ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರು ಲಿಟೆರರಿ ಫೆಸ್ಟಿವಲ್‍ನಲ್ಲಿ ‘ಕುಮಾರವ್ಯಾಸ ಭಾರತ’

ಪ್ರೊ ಸಿ ಎನ್ ರಾಮಚಂದ್ರನ್

—–

ಕುಮಾರವ್ಯಾಸ ಭಾರತ: ಇಂಗ್ಲೀಷ್  ಅನುವಾದ: ಸಂಪುಟ 1

ಬಿಡುಗಡೆ: ಬೆಂಗಳೂರು ಲಿಟೆರರಿ ಫ಼ೆಸ್ಟಿವಲ್‍ನಲ್ಲಿ

ದಿನಾಂಕ: ಡಿಸೆಂಬರ್ 3, 1-1.45  ಅಪರಾಹ್ನ; ಸ್ಥಳ: ಲಲಿತ್ ಅಶೋಕ್ ಹೋಟೆಲ್

ಕೃತಿ ಪರಿಚಯ

 ಹೆಸರಾಂತ ಕ್ಷತ್ರಿಯ ಕುಲಗಳ ಬಗ್ಗೆಯೇ ಬರೆದರೂ ಕ್ಷಾತ್ರವನ್ನು ತಿರಸ್ಕರಿಸಿದ, ಎಂದೂ ಯುದ್ಧವನ್ನೇ ಮಾಡದ ಕೃಷ್ಣನನ್ನು ತನ್ನ ಮಹಾಭಾರತದ ಕೇಂದ್ರಪಾತ್ರವನ್ನಾಗಿಸಿದ, ಕನ್ನಡ ಭಾಷೆಯ ಹಾಗೂ ಕನ್ನಡ ಸಂಸ್ಕೃತಿಯ ಎಲ್ಲಾ ಆಯಾಮಗಳಿಗೂ ಹಾಗೂ ಸಾಧ್ಯತೆಗಳಿಗೂ ಕನ್ನಡಿ ಹಿಡಿದ ಕುಮಾರವ್ಯಾಸನ “ಕರ್ನಾಟ ಭಾರತ ಕಥಾಮಂಜರಿ” (ಕುಮಾರವ್ಯಾಸ ಭಾರತ) ಒಂದು  ಅಪೂರ್ವ ಕೃತಿ. 

ಈ ಕೃತಿಯನ್ನು ಇಂಗ್ಲೀಷ್‍ಗೆ ಅನುವಾದಿಸಿ, ಇದನ್ನು ಕನ್ನಡೇತರರಿಗೂ ಪರಿಚಯಮಾಡಿಕೊಡಬೇಕೆಂಬ ಮಹದಾಸೆ ಅನೇಕ ಕನ್ನಡ/ ಇಂಗ್ಲೀಷ್ ವಿದ್ವಾಂಸರಿಗೆ ಬಹುಕಾಲದಿಂದ ಮನಸ್ಸಿನಲ್ಲಿತ್ತು.  (ಇನ್‍ಫ಼ೋಸಿಸ್) ನಾರಾಯಣ ಮೂರ್ತಿಗಳ ಮಗ ರೋಹನ್ ಮೂರ್ತಿ ಅವರು ಹಾರ್ವರ್ಡ್ ವಿವಿಯಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಪ್ರಾಚೀನ ಭಾರತೀಯ ಸಾಹಿತ್ಯಕೃತಿಗಳ ಇಂಗ್ಲೀಷ್ ಅನುವಾದಗಳ ಪ್ರಕಟಣೆಗೆ ಅನುವು ಮಾಡಿಕೊಟ್ಟರು  (’ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ಼್ ಇಂಡಿಯಾ’).  

ನ್ಯೂಯಾರ್ಕ್‍ನಲ್ಲಿ ಸ್ಟೋನಿಬ್ರೂಕ್ ವಿವಿಯಲ್ಲಿ ’ಭಾರತೀಯ ಅಧ್ಯಯನ ಕೇಂದ್ರ’ದ ಮುಖ್ಯಸ್ಥರಾಗಿರುವ ಡಾ. ಎಸ್. ಎನ್. ಶ್ರೀಧರ್  ಭಾರತೀಯ ಅನುವಾದ ಮಾಲೆಯ ಸಂಪಾದಕರು, ಆ ಸಂಸ್ಥೆಯ ನಿರ್ದೇಶಕರಾದ ಡಾ. ಶೆಲ್ಡನ್ ಪೋಲಕ್ ಅವರನ್ನು ಸಂಪರ್ಕಿಸಿ, ಕುಮಾರವ್ಯಾಸ ಭಾರತದ ಅನುವಾದಕ್ಕೆ ಅವರ ಒಪ್ಪಿಗೆ ಪಡೆದರು.  ನಂತರ ಡಾ. ಎಚ್. ಎಸ್. ಶಿವಪ್ರಕಾಶ್, ಡಾ. ನಾರಾಯಣ ಹೆಗ್ಡೆ,  ಡಾ. ಎಚ್. ಎಸ್. ರಾಘವೇಂದ್ರ ರಾವ್,  ಡಾ. ಸಿ. ಎನ್. ರಾಮಚಂದ್ರನ್  ಮತ್ತು ಡಾ. ಶ್ರೀಧರ್ ಇವರುಗಳು ಈ ಅನುವಾದ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ಈ ಕೆಳಗಿನ ತೀರ್ಮಾನಕ್ಕೆ ಬಂದರು. 

ಪ್ರತಿಯೊಬ್ಬರೂ ’ಆದಿಪಂಚಕ’ ದಿಂದ ಒಂದು ಪರ್ವ ಮತ್ತು ’ಯುದ್ಧಪಂಚಕದಿಂದ ಒಂದು ಪರ್ವ, ಹೀಗೆ ಅನುವಾದ ಮಾಡಬೇಕೆಂದು, ಶ್ರೀಧರ್ ಮುಖ್ಯ ಸಂಪಾದಕರಾಗಬೇಕೆಂದು ತೀರ್ಮಾನಿಸಲಾಯಿತು.  ಕುಮಾರವ್ಯಾಸ ಭಾರತ ತುಂಬಾ ದೀರ್ಘವಾದ ಮಹಾಕಾವ್ಯ; ಅದರಲ್ಲಿ 8000ಕ್ಕೂ ಮಿಕ್ಕು ಷಟ್ಪದಿಗಳಿವೆ.  ಇಷ್ಟನ್ನೂ ಅನುವಾದಿಸುವುದು ಅಸಾಧ್ಯವೆಂದು, ಕೃತಿಯ ಮೂರನೆಯ ಒಂದು ಭಾಗದಷ್ಟು, ಎಂದರೆ ಸುಮಾರು 3000 ಸಾವಿರ ಷಟ್ಪದಿಗಳನ್ನು ಅನುವಾದಿಸಬೇಕೆಂದು,  ಪ್ರತಿಯೊಬ್ಬರೂ 500-600 ಷಟ್ಪದಿಗಳನ್ನು ಅನುವಾದಿಸಬೇಕೆಂದು ನಿರ್ಣಯಿಸಿದರು.  ಅನುವಾದಕ್ಕೆ ಶ್ರೀಧರ್ ಒಂದು ವಿದ್ವತ್ಪೂರ್ಣ ಮುನ್ನುಡಿಯನ್ನು ಬರೆಯಲು ಒಪ್ಪಿಕೊಂಡರು.

ಈ ಯೋಜನೆಯ ಮೊದಲ ಸಂಪುಟದಲ್ಲಿ ’ಆದಿಪರ್ವ’ (ಅನು. ಸಿ. ಎನ್. ರಾಮಚಂದ್ರನ್) ಮತ್ತು ’ಸಭಾಪರ್ವ’ (ಅನು. ನಾರಾಯಣ ಹೆಗ್ಡೆ) ಈ ಎರಡು ಪರ್ವಗಳ ಅನುವಾದವಿದ್ದು, ಈ ಸಂಪುಟವು ಬರುವ ಡಿಸೆಂಬರ್ 3 ರಂದು, ಬೆಂಗಳೂರು ಲಿಟರರಿ ಫ಼ೆಸ್ಟಿವಲ್‍ನಲ್ಲಿ ಬಿಡುಗಡೆಯಾಗುತ್ತಿದೆ (1.00-1.45).  ನಂತರ, ಮೂಲ ಕೃತಿಯ ಕೆಲವು ಭಾಗಗಳ ಗಮಕ-ವ್ಯಾಖ್ಯಾನಗಳಿವೆ (1.45-2.30).  ಗಮಕಿ: ಎಂ. ಆರ್. ಸತ್ಯನಾರಾಯಣ; ಇಂಗ್ಲೀಷ್‍ನಲ್ಲಿ ವ್ಯಾಖ್ಯಾನ: ಎಸ್. ಎನ್. ಶ್ರೀಧರ್.  ಈ ಸಂಪುಟವು ಅಂದೇ ಮಾರಾಟಕ್ಕೂ ಇದೆ; ಮತ್ತು ಇದು ಅಮೆಜ಼ಾನ್ ಮೂಲಕವೂ ದೊರೆಯುತ್ತದೆ. 

                    

‍ಲೇಖಕರು avadhi

30 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading