ದಿನೇಶ್ ಕುಮಾರ್
ಮಹಾತ್ಮ ಗಾಂಧಿಯವರಿಗೆ ಪ್ರಾದೇಶಿಕ ಭಾಷೆಗಳ ಮಹತ್ವ ಬಹಳ ಚೆನ್ನಾಗಿಯೇ ಗೊತ್ತಿತ್ತು. ಇವತ್ತು ನಮ್ಮ ಕಚೇರಿಗೆ ಬಂದಿದ್ದ ಹಿರಿಯ ಲೇಖಕ ವೇಮಗಲ್ ಸೋಮಶೇಖರ್ ಒಂದು ಸಾಕ್ಷಿಯನ್ನು ಒದಗಿಸಿದ್ದಾರೆ. ಇಲ್ಲಿರುವ ಕೈಬರೆಹದ ಪತ್ರ ಗಾಂಧೀಜಿಯವರದ್ದು.

ಬಳ್ಳಾರಿ ಪ್ರವಾಸದ ಸಂದರ್ಭದಲ್ಲಿ ತಮಗೆ ಓಡಾಡಲು ಕಾರನ್ನು ಒದಗಿಸಿದವರಿಗೆ ಅವರು ಬರೆದ ಪತ್ರವಿದು. ಈ ಪತ್ರದಲ್ಲಿ ಗಾಂಧೀಜಿಯವರು `ಗಾಂಧಿ’ ಎಂದು ಕನ್ನಡದಲ್ಲೂ ಸಹಿ ಮಾಡಿದ್ದಾರೆ. 1934ರ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಉತ್ತರ ಕರ್ನಾಟಕ ಪ್ರವಾಸ ಮಾಡುವಾಗ ಗಾಂಧೀಜಿಯವರು ಕನ್ನಡದಲ್ಲಿ ಸಹಿ ಮಾಡುವುದನ್ನು ಕಲಿತಿದ್ದರು. ಕೆಲವು ಮಾತುಗಳನ್ನೂ ಆಡುತ್ತಿದ್ದರು. ತಾವು ಸಂಗ್ರಹಿಸುತ್ತಿದ್ದ ಹರಿಜನ ನಿಧಿಗೆ ಹಣ ನೀಡಿದವರಿಗೆ ತಮ್ಮ ನೋಟ್ ಪುಸ್ತಕಗಳಲ್ಲಿ ಹಸ್ತಾಕ್ಷರವನ್ನು(ಆಟೋಗ್ರಾಫ್) ನೀಡುತ್ತಿದ್ದರು. ಆಗಲೂ ಸಹ ಅವರು ಗಾಂಧಿ ಎಂದು ಕನ್ನಡದಲ್ಲೇ ಬರೆದುಕೊಡುತ್ತಿದ್ದರು. ಇವತ್ತಿನ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜಕಾರಣಿಗಳೇ ಕನ್ನಡದಲ್ಲಿ ಸಹಿ ಮಾಡುವುದನ್ನು ಅಪಮಾನ ಎಂದು ಭಾವಿಸಿದ್ದಾರೆ. ಮನೆಯ ಮುಂದೆ ಇಂಗ್ಲಿಷು-ಹಿಂದಿಯ ಬೋರ್ಡು ತಗುಲಿಸಿಕೊಂಡಿರುತ್ತಾರೆ. ಗಾಂಧೀಜಿಯವರಿಗೆ ಭಾರತದ ಆತ್ಮವಿರುವುದೇ ಆದರ ಪ್ರಾದೇಶಿಕ ವೈವಿಧ್ಯತೆಯಲ್ಲಿ ಮತ್ತು ಹಲವು ಭಾಷೆಗಳ ಸಂಗಮದಲ್ಲಿ ಎನ್ನುವುದು ಅರಿವಾಗಿತ್ತು. ಗಾಂಧೀಜಿಯವರಿಗಿದ್ದ ದೂರದೃಷ್ಟಿ ಇವತ್ತಿನ ದಿಲ್ಲಿ ಕೇಂದ್ರಿತ-ಹಿಂದಿ ಕೇಂದ್ರಿತ ರಾಜಕೀಯ ವ್ಯವಸ್ಥೆಯ ಧುರೀಣರಿಗೆ ಇಲ್ಲದೇ ಇರುವುದೇ ಒಕ್ಕೂಟ ವ್ಯವಸ್ಥೆಗೆ ತಗುಲಿರುವ ದೊಡ್ಡ ಹೊಡೆತ






ಹೌದು. ಗಾಂಧೀಜಿಯವರು ಕನ್ನಡದಲ್ಲಿ ಸಹಿ ಮಾಡುತ್ತಿದ್ದರು. ಶ್ರೀ ಅಲಿಗೆ ಪುಟ್ಟಯ್ಯನಾಯಕರು, ಗಾಂಧಿಯವರು ಉಡುಪಿಗೆ ಬಂದಿದ್ದಾಗ, ಭೇಟಿ ಮಾಡಿದ್ದರು. ಆಗ ಗಾಂಧಿಯವರ ಚರಕ ನಿಧಿಗೆ ಐದು ರೂಪಾಯಿಯನ್ನು ನೀಡಿದ್ದರು. ಪುಟ್ಟಯ್ಯನಾಯಕರು ತಮ್ಮ ಬಳಿಯಿದ್ದ, ಗಾಂಧಿಯವರ ಅನಾಸಕ್ತಿಯೋಗ ಎಂಬ ಕನ್ನಡ ಅನುವಾದಿತ ಪುಸ್ತಕದ ಮುಖಪುಟಕ್ಕೆ ಗಾಂಧಿಯವರ ಸಹಿಯನ್ನು ಬಯಸುತ್ತಾರೆ. ಗಾಂಧಿಯವರು ಕನ್ನಡದಲ್ಲಿ ಸಹಿ ಮಾಡಿಕೊಟ್ಟಿರುವ ಆ ಪುಸ್ತಕ ಇನ್ನೂ ಅಲಿಗೆ ಮನೆಯ ಸಂಗ್ರಹದಲ್ಲಿದೆ. ಅದರ ಪೋಟೊ ನನ್ನ ಬಳಿಯಿದೆ.