
ಇಂದು ಎಂ ಎಂ ಕಲಬುರ್ಗಿ ಅವರ ಹುಟ್ಟುಹಬ್ಬ. ನೋವು ತುಂಬಿದ ಮನೆಗೆ ಭೇಟಿ ಕೊಟ್ಟವರು ಹಲವರು. ಕಲಬುರ್ಗಿ ಹತ್ಯೆಯನ್ನು ಉಗ್ರವಾಗಿ ಖಂಡಿಸಿದ ಸಂಶೋಧಕ ಜಿ ಎನ್ ದೇವಿ ಸೇರಿದಂತೆ ನಾಡಿನ ಅನೇಕ ಸಾಹಿತಿಗಳು ಕಲ್ಬುರ್ಗಿ ಮನೆಗೆ ತೆರಳಿ ಸಾಂತ್ವನ ಹೇಳಿದರು.
ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ಮುದ್ದು ತೀರ್ಥಹಳ್ಳಿ ಸೇರಿದಂತೆ ಹಲವರು ಕಲಬುರ್ಗಿ ಕುಟುಂಬದೊಂದಿಗೆ ಮಾತನಾಡಿದರು
ಫೋಟೋಗಳು Sultan Beary ಮೂಲಕ











‘ ದಕ್ಷಿಣಾಯನ ‘ ಎಂದು ಹೆಸರಿಡಲಾದ ಮಹಾಯಾತ್ರೆ ಇದು.ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ ಈ ನಾಲ್ಕು ರಾಜ್ಯಗಳ ಸಾಹಿತಿಗಳು, ಭಾಷಾ ಶಾಸ್ತ್ರಜ್ಞರು, ಚಿತ್ರ ಕಲಾವಿದರು, ಚಲನ ಚಿತ್ರ ಕಲಾವಿದರು ಸೇರಿದಂತಹ ಯಾತ್ರೆ ಇದು. ದೇಶದ ಮಹತ್ವದ ಭಾಷಾ ಶಾಸ್ತ್ರಜ್ಞರಲ್ಲೊಬ್ಬರಾದ ಸಾಹಿತಿ ಮತ್ತು ವಿಶ್ಲೆಷಕರಾದ ಡಾ .ಗಣೇಶ್ ದೇವಿ ಯವರು ಈ ಯಾತ್ರೆಯ ಮುಖ್ಯಸ್ಥರು. ಈ ಎಲ್ಲ ರಾಜ್ಯಗಳ ಸಾಹಿತಿ-ಕಲಾವಿದರನ್ನೂ ಒಗ್ಗೂಡಿಸಿ ಒಂದು ಅಭಿಯಾನ ಕೈಗೊಂಡವರು. ತಮ್ಮ ಪದ್ಮಶ್ರೀ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಿದವರು. ಇದಕ್ಕಾಗಿಯೇ ಈಗ ಬ್ರಿಟನ್ನಿನಲ್ಲಿದ್ದ ಗುಜರಾತಿ ಕವಿ ಅನಿಲ್ ಜೋಷಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಿದವರು, ಮತ್ತೊಬ್ಬರು ಗಿರಿಜನರ ನಡುವೆ ಕೆಲಸ ಮಾಡುವ ಕವಿ ಮತ್ತು ಕಥೆಗಾರ , ಮಹಾರಾಷ್ಟ್ರದಿಂದ ಚಲನ ಚಿತ್ರ ಮತ್ತು ವರ್ಣ ಚಿತ್ರ ಕಲಾವಿದರು ಹೆಚ್ಚಾಗಿದ್ದರು. ಗೋವಾದಿಂದ ಕೊಂಕಣಿ ಸಾಹಿತ್ಯಕ್ಕೆ ಪಡೆದ ಪ್ರಶಸ್ತಿಗಳನ್ನು ವಾಪಸ್ಸು ಮಾಡಿದ ಬೋರ್ಕರ್ , ಕಲಬುರ್ಗಿಯವರೊಡನೆ ವಚನ ಸಾಹಿತ್ಯವನ್ನು ಕೊಂಕಣಿಗೆ ಅನುವಾದ ಮಾಡಲು ಶ್ರಮಿಸಿದವರು, ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ಸು ಮಾಡಿದ ರಹಮತ್ ತರೀಕೆರೆ , ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಮಾಡಿದ ಾರ್ ಕೆ. ಹುಡುಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಯನ್ನು ವಾಪಸ್ಸು ಮಾಡಿದ ಕೆ.ನೀಲಾ ಮತ್ತು ಇತರ ಯುವ ಸಾಹಿತಿಗಳು,ರಾಜ್ಯ ಸಾಹಿತ್ಯ ಅಕಾಡೆಮಿಯ ಯುವ ಬರಹಗಾರ ಪ್ರಶಸ್ತಿಯನ್ನು ವಾಪಸ್ಸು ಮಾಡಿದ ಅತ್ಯಂತ ಕಿರಿಯ ಬರಹಗಾರ್ತಿ ಮುದ್ದು ತೀರ್ಥ ಹಳ್ಳಿ ಇವರು.
ಮಹಾರಾಷ್ಟ್ರದ ಧಾಬೋಲ್ಕರ್ ಮತ್ತು ಗೋವಿಂದ ಪಾನ್ಸಾರೆಯವರ ಕುಟುಂಬಗಳನ್ನು ಭೇಟಿ ಮಾಡಿ, ಅವರ ಹುಟ್ಟು ಹಬ್ಬದ ದಿನ ತಮ್ಮ ಸಂತಾಪವನ್ನು ಆಚರಿಸಿ ನಂತರ ಪ್ರೊ.ಕಲಬುರ್ಗಿಯವರ ಹುಟ್ಟು ಹಬ್ಬದ ಹಿಂದಿನ ದಿನ ಧಾರವಾಢಕ್ಕೆ ಬಂದು ಕಲಬುರ್ಗಿಯವರ ಮನೆಗೆ ಭೇಟಿ ಮಾಡಿದರು.
ಮುಂದೆ ತಮಿಳು ನಾಡು, ಕೇರಳ , ಆಂಧ್ರ ಪ್ರದೇಶ,ತೆಲಂಗಾಣಗಳಿಗೂ ಈ ದಕ್ಷಿಣಾಯನವನ್ನು ಕೊಂಡೊಯ್ಯಲಿದ್ದಾರೆ.
ಇವರು ಪತ್ರಿಕಾ ಗೋಷ್ಠಿಯಲ್ಲಿ ಮತ್ತು ನಂತರ ನಡೆದ ಸಮ್ಮಿಲನದಲ್ಲಿ ಆಡಿದ ಮಾತುಗಳು ಒಂದು ಪುಸ್ತಕ ರೂಪದಲ್ಲಿ ಕನ್ನಡ ಬಲ್ಲ ಎಲ್ಲರಿಗೂ ತಲುಪಬೇಕಾಗಿದೆ.ಇಂದಿನ ಸಂದರ್ಭದಲ್ಲಿ ದೇಶದ ಜನರ ಮುಂದಿರುವ
ಕರ್ತವ್ಯಗಳ ಬಗ್ಗೆ ಮನ ಮುಟ್ಟವಂತಹ ಮಾತನಾಡಿದರು.
ಆ ವಿವರಗಳಿಗೆ ಈಗ ಹೋಗದೆ ಅವರು ಮುಂದಿನ ಹೆಜ್ಜೆಯಾಗಿ ಘೋಷಿಸಿದ ಜ.30ರಂದು ಗಾಂಧಿ ಹುತಾತ್ಮರಾದ ದಿನ ದಾಂಡಿಯಲ್ಲಿ ನಡೆಸಲಿರುವ ಅಸಹನೆಯ ವಿರುದ್ಧ ದೇಶದೆಲ್ಲಾ ರಾಜ್ಯಗಳ ಸಾಹಿತಿಗಳು, ಕಲಾವಿದರು,ಚಲನ ಚಿತ್ರರಂಗದವರು ಹೀಗೆ ಹಲವು ರಂಗದ ಪ್ರಜ್ಞಾವಂತರು ಸೇರಿ ಚಿಂತನ-ಮಂಥನ ನಡೆಸಲಿದ್ದಾರೆ. ದೇಶದೆಲ್ಲ ಕಡೆಗಳಿಂದ ” ದಾಂಡಿ ಚಲೋ ” ನಡೆಯಲಿದೆ. ಕರ್ನಾಟಕದ ನಾವೆಲ್ಲರೂ ಇಂದಿನಿಂದಲೇ ದಾಂಡಿಯ ಕಡೆ ನಡೆಯಲು ಸಿದ್ಧರಾಗಬೇಕಾಗಿದೆ.
ಗುರುಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆನೆ
ಮಾರ್ಗಶಿರ ಋತು ಪ್ರತಿಭೆ ಕವಿರಾಜ ಮಾರ್ಗ ಪ್ರಭೆ
ಸತ್ಯ ಶಿವ ಸುಂದರದ ಇಹ ಪರದ “ಮಾರ್ಗ”
ಕಾರ್ಯ ದಕ್ಷತೆ ಕ್ಷಮತೆ ನೇರ ನಡೆ ನುಡಿಕಿಡಿಯ
ಸೃಜನ ಶೀಲ ವಿಚಾರ ಉತ್ಕ್ರಾಂತಿ “ಮಾರ್ಗ”-1
ಚಿಂತನದ ಮಂಥನದ ಮಿಡಿವಮನ ತುಡಿವೆದೆಯ
ಬೋಧನೆಯ ಶೋಧನೆಯ ಸಾಧನೆಯ “ಮಾರ್ಗ”
ಗದ್ಯ-ಪದ್ಯ-ವಿಮರ್ಶೆ ಮೌಲಿಕ ಪ್ರಬಂಧಗಳ
ಪ್ರೌಢಿಮೆ-ಪ್ರಬುದ್ಧತೆಯ ಪಾಂಡಿತ್ಯ “ಮಾರ್ಗ”-2
ಕಂಡದ್ದನಾಡಿದರೆ ಕೆಂಡದಂತಹ ಕೋಪ
ನಿರ್ಭೀತ ಸಂಘರ್ಷ ಸಂಕ್ರಮಣ “ಮಾರ್ಗ”
ವಾಙ್ಮಯೋಪಾಸನಗೆ ಮುಡಿಪು ತನು ಮನ ಧನವು
ಜ್ಞಾನ ಸಿದ್ಧಿಯ ಶುದ್ಧ ಕಾಯಕದ “ಮಾರ್ಗ”-3
ಸುಸ್ಪಷ್ಟ ನುಡಿಗಟ್ಟು ಸಿದ್ಧಾಂತ ನೆಲೆಗಟ್ಟು
ಜಗಕೆ ಅಪ್ರಿಯ ನಗ್ನ ಕಹಿ ಸತ್ಯ “ಮಾರ್ಗ”
ಹುಡುಕಾಟ ಹೋರಾಟ ವಿದ್ವಾಂಸರೊಡನಾಟ
ಸತತಾಧ್ಯಯನ ಗ್ರಂಥ ಬರವಣಿಗೆ “ಮಾರ್ಗ”-4
ತಾತ್ವಿಕ ವಿವೇಚನೆಯ ವಿಷಯ ವಿಶ್ಲೇಷಣೆಯ
ಸೂಕ್ಷ್ಮ ಸಂವೇದನೆಯ ಸಾಂಸ್ಕೃತಿಕ “ಮಾರ್ಗ”
ಬಯಲ ಗಳಿಕೆಯ ಬೆಡಗು ನಿಶ್ಶಬ್ದ ನಿಬ್ಬೆರಗು
ನೆಲದ ಮರೆ ನಿಧಾನ ದಾರ್ಶನಿಕ “ಮಾರ್ಗ”-5
ಬೆಳುವೊಲದ ನೆಲಜಲವು ಧಾರವಾಡದ ಚೆಲುವು
ಸಿರಿಗನ್ನಡದ ಒಲವು ಅನುಭವದ “ಮಾರ್ಗ”
ನಿಷ್ಠೆ-ನಿಷ್ಠುರ ನಿಲುವು ಅಚಲ ನಂಬಿಕೆ ಛಲವು
ಸೋಲು-ಗೆಲುವಿನ ಬಲವು ಅನುಭಾವ “ಮಾರ್ಗ”-6
ಸಮಯ ಪ್ರಜ್ಞೆಯ ಪ್ರೀತಿ ಮಾರ್ಗದರ್ಶನ ನೀತಿ
ಶಿಷ್ಯ ಪ್ರತಿಭಾವಂತರಿಗೆ ಪ್ರಗತಿ “ಮಾರ್ಗ”
ತವ ಶ್ರಮದ ಪಾಲಿಹುದು ಹಂಪಿ ಕನ್ನಡ ವಿಶ್ವ
ವಿದ್ಯಾಲಯವು ಹಿಡಿಯೆ ಅಭಿವೃದ್ಧಿ “ಮಾರ್ಗ”-7
ಸ್ಥಳ ಚರಿತೆ ಹಸ್ತಪ್ರತಿ ತಾಮ್ರಪಟ ತಾಳೆಗರಿ
ಪ್ರಾಚೀನ ಐತಿಹ್ಯ ಉತ್ಖನನ “ಮಾರ್ಗ”
ಶೋಧ-ಸಂಪಾದನಾ ಕ್ರಮದಿ ಹೊಸ ಅಧ್ಯಾಯ
ದೇಸಿ-ಜಾನಪದೀಯ-ಶಾಸ್ತ್ರೀಯ “ಮಾರ್ಗ”-8
ಯುಗ-ಯುಗದ ಮೈಚಳಿಯ ಬಿಟ್ಟು ಶಾಸನ ಶಿಲೆಯು
ಉಲಿವ ಗತ ವೈಭವದ ಇತಿಹಾಸ “ಮಾರ್ಗ”
ನಿರ್ದಿಷ್ಟ ನಿಖರಾರ್ಥ ವಿವರಿಸುವ ಲಿಪಿ ತಜ್ಞ
ಧಿಟ್ಟ ನಿರ್ದಾಕ್ಷಿಣ್ಯ ಅಭಿವ್ಯಕ್ತಿ “ಮಾರ್ಗ”-9
ಸಾರ್ವಕಾಲಿಕ ಸತ್ಯಶರಣ ತತ್ವ ಪ್ರಣೀತ
ಕ್ರಾಂತಿ ಚೇತನ ವಚನ ಚಳವಳಿಯ “ಮಾರ್ಗ”
“ಕಲಬುರ್ಗಿ” ಜೀವನದ ಅವಿಭಾಜ್ಯ ಅಂಗವದು
ಬೆರೆತಿಹುದು ಉಸಿರು ಉಸಿರೊಳು ಬಸವ “ಮಾರ್ಗ”-10
ಜಾತಿ ಭೂತದ ಹೇಡಿ ಧರ್ಮಾಂಧ ದುರ್ಜನರು
ಹೊಸಕಿದರೆ ನಶಿಸೀತೆ ಆ “ಮಹಾ ಮಾರ್ಗ”
ಸಾವಿಲ್ಲ ಆತ್ಮಕ್ಕೆ ಚಿರ ಅಮರ ಕಲಬುರ್ಗಿ
“ಸೌಜನ್ಯ” ಸೌರಭದ ಗೌರವದ “ಮಾರ್ಗ”-11