧ ಧರ್ಮ ಗಳಲ್ಲಿ “ಚಾರ್ತ ಮಾಸ”ದ ಅಚರಣೆಯಿದ್ದು , ಈ ಧರ್ಮ ಗಳ ಸಾಧು ಸಂತರು, ಮುನಿಗಳು, ಲಾಮಗಳು, ಮಳೆಗಾಲ ಮುಗಿಯುವವರೆಗೂ ಒಂದೆ ಸ್ಥಳದಲ್ಲಿರುತ್ತಾರೆ. ಏಕೆಂದರೆ ಮಳೆಗಾಲದಲ್ಲಿ ಜೀವಿಗಳು ಉಗಮವಾಗುತ್ತದೆ ಇದರಿಂದಾಗಿ ತಮ್ಮ ಒಡಾಟದಿಂದ ಆ ಜೀವಿಗಳಿಗೆ ತೊಂದರೆ ಆಗಬಾರದು ಎಂಬುವುದು ಚಾರ್ತ ಮಾಸದ ಉದ್ದೇಶ.
ಜ್ಯೋತಿಷ್ಯ ಶಾಸ್ತ್ರವು ಮಳೆಯ ಆಗಮನವನ್ನು ತಿಳಿಸಿಕೊಡುತ್ತದೆ. ಜ್ಯೋತಿಷ್ಯ ಪ್ರಕಾರ “ಹನ್ನೊಂದು” ಮಳೆ ನಕ್ಷತ್ರಗಲಿವೆ, ಅವುಗಳೆಂದರೆ ಅರಿದ್ರಾ, ಪುನರ್ ವಸು, ಪುಷ್ಯ, ಅಶ್ಲೇಷ, ಮಖ,ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ, ಮತ್ತು ವಿಶಾಖ. ಈ ನಕ್ಷತ್ರ ಗಳಿಂದ ಮಳೆ ಬರುತ್ತದೆ ಎಂದು ಜ್ಯೋತಿಷ್ಯ ತಿಳಿಸಿಕೊಡುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಯೋಜನೆ ಯಿಂದ ಮಳೆ ಬರುವುದನ್ನು ತಿಳಿಯಬಹುದು. ಮಖ, ಹಸ್ತ, ಚಿತ್ತ ನಕ್ಷತ್ರಗಳಲ್ಲಿ ಸೂರ್ಯನು ಸಂಚಾರಿಸಿದಾ, ಶುಕ್ರನು ಪುರ್ವದಲ್ಲಿ ಉದಯಿಸಿದರೆ ಉತ್ತಮ ಮಳೆಯಾಗುತ್ತದೆ ಹಾಗು ಸೂರ್ಯನ ಎಡಭಾಗದಲ್ಲಿ ಶುಕ್ರನಿದ್ದರೆ ಉತ್ತಮ ಮಳೆಯಾಗುತ್ತದೆ.
ಸೂರ್ಯನ ಮುಂದೆ ಕುಜನಿದ್ದರೆ ಮಳೆ ಕಡಿಮೆಯಾಗುತ್ತದೆ ಮತ್ತು ಸೂರ್ಯನೊಡನೆ ಬುಧ ಹಾಗು ಕುಜನಿದ್ದರೆ ಮಳೆಯಾಗುವುದಿಲ್ಲ.
ಕೆಲವು ಮಳೆ ನಕ್ಷತ್ರ ಗಳ ವಿಷಯವಾಗಿ ಹಳ್ಳಿಗಾಡಿನ ಪ್ರಮುಖ ಗಾದೆಗಳೆಂದರೆ “ಬಂದರೆ ಮಗೆ ಹೋದರೆ ಹೊಗೆ ಮಗೆ ನಕ್ಷತ್ರದ ಪ್ರಾಮುಖ್ಯತೆ, ರೋಹಿಣಿ ಮಳೆ ಬಂದರೆ ಓಣಿಯಲ್ಲ ಕೆಸರು, ಭರಣಿ ಸುರಿದರೆ ಧರಣಿ ಬದುಕಿತೆ ಎಂಬುದು ಭರಣಿ ಮಳೆಯ ತೀವ್ರತೆಯನ್ನು ಸೂಚಿಸುತ್ತದೆ. ಇನ್ನೂ ಕ್ರೈಸ್ತ ಧರ್ಮವು” ಮಳೆ ಬರುವುದು ದೇವರ ಅರ್ಶೀವಾದ ಎಂದೂ ತಿಳಿಸುತ್ತದೆ. ಯಹೂದ್ಯರು ಮಳೆಯನ್ನು “ಜೀಶಮ್” ಎಂದು ಕರೆಯುತ್ತಾರೆ ಹಾಗು ಮಳೆ ಪ್ರಾರಂಭವಾಗುವ ದಿನ “ಶಮಿನಿ ಅಟ್ ಜೀರಿದ್”ನ ಪ್ರಾರ್ಥನೆಗಳಲ್ಲಿ ಮಳೆಯನ್ನು ನೆನಪಿಸಿಕೊಳ್ಳುತ್ತಾರೆ.

ಗ್ರಾಮೀಣ ಭಾಗಗಳಲ್ಲಿ ಮಳೆಯಾಗುವುದನ್ನು ಕೆಲವು ಸೂಚನೆಗಳಿಂದ ತಿಳಿದುಕೊಳ್ಳಲುತ್ತಾರೆ. ಅವುಗಳೆಂದರೆ “ಕಪ್ಪೆ ವಟಗುಟ್ಟುವುದು, ದೇವ ಮೂಲೆಯಲ್ಲಿ ಮಿಂಚು ಹುಟ್ಟುವುದು, ಇರುವೆಗಳು ಮೊಟ್ಟೆಗಳನ್ನು ಹೊತ್ತು ಒಡುವುದು, ಮೀನುಗಳು ನದಿಯಿಂದ ಮೇಲೆ ಜಿಗಿಯುವುದು, ಬೆಕ್ಕು ತನ್ನ ಉಗುರುಗಳಿಂದ ನೆಲ ಕೆರಯುವುದು.ಇವುಗಳಿಂದ ಮಳೆಯಾಗುವುದನ್ನು ತಿಳಿಯಲಾಗುತ್ತದೆ. ವೈಜ್ಞಾನಿಕವಾಗಿ ಮಳೆಯೆಂದರೆ” ಸಮುದ್ರ, ಸಾಗರ, ನದಿಗಳ ನೀರು ಅವಿಯಾಗಿ, ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಾಗಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗಳಾಗಿ ಮಳೆಯ ರೂಪದಲ್ಲಿ ಭೂಮಿಯನ್ನು ಸೇರುತ್ತದೆ.ಹೀಗೆ ನೆಲದ ಮೇಲೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಸಾಗರ ಸೇರಿ ಅವಿಯಾಗುವುದನ್ನು “ಜಲಜಕ್ರ” ಎಂದು ಕರೆಯಲಾಗುತ್ತದೆ.
ಇತ್ತಿಚೀನ ದಿನಗಳಲ್ಲಿ ಮಳೆಯ ಪ್ರಮಾಣ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಕೃತಕ ಮಳೆ ಅಂದರೆ ಮೋಡ ಭಿತ್ತನೆ ಮುಂತಾದ ಕ್ರಮಗಳಿಂದ ಮಳೆ ಬರುವಂತೆ ಮಾಡಲಾಗುತ್ತದೆ .
ಅದರೆ ನೈಸರ್ಗಿಕವಾಗಿ ಬರುವ ಮಳೆ ಮುಂದೆ ಕೃತಕ ಮಳೆವ್ಯರ್ಥವಾಗಿ ಕಾಣಿಸುತ್ತದೆ. ಭೂಮಿಯ ಮೇಲೆ ಸಿಹಿನೀರಿನ ಪ್ರಮಾಣ ಕಡಿಮೆಯಿದ್ದು, ಮಳೆ ಕೊಯ್ಲಿಲು ಮುಂತಾದ ಕ್ರಮಗಳಿಂದ ಮಳೆ ನೀರನ್ನು ಶೇಕರಿಸಿಕೂಳ್ಳವುದು ಅನಿವಾರ್ಯವಾಗಿದೆ.
ಮಳೆಯಾದರೆ ಬೆಳೆ ಹೆಚ್ಚಾಗಿ ರೈತನ ಮುಖದಲ್ಲಿ ಮಂದಹಾಸ ಮೂಡುತ್ತದೆ. ಮೊದಲ ಮಲೆನಾಡಿನ ಮಳೆಯ ಅನುಭವನ್ನು ಈ ಅಂಕಣದ ಮೂಲಕ ಹಂಚಿಕೊಳ್ಳುವ ಸಣ್ಣ ಪ್ರಯತ್ನ.






0 Comments