ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೀದಿಮ್ಯಾಲೆ..

ಅಮಾಸ

ಬೀದಿಯ ಮೇಲೆ ನಿಂತು ಸಾವಿರಾರು ಜನರನ್ನು ಸೇರಿಸುವ ಮತ್ತು ಸೇರಿದ್ದ ಜನಮಾನಸಕ್ಕೆ ನೈತಿಕ ಪ್ರಜ್ಞೆ, ಸಾಮಾಜಿಕ ಶಿಕ್ಷಣ ನಿಡಬಲ್ಲ ಶಕ್ತಿಯಾಗಿದ್ದ ಒಂದು ಮಾದ್ಯಮ ಇಂದು ಪ್ರಚಾರಕ್ಕೆ ಮಾತ್ರ ಬೀದಿ ನಾಟಕ ಎಂಬಂತಾಗಿರುವುದು ಬೇಜಾರಿನ ಸಂಗತಿ ಆಗಿಬಿಟ್ಟಿದೆ. ತಮ್ಮಟೆ, ಕಂಜರಾ,ಢೋಲಕಿ ನುಡಿಸುತ್ತ ರಸ್ತೆಗೆ ಇಳಿದರೆ ಸಾಕು ನಿಂತು ನೋಡಲು ಪುರಸೊತ್ತಿಲ್ಲದವರು ಕೊಂಚ ತಡೆದು ಆಟದ ವೃತ್ತದ ಕಡೆ ಕಣ್ಣ ಹಾಯಿಸಿ ನಿಂತು ಹೋಗುತ್ತಿದ್ದರು. ಇದು ನಾನು ಕಂಡ ಬೆಳಗಾಂ,ಧಾರವಾಡ ಕಡೆಯ ಆಟದ ಗತ್ತು. “ನಾವು ಬೆವರನು ಸುರಿಸಿ ದುಡಿಯುವ ಜನ” ಅಂತ ಹಾಡುತ್ತಿದ್ದರೆ ಮೈ ಜುಮ್ಮೆನ್ನುತ್ತಿತ್ತು. ಹ್ಞಾ, ಇದು ಎಪ್ಪತ್ತು ಎಂಬತ್ತರ ದಶಕದ ಮಾತಲ್ಲ ಈಗ್ಗೆ ಹದಿನೈದು ವರ್ಷದ ಕೆಳಗಿನ ಮಾತು… ಹುಬ್ಬಳ್ಳಿ ಧಾರವಾಡ ಸಮುದಾಯ ಘಟಕದಲ್ಲಿ ಅದೆಂಥ ಶಕ್ತಿ ಇತ್ತು? ನನ್ನನ್ನ ಕೊಚ್ಚಿ ತಂದು ನಾಟಕಕ್ಕೆ ಹಾಕಿತು. ಮಾತೆತ್ತಿದರೆ ಕ್ರಾಂತಿ ಅನ್ನುತ್ತಿದ್ದ ಗೆಳೆಯರೆಲ್ಲ ಮದುವೆ ಆಗಿ ಥಣ್ಣಗಾಗಿದ್ದಾರೆ..! ನನಗೆ ತಿಳಿದಂತೆ ನನ್ನ ಓದು,ಗ್ರಹಿಕೆ,ಬದ್ಧತೆಗಳೆಲ್ಲವೂ ‘ಸಮುದಾಯ’ದ ಬಳುವಳಿ ಎಂದು ನೆನೆದುಕೊಳ್ಳುವಾಗ ಖುಷಿ ಆಗುತ್ತದೆ. ಅದೆ ಸಮುದಾಯ ಮುಂದೊಂದು ದಿನ ಯಾವದೋ ಮೈಸೂರು ಸೀಮೆ ಎನ್.ಜಿ.ಓ.ಒಂದರ ಪ್ರಾಜೆಕ್ಟ್ ತಗೊಂಡು ರಾಜ್ಯಾದ್ಯಂತ ಅಂದರೆ ಆಯ್ದ ತಾಲ್ಲೂಕುಗಳಿಗೆ ನಾಟಕ ಮಾಡಲು ಹೋಗುವಾಗ ನಾನು ಅದರೊಳಗೊಬ್ಬನಾಗಿಬಿಟ್ಟದ್ದೆ. ಭಟ್ಟ ಸರ್ ಬದುಕಿದ್ದಾಗ ಸಮುದಾಯವನ್ನು ಹೊರಗಿನಿಂದ ಕಂಡಿದ್ದ ನನಗೆ ಅಂದು ಅವರು ರೈತ ಜಾತಾ ಮಾಡಿದಾಗಿನ-ರಾಮದುರ್ಗ ನಗರದ ಗ್ರಂಥಾಲಯದ ಪಕ್ಕದಲ್ಲಿ-ಪ್ರದರ್ಶನಗೊಂಡ ಬೀದಿ ನಾಟಕ ನನ್ನ ಬದುಕಿಗೊಂದು ಬ್ರೇಕ್ ಕೊಟ್ಟಿತು. ಓದು ಸಾಕನ್ನಿಸಿ ಕಮ್ಯುನಿಷ್ಟ ಪಕ್ಷ ಸೇರಿದೆ,ಊರು ಬಿಟ್ಟು ಧಾರವಾಡ ಸೇರಿದೆ,ಧಾರವಾಡದಿಂದ ಹೆಗ್ಗೋಡು… ಹೀಗೆ ಸಂಪೂರ್ಣ ನಾಟಕವನ್ನೆ ಉಸಿರಾಗಿಸಿಕೊಂಡುಬಿಟ್ಟೆ.

ಇದೆಲ್ಲವೂ ಯಾಕೆ ನೆನಪಾಗುತ್ತದೆ ಅಂದರೆ ಬೀದಿ ನಾಟಕದ ವಿಚಿತ್ರ ಹಂಬಲಗಳು ಈ ಪ್ರೊಸಿನಿಯಂ ರಂಗದಲ್ಲಿ ಸಿಕ್ಕೋದಿಲ್ಲ. ಇಲ್ಲಿಯ ರಸಾನುಭೂತಿ, ಸೌಂದರ್ಯ, ಕಾವ್ಯ, ನಾಟಕೀಯತೆ, ಸಂಗೀತಗಳು ಬೀದಿ ನಾಟಕಕ್ಕೆ ಒಗ್ಗಿಕೊಳ್ಳುವುದಿಲ್ಲ. ಆದರೆ ರಸ್ತೆ ಮೇಲೆ ಓಡಾಡುವ ಜನಗಳನ್ನು ಹಿಡದು ನಿಲ್ಲಿಸುವ ತಾಕತ್ತು ಈ ರಂಗಕ್ಕೆ ಬೇಕಾಗಿಲ್ಲ ನೋಡಿ, ಹಾಗಾಗಿ ಇದರ ವ್ಯವಹಾರವೇ ಬೇರೆ ಅನ್ನಿಸುತ್ತದೆ. ಇಲ್ಲಿ ಮೊದಲೆ ನಾಟಕ ನೋಡಲು ತಯಾರಾಗಿ ಬಂದಿರುತ್ತಾರೆ ಆದ್ದರಿಂದ ಪ್ರದರ್ಶನಕ್ಕೆ ನಟರೂ ಬಿಗುಪಾಗಿ (ತಕ್ಕಮಟ್ಟಿಗೆ ಏನು ಪ್ರೇಕ್ಷಕರ ಮೇಲೆ ಒತ್ತಡದ ಭಾವಗಳನ್ನ ಎಸೆಯುವಷ್ಟು) ತಾಲೀಮು ಮಾಡಿಯೇ ತಯಾರಾಗಿರುತ್ತಾರೆ.  ಆದರೆ ಬೀದಿ ನಾಟಕಕ್ಕೆ ಬರುವ ನೋಡುಗರು ಆಸಕ್ತರಲ್ಲ,ದಾರಿಹೋಕರು. ಅಂಥವರೊಳಗೆ ಒಂದು ವಿಷಯದ ಆಗು ಹೋಗುಗಳ ಬಗ್ಗೆ ತಿಳಿಸುವಿಕೆಯ ಪ್ರಯತ್ನ ಬೀದಿರಂಗ ಮಾಡುತ್ತದೆ. ಮನಮುಟ್ಟುತ್ತದೆ ಮುಟ್ಟಿದ್ದು ಮುಂದೆಲ್ಲೋ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹ್ಯಾಗಂದ್ರೆ ನಾವು ದೂರದರ್ಶನದ ಬ್ರೇಕ್ ಸಮಯದಲ್ಲಿ ನೋಡಿದ ವಸ್ತು ಒಂದು ಮಾರ್ಕೆಟಲ್ಲಿ ಕಂಡಾಗ ಕೊಳ್ಳಬೇಕು ಅನ್ನಿಸುತ್ತದಲ್ಲ, ಹಾಗೇನೆ ಈ ನಾಟಕಗಳ ಪರಿಣಾಮ ಅವರವರ ಭಾವ-ಭಕುತಿಗೆ ಆಗಾಗ ಅಲ್ಲಲ್ಲಿ ದಕ್ಕುತ್ತದೆ. ದಲಿತ-ಬಂಡಾಯ ಚಳುವಳಿಯ ಬಳುವಳಿಯಾಗಿ, ರಾಜಕೀಯ ಪ್ರಜ್ಞೆಯೊಂದಿಗೆ ಕನ್ನಡದ ಮಾನಸ ತಟ್ಟಿದ್ದ ಬೀದಿ ನಾಟಕ ಇಂದು ಯಾವ ಮಟ್ಟದಲ್ಲಿ ನಿಂತಿದೆ ಎನ್ನುವುದು ಯೋಚಿಸಲಿಕ್ಕು ಆಗದ ವಿಷಯವಾಗಿಬಿಟ್ಟಿದೆ.ಯಾವ ಉದ್ಧೇಶಕ್ಕಾಗಿ ಬೀದಿ ನಾಟಕ ಹಾಗೇ,ಅದೇ ಮಾದರಿಯಲ್ಲಿ ಮಾಡಬೇಕು ಎನ್ನುವ ಮಾತು ಈ ಹೊಸ ಹುರುಪಿನ ಹೊಸ ಹುಡುಗರಲ್ಲಿ ಕೇಳಿಬರುತ್ತದೆ.. ಅವರಿಗೆಲ್ಲ ಸರಕಾರೀ ಕಾರ್ಯಕ್ರಮಗಳ ರುಚಿ ಹತ್ತಿಬಿಟ್ಟಿದೆ, ಕಂಪನಿಗಳ ಪ್ರಚಾರ ಕಾರ್ಯದ ಲಾಭ ತಿಳಿದು ಬಿಟ್ಟಿದೆ ನೋಡಿ ಹಾಗಾಗಿ ಬೀದಿ ನಾಟಕದ ಮಹತ್ವ ಮತ್ತು ನೋಡುಗರ ರುಚಿ ಬದಲಾಗಿದೆ.ಏನು ಲಾಭ ಎಂದು ಪ್ರಶ್ನಿಸುವ ಹಂತಕ್ಕೆ ತಂದುಬಿಟ್ಟಿರುವ ಬೀದಿ ನಾಟಕಗಳ ರಾಜ ನಿರ್ದೇಶಕರು ಸರಿಯಾಗಿಯೇ ಸಮರ್ಥಿಸಿಕೊಳ್ಳುತ್ತಾರೆ. ಅವರ ಮಾತು ಹಾಗಿರಲಿ. ದೂರದ ಬ್ರೆಜಿಲ್ ದೇಶದ ‘ಅಗಸ್ತೋ ಬೋಲ್’ ಎಂಬ ನಿರ್ದೇಶಕರು ಅದೃಶ್ಯ ರಂಗಭೂಮಿ ಬಗ್ಗೆ ಹೇಳುತ್ತಾರೆ- ಅಲ್ಲಿ ನಾಟಕ ನಡೆಯುವುದೆ ನೋಡುಗ ನಟರೊಟ್ಟಿಗೆ.. ನಟ ಆರಂಭಿಸಿದ ವಾಗ್ವಾದ ಸಾರ್ವಜನಿಕರನ್ನು ಕೆರಳಿಸಿ ರಾಜಕೀಯ, ಸಾಮಾಜಿಕ ಸ್ತಿತ್ಯಂತರದ ಕಡೆಗೆ ಇಡೀ ಚರ್ಚೆ ತಿರುಗುತ್ತಲೂ ನಟರು ಮಾಯವಾಗಿ ಬಿಡುತ್ತಾರೆ. ಆದರೆ ಬಹುಮುಖ್ಯವಾದ ಸಭೆ ಅದಾಗಿಬಿಟ್ಟಿರುತ್ತದೆ. ಇದು ಹೀಗಿರಲು ನಮ್ಮ ಬೀದಿ ನಾಟಕದ ಸಾಧ್ಯತೆಗಳು ಎಲ್ಲಿ ಕೊನೆಗೊಂಡವು ಅನ್ನುವುದು ನುಂಗಲಾರದ ತುತ್ತಾಗಿಬಿಟ್ಟಿದೆ. ಮತ್ತೆ ಬೀದಿ ನಾಟಕಗಳು ಪ್ರಯೋಗಾತ್ಮಕವಾದರೆ ನನಗಂತು ಖುಷಿ ಆಗುತ್ತದೆ. ]]>

‍ಲೇಖಕರು G

13 March, 2012

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. savitri

    ತಮ್ಮ ಅಭಿಪ್ರಾಯ ಒಪ್ಪುವಂತಹದು ಸರ್. ನಮ್ಮ ಐಡಿಎಫ್ ಸಂಸ್ಥೆಯಲ್ಲಿ ಆಗಾಗ್ಗೆ ಬೀದಿ ನಾಟಕಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅವುಗಳು ನಿಮ್ಮ ಆಶಯದಂತೆಯೇ ನಡೆಯುತ್ತಿವೆ ಎಂಬುದು ಸಂತಸದ ಸಂಗತಿ.
    ಆದರೆ ಪ್ರಚಾರಪ್ರಿಯರಾಗಿರುವ ಬಹಳಷ್ಟು ಜನರಿಗೆ ತಮ್ಮ ಲೇಖನ ಮಾರ್ಗದರ್ಶಿಯಾಗುತ್ತದೆ.

  2. H.R.Naveenkumar

    ನಿಮ್ಮ ಅಭಿಪ್ರಾಯ ಸರಿಯಾಗಿದೆ, ಯಾವ ಉದ್ದೇಶದಿಂದ ಬೀದಿ ನಾಟಕಗಳು ಹುಟ್ಟಿಕೊಂಡವೋ ಆ ಉದ್ದೇಶ ಇಂದು ಮರೆಯಾಗುತ್ತಿದೆ,ಜನರ ಬಳಿಗೆ ಹೋಗಬೇಕಾಗಿದ್ದ ಸಮುದಾಯ ಕೆಲವೆಡೆ ಕೇವಲ ವೇದಿಕೆಯಮೇಲಿದೆ. ಆದರೆ ಇವತ್ತಿನ ಸಾಮಾಜಿಕ, ಆರ್ಥಿಕ, ರಾಜಕೀಯ ಸಾಂಸ್ಕೃತಿಕ ಸನ್ನಿವೇಶದಲ್ಲಿ ಸಮುದಾಯ ಮೊದಲಿಗಿಂತಲೂ ಹೆಚ್ಚಾಗಿ ತನ್ನ ಜವಾಭ್ದಾರಿಯನ್ನು ನಿರ್ವಹಿಸಬೇಕಿದೆ ಎಂಬುದು ಸತ್ಯ. ಅದನ್ನು ಸಮುದಾಯ ಪ್ರಯತ್ನಿಸುತ್ತಿದ್ದು. ಇನ್ನು ತೀರ್ವ ವ್ಯಾಪಕತೆಯನ್ನು ಪಡೆದುಕೊಳ್ಳಲಿ ಎಂದು ನಾವು ನೀವೆಲ್ಲ ಆಶಿಸೋಣ. ಸಮುದಾಯ ಎಂದೆಂದಿಗೂ ‘ಸಮುದಾಯದೊಂದಿಗೆ”ಸಮುದಾಯದವರದ್ದೇ ಆಗಿರಲಿ.

  3. D.RAVI VARMA

    ಬೀದಿ ನಾಟಕ ಎಂದರೆ ನನ್ನ ಮೈ ಕೂದಲು ಈಗಲೂ ನೆಟ್ಟಗೆ ನಿಲ್ಲುತ್ತವೆ, ಹಿಂದೆ ಸಮುದಾಯ ,ಬಂಡಾಯ, ಸಂಘಟನೆಗಳು ಆಡುತ್ತಿದ್ದ ಬೀದಿನಾಟಕಗಳು ಬೆಲ್ಚಿ, ಪತ್ರೆಸಂಗಪ್ಪನ ಕೊಲೆ, ನರಗುಂದ ರೈತರ ಭಂಡಾಯ,ಜಾತ್ರೆ, ಸಪ್ದರ್ ಹಸ್ಮಿ, ಹೀಗೆ,ಹೀಗೆ, ಇನ್ನು ಹಲವು ನಾಟಕಗಳನ್ನು, ಆಯಾ ಕ್ಷಣದಲ್ಲೇ ರಚಿಸಿ,ಹಾಡು ಸಿದ್ದಪಡಿಸಿ, ರಾಜ್ಯಾದಂತ ಅದರ ಘಟಕಗಳಲ್ಲಿ ಪ್ರದರ್ಶನ ನನಗಿನ್ನೂ ನೆನಪಿದೆ, ಆಗ ಆ ಚಳುವಳಿ ತೊಡಗಿದ್ದ ಜನರೆಲ್ಲರೂ ಅದೆಲ್ಲಿ ಮಾಯವಾದರೋ ,ಅದು ಹೇಗೆ ಒಂದು ಬೃಹತ್ ಚಳುವಳಿ, ಹತಾತನೆ ಸ್ತಬ್ದ ವಾಯಿತೋ ನನಗೆ ವಿಸ್ಮಯವೆನಿಸುತ್ತಿದೆ. ಆಗೊಮ್ಮೆ ಹೀಗೊಮ್ಮೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆ ಹಳೆ ಹಾಡು ಕೆಳುತ್ತ್ತಿದ್ದೇವೆ ಅಸ್ತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading