
ರಾಜಾರಾಂ ತಲ್ಲೂರು
ದೊಡ್ಡದೊಂದು ಕಟ್ಟಡ ಕಟ್ಟುವಾಗ ಅದರೊಳಗೆ ಶೌಚಾಲಯವೂ ಬೇಕೆಂಬ ಯೋಚನೆ ನಮಗೆ ಹುಟ್ಟಿದ್ದೇ ಈಗ ಒಂದು ಹತ್ತು-ಹದಿನೈದು ವರ್ಷಗಳಿಂದೀಚೆಗೆ. ಅಂತಹದ್ದರಲ್ಲಿ, ವರ್ಷಕ್ಕೊಂದು ಹತ್ತು ಜೀವ, ಇನ್ನೊಂದು ನೂರು ಕಣ್ಣುಗಳು ಸುಟ್ಟುಕರಗದಿದ್ದರೆ ಅದೆಂತಹ ದೀಪಾವಳಿ?!
ಸಿವಕಾಸಿ ಎಂಬ ಬೆಂಕಿಕಡ್ಡಿ ಕಾರ್ಖಾನೆಗಳ ಊರು ಯಾಕೆ ಪಟಾಕಿಗಳಿಗೂ ತವರು ಎಂದರೆ ಅಲ್ಲಿನ ವಾತಾವರಣದಲ್ಲಿ ತೇವಾಂಶ ಹೆಚ್ಚಿಲ್ಲ; ಕಡಿಮೆ ಸಂಬಳಕ್ಕೆ ಕೆಲಸದ ಜನ ಸಿಗುತ್ತಾರೆ ಮತ್ತು ಪಟಾಕಿ ತಯಾರಿಸಲು ಅಗತ್ಯವಿರುವ ಸಾಲ್ಟ್ ಪೀಟರ್, ಸಲ್ಫರ್, ಪೈರೋ ಅಲ್ಯುಮೀಮಿಯಂ ಪುಡಿಗಳು, ಮಸಿ, ಕಾಗದ, ಕಬ್ಬಿನ ಜೊಗಟೆ ಇತ್ಯಾದಿ ಇಲ್ಲಿ ಸುಲಭವಾಗಿ ಲಭ್ಯವಿವೆ.
ಅಯ್ಯನಾಡಾರ್ ಮತ್ತು ಶಣ್ಮುಗ ನಾಡಾರ್ ಎಂಬವರ ಕುಟುಂಬ ವ್ಯವಹಾರವಾಗಿ ಆರಂಭಗೊಂಡ ಶಿವಕಾಶಿಯ ಪಟಾಕಿ ಉದ್ಯಮ ಇಂದು ವಾರ್ಷಿಕ 2000 ಕೋಟಿ ರೂಪಾಯಿಗಳ ವಹಿವಾಟಿರುವ, 70,000 ಜನರಿಗೆ ನೇರ ಉದ್ಯೋಗಾವಕಾಶ ನೀಡುವ; ಮತ್ತೊಂದು ಲಕ್ಷ ಜನರಿಗೆ ಪರೋಕ್ಷ ವರಮಾನ ನೀಡುವ ದೊಡ್ಡ ಉದ್ದಿಮೆಯಾಗಿದ್ದು, ಅಂದಾಜು ಎರಡು ಲಕ್ಷ ಜನಸಂಖ್ಯೆಯ ಈ ಊರಿನಲ್ಲಿ ಸುಮಾರು 980ಕ್ಕೂ ಮಿಕ್ಕಿ ಪಟಾಕಿ ಕಾರ್ಖಾನೆಗಳಿವೆ!
ಹತ್ತು ವರ್ಷಗಳ ಕೆಳಗೆ ಸಣ್ಣ ಮಕ್ಕಳನ್ನು ಪಟಾಕಿ ಕಾರ್ಖಾನೆಗಳಲ್ಲಿ ಎಗ್ಗಿಲ್ಲದೆ ದುಡಿಸುತ್ತಿದ್ದ ಸಿವಕಾಸಿ, ಈಗೀಗ ಆ ವಿಚಾರದಲ್ಲಿ ಸುಧಾರಿಸುತ್ತಾ ಬಂದಿದೆಯಾದರೂ ಬಾಲಕಾರ್ಮಿಕರು ಅಲ್ಲಿ ಸಂಪೂರ್ಣವಾಗಿ ಇಲ್ಲ ಎಂದಾಗಿಲ್ಲ (ಅವರಿಗೆ ಅನುಕೂಲ ಮಾಡಿಕೊಡಲು ಇಂದು ಹೊಸ ಕಾರ್ಮಿಕ ಕಾಯಿದೆಯಲ್ಲಿ ಕುಟುಂಬದ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರಿಗೆ ರಿಯಾಯಿತಿಗಳನ್ನೂ ಪ್ರಸ್ತಾಪಿಸಲಾಗಿದೆ). 1991ರ ಜನಗಣತಿ ಪ್ರಕಾರ ಅಲ್ಲಿ 6-14 ಪ್ರಾಯವರ್ಗದ 30,000 ಬಾಲಕಾರ್ಮಿಕರು ಇದ್ದರು!
ನೇರವಾಗಿ ಪಟಾಕಿಗಳಿಂದ ಎಷ್ಟು ಜನ ಸಾಯುತ್ತಿದ್ದಾರೆಂಬ ಬಗ್ಗೆ ಇತ್ತೀಚೆಗಿನ ಸ್ಪಷ್ಟ ಚಿತ್ರಣ ಇಲ್ಲದಿದ್ದರೂ ವರ್ಷಕ್ಕೆ ಅಂದಾಜು 20-25 ಸಾವಿರ ಮಂದಿ ದೇಶದಲ್ಲಿ ಬೆಂಕಿ ಅಪಘಾತಗಳಿಗೆ ಬಲಿ ಆಗುತ್ತಿದ್ದಾರೆ. 2001-06 ನಡುವೆ ಸಿವಕಾಸಿಯೊಂದರಲ್ಲೇ ಪ್ರತೀ ವರ್ಷ 18-30
ಮಂದಿ ಅವಘಡಗಳಿಗೆ ತುತ್ತಾದ ಬಗ್ಗೆ ದಾಖಲೆಗಳು ಸಿಗುತ್ತವೆ. ಇವುಗಳನ್ನು ಗಮನಿಸಿದರೆ ಬಹುತೇಕ ಎಲ್ಲ ಅಪಘಾತಗಳೂ ಸಂಭವಿಸಿರುವುದು ಒಂದೋ ಸುರಕ್ಷಿತವಲ್ಲದ ವಾತಾವರಣದಲ್ಲಿ ಕೆಲಸ ಮಾಡಿದ್ದರಿಂದ, ಇಲ್ಲವೇ ಮಾನವ ತಪ್ಪುಗಳಿಂದ.
ನಮ್ಮಲ್ಲಿ, ಅಂದರೆ ಕರಾವಳಿಯಲ್ಲಿ ಎಲ್ಲೋ ತುಳಸಿಪೂಜೆಗೆ ಒಂದು ನಾಲ್ಕು ‘ಬೆಡಿ’ ಸುಡುತ್ತಿದ್ದವರು ಬರಬರುತ್ತಾ ಸಾವಿರಗಟ್ಟಲೆ ರೂಪಾಯಿಗಳ ಪಟಾಕಿ ಸುಡಲಾರಂಭಿಸಿದರು. ಈಗ ಪೂಜೆಗೆ ಮಾತ್ರವಲ್ಲದೆ ಪ್ರತಿಯೊಂದು ವಿಜಯೋತ್ಸವಕ್ಕೆ, ಸಂಭ್ರಮಕ್ಕೆ ಕೂಡ ಪಟಾಕಿ ಸಂಕೇತ ಆಗಿಬಿಟ್ಟಿದೆ. ಪಟಾಕಿ ಪರೋಕ್ಷವಾಗಿ ಕೂಡ ಶ್ವಾಸಕೋಶಗಳ ಮೇಲೆ, ಚರ್ಮದ ಮೇಲೆ, ಕಿವಿಗಳ ಮೇಲೆ, ಪ್ರಾಣಿ-ಪಕ್ಷಿಗಳ ಮೇಲೆ, ಪರಿಸರದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಪರಿಗಣಿಸಿದರೆ ಭಯವಾಗುತ್ತದೆ.
ದೇಶದ ಮೊತ್ತಮೊದಲ ಮೇಕ್ ಇನ್ ಇಂಡಿಯಾ ಯೋಜನೆಗಳಲ್ಲಿ ಸಿವಕಾಸಿಯ ಪಟಾಕಿಗಳೂ ಸೇರುತ್ತವೆ. ಅಲ್ಲಿ ಕಾರ್ಖಾನೆಗಳನ್ನು ಸುಯೋಜಿತ, ಸುರಕ್ಷಿತ ಗೊಳಿಸುವುದಕ್ಕೆ, ಪಟಾಕಿಗಳ ಬಳಕೆ-ಮಾರಾಟಗಳ ಬಗ್ಗೆ ಸುರಕ್ಷಿತ ಮಿತಿಯನ್ನು ಹೇರುವುದಕ್ಕೆ ಅಡ್ಡಿ ಏನು? ಈ ಲೇಖನ ಸಿದ್ಧಪಡಿಸುತ್ತಿರುವಂತೆಯೇ ಮತ್ತೆ 9 ಸಾವಿನ ಸುದ್ದಿ ಸಿವಕಾಸಿಯಿಂದ ಹೊರಟಿದೆ… ಅಲ್ಲಿಗೆ ಈ ಬಾರಿಯ ದೀಪಾವಳಿಯೂ ಸಾರ್ಥಕ ಆದಂತಾಯಿತು! ಮನುಷ್ಯ ಜೀವ ಇಷ್ಟೊಂದು ಸದರವೇ?





Agree very strongly sir….We need to stop crackers altogether.. Just go for ecofriendly Diyas instead..Crackers are a matter of prestige even in yakshagana now..Gowjiya aata depends on how many thousands crackers are used…and when we come across the eye injuries due to crackers feel so bad and helpless – Dr Shailaja Bhat Shenoy