ಪದ್ಮನಾಭನಗರದ 7ನೇ ಕ್ರಾಸಿನ ಮನೆಯಲ್ಲಿ ಈ ಮಹಾನ್ ‘ಕನ್ನಡದ’ ಚೇತನವೊಂದು ಅದೆಷ್ಟು ಸರಳ, ಸಜ್ಜನಿಕೆಯಿಂದ ಬದುಕುತ್ತಿದೆ! ರಣಬಿಸಿಲಿನ ತಾಪ ಜೋಗದ ಸಿರಿ… ಕವಿಯ ‘ನಿತ್ಯೋತ್ಸಾಹ’ವನ್ನು ಕೊಂಚ ಹಣ್ಣಾಗಿಸಿದಂತಿತ್ತು.
ನನ್ನ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಹೀಗೆ ಹಿರಿಯ ಕವಿಯೊಬ್ಬರ ಮನೆ ಬಾಗಿಲಿಗೆ ಹೋಗಿ ನಿಂತೆ. “ಅಯ್ಯೋ ನನಗೆ ಮನಬಿಚ್ಚಿ ಮಾತನಾಡುವಷ್ಟು ತ್ರಾಣ ಇಲ್ಲಪ್ಪಾ… ರಾತ್ರಿಯಿಡಿ ಕೆಮ್ಮು. ಕಣ್ಣಿಗೆ ಜೊಂಪು ಬಂದಿದ್ದೇ ಬೆಳಿಗ್ಗೆ ಐದೋ ಆರಕ್ಕೆ. ಮಾತ್ರೆ ತಗೋತಾ ಇದೀನಿ. ಇವತ್ತು ಸಂಜೆ ಸ್ಟಿರಾಯ್ಡ್ ಕೊಡ್ತೀನಿ ಅಂತ ಡಾಕ್ಟರ್ ಹೇಳಿದಾರೆ… ಒಂದೆರಡು ದಿನ ಸರಿ ಹೋಗ್ತೀನಿ. ತೊಂದ್ರೆ ಇಲ್ಲ” ಎಂದು ಹಿರಿಯ ಜೀವವೊಂದು ಜೀವನೋತ್ಸಾಹದ ಪರಿಯನ್ನು ಹೀಗೆ ಹೇಳಿತು.

ದೇಹ ಕೊಂಚ ಸಣ್ಣಗಾಗಿದ್ದರೂ ಮುಖದಲ್ಲಿ ಅದೇ ಮುಗ್ಧ, ನಿಷ್ಕಲ್ಮಶ ನಗುವಿನ ಮಿಂಚಿದೆ. ಜೋಗದಂತೆ ಭೋರ್ಗರೆಯುವ ಕಾವ್ಯ ಶಕ್ತಿ ಈಗಲೂ ಇದೆ. ಜೇಬಿನಲ್ಲಿದ್ದ ಪೆನ್ನು ಅದಾವ ಮತ್ತೊಂದು ಶ್ರೇಷ್ಠ ಕಾವ್ಯವೊಂದನ್ನು ಬರೆದು ಮುಗಿಸಿತ್ತೊ!
ಲೇಖನಿಯನ್ನೊಮ್ಮೆ ನೋಡಿದೆ. ಸುತ್ತ ಕಣ್ಣಾಡಿಸಿದೆ. ಪ್ರಶಸ್ತಿ, ಫಲಕಗಳು ಮೂಲೆಯೊಂದರಲ್ಲಿ ದಂಡಿಯಾಗಿ ಮಲಗಿದ್ದವು. ಆ ನಗರದ ಬೀದಿ, ಮನೆಯ ಪ್ರತಿ ಗೋಡೆ, ಫಲಕ, ಪ್ರಶಸ್ತಿ ಪತ್ರ… ಪ್ರತಿಯೊಂದರಿಂದ ವಿಶ್ವ ತುಂಬ ರಿಂಗಣಿಸುತ್ತಿದ್ದ “ನಿತ್ಯೋತ್ಸವ ತಾಯೆ ನಿತ್ಯೋತ್ಸವ” ಕೇಳಿ ಬರುತ್ತಿತ್ತು. ನನಗೆ ಇವರ ಈ ಹಾಡು ಕೇಳಿದಾಗೆಲ್ಲ ತಟ್ಟನೆ ಸರ್ ಅಲ್ಲಾಮಾ ಇಕ್ಬಾಲ್ ನೆನಪಾಗುತ್ತಾರೆ. ಅವರು ಇಡೀ ಜಗತ್ತಿಗೆ ಹಿಂದೂಸ್ತಾನದ ಸೌಂದರ್ಯ, ಮಹತ್ವವನ್ನು ‘ಸಾರೆ ಜಹಾಸೇ ಅಚ್ಛಾ, ಹಿಂದೂಸ್ತಾನ್ ಹಮಾರಾ…’ ಮೂಲಕ ಸಾರಿದವರು.
ಈ ನಿತ್ಯೋತ್ಸವದ ಕವಿ ಕೂಡ ನಾಡಿನ ಹಿರಿಮೆಯನ್ನು “ನಿತ್ಯೋತ್ಸವ”ದ ಮೂಲಕ ಜಗಕ್ಕೆ ಮನದಟ್ಟು ಮಾಡಿಕೊಟ್ಟವರು. ಹೀಗಾಗಿ ಇವರನ್ನು “ಕನ್ನಡದ ಇಕ್ಬಾಲ್” ಎಂದು ಕರೆಯಬೇಕೆನಿಸತು. ಹಾಗೇ ಹೇಳಿದೆ. ತುಂಬ ಖುಷಿ ಪಟ್ಟರು. ಹೋ ಆ ಚೇತನವೆಲ್ಲಿ ನಾನೆಲ್ಲಿ, ಆದರೂ ಸಂತೋಷ ಕೊಟ್ಟಿತಪ್ಪ ನಿನ್ನ ಮನದ್ಮಾತು ಅಂದರು.
ನಿತ್ಯೋತ್ಸವ ಹಾಡು, ಕುರಿಗಳು ಸಾರ್ ಕುರಿಗಳು ಹುಟ್ಟಿದ ಕಥೆ ಹೇಳಿದರು. ಕುವೆಂಪು ಮತ್ತಿತರ ಹಿರೀಕರನ್ನು ನೆನೆದರು.
ಊರು, ಅಪ್ಪ, ಅಮ್ಮ, ಪ್ರಜಾವಾಣಿ, ಸುಧಾ ಕೆಲಸ ಎಲ್ಲದರ ಬಗ್ಗೆ ವಿಚಾರಿಸಿದರು. ಸಂತೋಷ. ನಾನು ಹುಷಾರಾದ ಮೇಲೆ ಒಮ್ಮೆ ಪುರುಸೊತ್ತು ಮಾಡಿಕೊಂಡು ಬನ್ನಿ, ಹರಟುವಾ ಎಂದರು. “ನಾನು ಅದಾವ ಫಿಲಂನವರು ಬಂದ್ರಪ್ಪಾ ಮನೆಗೆ ಇಷ್ಟೊತ್ತಿನಲ್ಲಿ, ರಣಬಿಸಿನಲ್ಲಿ…” ಅಂದುಕೊಂಡಿದ್ದೆ, ಎಂದು ತಮಾಷೆ ಮಾಡಿದರು. ನೀವು ಬಂದಿದ್ದು ಸಂತೋಷನಪ್ಪಾ ಎನ್ನುತ್ತ ತಮ್ಮ ಮನೆಯ ಮೊದಲ ಮಹಡಿಯಿಂದ ಕೆಳಗಿನವರೆಗು ಬಂದು ಬೀಳ್ಕೊಟ್ಟರು.
ಮುಖದಲ್ಲಿ ಮತ್ತದೇ ನಗುವಿನ ನಿತ್ಯೋತ್ಸವ..



ಮಣಿಕಾಂತ್ ಅವರ ಜತೆ ಒಮ್ಮೆ ನಾ ಇವರನ್ನು ಭೇಟಿ ಆದಾಗ ನನಗೂ ಹೀಗೇ ಅನಿಸಿತ್ತು. ಸರಳವಾಗಿ ಸಹಜವಾಗಿ ಜಮ್ಮು ಬಿಮ್ಮಿಲ್ಲದೆ ಬದುಕುವುದು ಎಷ್ಟು ಕಷ್ಟ ಆದರೆ ಅಷ್ಟೇ ಚೆಂದ. ಬೇಗ ಹುಶಾರಾಗಲಿ
ಬೇಗ ಹುಷಾರಾಗಿ ಕನ್ನಡಕ್ಕೊಂದು ಕಾವ್ಯ ಬರೆಯುವಂತಾಗಲಿ.
ಕನ್ನಡದ ಸುಪ್ತ ಚೇತನಗಳನ್ನು ಬಡಿದೆಬ್ಬಿಸುವ ನಿತ್ಯೋತ್ಸವದ ಕವಿಗೆ ನಮ್ಮ ಪ್ರೀತಿಯ ಶುಭಾಶಯಗಳು.
– ಶ್ಯಾಮಲಾ .