ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮದುವೆ ಮನೆಯ ಗದ್ದಲದಲ್ಲಿ ಹಿಂದೂಸ್ಥಾನಿ ಸಂಗೀತ ಆಸ್ವಾದಿಸಿದ (!) ಹಾಗಿತ್ತು.

ರಾಜಾರಾಂ ತಲ್ಲೂರ್

“ನೀರಿನ ನಿಲುದಾಣ”ದ ಬಗ್ಗೆ, ಅದರ ಲೇಖಕ-ಮೊದಲ ಪ್ರದರ್ಶನಗಳ ನಿರ್ದೇಶಕ ಓತಾ ಶೊಗೊ ಬಗ್ಗೆ ಕುತೂಹಲದಿಂದ ಜಾಲಾಡಿದಾಗ ಸಿಕ್ಕ ಕೆಲವು ಕುತೂಹಲಕರ ಮಾಹಿತಿಗಳೊಂದಿಗೆ ನಾನು ಉಡುಪಿಯಲ್ಲಿ ಕಂಡ “ನೀರಿನ ನಿಲುದಾಣ” ಪ್ರದರ್ಶನವನ್ನು ಮತ್ತೊಮ್ಮೆ ಅರಗಿಸಿಕೊಳ್ಳುವ ಪ್ರಯತ್ನ ಇದು.

ಹೆಚ್ಚಿನ ಮಾಹಿತಿಗಳ ಬಗ್ಗೆ ಆಸಕ್ತಿ ಇರುವವರು ಕೆಳಗಿನ ಲಿಂಕ್ ಜಾಲಾಡಬಹುದು. ಅಲ್ಲಿ ಬಹಳಷ್ಟು ಮಾಹಿತಿಗಳ ಜೊತೆಗೆ ಒಂದು ಆಕರ್ಷಕವಾದ ನಾಟಕದ ಸ್ಲೈಡ್-ವಿಡಿಯೊ ಕೂಡ ಇದೆ. http://www.glopad.org/jparc/?q=en/node/23028

ನಾನು ನನ್ನ ಆ ಕ್ಷಣಕ್ಕೆ ಹೊಳೆದ ಕಮೆಂಟ್ ಗಳನ್ನು ಈ ಹಿಂದೆ ಕೊಟ್ಟಿದ್ದೆ. ಅವುಗಳನ್ನು ಈ ಓದಿನ ಹಿನ್ನೆಲೆಯಲ್ಲಿ ಪರಿಷ್ಕರಿಸಿಕೊಳ್ಳುವ ಪ್ರಯತ್ನ ಇದು.

ಒಂದು ಪರ್ಫಾರ್ಮೆನ್ಸನ್ನು ಈರುಳ್ಳಿಯಂತೆ ಸಿಪ್ಪೆ ಸುಲಿದು ನೋಡುವ ಹಂತಗಳು (1) brain event, (2) microbit, (3) bit,

(4) sign, (5) scene, (6) drama, and (7) macrodrama ಎಂಬುದು ಹಿರಿಯ ಪ್ರದರ್ಶನ ಕಲಾ ತಜ್ಞ ರಿಚರ್ಡ್ ಷೆಕನ್ (Richard Schechner) ಅಭಿಮತ. ಸಾಮಾನ್ಯವಾಗಿ ನಾಟಕಗಳಲ್ಲಿ ನಟರು ಈ ಯಾವುದೇ ಹಂತದಲ್ಲಿ ನಿರ್ವಹಿಸಬಲ್ಲರಾದರೂ ಪ್ರೇಕ್ಷಕ ಗೃಹಿಸುವುದು ೪,೫,೬, ನೇ ಹಂತಗಳಲ್ಲಂತೆ. ಓತಾನ ನೀರಿನ ನಿಲುದಾಣ ೩ನೇ ಹಂತದಲ್ಲಿ ಪ್ರೇಕ್ಷಕನನ್ನು ತಲುಪುವ ಉದ್ದೇಶ ಇರುವಂತಹದು. ಅದರ ವ್ಯಾಖ್ಯಾನ ಹೀಗಿದೆ -refers to the smallest unit of consciously controllable and repeatable behaviour.

ಈ ರೀತಿಯ ಸೂಕ್ಷ್ಮ ಪ್ರದರ್ಶನ ಮತ್ತು ಗೃಹಿಕೆಯ ಆವಶ್ಯಕತೆ ಇರುವ ಒಂದು ನಾಟಕ ಪ್ರೊಸೀನಿಯಂ ಮಾದರಿ ರಂಗದ ಮೇಲೆ ಪ್ರದರ್ಶನ ಯೋಗ್ಯವೇ? ಎಂಬುದು ಬಹಳ ಮುಖ್ಯವಾಗುತ್ತದೆ. ರಂಗದ ಮೇಲೆ ಒಬ್ಬ ನಟ ತನ್ನ ಆಂಗಿಕ ಚಲನೆಗಳಿಗೆ ಮಾತ್ರವಲ್ಲದೇ ಭಾವನಾತ್ಮಕ ಅಭಿವ್ಯಕ್ತಿಗಳಿಗೂ ತನ್ನ ಪ್ರೇಕ್ಷಕನನ್ನು ಆಕರ್ಷಿಸಬೇಕಾದರೆ ನಟ-ಪ್ರೇಕ್ಷಕರ ನಡುವಿನ ಅಂತರ ಕೂಡ ಬಹಳ ಮುಖ್ಯವಾಗುತ್ತದೆ. ನಟನಿಂದ ೨೫-೩೦ ಅಡಿ ಅಥವಾ ಅದಕ್ಕಿಂತಲೂ ದೂರದಲ್ಲಿ ಕುಳಿತ ಪ್ರೇಕ್ಷಕ ನಟನ ಭಾವನಾತ್ಮಕ ಅಭಿವ್ಯಕ್ತಿಗಳನ್ನೂ ಗೃಹಿಸಿ ನಾಟಕವನ್ನು ನೋಡಬೇಕೆಂದು ಬಯಸುವುದು ಸ್ವಲ ಅಸಹಜ.

ಮೇಲೆ ಹೇಳಿದ ವೆಬ್ ಲಿಂಕಿನಲ್ಲಿ ನಾಟಕದ ಸ್ಲೈಡ್ ವಿಡಿಯೊ ಗಮನಿಸಿದರೆ ನಾನು ಹೇಳುವುದು ಸ್ಪಷ್ಟವಾಗುತ್ತದೆ. ಅಲ್ಲಿ ನಿರ್ದೇಶಕನ ನಿರೀಕ್ಷಿತ ಉದ್ದೇಶಗಳು (ವಿಡಿಯೊದಲ್ಲಿ ವಿವರಿಸಲಾಗಿದೆ) ಎಷ್ಟೊಂದು ಆಳದಲ್ಲಿದ್ದಾವೆಂದರೆ ಅದು ಸ್ವಲ್ಪ ಬೇರೆಯದೇ ಆದ ರಂಗ-ಪ್ರೇಕ್ಷಕ ಸಂಬಂಧವನ್ನು ಬಯಸುತ್ತದೆ. ಉಡುಪಿಯ ಪ್ರದರ್ಶನ ಈ ನಿಟ್ಟಿನಲ್ಲಿ ಸೋತಿದೆ. ರಂಗ-ಪ್ರೇಕ್ಷಕ ಸಂಬಂಧದ ಮಾತಾಡುವಾಗ ನನಗೆ ಸುಮಾರು ೧೦-೧೫ ವರ್ಷಗಳ ಹಿಂದೆ ಮೈಸೂರಿನಲ್ಲಿ ರಂಗಾಯಣದ ಆರಂಭದ ದಿನಗಳಲ್ಲಿ ನಾನು ನೋಡಿದ ’ಹಿಪೊಲಿಟಸ್” ನಾಟಕ ನೆನಪಾಗುತ್ತಿದೆ. ವೃತ್ತಾಕಾರದ ರಂಗದಲ್ಲಿ ಎಲ್ಲೆಲ್ಲಿ ಬೇಕೊ ಅಲ್ಲಿ ಮ್ಯಾಗ್ನಿಫೈ ಮಾಡಿ ರಂಗಕ್ರಿಯೆಗಳನ್ನು ತೋರಿಸುವಂತಹ ತಂತ್ರ ಆ ನಾಟಕದಲ್ಲಿ ಬಹಳ ಪರಿಣಾಮಕಾರಿ ಆಗಿತ್ತು.

ಸಂಗೀತ, ಬೆಳಕು ಮತ್ತು “ಸ್ಪೇಸ್” ಕೂಡ “ನೀರಿನ ನಿಲುದಾಣ” ನಾಟಕದಲ್ಲಿ ಬಹಳ ಮುಖ್ಯ ಪಾತ್ರ ವಹಿಸಬೇಕಾಗುತ್ತದೆ.

ಹಲವೆಡೆ ನೀರಿನ ಹರಿವು ಮತ್ತು ಅದಕ್ಕೆ ಅಡ್ಡಿ ಆದಾಗ ಬರುವ ಮೌನ ಅಥವಾ ಸದ್ದಿನಲ್ಲಾಗುವ ಬದಲಾವಣೆಗಳನ್ನು ಪ್ರೊಸೀನಿಯಂ ಮಾದರಿ ರಂಗದ ಮೇಲೆ ಕಟ್ಟಿಕೊಡುವುದು ದುಸ್ಸಾಹಸ. ಈ ಸೂಕ್ಷ್ಮಗಳು ಪ್ರೇಕ್ಷಕನನ್ನು (ಕನಿಷ್ಠ ನನ್ನನ್ನು) ಉಡುಪಿಯಲ್ಲಿ ತಲುಪಲೇ ಇಲ್ಲ. ಸಂಗೀತದ ಮಟ್ಟ ಕೂಡ ಎಷ್ಟು ಸೂಕ್ಷ್ಮವಾಗಿರಬೇಕಾಗುತ್ತದೆ ಎಂದರೆ ಉಡುಪಿಯಲ್ಲಿ ಕಂಡ ಪ್ರದರ್ಶನದಲ್ಲಿ ಆಕ್ರಂದನದ ಒಂದೆರಡು ಕ್ಷಣಗಳನ್ನು ಬಿಟ್ಟರೆ(!) ಉಳಿದೆಡೆ ಮದುವೆ ಮನೆಯ ಗದ್ದಲದಲ್ಲಿ ಹಿಂದೂಸ್ಥಾನಿ ಸಂಗೀತ ಆಸ್ವಾದಿಸಿದ (!) ಹಾಗಿತ್ತು.

ಉಡುಪಿಯ ಪ್ರದರ್ಶನದಲ್ಲಿ ಬೆಳಕಿನ ಏರ್ಪಾಡು ಮತ್ತು “ಸ್ಪೇಸ್” ಕೂಡ ಸೂಕ್ಷ್ಮಗಳನ್ನು ಉಳಿಸಿಕೊಂಡಿರಲಿಲ್ಲ. ಹೆಚ್ಚಿನ ದೃಶ್ಯಗಳು ಬಿಳಿಯ ಕ್ಯಾನ್ವಾಸಿನ ಮೇಲೆ ಸಿಲುವೆಟ್ (silhouette) ಆಗಿ ಕಾಣಸಿಕ್ಕಿದ್ದರಿಂದ ಆಂಗಿಕ ಕ್ರಿಯೆಗಳ ಹಲವು ಮಗ್ಗುಲುಗಳನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಎಲ್ಲೆಂದರಲ್ಲಿ ನೇತಾಡುತ್ತಿದ್ದ ಸ್ಪಾಟ್ ದೀಪಗಳೂ ನಮ್ಮ ವಿಷುವಲ್ ಕ್ಯಾನ್ವಾಸಿನ ಒಳಗೇ ಸೇರಿಕೊಂಡು ಎಲ್ಲೆಲ್ಲೋ ಸಂತುಲನ ತಪ್ಪಿಸಿಬಿಡುತ್ತಿದ್ದವು. ನಾಟಕದ ಮೂಲ ಪಠ್ಯದಲ್ಲಿ ಕೊಳಚೆ ರಾಶಿಯ ಮೇಲೆ ಕುಳಿತು ಚಟುವಟಿಕೆಗಳನ್ನು ವೀಕ್ಷಿಸುವ ವ್ಯಕ್ತಿ ಕೂಡ ಈ ರಂಗಕ್ರಿಯೆಗಳ ಬಹುಮುಖ್ಯ ಭಾಗ. ಆದರೆ, ನನ್ನ ಈ ಓದಿನ ತನಕವೂ ಈ “ಕೊಳಚೆ ರಾಶಿ” (ಕನಿಷ್ಠ ನನಗೆ) ಎಸ್ಟಾಬ್ಲಿಷ್ ಆಗಿರಲೇ ಇಲ್ಲ. ಇದಕ್ಕೂ ಅದರ ಸಿಲುವೆಟ್ ಮಾತ್ರ ಕಾಣುತ್ತಿದ್ದುದು ಕಾರಣ ಇರಬೇಕೆನ್ನಿಸುತ್ತದೆ. ಇದೂ ಬೆಳಕಿನ ವೈಪಲ್ಯವೇ.

ನಾಗರಿಕತೆಯ ಕೊಳೆತ (ಈ ನಾಟಕ ಒಟ್ಟಿನಲ್ಲಿ ಅದನ್ನು ಹೇಳುತ್ತದೆಯಂತೆ) ಎಲ್ಲೂ ಯಾವತ್ತಿಗೂ ಸಲ್ಲುವಂತಹ ಸಂಗತಿ. ಆದರೆ, ಅದನ್ನು ಪ್ರದರ್ಶನ ಕಲೆಯೊಂದರ ಮೂಲಕ ಅಭಿವ್ಯಕ್ತಿಗೊಳಿಸುವಾಗ, ನಮ್ಮ ಸುತ್ತಲಿನ ಬದುಕನ್ನು ಅರ್ಥೈಸಿಕೊಂಡ ಹಿನ್ನೆಲೆಯಲ್ಲೇ ನಾವದನ್ನು ಗೃಹಿಸುವುದು ಸಹಜವೂ ಆಗಿರುತ್ತದೆ. ಅದೇ ವೇಳೆ ನಿರ್ದೇಶಕನಿಗೂ ಒಂದು ವಿಚಾರವನ್ನು ಅಭಿವ್ಯಕ್ತಿಗೊಳಿಸುವಾಗ ತನ್ನ ಸುತ್ತಲಿನ ಬದುಕನ್ನು ತಾನು ಅರ್ಥೈಸಿಕೊಂಡ ಹಿನ್ನೆಲೆಯಲ್ಲೇ ಅದನ್ನು ಅಭಿವ್ಯಕ್ತಿಗೊಳಿಸುವುದು ಅಗತ್ಯವಿರುತ್ತದೆ. ೧೯೮೧-೮೪ರ ಅವಧಿಯಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಈ ನಾಟಕದ ಯಶಸ್ಸು ಇರುವುದು ಅದರ “ಅತಿ ವಿಲಂಬಿತ” ಲಯ ಆ ದಿನಗಳಿಗೆ, ಆ ದೇಶಕ್ಕೆ ಹೌದೆನ್ನಿಸುವ ಹತ್ತಿರದ ಸಂಬಂಧ ಹೊಂದಿರುವುದರಲ್ಲಿ ಇರಬಹುದು- ನನಗೆ ಗೊತ್ತಿಲ್ಲ. ಈಗ ೨೦೧೧ರಲ್ಲಿ ಈ ಸಂಗತಿಯನ್ನು ಅದೇ ’ಅತಿ ವಿಲಂಬಿತ’ ಲಯದಲ್ಲಿ ತೋರಿಸಬೇಕಾದ್ದು-ನೋಡಬೇಕಾದ್ದು “ಅನಿವಾರ್ಯ” ಎನ್ನುವಂತಹ ಸ್ಥಿತಿಯನ್ನ ನಿರ್ಮಿಸುವಲ್ಲಿ ನಾಟಕ ಎಷ್ಟು ಯಶಸ್ಸು ಕಂಡಿದೆ?

ಕೊನೆಯದಾಗಿ ಒಂದು ಸಂಗತಿ – ನಾವೆಲ್ಲ ಅಂದುಕೊಂಡಂತೆ ಇದು ನೀನಾಸಂ ಹೊಸ ದಾರಿಯನ್ನು ಹುಡುಕಿಕೊಳ್ಳುವ ಹಾದಿಯಲ್ಲಿ ಶೋಧಿಸಿಕೊಂಡ ಹೊಸದೊಂದು ಸಾಧ್ಯತೆಯೇನಲ್ಲ. ಅವರು ಒಂದು ಹೊಸ “ಫಾರಿನ್ ಮಾಲು” ನಮಗೆ ತೋರಿಸಿದ್ದಾರೆ; ಅಷ್ಟೇ. ನಾವು ಅದನ್ನು ಆ ಮಟ್ಟದಲ್ಲೇ ಗೃಹಿಸಿಕೊಂಡು, ಆಹಾ ಹೀಗೂ ಸಾಧ್ಯವಿದೆಯೇ ಎಂದು ಅಚ್ಚರಿಪಟ್ಟುಕೊಂಡರೆ ಸಾಕೆನ್ನಿಸುತ್ತದೆ.

 

‍ಲೇಖಕರು G

21 May, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading