ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರಲಿದೆ ತೇಜಸ್ವಿ ಕಟ್ಟೀಮನಿ ಕಥನ…

ಹಿರಿಯ ಸಾಹಿತಿ, ಆದಿವಾಸಿ ಬುಡಕ್ಟ್ಟು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿದ್ದ ಧಾರವಾಡ ಮೂಲದ ತೇಜಸ್ವಿ ಕಟ್ಟಿಮನಿ ಅವರ ಆತ್ಮಕಥನ ಇದು.

ಮನೋಹರ ಗ್ರಂಥ ಮಾಲೆ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಸಿದ್ದಲಿಂಗಯ್ಯನವರು ಬರೆದ ಬೆನ್ನುಡಿ ಇಲ್ಲಿದೆ-

ಪ್ರೊ. ತೇಜಸ್ವಿ ಕಟ್ಟೀಮನಿಯವರ ‘ಜಂಗ್ಲಿ ಕುಲಪತಿಯ ಜಂಗೀಕತೆ’ ಆತ್ಮಕಥನ ಸಾಮಾಜಿಕ ಸಂಕಥನವೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಕಟ್ಟುವಾಗ ಕೆಳಸಮುದಾಯದಿಂದ ಬಂದ ಶಿಕ್ಷಣ ಆಡಳಿತಾಧಿಕಾರಿಗಳು ಎದುರಿಸುವ ಸವಾಲುಗಳ, ಕ್ಷಣ ಕ್ಷಣಕ್ಕೂ ಅವರು ಸ್ವೀಕರಿಸಬೇಕಾಗಿ ಬರುವ ಪಂಥಾಹ್ವಾನಗಳ ಹಾಗೂ ಕಷ್ಟ- ಕಾರ್ಪಣ್ಯಗಳ ಕಥೆಯೂ ಆಗಿದೆ.

ಆದಿವಾಸಿ ಜನರು ಎದುರಿಸುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ನೈತಿಕ ಸವಾಲುಗಳ, ಸಮಸ್ಯೆಗಳ ಸ್ವರೂಪ ಬಹಳ ಭಿನ್ನವಾಗಿರುತ್ತದೆ. ಆದಿವಾಸಿಯೊಬ್ಬ ಆದಿವಾಸಿ ವಿಶ್ವವಿದ್ಯಾಲಯ ಕಟ್ಟುವ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳೂ ಅಷ್ಟೇ ವಿಭಿನ್ನವೂ, ಜಟಿಲವೂ, ಸಂಕೀರ್ಣವೂ ಆಗಿರುತ್ತವೆ. ಇಂಥ ಅನೇಕ ಜಟಿಲ ಸಂಕೀರ್ಣ ಅನುಭವಗಳು ಇಲ್ಲಿ ಸಂಕಥನದ ಶೈಲಿಯಲ್ಲಿ, ನೇರ ಭಾಷೆಯಲ್ಲಿ ವ್ಯಕ್ತಗೊಂಡಿವೆ.

ಇವು ಕಲ್ಪಿತ ಕಥೆಗಳಲ್ಲ, ವೈಭವೀಕರಣಗೊಂಡ, ರೋಮ್ಯಾಂಟೀಕರಣಗೊಂಡ ಅನುಭವಗಳೂ ಅಲ್ಲ. ಕಟ್ಟೀಮನಿಯವರು ಅನುಭವಿಸಿದ ಘಟನೆಗಳು, ಸಂದರ್ಭಗಳು ಇಲ್ಲಿ ಕಲಾತ್ಮಕತೆಯ ಸ್ಪರ್ಶದಿಂದ ಮರುಹುಟ್ಟು ಪಡೆದಿವೆ. ಈ ದೇಶದ ಜ್ವಲಂತ ಸಮಸ್ಯೆಗಳನ್ನು ತಟಸ್ಥವಾಗಿ ನೋಡಿ, ಅವುಗಳನ್ನು ಸಮರ್ಥವಾಗಿ ಎದುರಿಸಿ, ಅವುಗಳಿಗೆ ಸೃಜನಶೀಲತೆಯ ಸ್ಪರ್ಶ ನೀಡಿದ್ದರಿಂದ ಕಟ್ಟೀಮನಿಯವರ ಆತ್ಮಕತೆ ವಿಶಿಷ್ಟವಾಗಿ ಮೂಡಿಬರಲು ಸಾಧ್ಯವಾಗಿದೆ.

ಪ್ಯಾಯಮಾನವಾದ ಶೈಲಿ, ರೂಪಾತ್ಮಕತೆ ಬಿಟ್ಟು ಕೊಡದ, ನೇರವಾದ ಭಾಷೆ, ಮನೋಜ್ಞ ನಿರೂಪಣೆ, ಎದೆಗೆ ಭಾರವಾಗದ ಹಾಗೆ ಅಂತರಂಗ ತಟ್ಟುವ, ತಲೆಗೆ ಭಾರವಾಗದ ಹಾಗೆ ಬುದ್ಧಿಗೆ ಸವಾಲು ಹಾಕುವ, ನಮ್ಮ ನೈತಿಕ ಪ್ರಜ್ಞೆ ಎಚ್ಚರಿಸುವ, ವಿವೇಕದ ಕಣ್ಣು ತೆರೆಯಿಸುವ ‘ಜಂಗೀಕತೆ’ ಭಾರತೀಯ ಆತ್ಮಕತೆಗಳಲ್ಲಿ  ವಿಭಿನ್ನ ದಾರಿ ತುಳಿದಿದೆ ಮತ್ತು ಓದುಗರ ಮನಸ್ಸಿನಲ್ಲಿ ವಿಷಾದದ, ನವಿರಾದ ಮತ್ತು ಭರವಸೆಯ ಭಾವನೆಗಳನ್ನು ಹುಟ್ಟಿಸುತ್ತದೆ.

ಡಾ. ಸಿದ್ಧಲಿಂಗಯ್ಯ
ಹಿರಿಯ ಕವಿಗಳು

‍ಲೇಖಕರು Avadhi

8 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading