ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬನ್ನಿ ‘ನಾಟಕ ಬೆಂಗ್ಳೂರು’ ನಿಮ್ಮದು

ಆಧುನಿಕ ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಹವ್ಯಾಸಿ ರಂಗತಂಡಗಳ ಪಾತ್ರ ಬಹಳ ಹಿರಿದು. 60 ರ ದಶಕದಿಂದ ಆರಂಭವಾದ ಹವ್ಯಾಸಿ ರಂಗ ಚಳವಳಿಗೆ ಬೆಂಗಳೂರಿನ ಹವ್ಯಾಸಿ ರಂಗತಂಡಗಳು ಅಪಾರ ಕೊಡುಗೆ ನೀಡಿವೆ. ನಾಟಕಗಳ ಆಯ್ಕೆ, ಸಿದ್ಧತೆ, ಪ್ರದರ್ಶನ, ಪೂರಕ ತಾಂತ್ರಿಕತೆ ಎಲ್ಲವುಗಳಲ್ಲೂ ವೃತ್ತಿ ಪರತೆಯನ್ನು ಮೈಗೂಡಿಸಿಕೊಂಡು ಹೊಸಹೊಸ ಪ್ರಯೋಗಗಳಿಗೆ ನಿರಂತರವಾಗಿ ತೆರೆದುಕೊಳ್ಳುವ ಬೆಂಗಳೂರಿನ ರಂಗ ತಂಡಗಳು, ಒಟ್ಟು ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿವೆ.

ಪ್ರಯೋಗಶೀಲತೆಯ ಜೊತೆಗೆ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಹವ್ಯಾಸಿ ರಂಗತಂಡಗಳ ಶ್ರಮ ಗಮನಾರ್ಹ. ಕನ್ನಡ ರಂಗಭೂಮಿ ಎಂದೂ ನಿಂತ ನೀರಾಗದಂತೆ ಹೊಸ ನಾಟಕಗಳು, ರಂಗತಂಡಗಳು, ನಟರು, ತಂತ್ರಜ್ಞರು, ನಿರ್ದೇಶಕರು, ಕಾಲಕಾಲಕ್ಕೆ ರೂಪುಗೊಳ್ಳುತ್ತಾ, ಹಿಂದಣ ಅನಂತಗಳನ್ನು ಮುಂದಣ ಅನಂತಗಳನ್ನು ವರ್ತಮಾನದಲ್ಲಿ ಸಾಕ್ಷಾತ್ಕರಿಸುವ ನಿಟ್ಟಿನಲ್ಲಿ ನಿರಂತರ ಪ್ರಯೋಗಶೀಲತೆಯಲ್ಲಿ ತೊಡಗಿಕೊಂಡಿರುವುದು, ಭಾರತೀಯ ರಂಗಭೂಮಿ ಸಂದರ್ಭದ ವಿಶಿಷ್ಟ ದಾಖಲೆಯಾಗಿದೆ.

ಹಾಗಾಗಿ ನಾಟಕ ಬೆಂಗ್ಳೂರು – ರಂಗಭೂಮಿ ಸಂಭ್ರಮ ಕಳೆದ ಮೂರು ವರ್ಷಗಳಿಂದ ಪ್ರಾರಂಭವಾದ ಒಂದು ವಿಭಿನ್ನವಾದ, ಬಹು ಮುಖ್ಯವಾದ ಒಂದು ರಂಗ ಚಳವಳಿ. ಹೊಸ ಪ್ರಯೋಗಗಳೊಟ್ಟಿಗೆ, ಹೊಸ ಪ್ರೇಕ್ಷಕರನ್ನು ಒಳಗೊಳ್ಳುವ, ಇಂದಿನ ತುರ್ತಿಗೆ ಸ್ಪಂದಿಸುವ ನಾಟಕೋತ್ಸವವಾಗಿ ರೂಪುಗೊಳ್ಳುತ್ತಾ ಯಶಸ್ವಿಯಾಗಿ ಸಾಗುತ್ತಿದೆ.

2008ರಲ್ಲಿ ರವೀಂದ್ರ ಕಲಾಕ್ಷೇತ್ರ ಕ್ಯಾಂಟೀನ್ ಬಳಿ, ಸಂಜೆಗತ್ತಲಲ್ಲಿ ಒಂದಷ್ಟು ರಂಗಗೆಳೆಯರ ಹರಟೆಯ ನಡುವೆ ಮೊಳೆತ ನಾಟಕ ಬೆಂಗ್ಳೂರು – ನಾಟಕೋತ್ಸವದ ಚಿಂತನೆ, ಇಂದು ಕನ್ನಡ ರಂಗಭೂಮಿಗೊಂದು ಪ್ರೇರಕ ಶಕ್ತಿಯಾಗಿದೆ. ಹಳತು – ಹೊಸತಾದ ರಂಗತಂಡಗಳು ಕಲೆತು, ಸಹಕಾರಿ ತತ್ವದ ಆಧಾರದಲ್ಲಿ ವರ್ಷಕ್ಕೊಂದು ಹೊಸ ಪ್ರಯೋಗ ನೀಡುವ, ವರ್ಷವಿಡೀ ನಾಟಕ ಪ್ರದರ್ಶನ ನೀಡುವ, ಬಡಾವಣೆಗಳತ್ತ – ರಂಗಪಯಣ ಬೆಳೆಸಿ, ಪ್ರೇಕ್ಷಕರ ಬಳಿಗೆ ನಾಟಕಗಳು ಹೋಗಬೇಕೆನ್ನುವ ಆಶಯ ಹೊತ್ತು ಈ ಉತ್ಸವ ಪ್ರಾರಂಭಗೊಂಡಾಗ, ಒಟ್ಟಾಗಿ ಕಲೆತಿದ್ದು 17 ರಂಗತಂಡಗಳು. 2009ರ ರಂಗೋತ್ಸವದಲ್ಲಿ ಪ್ರದರ್ಶಿತವಾಗಿದ್ದು 15 ನಾಟಕಗಳು, 2010ರಲ್ಲಿ 20 ರಂಗತಂಡಗಳು ಈ ಉತ್ಸವದ ಯಶಸ್ಸಿಗೆ ಮನಬೆಸಿದಿವೆ.

ರವೀಂದ್ರ ಕಲಾಕ್ಷೇತ್ರದಲ್ಲಿ, ನಂತರ ರಂಗಶಂಕರ ಆಮೇಲೆ ಎಡಿಎ ಎಂಗಮಂದಿರ, ಗುರನಾನಕ ಭವನ, ಸೇವಾಸದನ ಹೀಗೆ ನಮ್ಮ ರಂಗ ಪಯಣ ಮುಂದುವರಿಯುತ್ತದೆ. ಅಪರಿಮಿತ ಆಸಕ್ತಿ, ಉತ್ತಮ ನಾಟಕಗಳನ್ನಾಡಬೇಕೆಂಬ ಬದ್ದತೆ, ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಬೇಕೆಂಬ ಅದಮ್ಯ ಬಯಕೆ, ನಮ್ಮ ಉತ್ಸಾಹಿರಂಗತಂಡಗಳದ್ದು.

ನಾಟಕ ಬೆಂಗ್ಳೂರು – 2010ರ ರಂಗಭೂಮಿ ಸಂಭ್ರಮದ ಮೊದಲ ಕಂತು:-

ಇದೇ ನವೆಂಬರ್ 25ರಿಂದ ಡಿ. 4 ರವರೆಗೆ,

ಎರಡನೆಯ ಕಂತು

ಡಿಸೆಂಬರ್ 29ರಿಂದ 2011ರ ಜನವರಿ 11 ರವರೆಗೆ

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಮುಂದುವರಿಕೆಯಾಗಿ 2011 ರ ಜನವರಿ-ಫೆಬ್ರವರಿ ತಿಂಗಳಿನಲ್ಲಿ ರಂಗಶಂಕರದಲ್ಲಿ ನಡೆಯಲಿದೆ.

‍ಲೇಖಕರು avadhi

23 November, 2010

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading