ಚಿ ಶ್ರೀನಿವಾಸರಾಜು ಅವರು ಇಲ್ಲವಾಗಿ ಆಗಲೇ ಒಂದು ತಿಂಗಳು. ಜನವರಿ ೩೧ ಬರುತ್ತಿದೆ ಎಂದು ನೆನಪಿಸಿದರೆ ಶ್ರೀನಿವಾಸರಾಜು ಎದ್ದು ಬಂದು ಬಿಡುತ್ತಾರೆನೋ ಎಂಬ ಆಸೆ ನಮ್ಮದು. ೩೧ ಬೇಂದ್ರೆ ದಿನ. ಹೊಸ ಮನಸ್ಸುಗಳಿಗೆ ಅದನ್ನು ಕಾವ್ಯ ದಿನವಾಗಿ ರೂಪಿಸಿದ ಹೆಮ್ಮೆ ಶ್ರೀನಿವಾಸರಾಜು ಅವರದ್ದು. ಇಡೀ ಒಂದು ತಲೆಮಾರು ೩೧ ರಂದು ತಾವು ಹೊತ್ತೊಯ್ಯುತ್ತಿದ್ದ ಪುಸ್ತಕಗಳ ಗಂಟನ್ನು, ಅದನ್ನು ಸಾಧ್ಯವಾಗಿಸಿದ ರಾಜು ಮಾಸ್ತರನ್ನು ಮರೆಯಲು ಸಾದ್ಯವೇ ಇಲ್ಲ.
ಈಗ ‘ಅಭಿನವ’ ಒಂದು ಮರೆಯಲಾರದ ಕೆಲಸಕ್ಕೆ ಕೈ ಹಾಕಿದೆ. ಅಭಿನವಕ್ಕೆ ಇತ್ತೀಚೆಗೆ ಬಂದ ಎರಡು ಪ್ರಶಸ್ತಿಗಳಿಂದ ಸೇರಿದ ೨೦ ಸಾವಿರ ರೂ ನಗದನ್ನು ಒಟ್ಟು ಮಾಡಿ ಶ್ರೀನಿವಾಸರಾಜು ಅವರ ನೆನಪಿನ ಮಾಲಿಕೆ ತರಲು ಸಜ್ಜಾಗಿದೆ. ಅದೂ ಭಿನ್ನ ಬಗೆಯಲ್ಲಿ, ರಾಜು ಅವರಿಗೆ ಸರಿಯಾಗಿ ಶ್ರದ್ಧಾಂಜಲಿ ಸಲ್ಲಿಸುವ ಮಾಲಿಕೆ. ಅವರ ಪ್ರೀತಿಯ ಕ್ಷೇತ್ರವಾಗಿದ್ದ ಪ್ರಕಟನಾ ಪ್ರಪಂಚವನ್ನು ಅಭಿನವದ ರವಿಕುಮಾರ್ ಹಾಗೂ ಚಂದ್ರಿಕಾ ಬೆಳಕಿಗೆ ತರುತ್ತಿದ್ದಾರೆ. ಒಂದು ವರ್ಷ ಪ್ರಕಟವಾಗುವ ಈ ಮಾಲಿಕೆ ಕನ್ನಡದ ೧೨ ಅತ್ಯುತ್ತಮ ಪ್ರಕಾಶನಗಳ ಬಗ್ಗೆ ಇರುತ್ತದೆ.
ಒಂದು ಉತ್ತಮ ಮಾರ್ಗದರ್ಶಿಯಾಗುವಂತೆ ಈ ಪುಸ್ತಕ ರೂಪಿಸಲಾಗಿದೆ. ಈ ಮಳೆಯಲ್ಲಿನ ಮೊದಲ ಪ್ರಕಾಶನ- ಅಕ್ಷರ ಪ್ರಕಾಶನ. ಪ್ರಕಾಶನದ ಬಗ್ಗೆ ಎಲ್ ಸಿ ಸುಮಿತ್ರಾ ಬರೆದಿದ್ದಾರೆ. ಕೆ ವಿ ಅಕ್ಷರ ಜೊತೆಗಿನ ಸಂದರ್ಶನವಿದೆ.
ಈ ಪುಸ್ತಕದ ೧೦೦ ಪ್ರತಿ ಶ್ರೀನಿವಾಸ ರಾಜು ಅವರ ಮನೆಯಲ್ಲಿ ಇರುತ್ತದೆ. ಮನೆಗೆ ಬಂದವರಿಗೆ ಈ ಪುಸ್ತಕವನ್ನು ಉಚಿತವಾಗಿ ಕೊಡುತ್ತಾರೆ. ‘ಏಕೆಂದರೆ ಶ್ರೀನಿವಾಸ ರಾಜು ಅವರ ಮನೆಗೆ ಹೋದವರು ಎಂದೂ ಬರಿ ಕೈನಲ್ಲಿ ಬರುತ್ತಿರಲಿಲ್ಲ. ಈಗಲೂ ಅದು ಸಾದ್ಯವಾಗಬೇಕು’ ಎನ್ನುತ್ತಾರೆ ರವಿಕುಮಾರ್.
ಅಭಿನವದ ಮೈಲ್- abhinavaravi@gmail.com ಮೊಬೈಲ್-೯೪೪೮೮ ೦೪೯೦೫






0 Comments