ಗಿರಿಧರ ಕಾರ್ಕಳ
ದಕ್ಷಿಣ ಮುಂಬಯಿನಲ್ಲಿ 1999ರಿಂದ ಆರಂಭವಾದ ಈ ವೈವಿಧ್ಯಮಯ ಕಾಲಾಘೋಡಾ ಕಲಾ ಉತ್ಸವಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ. ಒಂಭತ್ತು ದಿನಗಳ ಈ ಉತ್ಸವ ಆರಂಭವಾಗುವುದು ಪ್ರತೀವರ್ಷ ಫೆಬ್ರವರಿ ಮೊದಲ ಶನಿವಾರ ಮತ್ತು ಮುಕ್ತಾಯ ಎರಡನೇ ಭಾನುವಾರ. ಇದೀಗ 19ನೇ ವರ್ಷಕ್ಕೆ ಕಾಲಿಟ್ಟಿರುವ ಈ ಉತ್ಸವಕ್ಕೆ ಜನಮನ್ನಣೆಯ ಮೊಹರೂ ಬಿದ್ದಿದೆ.
ಅಂದಹಾಗೆ..ಈ ಉತ್ಸವದಲ್ಲಿ ಏನೇನಿದೆ ಅಂತ ಕೇಳುವ ಬದಲು ಏನೇನಿಲ್ಲ ಅಂತ ಕೇಳಿ. ದೃಶ್ಯಕಲೆ,ನೃತ್ಯ,ನಾಟಕ,ಸಂಗೀತ,ಸಿನಿಮಾ,ಸಾಹಿತ್ಯ ಗೋಷ್ಠಿ,ಪುಸ್ತಕ ಪ್ರದರ್ಶನ, ಮಕ್ಕಳ ವಿಭಾಗ, ಕಲಾ ಕಾರ್ಯಾಗಾರ, ಹೆರಿಟೇಜ್ ವಾಕ್, ನಗರ ವಿನ್ಯಾಸ,ವಾಸ್ತುಶಿಲ್ಪ, ಆಹಾರ ವೈವಿಧ್ಯ, ಕರಕುಶಲ ವಸ್ತುಗಳು,ಕಲಾಸಂತೆ.. ಹೀಗೆ ಕಾಲಾಘೋಡ ಉತ್ಸವದಲ್ಲಿ ವರ್ಣರಂಜಿತ ಸಾಂಸ್ಕೃತಿಕ ಜಗತ್ತೊಂದು ಒಂಬತ್ತು ದಿನಗಳ ಕಾಲ ಅರಳಿ ನಿಲ್ಲುತ್ತದೆ.. ಮತ್ತೆ ಎಲ್ಲಕ್ಕೂ ಉಚಿತ ಪ್ರವೇಶ..!!.
ನ್ಯಾಶನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಡೇವಿಡ್ ಸೂಸನ್ ಲೈಬ್ರರಿ ಗಾರ್ಡನ್, ಬಾಂಬೇ ಮ್ಯೂಸಿಯಂ, ಹಾರ್ನಿಮನ್ ಸರ್ಕಲ್, ಎಂ.ಸಿ. ಘಾಯ್ ಹಾಲ್ ಜಹಾಂಗೀರ್ ಆರ್ಟ್ ಗ್ಯಾಲರಿ ರಸ್ತೆ…ಹೀಗೇ ಕಾಲಾಘೋಡ ಉತ್ಸವ ದಕ್ಷಿಣ ಮುಂಬೈ ಉದ್ದಗಲಕ್ಕೂ ಚಾಚುತ್ತದೆ..!!
ಈ ಬಾರಿಯ ಉತ್ಸವದ ವಿಶಾಲ ಥೀಮ್ – “ನಿಸರ್ಗ ಮತ್ತು ಕಲೆಗೆ ಅದು ನೀಡಿದ ಸ್ಪೂರ್ತಿ”.
ಅಂದ ಹಾಗೆ ಉತ್ಸವದಲ್ಲಿ ಜಯಂತ ಕಾಯ್ಕಿಣಿಯವರ ಜೊತೆ ಸಂವಾದವೂ ಇತ್ತು. ಕಾಯ್ಕಿಣಿಯವರ ಆಯ್ದ ಮುಂಬಯಿ ಕಥೆಗಳ ಅನುವಾದಿತ ರೂಪ ‘ No Presents Please’ ಕೃತಿಯ ವಿವಿಧ ಆಯಾಮಗಳನ್ನು ಕುರಿತ ಸಂವಾದ. ಲೇಖಕರ ಜೊತೆ ಮಾತಿಗಿಳಿದವರು ಬರಹಗಾರ್ತಿ ಇಂದಿರಾ ಚಂದ್ರಶೇಖರ್.
ಇವತ್ತು ಈ ವರ್ಷದ ಉತ್ಸವದ ಕೊನೇದಿನ..!!
ಫೆಬ್ರುವರಿ ಬಂತೆಂದರೆ ಊರ ಜಾತ್ರೆಯ ನೆನಪು ತರುವ ಮುಂಬಯಿ ಕಾಲಾಘೋಡಾ ಫೆಸ್ಟಿವಲ್ ವರ್ಷವರ್ಷಕ್ಕೂ ಬೆಳೆಯುತ್ತಿದೆ.
ಕೆಲವು ಚಿತ್ರಗಳು- ಅಹಲ್ಯಾ ಬಲ್ಲಾಳ್ ಸಂಗ್ರಹದಿಂದ
0 ಪ್ರತಿಕ್ರಿಯೆಗಳು