ಚೇತನಾ ತೀರ್ಥಹಳ್ಳಿ
ಅಂವ ಅವತ್ತೂ ಕುಡಿದುಬಂದ.
ಹೊಸತೇನಲ್ಲ. ಮೊದಮೊದಲು ವಾಂತಿ ತರಿಸ್ತಿದ್ದ ಗಬ್ಬು ವಾಸನೆ ಆಮೇಲಾಮೇಲೆ ಅಭ್ಯಾಸವಾಗಿಹೋಗಿ ಈಗೀಗ ಹಿತವೆನಿಸತೊಡಗಿದೆ. ಈಗೊಂಥರಾ ಹೆಂಡದ ವಾಸನೆಯ ಅಡಿಕ್ಷನ್ ನಂಗೆ. ಇಂವ ಊರಲ್ಲಿ ಇಲ್ಲದಾಗ ನಿದ್ದೆಯೇ ಬರೋಲ್ಲ ಕಣೇ!
ಅವಳು ಕೂಲಾಗಿಯೇ ಹೇಳ್ತಿದ್ದಳು.
ಮುಖದಲ್ಲಿ ಹುಡುಕಿದರೂ ನೋವಿನೆಳೆಯಿಲ್ಲ. “ಇವತ್ತಿನ ತಿಂಡಿಗೆ ಚಪಾತಿ ಮಾಡಿದ್ದೆ” ಅನ್ನುವಷ್ಟೇ ಸಹಜವಾಗಿತ್ತು ಅವಳ ಮಾತು.
ಹಾಗವಳು ಹೇಳಹೊರಟಿದ್ದು ಅವತ್ತಿನ ಬಗ್ಗೆ. ಅಂವ ಕುಡಿದು ಹೆಚ್ಚಾಗಿ ಅವಳ ಮುಖ ಮೂತಿ ನೋಡದೆ ಜಪ್ಪಿದನಲ್ಲ ಅವತ್ತಿನ ಬಗ್ಗೆ.
ಯಾವುದೋ ಸಣ್ಣ ಮಾತಿಗೆ ಅಂವ ತೀರಾ ಅವಳ ಮುಖಕ್ಕೆ ದಿಂಬು ಒತ್ತಿ ಹಿಡಿದುಬಿಟ್ಟಿದ್ದ.
“ನಂಗೆ ಬದುಕೋ ಆಸೆ ಇದೆ ಕಣೇ…. ನಾನು ಬದುಕ್ಬೇಕು…” ಅವಳ ಬಿಕ್ಕಳಿಕೆಗೆ ನನ್ನ ಗಂಟಲೊತ್ತಿ ಬಂದಿತ್ತು.
~
ಅವಳ ಮನೆಯ ಸಂಸ್ಕಾರ ದೊಡ್ಡದು. ಸಂಸ್ಕರವೆಂದರೆ, ಮಡಿ ಮೈಲಿಗೆ ಇತ್ಯಾದಿ…
ಮಡಿಯ ಜನಗಳಿಗೆ ಪ್ರಾಣಕ್ಕಿಂತ ಮಾನ ದೊಡ್ಡದಾಗಿರೋದು ಸಹಜ. ಮೈ ತುಂಬ ಬರೆ ಹೊತ್ತ ಮಗಳನ್ನ ಕಂಡು ಅವಳಮ್ಮ ಬಿಕ್ಕಿದರು. “ಜನಕ್ಕೆ ಏನಂತ ಹೇಳೋದು?”
ಅತ್ತೆಯೂ ಹೇಳ್ತಾಳೆ… “ಕುಡಿದಾಗ ಹಾಗಾಡೋದು ಬಿಟ್ರೆ ಮಗ ಒಳ್ಳೆಯವ್ನು ಕಣೇ, ಅಡ್ಜಸ್ಟ್ ಮಾಡ್ಕೋ!”
ಇರುಳು ಕಂಠಮಟ್ಟ ಕುಡಿದವನ ನಷೆ ದಿನಾ ಬೆಳಗ್ಗೆ ಹೊರಡುವಾಗಲೂ ಇಳಿದಿರೋಲ್ಲ… ಮತ್ತೆ ಸಂಜೆ ಕಂಠಮಟ್ಟ….
ಇನ್ನು, ಅಡ್ಜಸ್ಟ್ ಮಾಡ್ಕೊಳೋದು ಯಾವಾಗ?
~
ಒಮ್ಮೆಯಂತೂ ವಿಪರೀತಕ್ಕೆ ಹೋಯ್ತು.
ಅಂವ ಹುಚ್ಚು ನಾಯಿ ಕಡಿದವರ ಹಾಗೆ ಮುಗಿಬಿದ್ದಿದ್ದ.
ಹೆಂಡತಿಯನ್ನ ಸುಖಾಸುಮ್ಮನೆ ಬಡಿಯುವ ಗಂಡಸರು ಒಂದೋ ಸೋಲನ್ನ ಸಹಿಸಲಾಗದವರಾಗಿತರ್ಾರೆ. ಇಲ್ಲಾ ಕೀಳರಿಮೆಯವರಾಗಿತರ್ಾರೆ. ಇನ್ನೂ ಸರಿಯಾಗಿ ಹೇಳಬೇಕಂದರೆ ಕೈಲಾಗದ ದುರಹಂಕಾರಿಗಳಾಗಿತರ್ಾರೆ!
ಈ ಇಷ್ಟರಲ್ಲಿ ಅಂವ ಎಂಥದೋ ಒಂದು, ಅಂತೂ ಆಗಿದ್ದ. ಒಟ್ಟು ಕುಂತು ಉಣ್ಣಲು ಕಾಯ್ತಿದ್ದವಳನ್ನ ಮನೆಗೆ ಬಂದವನೆ ಧಬ ಧಬ ಬಡಿದು ಬಿಸಾಕಿದ. 
ಯಾವತ್ತಿನಂತೆ ಫೋನು ಮಾಡಿ ಅತ್ತವಳಿಗೆ ನಾನು `ಕುಟುಂಬ ದೌರ್ಜನ್ಯ ಕಾಯಿದೆ’ ಇತ್ಯಾದಿ ಭಾಷಣ ಬಿಗಿದು ಸಹಾಯವಾಣಿಗಳ ನಂಬರು ಕೊಟ್ಟೆ.
ಇನ್ನೇನು, ಎಲ್ಲ ಮುಗಿಯಿತಂತಲೇ ಅಂದುಕೊಂಡು ಅವಳು ಸುಖವಾಗಿರಲಿ ಅನ್ನುತ್ತ ದೀಪ ಹಚ್ಚಿಟ್ಟೆ.
~
ಇವೆಲ್ಲ ಆಗಿ ನಾಲ್ಕನೇ ದಿನಕ್ಕೆ ಸೀರೆಯುಟ್ಟು ಮನೆಗೆ ಬಂದಳು ಅವಳು. ಜತೆಗೆ ಕವರಲ್ಲಿ ಮೈಮೇಲೆ ಬರುವ ದೇವರೊಂದರ ಪ್ರಸಾದ!
“ಯಾರೋ ಎನೋ ಮಾಡ್ಸಿ ಹಾಕಿದಾರೆ ಕಣೇ. ದೇವ್ರು ಹೇಳ್ತು. ದಿನಾ ಚಿಟಿಕೆ ಕುಂಕುಮ ನೀರಲ್ಲಿ ಹಾಕಿ ಕುಡಿಸೋಕೆ ಹೇಳಿದಾರೆ. ಮೂರನೇ ಅಮವಾಸ್ಯೆಗೆ ಹೋಗಬೇಕಂತೆ!” ಅಂದವಳ ಮುಖದಲ್ಲಿ ಸಂಭ್ರಮ.
ನನ್ನ ಎದೆಹಿಂಡಿ ಅಯ್ಯೋ ಅನಿಸುತ್ತಿತ್ತು. ತಲೆ ಕೆಟ್ಟು ಅಂವ ಇಡಿ ಕುಂಕುಮದ ಪೊಟ್ಟಣವನ್ನೇ ಬೀರಲ್ಲಿ ಹಾಕಿ ಕುಡಿದುಬಿಟ್ಟರೆ?
ಕೇಳೋಣವೆಂದುಕೊಂಡೆ.
ಅಪರೂಪಕ್ಕೆ ನಗುತ್ತಿದ್ದಳು ಹುಡುಗಿ, ಸುಮ್ಮನಾದೆ.
~
ಇವತ್ತು ಬೆಳಗ್ಗೆ ಮತ್ತೆ ಅವಳ ಫೋನು ಬಂತು.
ದೇವರ ಮನೆಯಲ್ಲಿಟ್ಟಿದ್ದ ನಿಂಬೆ ಹಣ್ಣು ಕಾಣ್ತಿಲ್ಲವಂತೆ.
ಅಂವ ನಿನ್ನೆ ರಾತ್ರಿ ಮತ್ತೆ ಸಮಾ ಕುಡಿದು ಬಂದಿದ್ದನಂತೆ.
“ಏನಿಲ್ಲ, ಮೂಗಲ್ಲಿ ರಕ್ತ ಬರೋ ಹಾಗೆ ಹೊಡೆದ ಅಷ್ಟೆ. ಮೂರನೇ ಅಮವಾಸ್ಯೆಗೆ ಕಾಯ್ತಿರುವೆ. ಆಮೇಲೆ ಎಲ್ಲ ಸರಿ ಹೋಗತ್ತೆ.
ಆದ್ರೆ, ಈ ನಿಂಬೆ ಹಣ್ಣು ಎಲ್ಲಿ ಹೋಯ್ತಂತಲೇ ಗೊತ್ತಾಗ್ತಿಲ್ಲ….”
ಅವಳು ಹೇಳ್ತಲೇ ಇದ್ದಳು.
ಮೇಜಿನ ಮೇಲಿಟ್ಟಿದ್ದ ಮಹಿಳಾ ಸಹಯವಾಣಿ ನಂಬರು, ನನ್ನ ಅಣಕಿಸ್ತಲೇ ಇತ್ತು.


ಚೇತನಾ ಅವರೆ,
ನಿಮ್ಮ ಬರೆಹಗಳು ಕಟ್ಟುವ ಮನದಟ್ಟು ಚಂದವೆನಿಸುತ್ತದೆ. ಆದರೆ ನನ್ನದೊಂದು ತಕರಾರಿದೆ. ನಿಮ್ಮ ಚಿಂತನೆಗಳು ಸ್ತ್ರೀಕೇಂದ್ರಿತವಿರುತ್ತವಲ್ಲ ಯಾಕೆ? ಯಾಕೋ ಚೂರು ಇರಿಸುಮುರಿಸಾಗುತ್ತದೆ. ಅಥವಾ ಇದು ನನ್ನ ಓದಿನ ತಪ್ಪಿರಬಹುದೆ?
ಚಿಕ್ಕದರಲ್ಲೂ ಅಚ್ಚುಕಟ್ಟು ತರುತ್ತೀರಲ್ಲ ಅದಕ್ಕೆ ಭೇಷ್ ಅನ್ನಲೇಬೇಕು.
-ಅವನಿ
namaste avani,
nAnu BhAmini ShaTpadigaLannu stree kendritavendE bareyuvudu. adu akSharaShaha`BhAmini’ ShaTpadiyE.
idaralli nimma Odina tappEnU illa.
mechchugege dhanyavAda.
– Vande,
Chetana
U would have given nice ending to a little story still it’s nice.,,, go ahead.,,,