೨೦೧೯ ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಮಹಾಂತಪ್ಪ ನಂದೂರ ಅವರ ‘ಅರಿವೇ ಪ್ರಮಾಣು’ ಕಾವ್ಯ ಕೃತಿ ಆಯ್ಕೆಯಾಗಿದೆ.
ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂ. ೧೦ ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದ್ದು, ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಗದಗದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ‘ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ’ಯ ಅಧ್ಯಕ್ಷ ಮಂಜುನಾಥ ಪಟಗಾರ ಅವರು ತಿಳಿಸಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಪ್ರಶಸ್ತಿಗೆ ರಾಜ್ಯದ ವಿವಿಧ ಕಡೆಗಳಿಂದ ೬೦ ಕೃತಿಗಳು ಬಂದಿದ್ದು, ಕೊನೆಗೆ ‘ಅರಿವೇ ಪ್ರಮಾಣು’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಕವಿ ಮಹಾಂತಪ್ಪ ನಂದೂರ ಪರಿಚಯ:
ಕಲಬುರಗಿಯಲ್ಲಿ ೧೯೬೫ ರಲ್ಲಿ ಜನನ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ೧೯೯೨ ರಿಂದ ಹುಬ್ಬಳ್ಳಿಯಲ್ಲಿ ರೇಲ್ವೆ ಇಲಾಖೆ ಲೆಕ್ಕ ವಿಭಾಗದಲ್ಲಿ ಹಿರಿಯ ಅನುಭಾಗ ಅಧಿಕಾರಿಯಾಗಿ ವೃತ್ತಿ.
ಇದುವರೆಗೆ ಐದು ಕವನ ಸಂಕಲನಗಳು, ಒಂದು ಕಥಾ ಸಂಗ್ರಹ, ಒಂದು ಲೇಖನ ಸಂಗ್ರಹ ಮತ್ತು ಪುಟ್ಟರಾಜ ಗವಾಯಿ ಜೀವನ ಚಿತ್ರಣ ಕೃತಿಗಳು ಹೊರಬಂದಿವೆ.
ಡಾ. ಡಿ.ಎಸ್ ಕರ್ಕಿ ಕಾವ್ಯ ಪ್ರಶಸ್ತಿ ಹಾಗೂ ಅಮ್ಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶರಣ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಅಕ್ಕ ನಾಗಮ್ಮ ಜೀವನ ಕಾವ್ಯವನ್ನು ಸುನೀತಗಳಲ್ಲಿ ರಚಿಸಿದ ‘ಅರಿವೇ ಪ್ರಮಾಣು’ ಕೃತಿಗೆ ಈ ವರ್ಷದ ‘ಮೋಹನ ಕುರಡಗಿ ಕಾವ್ಯ ಪ್ರಶಸ್ತಿ’ ಪಡೆದಿದ್ದಾರೆ.






0 Comments