ಒಂದು ಪ್ರಶಸ್ತಿ, ಬೊಗಸೆ ತುಂಬಾ ಪ್ರೀತಿ…
ಎ ಆರ್ ಮಣಿಕಾಂತ್

ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಅಂದರೆ ಸಾಕು- ಅಲ್ಲಿಗೆ ಹೋಗಿಬರಲು ಮನಸ್ಸು ಹಾತೊರೆಯುತ್ತದೆ. ಕಾರಣ, ಅದು ನಾನು ಓದಿದ ಕಾಲೇಜು. ನಾನು ಮಗುವಂತೆ ಆಡಿದ್ದು, ಹಾಡಿದ್ದು, ಕುಣಿದಿದ್ದು, ದಣಿದಿದ್ದು ಅಲ್ಲಿಯೇ. ಅದು, ನನಗೆ ಒಂದು ಐಡೆಂಟಿಟಿ ಕೊಟ್ಟ ಕಾಲೇಜು. ಅಪಾರ ಕಾಳಜಿಯ ಅಧ್ಯಾಪಕರು ನನಗೆ ಸಿಕ್ಕಿದ್ದು ಅಲ್ಲಿಯೇ. ನಾನು ಕೈಬರಹದ ಗೋಡೆ ಪತ್ರಿಕೆಯೊಂದನ್ನು ರೂಪಿಸಲು ಹೊರಟಾಗ, ಕಾಲೇಜಿನ ಪ್ರಾಚಾರ್ಯರೂ ಸೇರಿದಂತೆ, ಎಲ್ಲಾ ವಿಭಾಗದ ಅಧ್ಯಾಪಕರೂ ಬೆಂಬಲಿಸಿದರು.
ಅವತ್ತು ನನ್ನ ಪರಿಸ್ಥಿತಿ ಹೇಗಿತ್ತು ಅಂದರೆ, ಸ್ಕೆಚ್ ಪೆನ್, ಡ್ರಾಯಿಂಗ್ ಶೀಟ್ ಖರೀದಿಸಲು ನನ್ನ ಬಳಿ ಕಾಸಿರಲಿಲ್ಲ. ಅಂತಹ ಸಂದರ್ಭದಲ್ಲಿ ಆ ಖರ್ಚು ನೋಡಿಕೊಂಡವರು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು. ನಾನು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ. ನಂಬಿದರೆ ನಂಬಿ ಬಿಟ್ರೆ ಬಿಡಿ, ನಮ್ಮ ಕೈ ಬರಹದ ಮ್ಯಾಗಝಿನ್ ಎಲ್ಲರ ನಿರೀಕ್ಷೆ ಮೀರಿ ಯಶಸ್ಸು ಕಂಡಿತು. ಫ್ರೀ ಸಿಕ್ಕಾಗೆಲ್ಲ ಗೋಡೆ ಮ್ಯಾಗಝಿನ್ ಓದುವುದು ಎಲ್ಲರ ಪಾಲಿನ ಪ್ರೀತಿಯ ಕೆಲಸವಾಯಿತು. ( ‘ವಿಚಾರವಾಹಿನಿ’ ಎಂಬ ಹೆಸರಿನ ಆ ಮ್ಯಾಗಝಿನ್ ನ ಮೊದಲ ಸಂಪಾದಕರು ಯಾರು ಗೊತ್ತೇ? ಈಗಿನ ಡಿಐಜಿ ರವಿಕಾಂತೇ ಗೌಡರು)
ಹೀಗೆ, ನಾನಿವತ್ತು ಹಳೆಯ ನೆನಪುಗಳಲ್ಲಿ ತೇಲಿಹೋಗುವುದಕ್ಕೂ ಒಂದು ಕಾರಣವಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಶ್ರೀ ಎಚ್.ಡಿ. ಚೌಡಯ್ಯ ಅವರ ಹೆಸರಿನಲ್ಲಿ ನೀಡಲಾಗುವ ೨೦೧೯ನೇ ಸಾಲಿನ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಲಾಗಿದೆ. ನಾಳೆ, ಸೆಪ್ಟೆಂಬರ್ ೨೫ರಂದು ಕಾರ್ಯಕ್ರಮ. ಹಿರಿಯ ಕೆಎಎಸ್ ಅಧಿಕಾರಿ ಎಚ್ ಎಲ್ ನಾಗರಾಜು ಮತ್ತು ಖ್ಯಾತ ಚೆಸ್ ಆಟಗಾರ್ತಿ ಶಿಫಾಲಿ ಕೂಡ ನನ್ನ ಜೊತೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
”ಮಣಿಕಾಂತ್, ನಿನ್ನ ಪುಸ್ತಕಗಳು ಎಲ್ಲರಿಗೂ ಇಷ್ಟ ಆಗಿವೆ. ನಮ್ಮ ಶಿಷ್ಯ ಪುಸ್ತಕ ಬರೆದಿದ್ದಾನೆ ಎಂದು ಹೆಮ್ಮೆಪಡುತ್ತಲೇ, ನಿನಗೆ ಪ್ರಶಸ್ತಿ ಕೊಡಲು ನಿರ್ಧರಿಸಿದ್ದೇವೆ. ನೀನು ತಪ್ಪದೇ ಕಾಲೇಜಿಗೆ ಬಾ…ಎಲ್ಲಾ ಟೀಚರ್ಸ್ ಸಿಕ್ತಾರೆ .. . ” ಪಿಇಎಸ್ ಟ್ರಸ್ಟ್ ನ ಕಾರ್ಯದರ್ಶಿಗಳೂ, ನಮ್ಮ ಹಿಂದಿನ ಪ್ರಾಚಾರ್ಯರೂ, ನನ್ನ ಮಾರ್ಗದರ್ಶಕರೂ ಆಗಿರುವ ರಾಮಲಿಂಗಯ್ಯ ಸರ್ ಹೀಗೆ ಹೇಳಿದಾಗ, ಎಷ್ಟೊಂದು ಸಂತೋಷವಾಯಿತು ಗೊತ್ತೆ ?
ನಾನು ಓದಿದ ಕಾಲೇಜಿನಲ್ಲೇ, ಓದು ಮುಗಿಸಿದ ಎಷ್ಟೋ ವರ್ಷಗಳ ನಂತರ ಸಣ್ಣದೊಂದು ಗೌರವಕ್ಕೆ ಪಾತ್ರನಾಗುವ ಸೌಭಾಗ್ಯವೊಂದು ಒದಗಿಬಂದಿದೆ. ನನ್ನ ಕಾಲೇಜಿನ ನೆಲದಲ್ಲಿ ನಾನು ಮತ್ತೆ ಮಗುವಾಗಬೇಕು. ನಮ್ಮ ಅಧ್ಯಾಪಕರಿಗೆ ಶಿರಬಾಗಿ ನಮಿಸಿ ಕೃತಜ್ಞತೆ ಹೇಳಬೇಕು.
ಒಳಿತಾಗಲೆಂದು ಹಾರೈಸಿ…
ಮಂಡ್ಯದಲ್ಲಿ, ಮಂಡ್ಯದ ಆಸುಪಾಸಿನಲ್ಲಿ ಇರುವವರು ಇಂದು ಕಾರ್ಯಕ್ರಮಕ್ಕೆ ಬಂದರೆ ಖುಷಿ.






ನಮ್ಮೂರ ಪ್ರಶಸ್ತಿ ..! ಜೀವಪರ ಬರಹಕ್ಕೆ ನೀವಾಗಲೇ ಪ್ರಸಿದ್ಧರಾಗಿರುವಿರಿ.. ಅಭಿನಂದನೆಗಳು ನಿಮಗೆ..
ಶ್ರೀ ಮಣಿಕಾಂತ್, ಹಾರ್ದಿಕ ಅಭಿನಂದನೆಗಳು
sir
Abhinandanegalu nimage ..
DEAR SIR, HEARTY CONGRATULATIONS TO YOU. HARI PRAKASH