ಬಾ ಹುಲಿಕಲ್ ನೆತ್ತಿಗೆ-8 -ಪ್ರೊ. ಶಿವರಾಮಯ್ಯ
ನಾವು ಸ್ಕ್ರೀಪ್ಟ್ ಬರೆಯುತ್ತಿದ್ದ ಅವಧಿಯಲ್ಲಿ ಭಾಷಾತಜ್ಞರಾದ ಪ್ರೊ. ಕೆ.ವಿ.ನಾರಾಯಣ ಮತ್ತು ಮಲೆನಾಡಿನ ಪರಿಸರದಿಂದ ಬಂದು ಕಥೆ ಕಾದಂಬರಿ ಬರೆಯುತ್ತಿರುವ ಬಿಳುಮಲೆ ರಾಮದಾಸ್, ಇವರು ರಂಗಾಯಣಕ್ಕೆ ಬಂದು ಕಲಾವಿದರೊಂದಿಗೆ ಸಂವಾದ ನಡೆಸಿದ್ದು ತುಂಬ ಉಪಯುಕ್ತವೆನಿಸಿತು. ಕುವೆಂಪು ಸಾಹಿತ್ಯ ಕುರಿತು ಅದೂ ಅವರ ಮಲೆಗಳಲ್ಲಿ ಮದುಮಗಳು ಕೃತಿಯ ಭಾಷಾವಿನ್ಯಾಸದ ಬಗ್ಗೆ ವಿಶೇಷ ಆಸಕ್ತಿ ಕೆರಳಿಸುವಂತೆ ಮಾತನಾಡಿದ ಕೆ.ವಿ.ಎನ್. ಅನೇಕ ಸಂದೇಹಗಳಿಗೆ ಪ್ರಶ್ನೆಗಳಿಗೆ ಚುಟುಕದಲ್ಲಿ ಉತ್ತರಿಸಿ ಕಲಾವಿದರ ಅನುಭವ ವಿಸ್ತರಿಸುವಲ್ಲಿ ನೆರವಾದರು.
ಹೀಗೆ ಅವರು ಮಾತನಾಡುತ್ತ, ನನ್ನ ಅನುಭವದ ಮಿತಿಯಲ್ಲಿ ಹೇಳುವುದಾದರೆ, ಜಗತ್ಸಾಹಿತ್ಯದಲ್ಲಿ ಇನ್ಯಾವ ಭಾಷೆಯಲ್ಲೂ ಮದುಮಗಳು ಕೃತಿ ಕನ್ನಡ ಭಾಷಾ ಬಹುತ್ವವನ್ನು ಬಳಸಿ ಬನಿಗೊಂಡು ಬೆಳೆದಿರುವಂತೆ ಬೆಳೆದಿರುವ ಕೃತಿ ಇನ್ನೊಂದಿರಲಾರದು ಎಂದರು. ಕಾದಂಬರಿಯೊಂದನ್ನು ರಂಗರೂಪವಾಗಿ ಕಟ್ಟಿಕೊಳ್ಳುವಾಗ ಮೂಲ ಕೃತಿಗೆ ನಿಷ್ಠರಾಗಿರಬೇಕೆ? ಎಂಬ ಪ್ರಶ್ನೆಗೆ ಉತ್ತರಿಸುತ್ತ ಅವರು ‘ಅಂಥ ನಾಟಕರೂಪ ಮೂಲಕಥೆಯ ಲೋಕಕ್ಕೆ ಅಥೆಂಟಿಕ್ ಆಗಿರಬೇಕಿಲ್ಲ, ಆದರೆ ಸಿನ್ಸಿಯರ್’ ಆಗಿರಬೇಕು ಎಂದು ಸೂಚಿಸಿದರು.
ಮದುಮಗಳು ಕೃತಿಯಲ್ಲಿ ವೆಂಕಟಣ್ಣ, ನಾಗತ್ತೆ, ನಾಗಕ್ಕ ಪ್ರಕರಣ: ಕಾಡಿಯ ಕಳ್ಳಬಸುರಿನ ಪ್ರಕರಣ; ಚೀಂಕ್ರ ಸೇರೆಗಾರ ತನ್ನ ಬಸುರಿ ಹೆಂಡತಿ ಮೇಲೆ ಎತ್ತಿನಂತೆ ಹಾರಿ ಅವಳ ಸಾವಿಗೆ ಕಾರಣನಾದ ಪ್ರಕರಣ; ಹೊನ್ನಾಳಿ ಹೊಡ್ತ ಪ್ರಸಂಗ! ಅತ್ಯಾಚಾರಕ್ಕೊಳಗಾದ ಕಾವೇರಿ ಅತ್ಮಹತ್ಯೆ-ಇಂಥ ಅನುಭವಗಳ ಚಿತ್ರಣದಲ್ಲಿ ಲೇಖಕರ ಅಥೆಂಟಿಸಿಟಿ ಹೇಗೆ? ಎಂಬ ಪ್ರಶ್ನೆಗೆ ಕೆವಿಎನ್ ಕುವೆಂಪು ಅವರನ್ನು ನೀವು ‘ಖಜಜಡಿಜಜಛಿಠತಿ’ (ಪವಿತ್ರ ಗೋವು) ಎಂದು ಯಾಕೆ ಭಾವಿಸುತ್ತೀರಿ? ಎಂದು ಮರುಪ್ರಶ್ನೆ ಹಾಕುವ ಮೂಲಕ ಮೌನವಾಗಿಸಿದ್ದು ಮಾಮರ್ಿಕವಾಗಿತ್ತು. ಮದುಮಗಳು ಕಾದಂಬರಿ ಹಿನ್ನೆಲೆಯಲ್ಲಿ ಇವತ್ತಿನ ಕೋಮುಗಲಭೆಗಳು, ಭಯೋತ್ಪಾದನೆ, ಮತಾಂತರ ಮುಂತಾದ ಸಮಸ್ಯೆಗಳಿಗೆ ನಿಮ್ಮ ಪ್ರತಿಕ್ರಿಯೆ…..
ಇಂಥ ಪ್ರಶ್ನೆ ಇಲ್ಲಿಗೆ ಅಪ್ರಸ್ತುತ ಎಂಬುದನ್ನು ನಯವಾಗಿಯೇ ನಿರಾಕರಿಸಿದ ಕೆವಿಎನ್, ಇದಕ್ಕೆ ಪರ್ಯಾಯವಾಗಿ ಕಾನೂರು ಹೆಗ್ಗಡತಿಯ ಒಂದು ಪ್ರಸಂಗವನ್ನು ಉಲ್ಲೇಖಿಸುವ ಮೂಲಕ ಆ ಮಾತಿಗೆ ತಡೆ ಹಾಕಿದರು. ಕಾನೂರು ಹೆಗ್ಗಡತಿಯಲ್ಲಿ ಆ ಪ್ರಸಂಗ ಹೀಗಿದೆ: ಕಾನೂರು ಮನೆಪಾಲಾಗಿ ಹೂವಯ್ಯ ತನ್ನ ತಾಯಿ ನಾಗಮ್ಮನವರೊಂದಿಗೆ ಕೆಳಕಾನೂರಿಗೆ ಬಂದು ನೆಲಸುತ್ತಾನೆ. ಈ ತಾಯಿ ಮಕ್ಕಳನ್ನು ಕಂಡರೆ ಚಂದ್ರಯ್ಯ ಗೌಡರಿಗೆ ಈಷರ್ೆ್ಯ, ಅಸೂಯೆ. ಹೀಗರುತ್ತ ಮಗಳು ಪುಟ್ಟಮ್ಮನನ್ನು ಮುತ್ತಳ್ಳಿಯ ಶ್ಯಾಮೇಗೌಡರ ಮಗ ಸೀತೆಯ ಅಣ್ಣ ಚಿನ್ನಯ್ಯನಿಗೆ ಕೊಟ್ಟು ಮದುವೆ ಮಾಡುವರು.
ಆಗ ಕೆಳಕಾನೂರಿಗೆ ಖುದ್ದಾಗಿ ಬಂದು ಕರೆಯದೆ ಕೇವಲ ಲಗ್ನಪತ್ರಿಕೆ ಕಳುಹಿಸುವರು. ಇತ್ತ ತಾನು ಸಾಕಿದ ಪುಟ್ಟಮ್ಮ ಮದುವಣಗಿತ್ತಿಯಾಗುವುದನ್ನು ನೋಡುವ ಆಸೆ ನಾಗಮ್ಮನವರಿಗೆ. ಆದ್ದರಿಂದ ಮದುವೆಗೆ ಹೋಗದಿದ್ದರೂ ಕೆಳಕಾನೂರಿನ ಗದ್ದೆಮೂಲೆಯಲ್ಲಿ ಹಾದುಹೋಗುವ ದಿಬ್ಬಣಕ್ಕೆ ಸತ್ಕರಿಸಲು ಚಪ್ಪರ ಹಾಕಿಸಿ, ಹಂಡೆ ಗಟ್ಟಲೆ ನಿಂಬೆ ಪಾನಕ ಮಾಡಿಟ್ಟುಕೊಂಡು ಹಾದಿಕಾಯುವರು. ಹೀಗೆ ತಾಯಿ ಮಕ್ಕಳು ಬಹಳ ಹೊತ್ತು ಕಾದರು. ಕಾನೂರಿನಿಂದ ದಿಬ್ಬಣ ಹೊರಟದ್ದು ನಾಲ್ಕಾರು ಫರ್ಲಾಂಗು ದೂರದಲ್ಲಿದ್ದ ಕೆಳಕಾನೂರಿಗೆ ಕೇಳಿತಾದರೂ, ಅದು ಹೊರಟು ಒಂದು ಗಂಟೆ ಕಳೆದರೂ ಇತ್ತ ಸಾಗಿ ಬರಲೇ ಇಲ್ಲ.
ಕಡೆಗೆ ‘ಏನಾಯಿತೆಂದು ನೋಡಿಕೊಂಡೇ ಬರುತ್ತೇನೆಂದು’ ಹೋದ ಪುಟ್ಟಣ್ಣ ತಂದ ಸುದ್ದಿ ‘ದಿಬ್ಬಣ ಒಳದಾರಿಯಲ್ಲಿ ಹೋಯ್ತಂತೆ’ ಎಂದು. ನಾಗಮ್ಮನವರ ಹೊಟ್ಟೆ ಉರಿಸಲೆಂದೇ ಚಂದ್ರಯ್ಯಗೌಡರು ಈ ಏಪರ್ಾಟು ಮಾಡಿದ್ದರು. ಇದು ಕೇಳಿ ನಾಗಮ್ಮ ಆಳುತ್ತಲೇ ಮನೆ ಸೇರಿಕೊಂಡರು ಹೂವಯ್ಯ ಹಂಡೆಗಳಲ್ಲಿ ತುಂಬಿದ್ದ ಪಾನಕವನ್ನೆಲ್ಲಾ ಅಲ್ಲಿಯೇ ಬೀದಿಯ ಮೇಲೆ ಚೆಲ್ಲಿಸಿ, ಸಾಮಾನುಗಳನ್ನೆಲ್ಲ ಮನೆಗೆ ಹೊರಿಸಿಕೊಂಡು ಹೋದನು.
ಅನೇಕ ದಿನಗಳವರೆಗೆ ಆಹಾದಿಯಲ್ಲಿ ಹೋಗುವವರು, ಆ ಚಪ್ಪರದಡಿ ರಾಶಿರಾಶಿಯಾಗಿ, ಹಿಂಡು ಹಿಂಡಾಗಿ ನೆರೆದಿರುತ್ತಿದ್ದ ಗೊದ್ದ, ಕಟ್ಟಿರುವೆ, ಕೆಂಜಿರುವೆ, ಗಾಳಿಯಿರುವೆ, ಚಿಗಳಿಯಿರುವೆ, ನೊಣ, ಹೊನ್ನೊಣ, ಜೇನ್ನೊಣಗಳನ್ನು ಕಂಡು ಆಶ್ಚರ್ಯದಿಂದ, ಕ್ಷಣ ಮಾತ್ರವಾದರೂ, ನಿಂತು ನೋಡದೆ ಮುಂದುವರಿಯುತ್ತಿರಲಿಲ್ಲ (ಕಾನೂರು ಹೆಗ್ಗಡತಿ. ಪುಟ-488)
ಕಾನೂರು ಹೆಗ್ಗಡತಿಯ ನಾಗಮ್ಮನವರ ಹತಾಶೆ/ಚಂದ್ರಯ್ಯಗೌಡರ ಈಷರ್ೆ್ಯ ಎಂಬ ಅಧ್ಯಾಯದ ಈ ಕೊನೆಯ ಭಾಗವನ್ನು ಸ್ಮರಿಸಿಕೊಂಡ ಕೆವಿಎನ್ ಹೀಗೆ ಕುವೆಂಪು ಸಾಹಿತ್ಯ ರಾಶಿಗೆ ಮುತ್ತಿದ ಒಂದು ಇರುವೆಯಂತೆ ನಾನು ಸಹ ಎಂದು ತಮ್ಮ ವಿನಯವಂತಿಕೆಯನ್ನು ತೋರಿದರು
ಮುಂದುವರೆಯುವುದು……]]>






0 Comments