ಬೇಂದ್ರೆಯವರ ಶೈಲಿಯಲ್ಲಿ
ಅಣಕು ಬರಹ ರಚನೆ : ಕೆ. ಎಸ್. ನಾಗರತ್ನ ಭಟ್
ಏ ಭಾಳಾ ಬಾ ನಿಂಗೊಂದು ಛಲೋ ಕಥಿ ಹೇಳ್ಬೇಕಂತಿದೀನಿ
ಬ್ಯಾಡಪ್ಪ ನಾ ಆಡ್ಲಿಕ್ ಹೊಂಟೀನಿ
ಬಾರೋ ಈ ಕಥೀ ಸಣ್ಣದಾದ್ರೂ ಭಾಳ ಮಜಾ ಐತಿ ಕೇಳಾರ್ ಕೇಳು
ಹಾ. ಹಂಗಾರ ಹೇಳು. ನಾ ಬ್ಯಾಗ ಆಡ್ಲಿಕ್ ಹೋಗ್ಬೇಕು ಮತ್ತ
ಹಂಗಲ್ಲೋ, ಮಕ್ಳಿಗೆ ಆಟ ಬೇಕು ಹಾಂಗೇ ಪಾಠನೂ ಬೇಕು ಹೌದಲ್ಲೋ
ಹಂಗಾರೆ ಹೇಳಜ್ಜಿ ನಾ ಒಲ್ಲೆ ಅನ್ನಂಗಿಲ್ಲ ಆತಾ
ಒಂದೂರು , ಛಂದದೂರು, ಅದೂ ನಮ್ಮ ಧಾರವಾಡದ್ಹಾಂಗೆ
ಧಾರವಾಡದ್ಹಾಗಾ, ಅಲ್ಲಿ ಸಾಧನಕೇರೀನೂ ಇತ್ತಾ
ಸಾಧನಕೇರಿ ಅಲ್ದಿದ್ರೂ ಇನ್ನೊಂದು ಕೇರಿ ಆತಿಲ್ಲೋ, ಆ ಊರಿನ ಬೀದೀಲಿ ಗೋದಾವರಿ ನದೀ ಹರೀತಿತ್ತು. ನದೀ ಅಂದ್ರ ಭಾಳಾ ಛಲೋ ಇತ್ತ ನೋಡು, ನೀರು ಸ್ಫಟಿಕದ್ಹಾಂಗಿತ್ತು. ಆ ನೀರಿನ ಆಸ್ರೆಗೆ ಅಲ್ಲಿದ್ದ ಆಲದ ಮರದಾಗೆ ಹಕ್ಕಿಗೋಳು ಗೂಡು ಕಟ್ಕೊಂಡಿದ್ವು. ಅದರಾಗೆ ಗಿಳಿ, ಗುಬ್ಬಿಗೋಳು ಇದ್ವು. ಹೀಂಗಿರಬೇಕಾದ್ರೆ ಒಮ್ಮೆ ಜೋರು ಮಳಿ ಬಂತು, ಅದೂ ಕಾರ್ತಿಕ ಮಾಸದಾಗೆ. ಕಾರ್ತಿಕ ಅಂದ್ರೆ ನಿಂಗೊತ್ತಲ್ಲ ಪಟಾಕಿ ಹಬ್ಬದ ಟೇಮು ಅಂದ್ರೆ ನಿಂಗೆ ಛಲೋ ನೆನಪಾಗ್ತತಿ.
ಓ ಗೊತ್ ಬಿಡು ಹ್ವಾದ ವರ್ಷ ಮಳಿ ಬಂದು ನನ್ನ ಪಟಾಕಿ ಎಲ್ಲ ಠುಸ್ ಅಂದಿದ್ವಲ್ಲ.
ಹಾಂ ನೊಡು ಇಂಥಾ ಮಳಿಗೆ ಆಜೂಬಾಜೂಕಿನ್ ಮರದಲ್ಲಿ ಇದ್ವಲ್ಲ ಮಂಗಗಳು ಎಲ್ಲಾ ನೆಕ್ಕೋತ ಈ ಮರಕ್ಕೆ ಓಡಿ ಬಂದ್ವು.. ಯಾಕಂದ್ರ ಈ ಮರ ಭಾಳ ದೊಡ್ಡದಿತ್ತು. ಅವಕ್ಕೂ ರಕ್ಷಣೆ ಬೇಕಿತ್ತಲ್ಲ. ಮಂಗಗಳು ಬಂದಿದ್ದು ನೋಡಿ ಹಕ್ಕಿಗಳು ಕೂಗಾಕ್ಕೆ ಹತ್ತಿದ್ವು. ಅವುಗಳ ಪೈಕಿ ಒಂದು ಲೀಡರ್ ಹಕ್ಕಿ ಹೇಳ್ತು. ಖರೆ ಅಂದ್ರೆ ನೀವು ನಮಗಿಂತ ಬಲಶಾಲಿಗಳಿದೀರಿ. ನಿಮ್ಮ ಮಾರಿ ನೋಡಿದ್ರೆ ನೀವು ಏನ್ ಮಾಡ್ಲಿಕ್ಕೂ ತಯಾರಿದೀರಿ. ಈ ಮರಕ್ಕೆ ಬಂದು ನೀವೂ ಯಾಕೆ ನೆನೆಸಿಕೊಳ್ಲಿಕ್ಕೆ ಬೇಕು. ಈ ಉಸಾಬರಿ ಬಿಟ್ಟು ಒಂದ್ ಫುಟ್ ಪಾತ್ ಮನಿ ಕಟ್ಕೊಂಡು ಆರಾಮಗರ್ರಿ ಅಂತು.
ಆಗ ಅಲ್ಲೇ ಒಬ್ಬ ಮನ್ಷಾ ಹೋಗ್ತಿದ್ನಾ, ಅವಂಗೆ ಈ ಮಾತು ಕೇಳಿಸ್ತು ಅವನಿಗೆ ನಗು ಬಂತು. ಮನಸ್ನಾಗೇ ನಕ್ಕೋತಾ ಯೋಚ್ನೆ ಮಾಡ್ದ. ಅಂಗ್ರೇಜಿ ಲೆಕ್ಕದ್ಹಾಂಗೆ ಹೇಳ್ಬೇಕಂದ್ರ ಎರಡು ಮಿಲಿಯನ್ ವರ್ಷಗಳಾದ್ವು ನೋಡಿ ನಾವು ಮಂಗಗಳಿಂದ ಹಿಂಗೆ ಬದಲಾಗೋಕೆ. ಹಕ್ಕಿಗಳು ಹೇಳ್ದಾಂಗೆ ಸುತ್ತ ಮುತ್ತ ಮನಿ ಕಟ್ಟಿದೀವಿ ಅಂದ್ರ ಆಜೂಬಾಜೂಕಿನ್ ಒಂದು ಮರಾನೂ ಉಳಿದಿಲ್ಲ ಹಂಗೆ ಕಡಿದ್ವಿ. ಮರಗಳೇ ಇಲ್ಲ ಅಂದ್ಮ್ಯಾಲೆ ಹಕ್ಕಿಗಳು ಹ್ಯಾಂಗೆ ಇದ್ದಾವು.
ಅವ್ನ ಮಾತು ಸರಿ ಹೌದಲ್ಲೋ. ಹಕ್ಕಿ ಹೇಳಿದ್ರಾಗೆ ಒಂದು ವ್ಯಂಗ್ಯಾ ಇದ್ರ ಮನ್ಷ ಹೇಳಿದ್ರಾಗೆ ಇನ್ನೊಂದು ವ್ಯಂಗ್ಯಾ ಇತ್ತು ಗೊತ್ತಾತೇನು
ನಂಗೆ ತಿಳಿವಲ್ದು ಬಿಡಜ್ಜಿ ನಾ ಆಡ್ಲಿಕ್ಕೆ ಹೋಗ್ಬೇಕು.
ಹೋಗು ಆಡ್ಕೊಹೋಗು ಆದ್ರ ಇಷ್ಟು ತಿಳಿ. ಸ್ವಾರ್ಥ ಬಿಟ್ಟು ಬದುಕಿದ್ರೆ ನಾವು, ನಮ್ಮ ಜೊತೆ ಪಕ್ಷಿಗೋಳು, ಗಿಡಮರಗೋಳು ಎಲ್ಲಾ ಉಳಿತಾವೆ. ಅದು ನಮಗೂ ಒಳ್ಳೇದು, ಅವಕ್ಕೂ ಒಳ್ಳೇದು ಏನಂತೀ?
ನೀ ಹೇಳಿದ್ಮ್ಯಾಲೆ ಅದು ಒಳ್ಳೇದೇ ಬಿಡಜ್ಜಿ ಅಂದು ಬಾಳ ಓಡಿದ್ದನ್ನು ಕಂಡು ಅಜ್ಜಿ ನಗು ಹರಿಸಿದ್ಲು.
0 ಪ್ರತಿಕ್ರಿಯೆಗಳು