ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ಉಳ್ಳವರು ಶಿವಾಲಯವ ಮಾಡುವರು..

’ಆ ರೈತ ತನ್ನ ದೇವರನ್ನು ಯಾವ ಕಲ್ಲಿನಲ್ಲಾದರೂ ಭಾವಿಸಿಕೊಳ್ಳಬಲ್ಲ ಮತ್ತು ಅದು ಸಾರ್ವಜನಿಕಗೊಳ್ಳುತ್ತಿದ್ದಂತೆ ಅದರಿಂದ ಹೊರಗೆ ಬಂದು ಹೊಸ ದನ್ನು ಕಟ್ಟಿಕೊಳ್ಳಬಲ್ಲ’

– ಎಸ್ ಸಿ ದಿನೇಶ್ ಕುಮಾರ್

ಬಿ.ವಿ.ಕಾರಂತರ ಆತ್ಮಕಥನದಲ್ಲಿ ಉಲ್ಲೇಖವಾಗಿರುವ ಘಟನೆಯೊಂದನ್ನು ಹಿರಿಯ ಮಿತ್ರರಾದ Prasad Raxidi ನೆನಪಿಸಿದರು. ಕಾರಂತರು ಮಧ್ಯಪ್ರದೇಶಕ್ಕೆ ಹೋಗಿದ್ದಾಗ ಬುಡಕಟ್ಟು ರೈತನೊಬ್ಬ ಕಲ್ಲೊಂದನ್ನು ತಂದು ಮನೆಯಲ್ಲಿಟ್ಟು ಸುಂದರವಾಗಿ ಅಲಂಕಾರ ಮಾಡಿ ಪೂಜಿಸುವುದನ್ನು ನೋಡುತ್ತಾರೆ. ಅದರ ಫೊಟೋ ಒಂದನ್ನು ತೆಗೆದುಕೊಳ್ಳುವ ಮನಸಾಗುತ್ತದೆ. ರೈತನ ಅನುಮತಿ ಕೋರುತ್ತಾರೆ. ಅದಕ್ಕೇನಂತೆ ತೆಗೆದುಕೊಳ್ಳಿ ಎನ್ನುತ್ತಾನೆ ರೈತ. ಕಾರಂತರು ಆ ಕಲ್ಲಿನ ಫೊಟೋ ತೆಗೆದುಕೊಳ್ಳುತ್ತಾರೆ. ಮರುಕ್ಷಣವೇ ರೈತ ಆ ಕಲ್ಲನ್ನು ಎತ್ತಿ ಹೊರಗೆ ಎಸೆಯುತ್ತಾನೆ. ಕಾರಂತರು ಗಾಬರಿಯಿಂದ ಅಲ್ಲಯ್ಯಾ, ಯಾಕೆ ಕಲ್ಲನ್ನು ಎಸೆದೆ ಎಂದು ಪ್ರಶ್ನಿಸುತ್ತಾರೆ. ನೀವು ಫೊಟೋ ತೆಗೆದ ಮೇಲೆ ಕಲ್ಲು ಮಹತ್ವ ಕಳೆದುಕೊಂಡಿತು. ಅದಕ್ಕೆ ಎಸೆದೆ ಎನ್ನುತ್ತಾನೆ ರೈತ. ಹಾಗಿದ್ದರೆ ಮೊದಲೇ ಹೇಳಬಹುದಿತ್ತಲ್ಲ, ನಾನು ಫೊಟೋ ತೆಗೆಯುತ್ತಲೇ ಇರಲಿಲ್ಲ ಎನ್ನುತ್ತಾರೆ ಕಾರಂತರು. ಅಯ್ಯೋ, ಹೋಗಲಿ ಬಿಡಿ, ನಾನು ಇನ್ನೊಂದು ಕಲ್ಲು ತಂದಿಟ್ಟುಕೊಂಡು ಪೂಜೆ ಮಾಡುತ್ತೇನೆ ಎಂದು ನಿರ್ಭಾವುಕನಾಗಿ ನುಡಿಯುತ್ತಾನೆ ರೈತ. ಕಾರಂತರಿಗೆ ತಕ್ಷಣ ಹೊಳೆದಿದ್ದು, ಭಾರತೀಯ ದರ್ಶನವೆಂದರೆ ಇದೇ ಅಲ್ಲವೇ ಎಂದು. ಕಾರಂತರ ಈ ಅನುಭವ ಕೇಳಿದಾಗ ಥಟ್ಟನೆ ನೆನಪಾಗಿದ್ದು ಸ್ಥಾವರಕ್ಕಳಿವುಂಟು, ಜಂಗಮಕ್ಕಿಲ್ಲ ಎಂದು ಬಸವಾದಿ ಶರಣರು. ಹಾಗೆಯೇ ಆವಾಹಿಸಿಕೊಂಡಷ್ಟೇ ವೇಗವಾಗಿ ವಿಸರ್ಜಿಸಿಬಿಡಬೇಕು ಎಂಬ ಬೌದ್ಧಚಿಂತಕರು. ದೇವರು ಆ ರೈತನಿಗೆ ಅತ್ಯಂತ ಖಾಸಗಿ ವಿಷಯ. ಹಾಗಾಗಿಯೇ ಇನ್ಯಾರೋ ಫೊಟೋ ತೆಗೆದ ಕೂಡಲೇ ಅವನ ಕಲ್ಲುದೇವ ಜೀವ ಕಳೆದುಕೊಂಡುಬಿಡುತ್ತಾನೆ. ಸಾಮಾನ್ಯ ಜನರು ತಮಗೆ ಇಷ್ಟವಾಗಿದ್ದನ್ನು ದೇವರನ್ನಾಗಿಸಿಕೊಳ್ಳಬಲ್ಲರು,  ಅಷ್ಟೇ ಸುಲಭವಾಗಿ ಆ ದೇವರನ್ನು ವಿಸರ್ಜಿಸಬಲ್ಲರು. ಹೊಸ ದೇವರನ್ನು ಕಟ್ಟಿಕೊಳ್ಳಬಲ್ಲರು. ತಮ್ಮದೇ ಭಾವಜಗತ್ತಿನ ದೇವರೊಂದಿಗೆ ಸುಖವಾಗಿ ಬದುಕಬಲ್ಲರು. ಮಂದಿರ, ಮಸೀದಿ, ಚರ್ಚುಗಳು ಇನ್ನಷ್ಟು ಬೇರುಬಿಟ್ಟು, ಬಲಿಷ್ಠ ಗೋಡೆಗಳೊಂದಿಗೆ ಬೆಳೆದು, ಮಹಾಸ್ಥಾವರಗಳೇ ಆಗುತ್ತಿರುವಾಗ ಆ ಸಾಮಾನ್ಯ ರೈತನ ಧಾರ್ಮಿಕತೆ ನಮಗೆ ಮುಖ್ಯವಾಗಬೇಕಲ್ಲವೇ ?]]>

‍ಲೇಖಕರು G

3 September, 2012

1 Comment

  1. D.RAVI VARMA

    nice…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading