ಕೆಲ ಚಿತ್ರಗಳು ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿಕೊಂಡು ಆ ನಂತರ ಹಾಡುಗಳು ಮತ್ತು ಟ್ರೈಲರ್ ಗಳ ಮೂಲಕವೇ ಸೌಂಡ್ ಮಾಡುವುದಿದೆ. ಅಂಥಾ ವಿರಳ ಚಿತ್ರಗಳ ಸಾಲಿಗೆ ಹೊಸಾ ಸೇರ್ಪಡೆ ‘ಅವಧಿ’!
ಮನುಷ್ಯ ಜನ್ಮ ಅಂದ ಮೇಲೆ ಹಲವಾರು ಊಹಿಸಲಾರದ ತಿರುವುಗಳು ಕಾದು ಕೂತಿರುತ್ತವೆ. ಅಂಥಾದ್ದನ್ನು ತಪ್ಪಿಸಿಕೊಂಡು ಪಾರಾಗಲು ಹೇಗೆಲ್ಲಾ ಪ್ರಯತ್ನ ಪಡಲಾಗುತ್ತದೆ ಎಂಬುದನ್ನು ರಸವತ್ತಾಗಿ ಬಿಚ್ಚಿಡುವ ಚಿತ್ರ ಅವಧಿ. ಅಂದ ಹಾಗೆ ಇದು ಕನ್ನಡದಲ್ಲಿ ಈವರೆಗೂ ಬಾರದಿರುವ ಕಾನ್ಸೆಪ್ಟ್ ಹಿನ್ನೆಲೆಯ ಪಕ್ಕಾ ಥ್ರಿಲ್ಲರ್ ಚಿತ್ರ ಎಂಬುದು ಚಿತ್ರ ತಂಡದ ಅಫಿಡವಿಟ್.
ತೆಲುಗಿನಲ್ಲಿ ಈಗಾಗಲೇ ಎರಡು ಸಿನಿಮಾಗಳನ್ನು ನಿರ್ದೇಶಿಸಿ ಅನುಭವ ಪಡೆದುಕೊಂಡಿರುವ ಸಾಯಿಕಿರಣ್ ಮಕಮಲ ಅವಧಿ ಚಿತ್ರದ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತು ಸಮರ್ಥವಾಗಿ ನಿಭಾಯಿಸಿರುವ ಖುಷಿಯಲ್ಲಿದ್ದಾರೆ. ಕನ್ನಡದ ಪ್ರೇಕ್ಷಕರು ಹೊಸಾ ಬಗೆಯ ಕಥೆಯನ್ನು ಇಷ್ಟಪಡುತ್ತಾರೆಂಬ ಅಭಿಮಾನದಿಂದ ಈ ಚಿತ್ರ ಮಾಡಿರುವುದಾಗಿ ಹೇಳಿಕೊಂಡಿರುವ ನಿರ್ದೇಶಕರು ಅಂಥಾದ್ದೊಂದು ಕುತೂಹಲಕಾರಿ ಸಿನಿಮಾ ಮಾಡಿ ಮುಗಿಸಿರೋ ತೃಪ್ತಿ ಹೊಂದಿದ್ದಾರೆ.
ಅಂತೂ ಚಿತ್ರ ತಂಡ ಇದೀಗ ಖುಷಿಯಲ್ಲಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಹಾಡುಗಳು ಸೂಪರ್ ಹಿಟ್ ಆಗಿ ಭರ್ಜರಿ ಸೇಲ್ ಆಗಿರೋದು ಈ ಖುಷಿಗೆ ಕಾರಣ. ವೃತ್ತಿಯಲ್ಲಿ ಡಾಕ್ಟರ್ ಆಗಿರುವ ರಂಜಿತ್ ಈ ಚಿತ್ರದ ನಾಯಕ. ಅರ್ಚನಾ ನಾಯಕಿ. ರಂಜಿತ್ ಇಲ್ಲಿ ಕುಂಚ ಕಲಾವಿದನ ಪಾತ್ರ ಮಾಡಿದ್ದಾರೆ. ಈಗಾಗಲೇ ಬಿಡುಗಡೆಗೊಂದಿರುವ ಆರು ಹಾಡುಗಳಿಗೂ ಅರಸು ಅಂತಾರೆ ಸಾಹಿತ್ಯ ಒದಗಿಸಿದ್ದಾರೆ. ಬಾಬು ವರ್ಗೀಸ್ ಸಂಗೀತ ಸಂಯೋಜನೆ ಮಾಡಿರುವ ಹಾಡುಗಳು ಈಗಾಗಲೇ ಜನಪ್ರಿಯತೆ ಪಡೆದುಕೊಂಡಿವೆ. ಈ ವಾರ ಅವಧಿ ತೆರೆಕಾಣಲಿದೆ.
0 ಪ್ರತಿಕ್ರಿಯೆಗಳು