ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬೋಳೆ' ಕಣ್ಣಿನ ಗಂಗಾಧರ..

suchith kotianಸುಚಿತ್ ಕೋಟ್ಯಾನ್ ಕುರ್ಕಾಲು

ಸ್ನಾತಕೋತ್ತರ ಪದವಿ ಮುಗಿಸಿ ನೇರವಾಗಿ ಉಡುಪಿಯ ಎಂಜಿಎಂ ಕಾಲೇಜಿಗೆ ಉಪನ್ಯಾಸಕನಾಗಿ ಸೇರಿದ್ದೆ. ಎಲ್ಲವೂ, ಎಲ್ಲದೂ ಹೊಸ ಅನುಭವ. ಹಳೆಯ ಬ್ಯಾಚಿನ ಸೀನಿಯರ್ ವಿದ್ಯಾರ್ಥಿಗಳನ್ನು ಮಾತನಾಡಿಸುವುದಕ್ಕೆ ಕೊಂಚ ಭಯವಾಗುತ್ತಿದ್ದುದರಿಂದ ಹೊಸಬರತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದೆ. ಆಗ ಕಾಣಸಿಕ್ಕವನೇ ಗಂಗಾಧರ.
ದೂರದ ಕೊಪ್ಪಳದಿಂದ ಉಡುಪಿಗೆ ಬಂದಿದ್ದ ಗಂಗಾಧರ. ಮೊದಲ ನೋಟಕ್ಕೆ ಆತನ ಕಣ್ಣುಗಳೇ ನನಗೆ ಕಂಡಿತ್ತು. ದೊಡ್ಡ ದೊಡ್ಡ ‘ಬೋಳೆ’ ಕಣ್ಣುಗಳು  ಸದಾ ಕೆಂಪಾಗಿದ್ದು ಹಳ್ಳಿ ಹೈದನೊಬ್ಬ ಮೊದಲ ಬಾರಿ ಪ್ಯಾಟೆ ಕಂಡಾಗ ಆಗುವ ಭಯ ಆತನಲ್ಲಿ ಗೋಚರಿಸಿತ್ತು. (ಕಣ್ಣು ದೊಡ್ಡದಾಗಿದ್ರೆ ತುಳು ಭಾಷೆಯಲ್ಲಿ ‘ಬೋಳೆ ಕಣ್ಣು’ ಎಂದು ತಮಾಷೆ ಮಾಡುವುದುಂಟು) ನಿಜ ಹೇಳಬೇಕಾದರೆ ಆ ಕಣ್ಣುಗಳೇ ನನ್ನನ್ನು ಆಕರ್ಷಿಸಿದ್ದು.
tundu hykluಕ್ಲಾಸಿನ ಇತರರು ಹೊಸ ಸ್ನೇಹಿತರ ಜೊತೆಗೆ ಮನಬಿಚ್ಚಿ ಮಾತನಾಡುತ್ತಿದ್ದರೆ ಗಂಗಾಧರ ಮಂಕಾಗಿ ಬಿಡುತ್ತಿದ್ದ. ಯಾರ ಸಹವಾಸವೂ ಬೇಡ ಎಂಬಂತೆ ಒಬ್ಬನೇ ಇರುತ್ತಿದ್ದ. ಮೇಲ್ನೋಟಕ್ಕೆ ಆತ ಉಡುಪಿಯ ವಾತಾವರಣ ಕಂಡು ಭಯಗೊಂಡವನಂತೆ ಕಂಡ. ವಿಚಾರಿಸಿದರೆ “ಹೌದು ಸರ್”, “ಇಲ್ಲ ಸರ್” ಅನ್ನವುದು ಬಿಟ್ಟರೆ ಬೇರೆ ಶಬ್ದಗಳೇ ಆತನ ಬಾಯಿಯಿಂದ ಹೊರಡುತ್ತಿರಲಿಲ್ಲ. ಹುಡುಗ ಇಲ್ಲಿಗೆ ಸೆಟ್ಟಾಗ್ಲಿಕ್ಕಿಲ್ಲ ಅನ್ನಿಸತೊಡಗಿತು.
ಗಂಗಾಧರನ ಭಯ ದೂರ ಮಾಡಲು ಆತನ ಕೆಲ ಸ್ನೇಹಿತರು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಆದರೆ ಆತ ಉಡುಪಿಗೆ ಒಗ್ಗಲೇ ಇಲ್ಲ. ನಮ್ಮೂರ ಕುಚ್ಚಿಗೆ ಅಕ್ಕಿಯಿಂದ ಹಿಡಿದು ನಮ್ಮ ವಿದ್ಯಾರ್ಥಿಗಳ ‘ಹೈ ಫೈ’ ಜೀವನಶೈಲಿ ಆತನಿಗೆ ಅಜೀರ್ಣವಾಗತೊಡಗಿತು. ಗಂಗಾಧರ ಮೆಲ್ಲನೆ ಗಂಟುಕಟ್ಟಲು ಶುರುಮಾಡಿದ. “ಸರ್ ಊರಿಗೆ ಹೋಗಿ ಬರುತ್ತೇನೆ” ಎಂದು ಹೇಳತೊಡಗಿದ. ಹೋದರೆ ಈತ ಮತ್ತೆ ಬರಲಿಕ್ಕಿಲ್ಲ ಎಂದು ನಾನು ಮತ್ತು ವಿಭಾಗ ಮುಖ್ಯಸ್ಥ ಮಂಜುನಾಥ್ ಸರ್ ತುಂಬಾ ಪ್ರಯತ್ನಿಸಿದೆವು ಆತನನ್ನು ಉಡುಪಿಯಲ್ಲೇ ನೆಲೆ ಊರುವಂತೆ ಮಾಡಲು. ಪುಣ್ಯಾತ್ಮ ಒಪ್ಪಿದ.
ಅದರೆ… ಗಂಗಾಧರನಿಗೆ ದೊಡ್ಡ ಜ್ವರ ಬಂತು. ಮಲೇರಿಯಾ ಇರಬೇಕು. ನೆನಪಾಗುತ್ತಿಲ್ಲ. ಮೊದಲೇ ಕೆಂಪಾಗಿದ್ದ ಆತನ ಕಣ್ಣುಗಳು ಕೆಂಡದ ಉಂಡೆಯಾದವು. ಊರಿಗೆ ಹೋಗುತ್ತೇನೆಂದು ಗೋಗರೆಯತೊಡಗಿದ. ಇಷ್ಟು ಜ್ವರ ಬಂದಾಗಲೂ ಇಲ್ಲಿ ಉಳಿಸಿಕೊಳ್ಳುವುದು ಸರಿಕಾಣಲಿಲ್ಲ. ಹೋಗಿ ಬಾ ಎಂದೆವು. ಊರಿಗೆ ಹೋಗಲು ಕೈಯಲ್ಲಿ ಕಾಸೂ ಆತನಲ್ಲಿರಲಿಲ್ಲ. ಕೊನೆಗೆ ಟಿಕೇಟಿಗೆ ಒಂದಿಷ್ಟು ಹಣವನ್ನು ಜೇಬಿಗೆ ತುರುಕಿ ಕಳಿಸಿಕೊಟ್ಟೆವು; ಆತ ಹಿಂದಿರುಗಿ ಬರಬಹುದು ಎಂಬ ಕ್ಷೀಣ ಆಸೆಯಿಂದ.
ಹಾರಿಹೋದವ ಮರಳಿ ಬರಲೇ ಇಲ್ಲ. ನಗರ ಜೀವನಕ್ಕೆ ಒಗ್ಗಿಕೊಳ್ಳಲಾಗದೆ ಆತ ಸೋತ ಎಂದು ಬಹಳಷ್ಟು ಸಾರಿ ಅನ್ನಿಸುತ್ತದೆ. ಆದರೆ ಇಲ್ಲಿದ್ದು ಇಲ್ಲಿಯವರ ಮಧ್ಯೆ ಸಂಪೂರ್ಣ ಕೆಡುವುದಕ್ಕಿಂತ ಆತ ವಾಪಸ್ ಹೋಗಿ ಒಳ್ಳೆಯ ಕೆಲಸ ಮಾಡಿದ ಎಂದು ಒಮ್ಮೊಮ್ಮೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ಕೆಂಪು ಬಣ್ಣದ ‘ಬೋಳೆ’ ಕಣ್ಣಿನ ಗಂಗಾಧರ ಯಾವಾಗಲೂ ನೆನಪಾಗುತ್ತಾನೆ…

‍ಲೇಖಕರು avadhi

30 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading