ಬಿ ಎಂ ಬಷೀರ್
—
ಅವರು ಬದಲಾಯಿಸಲು ಬಂದರು …
ಮತ್ತು ಅವರು ಬದಲಾಯಿಸಿದರು
ಊರಿನ ಹೆಸರುಗಳನ್ನು
ತಿನ್ನುವ ಆಹಾರಗಳನ್ನು
ಪ್ರೀತಿಸುವ ಮನಸುಗಳನ್ನು
ಬದಲಾಯಿಸಿಯೇ ಬಿಟ್ಟರು
ಮನುಷ್ಯರಿಗಾಗಿ ಮಿಡಿವವರನ್ನು
ನಕ್ಸಲರಾಗಿ
ತಾಯಿ ನೆಲವ ಪ್ರೀತಿಸಿದವರನ್ನು
ದೇಶದ್ರೋಹಿಗಳಾಗಿ
ದಲಿತರ ಜೊತೆಗಿದ್ದವರನ್ನು
ಕೈದಿಗಳಾಗಿ
ರೈತರನ್ನು ಖಾಲಿಸ್ತಾನಿಗಳಾಗಿ ….
ಬದಲಾಯಿಸಿದರು !
ಸರಕಾರೀ ಶಾಲೆಗಳನ್ನು
ಗೋ ಶಾಲೆಗಳಾಗಿ
ಬೀದಿ ಗೂಂಡಾಗಳನ್ನು
ಸಂಸ್ಕೃತಿ ರಕ್ಷಕರಾಗಿ
ವಿದ್ವೇಷ ಕಾರುವವರನ್ನು
ಸಾಧ್ವಿ-ಯೋಗಿಗಳಾಗಿ
ಬದಲಾಯಿಸಿದರು !
ಪೋಲೀಸರ ಲಾಠಿಗಳನ್ನು
ಆರೆಸ್ಸೆಸ್ ದಂಡಗಳಾಗಿ
ನ್ಯಾಯದ ತಕ್ಕಡಿಯನ್ನು
ಅಂಬಾನಿಯ ಊಳಿಗವಾಗಿ
ರೈತರ ಗದ್ದೆಗಳನ್ನು
ಅದಾನಿಯ ನೋಟುಗಳಾಗಿ
ಅವರು ಬದಲಾಯಿಸಿದರು !
ದಲಿತರ ಮಾನವನ್ನು
ಬಲಿತವರ ತೊತ್ತಾಗಿ
ಹೆಣ್ಣಿನ ಕಣ್ಣುಗಳನ್ನು
ರಕ್ತದ ಕೊಳವಾಗಿ
ಬಡವರ ಹಸಿವನ್ನು
ಧಗಿಸುವ ಕುಲುಮೆಯಾಗಿ
ಅವರು ಬದಲಾಯಿಸಿದರು !
ಹೌದು,
ವಿಶ್ವ ನೋಡುತ್ತಿದೆ
ಬದಲಾದ ಭಾರತವನ್ನು
ದಿಗ್ಬ್ರಾಂತಿಯಿಂದ !
0 ಪ್ರತಿಕ್ರಿಯೆಗಳು