ಹಸಿರು ಕ್ಷಣಗಳು
(ಸಬ್ಜ್ ಲಮ್ಹೇಂ)
ಮೂಲ : ಗುಲ್ಜಾರ ಸಾಹಬ್
ಬಿಳಿಯ ಹದ್ದೊಂದು ಅಯಾಸಗೊಂಡು ಕೆಳಗಿಳಿದಾಗ
ಬೆಟ್ಟಗಳಿಗೆ ಹೇಳುತ್ತಿಹುದು
ಎತ್ತರದ ಮರಗಳ ಹಳೆಯ ಕತೆಗಳನ್ನು,
“ಅಲ್ಲೊಂದು ಬಹು ಎತ್ತರದ ದೇವದಾರ ಮರವಿತ್ತು, ಮೊದಲು,
ಅದು ಮೋಡಗಳನ್ನು, ತನ್ನ ಎಲೆಗಳಿಗೆ, ರುಮಾಲಿನಂತೆ ಸುತ್ತುತ್ತ,
ಕೆಲವೊಮ್ಮೆ ಶಾಲಿನಂತೆ ಮೈತುಂಬ ಹೊದೆಯುತ್ತಿತ್ತು,
ಗಾಳಿಯನ್ನು, ಬಾಹುಗಳಿಂದ ತಡೆಯುತ್ತ
ಅತ್ತಿತ್ತ ತೂಗುತ್ತ, ಅದಕ್ಕೆ ಹೇಳುತ್ತಿತ್ತು,
“ಈ ಕಾಲುಗಳು ನೆಲೆಯೂರದೆ ಇದ್ದಲ್ಲಿ, ನಿನ್ನೊಂದಿಗೇ ಬರುತ್ತಿದ್ದೆ!”
“ಅದೋ ಅಲ್ಲಿ ಆ ಕಡೆ, ಬೀಟೆ ಇತ್ತು, ಜಾಲಿಗಿಂತ ತುಸು ಮುಂದೆ,
ಬಲು ತಿಕ್ಕಾಟವಿತ್ತು ಅವೆರಡಕ್ಕೂ,… ಒಂದು ಖರೆ ಮಾತೆಂದರೆ,
ಬೀಟೆಯ ಎತ್ತರಕ್ಕೆ ಜಾಲಿಗೆ ನಿಜಕ್ಕೂ ಹೊಟ್ಟೆಕಿಚ್ಚಿತ್ತು,
ಬೀಟೆಯ ಕೊರಳಿಂದ ಇಂಪಾದ ಸಿಳ್ಳು ಹೊರಟಾಗೆಲ್ಲ,
ಬಾನಾಡಿಗಳು ರೆಂಬೆಗಳಲ್ಲಿ ಕುಳಿತು, ನಕಲು ಮಾಡಿ ನಗುತ್ತಿದ್ದವು!
ಅಲ್ಲೊಂದು ಮಾವು, ಬಲು ದಿನವಿತ್ತು,
ಹೂಬಿಡೋ ಸಮಯದಲ್ಲಿ ಅಲ್ಲಿಗೊಂದು ಕೋಗಿಲೆ,
ಬಾ…ಳ ಅಂದ್ರ ಬಾ…..ಳ ವರ್ಷದಿಂದ ಬರುತ್ತಿತ್ತು,
ಅದೋ ಅಲ್ಲಿ, ಮೂರ್ನಾಲ್ಕು ಸಂಕೇಸರಗಳಲ್ಲಿ ,
ಈಗ ಉಳಿದಿರುವುದೊಂದೇ,
ಎಷ್ಟು ಜೋಪಾನವಾಗಿ ಪೊರೆಯುತ್ತಿದೆ ಇಂದಿಗೂ
ತನ್ನ ದೇಹದ ಮೇಲೆ ಕೆತ್ತಿದ, ಆ ನಿರ್ದಯ ಹೆಸರನ್ನೇ!
ಈ ಕಡೆಗೊಂದು ಬೇವಿತ್ತು, ಸರಕಲಿನಲ್ಲಿ,
ಬೆಳದಿಂಗಳೊಡನೆ ಅನುರಾಗದಲ್ಲಿತ್ತು-
ಅದರೆಲೆಗಳು ನಾಚಿಕೆಯಿಂದ ನೀಲಿಯಾಗುವುದನ್ನು ಕಂಡಿದ್ದೇನೆ”,
……ಹಾರಾಡುವಾಗ,
“ಮತ್ತೆ ಸ್ವಲ್ಪ ಆ ಕಡೆಯಲ್ಲಿ,
ಒಂದೆರಡು ಬಾರಿ ರೆಕ್ಕೆ ಬಡಿಯುವ ದೂರದಲ್ಲಿ,
ಗುಂಪು ಗುಂಪಾಗಿ ಗಿಡಗಳಿದ್ದವು,
ಸೊಂಪಾಗಿ ಉಸಿರಾಡುತ್ತಿದ್ದವು,
ಹುಡುಕಿದರೂ ಇಲ್ಲಪ್ಪೊ,
ಆ ಬೋಳು ಬೆಟ್ಟದ ಮೇಲೆ ಈಗ ಒಂದೂ!
ನೋಡಲಿಲ್ಲವಾದರೂ, ಕೇಳಿದ್ದೆ,
ಆ ಮೈದಾನದ ಸೆರಗಂಚಲ್ಲಿ
ಆಲದ ಬೊಡ್ಡೆಗಿಂತಲೂ ದೊಡ್ಡದೊಂದು,
ದೇವಗಣಗಿಲೆ ಇರುತ್ತಿತ್ತು,
ಎಲ್ಲಿಂದ ಕಡಿದೊಯ್ದರೋ,
ಅಲ್ಲಿಂದಲೇ ಹಾಲು ಪುಟಿಯುತ್ತಿತ್ತು!
ಯಾವ ಚಿಗುರಿಗಿಟ್ಟಿತ್ತೋ!
ತನ್ನದೇ ಮನೆಯಿಂದ ದೇಹ,
ಅದೆಷ್ಟೋ ತುಂಡುಗಳಲ್ಲಿ ಹೋಗಿತ್ತು !!
ಬಿಳಿಯ ಹದ್ದೊಂದು ಒಣ ಮರದ ಮೇಲೆ ಕುಳಿತು
ಬೆಟ್ಟಗಳಿಗೆ ಹೇಳುತ್ತಿಹುದು,
ಎತ್ತರದ ಮರಗಳ ಹಳೆಯ ಕತೆಗಳನ್ನು,
ಅವುಗಳನ್ನು ಕೋವಿ,ಕೊಡಲಿಗೈಗಳ ಈ ಮನುಷ್ಯ,
ತುಂಡು ತುಂಡಾಗಿ ಕತ್ತರಿಸಿ, ಸೀಳಿ, ದಹಿಸುತ್ತಿಹನು!
ಇವನ ದಾಹಕ್ಕೆ ಸಾಲುತ್ತಿಲ್ಲ ಏನೂ!
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ಹದ್ದು ಎತ್ತರದ ಮರಗಳು ಗುಡ್ಡ ಬೆಟ್ಟಗಳ ಅವಿನಾಭಾವ ಸಂಬಂಧವನ್ನು ಚೆನ್ನಾಗಿ ಕಟ್ಟಿ ಕೊಡುವ ಕವಿ ಗುಲ್ಜಾರರ ಸೊಗಸಾದ ಕವನ, ಅಷ್ಟೆ ಅರ್ಥಪೂರ್ಣವಾದ ಅನುವಾದ ಕವನ ಖುಷಿ ನೀಡಿತು.
ಸೂಪರ್ ಅಗಿದೆ ಸರ್ ಕವಿತೆ.
ಗುಲ್ಜಾರರ ಮಿಡಿತವನ್ನು ನೀವು ಅರ್ಥೈಸಿಕೊಳ್ಳುವಂತೆ ನಮಗೇಕೆ ಸಾಧ್ಯವಾಗುವದಿಲ್ಲ? ಬಹಳ ಸುಂದರ ಕವಿತೆಯ ಅರ್ಥಪೂರ್ಣ ಅನುವಾದ.
very nice..
Beautifully translated -good one
-Anil
ಚೆನ್ನಾಗಿದೆ
nice poem sir
ಹದ್ದು, ಬೆಟ್ಟಗಳು, ಎತ್ತರದ ಮರದ ಹಳೆಯ ಕತೆಗಳು …ನಿರಂತರವಾಗಿ ಪರಿಸರದಮೇಲೆ ಮಾನವನಿಂದಾಗುತ್ತಿರುವ ದೌರ್ಜನ್ಯವನ್ನು ಹೊಸ ಕೋನದಲ್ಲಿ ಆವಿಷ್ಕಾರ ಮಾಡಿದ ಪದ್ಯ.
“ಈ ಕಾಲುಗಳು…..” ಬಾನಾಡಿಗಳು ನಕಲು ಮಾಡಿ…..” ಎಂತಹ ಸುಂದರ ಕಲ್ಪನೆ!
ಅದೆಷ್ಟು ತುಂಡುಗಳಲ್ಲಿ….ಅವು ತುಂಡಾಗುವಾಗ ತಗುಲಿದ ಪೆಟ್ಟು ಪರಿಸರ ಪ್ರೆಮಿಗಳ ಎದೆಗೂ ತಾಗುತ್ತೆ.
ಒಂದೊಳ್ಳೆ ಪದ್ಯವನ್ನ ಅಂದವಾಗಿ ಕನ್ನಡವಾಗಿಸಿದ್ದೀರ , ಧನ್ಯವಾದಗಳು!
Wonderful