
ಸು ರಂ ಎಕ್ಕುಂಡಿ ಅವರ ‘ಒಳಗೆ ಬಾ ಚೈತ್ರ!’ ಕವಿತೆಯ ಆಯ್ದ ಭಾಗ
ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು
ಚಿಗುರಿನಾಸೆಯ ಜೀವ ಜಡಗಳಲ್ಲಿ
ರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು
ಕುಡಿದಿಹವು ಪುಷ್ಪರಸ ಕೊಡಗಳಲ್ಲಿ
ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು
ಮನದ ಮಾಮರದಲ್ಲಿ ಸುರಿದ ಹೂವು
ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು
ಇನ್ನೆಲ್ಲಿ ಉಳಿಯುವುದು ಹಳೆಯ ನೋವು
ಪಾಲ್ಗುಣದ ಉರಿಯಲ್ಲಿ ಕಹಿಕಷ್ಟಗಳು ಬೂದಿ
ಕಾಡಿನಲಿ ಕಣಿವೆಯಲಿ ಏನು ಹರ್ಷ
ವಸಂತವು ಕಾಲಿಡಲು ಹೂವುಗಳು ಹಾಡುಗಳು
ಕಾಯಲಿಲ್ಲವೇ ಇದಕೆ ಒಂದು ವರ್ಷ ?
ಇಳೆಗೆ ಬಂದಿಳಿದ ಓ ಚೈತ್ರವೇ ಬಾ ಒಳಗೆ
ಬೇವಿನಲಿ ಒಂದಿಷ್ಟು ಬೆಲ್ಲ ಕಲಸು
ರೇಶಿಮೆಯ ರೆಕ್ಕೆಗಳ ಬಿಡಿಸಿದಾ ಪತಂಗವೇ
ಎಲ್ಲಿಹುದು ನಾವೆಲ್ಲಾ ಕಂಡ ಕನಸು
ಎಲೆಯ ಮರೆಯಲ್ಲಿ ಕುಹೂ ಕುಹೂ ನೀಲ ಬೆಟ್ಟಗಳು
ಹೂಬಿಸಿಲ ಕಾಸುತಿವೆ ಕಣಿವೆ ಹಾಡು
ಹುಲ್ಲಿನಲಿ ಬೆಟ್ಟದಲಿ ಹೊಸತನವ ನೀಡಿರುವ
ಚಿತ್ರವೇ ನಮಗಿಷ್ಟು ಸುಖವ ನೀಡು
ಬೇವಿನಲಿ ಒಂದಿಷ್ಟು ಬೆಲ್ಲ ಕಲಸು…
ನಿಮಗೆ ಇವೂ ಇಷ್ಟವಾಗಬಹುದು…





ಎರಡು ಲಕ್ಷ ಮೀರಿದ ನಿಮ್ಮ ಓದುಗರ ಹಿಟ್ ಗಳನ್ನು ನೋಡಿದರೆ ನಿಮಗಿರುವ
ಕಮಿಟ್ಮೆಂಟ್ ಏನಂತ ಅರ್ಥ ಆಗುತ್ತೆ,
ಕನ್ನಡದಲ್ಲಿ ನಿಮ್ಮ ಪ್ರಯತ್ನ,ಅವಿಸ್ಮರಣೀಯ ಅನ್ನಬೇಕು…
ಕನ್ನಡದ ವಾರ ಪತ್ರಿಕೆಗಳಿಗೂ ಅವಧಿಗಿದ್ದಸ್ಟು ಓದುಗರು ಇರಲಿಕ್ಕೆ ಇಲ್ಲ ಅನಿಸುತ್ತೆ.
ಜೈ ಹೋ ಅವಧಿ,
ಎಂ.ಬಿ.ಶ್ರೀನಿವಾಸಗೌಡ
ನವದೆಹಲಿ
ಅದ್ಭುತ ಚಿತ್ರ,
ಅತ್ಯದ್ಭುತ ಕವಿತೆ,
ಈ ಉಗಾದಿಗೆ ಮುನ್ನುಡಿ.
-ಚಂದಿನ