ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಜಿ ವಾಮದೇವಯ್ಯ ಕಂಡಂತೆ ‘ಬಾಲಕ ಮತ್ತು ಕಾರಂತಜ್ಜ’

ಎಂ ಜಿ ವಾಮದೇವಯ್ಯ

“ಸು” ಕಾದಂಬರಿ ಮುದ್ರಣಕ್ಕೆ ಹೋಗುವ ಮುನ್ನ ಕೊನೆಯ ಹಸ್ತಪ್ರತಿ ನಮ್ಮ ಕಾಲೇಜಿನ ನನ್ನ ಕಚೇರಿಯ ಟೇಬಲ್ಲಿನ ಮೇಲೆ ಇತ್ತು. ನಮ್ಮ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ನನ್ನ ಸಹೋದ್ಯೋಗಿ ಡಾ. ರವಿ ಶಂಕರ್ ಅವರು ಯಾವೊದೋ ಸಂಶೋಧನ ವಿಷಯ ಕುರಿತು ಮಾತನಾಡಲು ನನ್ನ ಕಚೇರಿಗೆ ಬಂದವರು ಸು ಕಾದಂಬರಿಯ ಹಸ್ತಪ್ರತಿ ನೋಡಿ ಏನು ಸರ್? ಇದು ಅಂದರು.

ಇದು ನಾನು ಬರೆದ ಕಾದಂಬರಿಯ ಹಸ್ತಪ್ರತಿ, ಸದ್ಯದಲ್ಲಿಯೇ ಮುದ್ರಣಕ್ಕೆ ಹೋಗುತಿದೆ ಎಂದು ಹೇಳಿದೆ. ಅವರು ತಕ್ಷಣವೇ ನಮ್ಮ ತಂದೆಯವರು ಕತೆ, ಕಾದಂಬರಿ, ಆತ್ಮಕತೆ ಎಲ್ಲವನ್ನೂ ತುಂಬಾ ಆಸಕ್ತಿಯಿಂದ ಓದುತ್ತಾರೆ. ಇದನ್ನ ಅವರಿಗೆ ಕೊಡಲ ಸರ್? ಅಂದರು. ತಕ್ಷಣವೇ ನಾನು ಅಯ್ಯೋ, ನಾವು ಕತೆ, ಕಾದಂಬರಿ, ಕವಿತೆ ಎಲ್ಲವನ್ನೂ ಬರೆಯುವುದು ಓದುಗರಿಗೋಸ್ಕರವೇ ಅಲ್ಲವೇ, ಅದಕ್ಕೇನು ನಿಮ್ಮ ತಂದೆಯವರಿಗೆ ಕೊಡಿ ಎಂದು ತಿಳಿಸಿದೆ. ಅವರು ಅದನ್ನು ತೆಗೆದುಕೊಂಡು ಹೋಗಿ ತಮ್ಮ ತಂದೆಯವರಿಗೆ ನೀಡಿದರು. ಈ ರೀತಿ ಸು ಕಾದಂಬರಿ ಮುದ್ರಣವಾದಾಗ ರವಿ ಶಂಕರ್ ಅವರ ತಂದೆ ಹಿರಿಯರಾದ ಎಂ. ಜಿ. ವಾಮದೇವಯ್ಯನವರು ಸು ಕಾದಂಬರಿ ಓದಿ ಮೆಚ್ಚಿಕೊಂಡು ಮೊದಲ ಪ್ರತಿಕ್ರಿಯೆ ಬರೆದರು. ಜೊತೆಗೆ ತಾವೂ ಓದುವುದಲ್ಲದೆ ತಮ್ಮ ಹಲವು ಪರಿಚಿತರಿಗೂ ಓದಲು ಹೇಳಿದರು.

ಈಗ ಕಾಲದ ಸಂಯೋಗವೋ ಅಥವಾ ಕಾಕತಾಳೀಯವೋ ನನ್ನ “ಬಾಲಕ ಮತ್ತು ಕಾರಂತಜ್ಜ” ಕಥಾಸಂಕಲನವನ್ನು ಕೂಡ ಓದಿ ಮೊದಲು ಪ್ರತಿಕ್ರಿಯಿಸಿರುವವರು ಅವರೇ ಆಗಿದ್ದಾರೆ. ಇಂತಹ ಸಹೃದಯ ಓದುಗರು ಸಿಕ್ಕಿರುವುದು ನನ್ನ ಭಾಗ್ಯವೇ ಸರಿ. ಇಂತಹ ಚಿಕ್ಕ ಚಿಕ್ಕ ಪ್ರೋತ್ಸಾಹಗಳೇ ಕೃತಿಯನ್ನ ಎತ್ತರಕ್ಕೆ ತೆಗೆದುಕೊಂಡು ಹೋಗುವುದು.

ಅದಕ್ಕಾಗಿ ಅವರಿಗೆ ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದಗಳು.

“ಬಾಲಕ ಮತ್ತು ಕಾರಂತಜ್ಜ” ಕಥಾಸಂಕಲನ

ಲೇಖಕರು ಡಾ ಪ್ರಸನ್ನ ಸಂತೇಕಡೂರು ಅವರು ಈ ಪುಸ್ತಕದಲ್ಲಿ ೮ ಕಥೆಗಳನ್ನು ಹೇಳಿದ್ದಾರೆ. ಅದರಲ್ಲಿ ನನಗೆ ಎಲ್ಲಾ ಕಥೆಗಳೂ ಇಷ್ಟವಾದವು. ಆದರೂ ಅದರಲ್ಲಿ ನನಗೆ ಮುದ ನೀಡಿದ ಕಥೆ “ಬಾಲಕ ಮತ್ತು ಕಾರಂತಜ್ಜ” ಶೀರ್ಷಿಕೆ ಹೆಸರಿನ ಕಥೆ. ಹಳ್ಳಿಗಾಡಿನಲ್ಲಿ ಬೆಳೆದ ಬಾಲಕನೊಬ್ಬ ೭ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ. ಅವನು ಶಾಲೆಯಲ್ಲಿ ನಡೆಯಲಿರುವ ವಾರ್ಷಿಕೋತ್ಸವಕ್ಕೆ ಶ್ರೀ ಶಿವರಾಮ ಕಾರಂತರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ ಎಂದು ಶಿಕ್ಷಕಿಯವರಿಂದ ತಿಳಿಯುತ್ತಾನೆ. ಕಾರಂತಜ್ಜರ ಅಭಿಮಾನಿಯಾದ ಈ ಬಾಲಕ ಅವರು ಬಂದಾಗ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು. ಅವರಿಂದ ಸಮಂಜಸ ಉತ್ತರಗಳನ್ನು ಪಡೆಯಬೇಕು. ಅವರೊಡನೆ. ಮಾತನಾಡಬೇಕು ಮತ್ತು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂದು ಇಚ್ಛಿಸುತ್ತಾನೆ.. ಹಾಗೇಯೇ ಕಾರಂತಜ್ಜನೊಂದಿಗೆ ಪ್ರಶ್ನೆಗಳನ್ನು ಕೇಳುತ್ತಾನೆ.

ಅವರನ್ನ ಆಶ್ಚರ್ಯಗೊಳಿಸುತ್ತಾನೆ ಮತ್ತು ಸಂತೋಷಪಡಿಸುತ್ತಾನೆ. ಆ ಮುಗ್ಧ ಬಾಲಕನ ಪ್ರಶ್ನೆ “ಬಿಗ್ ಬ್ಯಾಂಗ್” ಎಂದರೇನು? ಎನ್ನುವುದಾಗಿರುತ್ತದೆ. ಇದು ಸೃಷ್ಠಿಯ ಪ್ರಾರಂಭದಲ್ಲಿ ನಭೋಮಂಡಲದಿಂದ ಹೊರಹೊಮ್ಮಿದ ಒಂದು ಬೃಹತ್ ಶಬ್ಧವಾಗಿದೆ. ಈ ಪ್ರಶ್ನೆಯಿಂದ ಪ್ರಭಾವಿತರಾದ ಕಾರಂತಜ್ಜ ಕಾರ್ಯಕ್ರಮದ ನಂತರ ಆ ಬಾಲಕನನ್ನು ಭೇಟಿ ಮಾಡಿ ಮಾತನಾಡಬೇಕೆಂದು ಬಯಸುತ್ತಾರೆ. ಆದರೆ ಸಮಯದ ಕೊರತೆಯಿಂದ ಕಾರಂತಜ್ಜರನ್ನು ಭೇಟಿಯಾಗಲು ಅವಕಾಶ ಸಿಗದೆ ಆ ಬಾಲಕ ಹಳ್ಳಿಗೆ ಹಿಂತಿರುಗಿದನೆಂದು ತಿಳಿದುಬರುತ್ತದೆ. ಆ ಹುಡುಗನ ಶಾಲೆಯ ವಿಳಾಸಕ್ಕೆ ಒಂದು ಪತ್ರ ಬರೆದು ಕಾರಂತಜ್ಜರು ಚೆನ್ನಾಗಿ ಓದುವಂತೆ ತಿಳಿಹೇಳಿ, ಕೆಲವು ಪುಸ್ತಕಗಳನ್ನು ಓದಲೆಂದು ಕಳುಹಿಸಿಕೊಡುತ್ತಾರೆ. ಇದರಿಂದ ಹುಡುಗನಿಗೆ ಸಂತೋಷವಾಗಿ, ಆತ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೇರೇಪಿತನಾಗುತ್ತಾನೆ.

ಅಂತೇಯೇ ಆ ಹುಡುಗನು ಇಂಜಿನಿಯರಿಂಗ್ ಓದಿ ಅಮೇರಿಕಾದಲ್ಲಿ ಹೆಸರಾಂತ ಕಂಪನಿಯಲ್ಲಿ ಕೆಲಸಮಾಡಿ ಸಮಾಜದಲ್ಲಿ ಗೌರವ ಸ್ಥಾನ ಸಂಪಾದಿಸಿ, ಭಾರತಕ್ಕೆ ಹಿಂತಿರುಗಿ ಬಂದು ಒಳ್ಳೆಯ ಜೀವನ ನಡೆಸುತ್ತಾನೆ. ಒಳ್ಳೆಯ ಸಾಹಿತ್ಯ, ಸಾಹಿತಿಗಳು, ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೇಗೆ ಹಾದಿಮಾಡಿ ಕೊಡುತ್ತದೆ ಎಂಬುದನ್ನು ಅರ್ಥವತ್ತಾಗಿ ಕಟ್ಟಿಕೊಟ್ಟಿದ್ದಾರೆ ಎಂದು ನನ್ನ ಅನಿಸಿಕೆ. ಈ ರೀತಿಯ ಎಳೆಯ ಮನಸ್ಸುಗಳನ್ನು ಅರಳಿಸುವಂಥ ಸಾಹಿತ್ಯ ಇವರಿಂದ ಇನ್ನೂ ಹೆಚ್ಚು ಹೆಚ್ಚಾಗಿ ಬರಲಿ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗುತ್ತಾ ಹೋಗಲಿ ಎಂದು ನನ್ನ ಹಾರೈಕೆ.

ನಾನು ಸಾಹಿತಿಯೂ ಅಲ್ಲ, ವಿಮರ್ಶಕನೂ ಅಲ್ಲ. ಕೇವಲ ಜನಸಾಮಾನ್ಯ.

‍ಲೇಖಕರು Admin

17 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading