ಮಳೆ ಬಂದು…..
ರೂಪ ಹಾಸನ
ಮಳೆಯನ್ನು ನೆನೆದರೆ ಮನ ಪುಳಕಗೊಳ್ಳುತ್ತದೆ. ಮಳೆ ಜೀವನಾಧಾರವಾದುದು. ಪ್ರಕೃತಿಯ ಉಳಿವಿನ ಸಂಕೇತ. ಮಳೆ ಬಿದ್ದೊಡನೆ ಅದೆಷ್ಟು ಜೀವಗಳಿಗೆ ಸಂತಸ! ರೈತನಿಗೆ ಬಿತ್ತನೆಗೆ ಭೂಮಿ ಹದವಾಯಿತು, ಮೃದುವಾಯಿತೆಂಬ ಖುಷಿ. ಪುಟ್ಟ ಮಕ್ಕಳಿಗೆ ಮಳೆಯಲ್ಲಿ ನೆನೆಯುತ್ತಾ ಶಾಲೆಗೋಡುವ, ಮನೆ ಮುಂದೆ ನಿಂತ ನೀರಲ್ಲಿ ಕಾಗದದ ದೋಣಿ ಬಿಡುವ ಸಂಭ್ರಮ. ಸುರಿವ ಮಳೆಯಿಂದ ಹುಟ್ಟಿದ ಚಳಿಗೆ ಬೆಚ್ಚಗೆ ಹೊದ್ದು ಮಲಗುವ, ಬಿಸಿ ಬಿಸಿ ಪಕೋಡ, ಬೋಂಡ ತಿನ್ನುವ ಉಮೇದು ಹಲವರಿಗೆ. ಕಾದು ಬೆಂಡಾಗಿದ್ದ ಧರಿತ್ರಿ ತಂಪಾದಳಲ್ಲ ಧಗೆ ಅಡಗಿತಲ್ಲ ಎಂಬ ಸಮಾಧಾನ, ಮೊದಲ ಮಳೆ ಮಣ್ಣಿನ ವಾಸನೆ ಅನುಭವಿಸುವ ಖುಷಿ ಕೆಲವರಿಗೆ………
ಮತ್ತೆ ಪ್ರಕೃತಿಯ ಸಂಭ್ರಮವನ್ನಂತೂ ವರ್ಣಿಸುವಂತೆಯೇ ಇಲ್ಲ! ಎಡಬಿಡದೇ ಮೂರು ದಿನದಿಂದ ಸುರಿಯುತ್ತಿರುವ ಬಿರುಮಳೆಯಿಂದ ಇವನಂತೂ ಕಂಗಾಲಾಗಿದ್ದಾನೆ. ಒಂದು ದಿನ ಸಾಲ ತಂದು ಹೊಟ್ಟೆ ತುಂಬಿಸಿದ್ದಾಗಿದೆ. ಮತ್ತೆರಡು ದಿನದಿಂದಾ ಉಪವಾಸ. ಸಾಲ ತರಬೇಕೆಂದರೂ ಕೊಡುವವರಾರು? ಜೊತೆಗೆ ಮನೆಯೆಂಬೋ ಜೋಪಡಿ ಸೋರಿ ಕೆರೆಯಂತಾಗಿದೆ. ಮೂಲೆಯಲ್ಲೆಲ್ಲೋ ಒಣ ಜಾಗ ಹಿಡಿದು ಕುಳಿತ ಇವನ ಹೆಂಡತಿ ಮತ್ತು ಮೂವರು ಹಸಿದ ಮಕ್ಕಳು ಇವನತ್ತಲೇ ತಮ್ಮ ಕಣ್ಣು ಹರಿಸಿ ಮೌನದಲ್ಲೇ ಪ್ರಶ್ನೆ ತುಂಬಿ ಕುಳಿತಿದ್ದಾರೆ. ಇವನಿಗೆ ಅವರನ್ನು ನೋಡುವ ಧೈರ್ಯವಿಲ್ಲ. ಅತ್ತ ನೋಡಿದೊಡನೆ ‘ಅಪ್ಪ ಹಸಿವು’ ಎಂದು ಮಗುವೊಂದು ಸಂಕಟದಿಂದ ನುಡಿದುಬಿಟ್ಟರೆ ಇವನೇನು ಮಾಡಬೇಕು? ಸುರಿವ ಮಳೆಗೆ ಶಾಪ ಹಾಕಿ ಸಾಕಾಗಿದ್ದಾನೆ. ಇವನೊಬ್ಬ ಫುಟ್ಪಾತ್ ವ್ಯಾಪಾರಿ. ಬೀದಿಯಲ್ಲಿ ಸಣ್ಣಪುಟ್ಟ ಸಾಮಾನುಗಳನ್ನು ಹರವಿ ದಿನವಿಡೀ ಕುಳಿತಿದ್ದು, ಮಾರಾಟದಿಂದ ಬಂದ ಹಣದಿಂದ ಇವನ ಸಂಸಾರದ ದಿನದಿನದ ಹೊಟ್ಟೆ ತುಂಬಬೇಕು. ಒಂದು ದಿನ ವ್ಯಾಪಾರ ನಿಂತರೂ ಇವನ ಸಂಸಾರಕ್ಕೆ ಉಪವಾಸವೇ ಗತಿ. ಮಳೆಗಾಲದಲ್ಲಂತೂ ಉಪವಾಸ ಅನಿವಾರ್ಯ.
ಕೆಲವೊಮ್ಮೆ ಒಂದು ದಿನ, ಎರಡು ದಿನ, ಮತ್ತೆ ಹಲಬಾರಿ ಐದಾರು ದಿನ! ದೀರ್ಘ ದಿನಗಳವರೆಗೆ ಮಳೆ ಬಿಡದೆ ಹುಯ್ಯುವ ಇಂತಹ ದಿನಗಳಲ್ಲಿ ಯೋಚಿಸುತ್ತಾನೆ. ಹೇಗೆ ತನ್ನ ಸಂಸಾರದ ಹೊಟ್ಟೆ ತುಂಬಿಸುವುದು? ಭಿಕ್ಷೆ ಬೇಡಿ….. ಕಳ್ಳತನ ಮಾಡಿ……..ಇಲ್ಲ ಇವೆಲ್ಲಾ ತಾನು ಮಾಡಲಾರೆ. ತನಗೆ ಗೊತ್ತಿರುವುದು ಸ್ವಾಭಿಮಾನದ ಫುಟ್ಪಾತ್ ವ್ಯಾಪಾರವೊಂದೇ…. ಧೋ ಎಂದು ಸುರಿವ ಮಳೆಗೆ ಮನಃಪೂರ್ತಿ ಮತ್ತೊಮ್ಮೆ ಬೈಯ್ದು ಹಗುರಾಗಬೇಕೆಂದು ಕತ್ತನ್ನು ಆಕಾಶದೆಡೆಗೆ ಎತ್ತಿದ್ದಾನೆ…. ಅವನಿಗೇ ಅರಿವಿಲ್ಲದೇ ಅವನ ಕಣ್ಣಿಂದ ಧಾರಾಕಾರ ನೀರು ಹರಿಯತೊಡಗಿದೆ. ‘ಎಷ್ಟೆಲ್ಲಾ ಜನರಿಗೆ ಬದುಕು-ಸಂತಸ ನೀಡುವ ಮಳೆಯೇ ನನ್ನ ನನ್ನಂತವರ ಕೆಲವೇ ಕೆಲವರಿಗೆ ತೊಂದರೆಯಾದರೂ ಸರಿಯೇ ನೀ ಸುರಿಯಲೇಬೇಕು. ಬೆಂದ ಮನೆ ಮನಗಳ ತಂಪಾಗಿಸಲೇಬೇಕು’ ಎಂಬ ಹೃದಯ ತುಂಬಿದ ಪ್ರಾರ್ಥನೆ ಅವನಿಂದ ತಂತಾನೇ ಹೊರಬಿದ್ದಿದೆ!
malegiruva shakthiye anthaddu.chennagide baraha roopa madam-smitha
wonderful!
Idu katheyo, niilgaviteyo ?
Maneya varna ne, parinama, ‘ parinaamakaariyaagide.
maleya anubhava obbobbarige ondondu taraha. becchage maneyalliddavrige sukha,sowndarya ,rasikate,kushi ella.ade male, taggina maneyavarige naraka,footpath vyaapaarige hotte hinduva prashne.aadaruu avana udaatta manassu enthadembudannu ee lalitha kiru prabhandhadalli manamuttuvante niruupisiddira.
doddadondu katheya vyapthi iruva vastuvannu istu chikkadaagi sundaravaagi manamidiyuvante heliddiri! vandanegalu madam nimage.
varsha kollapur
good experiment,neelgavitheyo, katheyo, prabandavo, annuvudu mukyavalla, ‘manassige thattuvudaste’ mukya,