ಖ್ಯಾತ ಇತಿಹಾಸ ತಜ್ಞ ಪ್ರೊ. ಷ. ಶೆಟ್ಟರ್ ಅವರು ಬರೆದಿರುವ ಇಚ್ಚಾಮರಣದ ಜೈನ ಸಿದ್ಧಾಂತದ ಪುಸ್ತಕವನ್ನು ಓದುತ್ತಿದ್ದೆ. ‘ಸಾವನ್ನು ಅರಸಿ’ ಮತ್ತು ‘ಸಾವನ್ನು ಸ್ವಾಗತಿಸಿ’ ಎಂಬ ಎರಡು ಪುಸ್ತಕದ ಶೀರ್ಷಿಕೆಯೇ ಸಾವಿನ ಉನ್ಮಾದವನ್ನು, ನಶೆಯನ್ನು ಏರಿಸುತ್ತಿತ್ತು. ಹಿರಿಯ ಗೆಳೆಯರೊಬ್ಬರು, ‘ಇದೆಲ್ಲಾ ಮಹಾತ್ಮರು ಓದಿ ಬರೆಯುವಂತಹ ಸಬ್ಜೆಕ್ಟು, ನಿನಗೆ ಇದರ ಸಹವಾಸ ಬೇಡ ಮಹರಾಯ್ತಿ, ಅಷ್ಟು ಆಸಕ್ತಿಯಿದ್ದರೆ ಜೈನ ಮಠದಲ್ಲಿ ನೀನು ಯಾಕೆ ಸನ್ಯಾಸ ದೀಕ್ಷೆ ತೆಗೆದುಕೊಳ್ಳ ಬಾರದು?’ ಎಂದು ತಮಾಷೆ ಮಾಡಿದ್ದರು.
ಸಾವು, ಆಗಾಗ ಎದೆಯಲ್ಲೊಂದು ಡವಡವ ಕೇಳಿಸುವ ಮಾಯಾಕನ್ನಿಕೆಯಂತೆ. ಎಲ್ಲರಿಗೂ ದಿಗಿಲು ಹುಟ್ಟಿಸುವಂತದ್ದು. ಸಾವನ್ನು ಕೆಣಕಿ, ಮುಂದೂಡಲು ಮನುಷ್ಯನಿಗೆ ಔಷಧೋಪಚಾರಗಳಂತಹ ಆವಿಷ್ಕಾರ, ಯೋಗ, ಪ್ರಾಣಾಯಾಮ ಧ್ಯಾನಗಳಂತಹ ಆಧ್ಯಾತ್ಮಿಕ ದಾರಿಗಳು ದಕ್ಕುತ್ತಲೇ ಬಂದಿದೆ. ಅಂತದ್ದರಲ್ಲಿ ಸಾವಿರ ಸಾವಿರ ವರ್ಷಗಳಷ್ಟು ಹಿಂದೆ ಇಚ್ಚಾಮರಣವನ್ನು ಕೈಗೊಂಡಿರುವುದು ನಮ್ಮ ಹಾಗೇ ಇರುತಿದ್ದ ಸಾಮಾನ್ಯ ಮನುಷ್ಯರೆಂದು ನಂಬಲು ಹಿಂಜರಿಕೆಯಾಗುತ್ತಿದೆ.
ಸಮಾಜದ ಪಂಗಡವೊಂದು, ಸಾವಿನ ಬೆನ್ನಟ್ಟಿ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅತ್ಯಂತ ಕಷ್ಟಕರ ಸಾವನ್ನು ಸುಖದಿಂದ ನೇವರಿಸಿಕೊಂಡು ಬದುಕನ್ನು ಕೊನೆಗೊಳಿಸುತ್ತದೆ. ಹುಟ್ಟಿರುವುದೇ ಪರಮ ಸುಖದ ಸಾವನ್ನು ಎದುರುಗೊಳ್ಳಲು ಎಂಬಂತೆ, ಯುದ್ಧದ ಸಿದ್ಧತೆಯಲ್ಲಿರುವ ಯೋಧನಂತೆ ಸಾವಿಗೆ ಸಜ್ಜಾಗುತ್ತದೆ. ಸುಮಾರು ೬ನೇ ಶತಮಾನದಲ್ಲಿ ಹಾಸನಜಿಲ್ಲೆಯ ಶ್ರವಣಬೆಳಗೊಳದಲ್ಲಿ ಮೊದಲುಗೊಂಡ ಇಚ್ಛಾಮರಣದ ಪ್ರಕ್ರಿಯೆ, ಜೈನ ಪರಂಪರೆಯು ಮೋಕ್ಷ ಸಾಧನೆಗೆ ಕಂಡುಕೊಂಡ ಹಾದಿಯಾಗಿದೆ.
ಹಿಂದೂ ಗರುಡಪುರಾಣದಲ್ಲಿ ಯಮದೂತರು ಯಮನ ಆಸ್ಥಾನಕ್ಕೆ ಎಳೆದುಕೊಂಡು ಹೋಗುವಾಗ ಸಿಗುವ ಘನಘೋರ ೧೬ ಸ್ಥಳಗಳು, ಮೈನಡುಗಿಸುವ ಶಿಕ್ಷೆಗಳು, ಇಸ್ಲಾಂನ ಜಹನ್ನಮ ಎಂಬ ನರಕದ ಏಳು ದ್ವಾರಗಳಂತಹ ಕಥೆಗಳನ್ನು ಕೇಳಿದರೆ, ಸ್ವರ್ಗ ನರಕಗಳ ಕಲ್ಪನೆ ಆ ಕಾಲಕ್ಕೆ ಒಂದು ಮಟ್ಟಿಗೆ ಮನುಷ್ಯನನ್ನು ಸ್ವಸ್ಥವಾಗಿ ಇಟ್ಟಿರಬಹುದು. ಸ್ವರ್ಗಲೋಕದ ಇಂದ್ರ, ಅಪ್ಸರೆಯರು ಆನಂದ ಭಾಷ್ಪ ಸುರಿಸುತ್ತಾ ದೇಹವನ್ನು ಎದುರುಗೊಳ್ಳುವ ಸುಖಕ್ಕೆ ಅವರು ಮೈಮರೆತಿರಬಹುದು ಅನ್ನಿಸುತ್ತದೆ.
ಬಹುತೇಕ ಎಲ್ಲಾ ಧರ್ಮಗಳಂತೆ ಜೈನ ಧರ್ಮವೂ ಸಾವಿನ ನಂತರದ ಬದುಕನ್ನು ಹೇಳುತ್ತದೆ. ದೇಹವನ್ನು ತುಚ್ಚೀಕರಿಸಿ ಆತ್ಮವನ್ನು ಕೊಂಡಾಡಿ, ಕರ್ಮ ನಾಶಕ್ಕಾಗಿ ಹಾತೊರೆಯುತ್ತದೆ. ಆತ್ಮದ ಮುಕ್ತಿಗಾಗಿ ದಾರಿ ಕಾಯುತ್ತದೆ. ಈ ಕಾಣದ ಮುಕ್ತಿಗಾಗಿ ಸಾಧಕರು(ಮರಣಾರ್ಥಿ) ಸಮಾಜದ, ಬಾಂಧವರ ಬಂಧವನ್ನು ತೊರೆದು ವಿರಾಗಿಯಾಗಿ ಮರಣ ದೀಕ್ಷೆ ಪಡೆದುಕೊಳ್ಳುತ್ತಾರೆ. ಧ್ಯಾನ, ಉಪವಾಸ, ಸನ್ಯಸನಗಳ ಮೂಲಕ ದೇಹವನ್ನು ಸಜ್ಜುಗೊಳಿಸುತ್ತಾರೆ. ಕೆಲವೊಮ್ಮೆ ಮರಣದ ಹತ್ತು ಹದಿನೈದು ಇಪ್ಪತ್ತು ವರ್ಷಗಳ ಮುಂಚೆಯೇ ಇದನ್ನು ಧ್ಯಾನ, ಉಪವಾಸ ಆಚರಿಸಿ, ಸಾವಿಗೆ ಹತ್ತಿರವಾಗುತ್ತಿದ್ದ ನರ ಮಾನವರಿಗೆ ನಡುವೆ ಎಲ್ಲೋ ಚಂಚಲತೆಯ ಲವಲೇಶವೂ ಬರಲಿಲ್ಲವೇ? ಎಂದು ನನಗೆ ಅಚ್ಚರಿಯಾಗುತ್ತದೆ.
ಮರಣ ದೀಕ್ಷೆ ಪಡೆದ ಮೇಲೆ ಸಾಧಕರು ನಗ್ನರಾಗಿ ಒಂಟಿಯಾಗಿ ಕಾಡಿನಲ್ಲಿ ಅಲೆಯಬೇಕಿತ್ತು. ಕಾಡಿನ ಕಠೋರ ಸೌಂದರ್ಯದಲ್ಲಿ ಯಾರ ಹಂಗೂ, ಭಯ, ಉದ್ವೇಗವಿಲ್ಲದೆ, ನಿರ್ಭಾವುಕರಾಗಿ ಶ್ರವಣಬೆಳಗೊಳದ ಚಿಕ್ಕಬೆಟ್ಟದಂತಹ ಸ್ಥಳಗಳಿಗೆ ಮರಣವನ್ನು ಆಶ್ರಯಿಸಿ ಅವರು ಬರುತ್ತಿದ್ದರು. ಹಗಲು ಕೊಳ್ಳಿಯಂತೆ ಉರಿವ, ಇರುಳು ಹಿಮದ ಹಾಗೆ ಕೊರೆಯುತ್ತಿದ್ದ ಕಾರ್ಮೋಡದಂತಹ ಚಿಕ್ಕಬೆಟ್ಟದ ಕಪ್ಪು ಬಂಡೆಯ ಮೇಲೆ ಅವರು ಧ್ಯಾನಿಸುವಾಗ, ಇರುಳ ನಕ್ಷತ್ರಗಳು, ಸೂರ್ಯೋದಯದ ಸುಂದರಿ ಆಕಾಶ, ಕಾಡ ನಿಗೂಢ ತೊರೆಯ ಹಾಡು, ದೂರದ ಮಲೆಯ ಬೆಳಕು ಯಾವುದೂ ಅವರಿಗೆ ಕಾಡಲಿಲ್ಲವೆ ಅನ್ನಿಸಿದ್ದುಂಟು. ಅಂತಹ ಮನೋಬಲವನ್ನು ಗಳಿಸುವುದಾದರೂ ಹೇಗೆ ದೇವರೆ? ಆಹಾ ಎಂತಹ ಸುಖ ಎಣಿಸಿದ್ದುಂಟು. ಅಲೆಮಾರಿಯ ತಿರುಗಾಟದಲ್ಲಿ ಕಾಣುವ ನೂರು ಲೋಕಗಳು, ಅಚ್ಚರಿಗಳು ಅವರನ್ನು ಸಾವಿನಿಂದ ವಿಮುಕ್ತನನ್ನಾಗಿ ಮಾಡಲಿಲ್ಲವೇಕೆ ಅಥವಾ ಎಲ್ಲಿಯೋ ಕಾಣುವ ಪಶುಪಕ್ಷಿಗಳ ನಶ್ವರ ಜೀವನ, ಪ್ರಕೃತಿಯ ವಿರೂಪತೆಗಳು ಅವನನ್ನು ಇನ್ನೂ ವಿರಾಗಿಯನ್ನಾಗಿ ಮಾಡಿರಬಹುದೆ?
ಆಳವಾಗಿ ನೋಡಿದ್ದಲ್ಲಿ ಅವರು ನಡೆಸುತ್ತಿದ್ದ ವೃತಗಳು ಅವರು ನಿಂತ ಬಂಡೆಗಿಂತಲೂ ಕಠಿಣವಾಗಿದ್ದವು. ಧ್ಯಾನಸ್ಥನಾಗಿರುವಾಗ ಮೈತುಂಬಾ ಆವರಿಸಿದ ಧೂಳನ್ನು ಕೆರೆದುಕೊಳ್ಳದೆ, ಅದು ದೇಹದ ಕವಚದ ಹಾಗೆ ಕಾಣುತ್ತಿತ್ತು; ಮೈಗೆ ಮೆತ್ತಿದ ಮಲವನ್ನು ಶುಚಿಗೊಳಿಸದೆ ’ಮಲಧಾರಿ’ ಎಂಬ ಬಿರುದನ್ನೂ ಪಡೆದುಕೊಳ್ಳುತ್ತಿದ್ದರು; ಹದ್ದು ನರಿ, ಸಿಂಹ ಹುಲಿಗಳು ಕಚ್ಚಿ ಹಿಂಸಿಸುತ್ತಿದ್ದರೂ, ಬೆಂಕಿ, ಮಳೆ ಮಾರುತದಂತಹ ಪ್ರಾಕೃತಿಕ ಹಾನಿಗಳು ಸಂಭವಿಸಿದರೂ ಹೆದರದೆ ನಿಂತ ಭಂಗಿಯನ್ನು ಬದಲಿಸುತ್ತಿರಲಿಲ್ಲ.
ಹೀಗೆ ನಸುನಗುತ್ತಾ, ಧ್ಯಾನಿಸುತ್ತಾ, ಸಾವೇ ತಮ್ಮ ಸೌಭಾಗ್ಯವೆನ್ನುವಂತೆ ಯಾಕಾದರೂ ಇರಬೇಕಾಗಿತ್ತು? ಇಂತಹ ಕಡು ವೈರಾಗ್ಯ ತಳೆಯಲು ಅವರ ಸುತ್ತ ಇರುತ್ತಿದ್ದ ಮುನಿಗಳು, ಶಿಷ್ಯರು, ಭಕ್ತ ಗಡಣವೂ ಕಾರಣವಾಗಿತ್ತು. ಸಾಧಕರ ಸೇವೆಗೆಂದೇ ಗರಿಷ್ಟ ನಲವತ್ತೆಂಟು ಮುನಿಗಳು ಸುತ್ತ ರಕ್ಷಾ ಕವಚದಂತೆ ಇರುತ್ತಿದ್ದರು. ಮನಸ್ಸನ್ನು ಹೊರಗಿನ ಶಕ್ತಿಗಳು ಕೆಡಿಸಬಹುದೆಂದು, ಸಾಧಕನ ಮರಣದ ವಿಶ್ವಾಸವನ್ನು ಹೆಚ್ಚಿಸಲು ನಾಲ್ವರು, ಸಾಧಕರನ್ನು ನೋಡಲೆಂದೇ ಬರುತ್ತಿದ್ದ ಜನರನ್ನು ನಿಯಂತ್ರಿಸಲು ನಾಲ್ವರು, ಸಾಧಕನ ಏಕಾಗ್ರತೆಯನ್ನು ಹೆಚ್ಚಿಸಲು ನಾಲ್ವರು, ಕಥೆಯನ್ನು ಹೇಳಲು, ಊಟ ತಿಂಡಿ, ವಿಸರ್ಜನೆಗೆ ಸಹಾಯ ನೀಡಲು ನಾಲ್ವರನ್ನು ನೇಮಿಸುತ್ತಿದ್ದರು.
ಸಾಧಕನ ಮನಸ್ಸಿನ ಅಲ್ಲೋಲಕಲ್ಲೋಲವನ್ನು ಅರಿತು, ಸಂಪದ್ಭರಿತ ಸಮುದ್ರದಲ್ಲಿ ಹಡಗು ಮುಳುಗದಂತೆ ಕಾಪಾಡುವ ಕಾಪ್ತಾನನಂತೆ ಸಾಧಕನ ಗುರುವಿನ ಪಾತ್ರ ಮುಖ್ಯವಾಗಿತ್ತು. ಹಾಳು ಹರಟೆಯಿಂದ, ಹೆಂಗಸರಿಂದ, ಸಾರ್ವಜನಿಕ ಸಂಪರ್ಕದಿಂದ ಅವರನ್ನು ದೂರವಿರಿಸಿ, ಮನಸ್ಸನ್ನು ಗಟ್ಟಿಗೊಳಿಸಿ, ಕಥೆ, ಪ್ರವಚನಗಳ ಮೂಲಕ ಅವರನ್ನು ಸದೃಡ ಪಡಿಸುತ್ತಿದ್ದರು. ಅಂಗಮರ್ಧನ, ಔಷಧಿಯನ್ನು ನೀಡಿ ತಾಯಿಯಂತೆ ಉಪಚರಿಸಿ ಮನಸ್ಸನ್ನು ಗೆಲ್ಲುತ್ತಿದ್ದರು.
ಸ್ವ-ಇಚ್ಚೆಯಿಂದ ಮರಣವನ್ನು ಆಯ್ದುಕೊಂಡರೂ ಅವರು ತೊರೆದ ಮನೆ, ಸಂಸಾರ, ಸ್ನೇಹಿತರ ನೆನಪುಗಳು, ಭಾವುಕತೆಯ ಅಲೆಗಳು ಅವರ ಸ್ಮೃತಿ ಪಟಲದಲ್ಲಿ ಅಳಿಸಿ ಹೋಗಿರಲಾರದು. ಲೋಕವು ಅಫೀಮಿನಂತೆ ನೀಡುವ ಸುಖವನ್ನು ಅಷ್ಟು ಸುಲಭದಲ್ಲಿ ತೆಗೆದು ಹಾಕುವುದು ಸಾಧ್ಯವಾಗಿರಲಾರದು. ಅವರ ಸುತ್ತಲಿನ ಗಡಣದ ಭಯದಿಂದ ಅಥವಾ ಅರ್ಧಕ್ಕೆ ಮರಳಿದರೆ ಮೂದಲಿಸಿಕೊಂಡು ಬದುಕುವುದಕ್ಕಿಂತ ಮರಣವೇ ವಾಸಿ ಎಂದು ಅನ್ನಿಸಿರಬಹುದು. ಆದರೆ ಹಾಗೆ ಸಾವನ್ನು ಧಿಕ್ಕರಿಸಿ ಮರಳಿದ ಉದಾಹರಣೆಗಳು ಸ್ಪಷ್ಟವಾಗಿ ಯಾವುದೂ ಈ ಗ್ರಂಥದಲ್ಲಿ ಕಾಣಿಸುವುದಿಲ್ಲ. ಅವರ ಬಂಧು-ಮಿತ್ರರೂ ಒಂದು ಬಗೆಯಲ್ಲಿ ಭರಿಸುವ ವೈರಾಗ್ಯ, ಅದನ್ನು ಪುಣ್ಯಕಾರ್ಯವೆಂದು ನಂಬಿರುವ ಬಗೆ ಅಂದಿನ ಕಾಲದ ಸಮಾಜದ ಗತಿಯೇ ಹಾಗಿದ್ದಿರಬಹುದು.
ಅನೇಕ ಸಂದರ್ಭಗಳಲ್ಲಿ ಜೀವನದ ಕೊನೆಯ ಹಂತದಲ್ಲಿರುವಾಗ, ಆಯುಷ್ಯ ಮುಗಿದಾಗ, ಯುದ್ದದಲ್ಲಿ ಘಾಸಿಗೊಂಡಾಗ, ಅಪಘಾತ ಸಂಭವಿಸಿದಾಗ, ಲೌಕಿಕ ಬದುಕಿನಲ್ಲಿ ವೈರಾಗ್ಯ ತಳೆದಾಗ, ಕ್ಷಾಮ, ಬರಗಾಲ ಪೀಡಿತವಾದಾಗ, ವಾಸಿಯಾಗದ ಖಾಯಿಲೆ ಇರುವಾಗ ಇಚ್ಛಾ ಮರಣವನ್ನು ಸ್ವೀಕರಿಸುತ್ತಿದ್ದರು. ಮರಣದ ಅವಧಿ ಮೂರು ದಿನದಿಂದ ಮೂವತ್ತು ದಿವಸದ ವರೆಗೆ ಇರುತ್ತಿತ್ತು. ಸಾಧಕನು ಮರಣಿಸಿದ ಮೇಲೆ ಅವನ ಶಿಷ್ಯರು ಅಥವಾ ಸಂಬಂಧಿಕರು ಶಾಸನಗಳನ್ನು, ನಿಸಿಧಿಗಳನ್ನು, ವೀರಗಲ್ಲುಗಳನ್ನು ಬರೆಸುತ್ತಿದ್ದರು. ರಾಜರು, ಮುನಿಗಳು, ಸಾಮಂತರು, ಗೃಹಸ್ಥರು, ಸಮಾಜದ ಎಲ್ಲಾ ವರ್ಗದವರೂ ಈ ದೀಕ್ಷೆಯನ್ನು ಪಡೆಯುತ್ತಿದ್ದರು. ಮರಣಿಸಿದ ನಂತರ ದೇಹವನ್ನು ಕೊಂಡಾಡಿ, ಗೌರವಿಸಿ ಅಂತ್ಯಕ್ರಿಯೆ ನಡೆಸುತ್ತಿದ್ದರು.
ಸಾವಿಗೆ ಆತುರ ಪಡಬಾರದು, ಬದುಕುವುದಕ್ಕೂ ಆಸಕ್ತಿ ಇರಬಾರದು ಅದೂ ಒಂದು ತರದ ವ್ಯಾಮೋಹವೇ ಎಂದು ಅವರು ಹೇಳುತ್ತಾರೆ. ಹೀಗೆ ಹೇಳುವ ನಿರ್ಭಾವುಕ ಸ್ಥಿತಿಯೂ ಸುಖದ ಇನ್ನೊಂದು ಮುಖದ ಹಾಗೆಯೇ ತೋರುತ್ತದೆ. ಒಂದು ಚಿರಂತನ ಸುಖಕ್ಕಾಗಿ, ಸಾವನ್ನು ಹಂಬಲಿಸಿ, ದೇಹ ನಶಿಸಿದರೂ ಎಲ್ಲವನ್ನೂ ಮೀರಿ ಎಲ್ಲೋ ಒಂದು ಕಡೇ ತಾನು ಈ ವಿಶ್ವದಲ್ಲಿ ಪರಮಸುಖಿಯಾಗುವ ಮನುಷ್ಯನ ತರ್ಕಗಳು ನಗು ತರಿಸಿ ಚಂದ ಕಾಣುತ್ತವೆ.
ಒಂದು ಕಡೆ ಲಂಕೇಶರು, ಸಾವಿನ ಕುರಿತು ಮಾತಾಡುತ್ತಾ ‘ನಮ್ಮನ್ನು ಜೀವಿಸುವಂತೆ ಆದಷ್ಟೂ ತೀವ್ರವಾಗಿ ಜೀವಿಸುವಂತೆ ಒತ್ತಾಯಪಡಿಸುವ ಅನಿವಾರ್ಯತೆಗಳ’ ಬಗ್ಗೆ ಹೇಳುತ್ತಾರೆ. ಸಾವನ್ನು ಮುಂದೂಡುತ್ತಾ ಸಾವಿರದ ಕಥೆಗಳನ್ನು ಹೇಳಿ ಬದುಕಿದ ಅರೇಬಿಯನ್ ರಾತ್ರಿಯ ಶೆಹಜಾದೆಯು ಮೊದಲೇ ಸತ್ತಿದ್ದರೆ ಅವಳು ಪರಿಪಕ್ವತೆಯಿಂದ ವಂಚಿತಳಾಗಿ ಅವಳ ಒಳಗಿನ ಕಲಾವಿದೆ, ಗೂಢತೆ ಎಲ್ಲವೂ ನಾಶವಾಗುತ್ತಿತ್ತು. ಅದೇ ರೀತಿಯಲ್ಲಿ ಹೆನ್ರಿ ಛರಾರೆಯ ಒಳಗಿನ ಚಿಟ್ಟೆಯಂತೆ ಪ್ಯಾಪಿಲಾನನು ಫ್ರೆಂಚ್ ಗಯಾನಾದಿಂದ ಪಲಾಯನಗೊಂಡು ಹತ್ತು ಹದಿನೈದು ವರ್ಷಗಳ ಕಾಲ ಮಹಾಸಾಗರ, ಮಹಾಪರ್ವತ, ಮರುಭೂಮಿಯನ್ನು ದಾಟಿ ಸಾವನ್ನು ಹೆದರಿಸಿ ಸ್ವತಂತ್ರನಾಗಿ ಬಾಳುತ್ತಾನೆ.
ಅವನು ಆಗಲೇ ಸತ್ತಿದ್ದರೆ ಅವನ ಆಳವಾದ ಬದುಕುವ ವಾಂಛೆ, ಅವನ ಅನುಭವಗಳು ನಿರ್ಮಿತವಾಗುತ್ತಿರಲಿಲ್ಲ. ಆದರೆ ಒಂದು ಸಮುದಾಯದ ನೂರು ಕಟ್ಟಳೆಗಳು ಇಡೀ ಜೀವಿತಾವಧಿಯನ್ನು ಸಾವಿಗೋಸ್ಕರವೇ ಪರಿಪಕ್ವಗೊಳಿಸುವುದನ್ನು ನೋಡಿದರೆ, ಮನುಷ್ಯನ ಮನಸ್ಸಿನ ಮೋಡಿಯ ಬಗ್ಗೆ, ಅದು ಕಾಲಕ್ಕೆ, ಸಂದರ್ಭಕ್ಕೆ, ಅನುಗುಣವಾಗಿ ತಳೆಯುವ ಸುಖ ಸಂತೋಷ ಸಾರ್ಥಕ್ಯದ ಸಿದ್ಧಾಂತದ ಬಗ್ಗೆ ಅಚ್ಚರಿಯಾಗುತ್ತದೆ.
ಸಾವೊಂದು ಇಲ್ಲವಾದರೆ ಬದುಕೇ ಇರುತ್ತಿರಲಿಲ್ಲ. ಎಲ್ಲವೂ ಬೇಸರ ಬಂದು ದೀರ್ಘ ನಿದ್ರೆಯಲ್ಲೇ ಜಗತ್ತು ಸುಖಿಸುತ್ತಿದ್ದಿರಬಹುದು. ಧರ್ಮದ ಭಯವೂ ಇರುತ್ತಿರಲಿಲ್ಲ, ಶೆಹಜಾದೆ, ಪ್ಯಾಪಿಲಾನನಂತವರು ಅಷ್ಟು ತಲೆಕೆಡಿಸಿಕೊಳ್ಳ ಬೇಕಾಗಿರಲಿಲ್ಲ. ಸೃಷ್ಟಿಯ ಭಯದಲ್ಲಿ ಮೈಥುನಗಳೇ ಭಯ ಹುಟ್ಟಿಸುಬಹುದಿತ್ತು? ಅಂತ್ಯವೇ ಇಲ್ಲದಿದ್ದರೆ ಇನ್ನೂ ಏನೇನಾಗುತ್ತಿತ್ತೋ?
ಹೀಗೆಲ್ಲಾ ಅನ್ನಿಸುವ ಹೊತ್ತಿಗೆ ಮರಣವನ್ನು ಹಬ್ಬದಂತೆ, ಸಂಭ್ರಮಿಸಿ ಲೋಕಕ್ಕೆ ಹೋಗಿಬರುವೆ ಎಂದು ಕೈಮುಗಿದು ತೆರಳಿದವರಿಗೆ ಏನೆನ್ನಬೇಕು ತಿಳುಯುತ್ತಿಲ್ಲ ನಾನು ತೀರಾ ಸಣ್ಣವಳಿರುವಾಗ, ಸಾವು ಎಂದರೆ ದೇಹಕ್ಕಾಗುವ ಅಂತಿಮ ನೋವೆಂದು ತಿಳಿದಿದ್ದೆ. ಸುಡುವ ದೇಹವನ್ನು ನೋಡಿ, ಅಯ್ಯೋ ಅವರಿಗೆ ನೋವಾಗುತ್ತಿರಬಹುದು, ನನಗೂ ಒಂದು ದಿನ ಹೀಗೆಯೇ ಆಗುವುದೆಂದು ಭಯವಾಗುತ್ತಿತ್ತು. ಎಲ್ಲವೂ ಸುಟ್ಟು ಕರಕಲಾದ ಮೇಲೆ ಅಬ್ಬಾ ಇನ್ನು ಅವರ ನೋವು ಮುಗಿಯಿತೆಂದು ಸಮಾಧಾನವಾಗುತ್ತಿತ್ತು. ಇವೆರಡಕ್ಕೂ ತೀರಾ ವ್ಯತ್ಯಾಸ ಕಾಣುತ್ತಿಲ್ಲ. ಒಂದು ಸಲ ದೊಡ್ಡ ನೋವೊಂದು ನನ್ನನ್ನು ಬಿಟ್ಟು ಹೋದರೆ ನೋವೇ ಇರುವುದಿಲ್ಲವಲ್ಲಾ ಎಂದು ನನಗೂ ಅನಿಸುತ್ತಿತ್ತು.
ಹಾಗೆಂದು ಜೈನರು ಆತ್ಮಹತ್ಯೆಯನ್ನು ಒಪ್ಪುವುದಿಲ್ಲ, ದೇಹ ಸದೃಡವಾಗಿದ್ದರೆ ಪೋಷಿಸುವುದು ಒಳಿತು ಅಂತಲೂ ಹೇಳುತ್ತಾರೆ. ಜೈನರ ಭವಾವಳಿಗಳಲ್ಲಿ ಬರುವ ಆನೆ, ಸಿಂಹ ಗಳಂತಹ ಪ್ರಾಣಿಗಳೂ ಇಚ್ಚಾಮರಣವನ್ನು ಪಡೆದು ಮೋಕ್ಷ ಹೊಂದುತ್ತವೆ. ಇಲ್ಲಿನ ಯಾವ ಸಾವಿನ ವಿವರಣೆಯೂ ನನಗೆ ಒಂದು ದುಃಖಾಂತ ದರ್ಶನದ ಹಾಗೆ ಕಂಡಿಲ್ಲ. ಓದಿ ಮುಗಿವ ಹೊತ್ತಿಗೆ ವಿಷಾದದ ತಿರುಳೊಂದು ಒಳಗೆ ಇಳಿಯಲಿಲ್ಲ. ಮರಣವು ಆ ರೀತಿಯಲ್ಲಿ ಒಂದು ಸಮುದಾಯವನ್ನು ಸಮ್ಮೋಹಿತಗೊಳಿಸಿರುವುದಕ್ಕೆ ಅಚ್ಚರಿಯಾಗುತ್ತದೆ.
ಬರಗಾಲ, ಕ್ಷಾಮದ ಮುನ್ಸೂಚನೆಯ ಸಂದರ್ಭದಲ್ಲಿ ಕೈಗೊಂಡ ಸಮೂಹ ಮರಣ ದೀಕ್ಷೆಯ ಬಗ್ಗೆಯೂ ಪ್ರೊ. ಶೆಟ್ಟರ್ ಒಂದು ಕಡೆ ಉಲ್ಲೇಖಿಸುತ್ತಾರೆ. ಇವು ಯಾವುದೂ ಒತ್ತಾಯದ ಮರಣಗಳಲ್ಲ, ಬದುಕಿಗಿಂತಲೂ ಹೆಚ್ಚಾಗಿ ಸಾವನ್ನು ಪ್ರೀತಿಸಿದವರ ಅಂತಿಮ ಸಡಗರವಾಗಿತ್ತು. ಒಂದು ರೀತಿಯಲ್ಲಿ ಬದುಕಿನ ಸೌಂದರ್ಯವನ್ನೇ ಅವರು ಕಳೆದುಕೊಂಡರು ಎಂದುಕೊಂಡರೆ ಯಾವುದೋ ನನಗೆ ನಿಲುಕದ ಶಕ್ತಿಯೊಂದು ಅವರಿಗೆ ತಿಳಿದ್ದಿರಬೇಕು ಅನ್ನಿಸುತ್ತದೆ. ಸಾವು ಒಂದು ಕಾವ್ಯದ ಹಾಗೆ ಹರಿದು, ವೈರಾಗ್ಯ ಒಂದು ಉತ್ಸಾಹದಂತೆ ಜಿನುಗಿ, ಸಾವಿಗಾಗಿ ಟೊಂಕ ಕಟ್ಟಿಕೊಂಡು ಹಂಬಲಿಸುವ ಮನಸ್ಸುಗಳು ಈ ಪರಿಯಲ್ಲಿ ಎಂದೂ ನನ್ನನ್ನು ಕಾಡಿರಲಿಲ್ಲ.


“ವೈರಾಗ್ಯ ಒಂದು ಉತ್ಸಾಹದಂತೆ ಜಿನುಗಿ, ಸಾವಿಗಾಗಿ ಟೊಂಕ ಕಟ್ಟಿಕೊಂಡು ಹಂಬಲಿಸುವ ಮನಸ್ಸುಗಳು ಈ ಪರಿಯಲ್ಲಿ ಎಂದೂ ನನ್ನನ್ನು ಕಾಡಿರಲಿಲ್ಲ.” ಇದನ್ನೋದಿದ ಮೇಲೆ ಪುಸ್ತಕ ಓದುವ ಬಯಕೆಯಾಯ್ತು