ಟಿವಿ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಸಂತೋಷ್ ಆರ್ಯವರ್ಧನ್ ಬೆಳ್ಳಿತೆರೆಗೆ ಮರಳಿದ್ದಾರೆ. ‘ನೂರು ಜನ್ಮಕು’ ಚಿತ್ರದ ನಂತರ ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಸಿ ಬಂದ ಮೇಲೆ ಟೀವಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ತಮ್ಮ ಸ್ಟೈಲಿಷ್ ನಿರೂಪಣೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.
ಈಗ ಸಂತೋಷ್ ಪರಿಪೂರ್ಣವಾಗಿ ಸಿನಿಮಾರಂಗಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ. ಜಿಗರ್ ಥಂಡ ಚಿತ್ರದ ನಿರ್ದೇಶಕ ಶಿವಗಣೇಶ್ ನಿರ್ದೇಶನದ, ನಿರ್ದೇಶಕ ನಂದಕಿಶೋರ್ ಅರ್ಪಿಸುತ್ತಿರುವ ನೂತನ ಚಿತ್ರದಲ್ಲಿ ಸಂತೋಷ್ ಆರ್ಯವರ್ಧನ್ ನಾಯಕನಾಗಿ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕಥೆಯನ್ನು ಹೊಂದಿರುವ ಈ ಚಿತ್ರದ ಸ್ಕ್ರಿಪ್ಟ್ ಈಗಾಗಲೇ ಅಂತಿಮವಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣವು ಕೋಲ್ಕತ್ತ, ಬೆಂಗಳೂರು, ಊಟಿ, ಮೈಸೂರು ಮುಂತಾದೆಡೆ ನಡೆಯಲಿದೆ.
ಉಳಿದಂತೆ ಈ ಚಿತ್ರದ ತಾಂತ್ರಿಕ ವರ್ಗ, ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಚಿತ್ರವನ್ನು ಕೌಟುಂಬಿಕ ಮನರಂಜನಾ ಚಿತ್ರವನ್ನಾಗಿ ರೂಪಿಸಬೇಕು ಎನ್ನುವುದು ನಿರ್ದೇಶಕ ಶಿವಗಣೇಶ್ ಅವರ ಕನಸಾಗಿದೆ. ನಾಯಕ ನಟ ಸಂತೋಷ್ ಕೂಡಾ ಈ ಚಿತ್ರದ ಮುಖಾಂತರ ಹೊಸ ಲುಕ್ ನಲ್ಲಿ ಪ್ರೇಕ್ಷಕರೆದುರು ಹಾಜರಾಗಲು ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಈಗಾಗಲೇ ಹೆಸರು ಮಾಡಿರುವ ಪ್ರತಿಭಾವಂತ ನಿರ್ದೇಶಕ, ಸಿನಿಮಾರಂಗದಲ್ಲಿ ಮಹತ್ತರವಾದ್ದನ್ನು ಸಾಧಿಸಲೇಬೇಕು ಎಂದು ಪಣ ತೊಟ್ಟಿರುವ ಹೀರೋ, ಇವರಿಬ್ಬರ ಕನಸನ್ನು ಸಾಕಾರಗೊಳಿಸಲು ತಯಾರಾಗಿರುವ ಚೆಂದದ ಸ್ಕ್ರಿಪ್ಟ್… ಹೀಗೆ ಕನ್ನಡ ಚಿತ್ರರಂಗಕ್ಕೆ ಹೊಸ ಬಗೆಯ ಸಿನಿಮಾ ನಿರ್ಮಾಣವಾಗಲು ಬೇಕಿರುವ ಎಲ್ಲ ಶಕ್ತಿಗಳೂ ಒಂದೆಡೆ ಸೇರಿವೆ. ಇನ್ನೇನು ಆರಂಭಗೊಳ್ಳಲಿರುವ ಈ ಚಿತ್ರದ ಚಿತ್ರೀಕರಣ ಎಲ್ಲದಕ್ಕೂ ಮುನ್ನುಡಿ ಬರೆಯಲಿದೆ.
0 ಪ್ರತಿಕ್ರಿಯೆಗಳು