ಅನಿತಾ ನರೇಶ್ ಮಂಚಿ
ಅಡುಗೆ ಕೋಣೆಯ ಮೂಲೆಯಲ್ಲಿಟ್ಟಿದ್ದ ಬಿಳಿ ಬಣ್ಣದ ಮಿಕ್ಸಿಯ ಮೇಲೇನೋ ಕಪ್ಪಾಗಿ ಚಲಿಸಿತು.ಕೂಡಲೇ ನನ್ನ ಸೂಕ್ಷ್ಮ ಕಣ್ಣುಗಳು ಅದನ್ನು ಜಿರಳೆ ಎಂದು ಗುರುತಿಸಿ ಕೂಡಲೇ ನನ್ನನ್ನು ‘ಕಿಲ್ಲರ್ ಲೇಡಿ’ಯಾಗಲು ಪ್ರೇರೇಪಿಸಿತು. ಹೇಳಿ ಕೇಳಿ ರಕ್ತಬೀಜಾಸುರನ ಸಂತಾನದ ಜಿರಳೆಗಳು ಎಷ್ಟೇ ಭದ್ರ ಕೋಣೆಯನ್ನದರೂ ಹೊಕ್ಕು ತಮ್ಮ ಹಕ್ಕು ಸ್ಥಾಪಿಸಿಕೊಳ್ಳಬಲ್ಲವು..ಜಿರಳೆ ಎಂದರೆ ನನಗೆ ಹೆದರಿಕೆ ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಆದರೂ ಅದನ್ನು ಕೈಯಿಂದ ಮುಟ್ಟುವುದು, ಹೊಡೆಯುವುದು ಸಾಧ್ಯವಿರಲಿಲ್ಲ. ನನಗೀಗ ಯೋಚಿಸುತ್ತಾ ಕೂರಲು ಸಮಯವಿರಲಿಲ್ಲ. ಕೂಡಲೇ ಪೊರಕೆ ತರಲು ಹೊರಟೆ.
ಆಗಲೇ ನನ್ನ ಮೊಬೈಲ್ ರಿಂಗಾಗಬೇಕೆ. ಹೇಗೂ ಅದರಲ್ಲಿ ಯಾರ ಕಾಲ್ ಎಂದು ಗೊತ್ತಾಗುತ್ತದಲ್ಲ ಮತ್ತೆ ಮಾಡೋಣ ಎಂದರೆ ನನ್ನ ಮೊಬೈಲ್ ನ ಕರೆನ್ಸಿ ಖಾಲಿಯಾಗಿತ್ತು. ಲ್ಯಾಂಡ್ ಲೈನ್ ನ ಫೋನ್ ಸತ್ತು ಆಗಲೇ ಹನ್ನೊಂದು ದಿನದ ತಿಥಿ ಕರ್ಮಾಂತರ ಮಾಡಿಸಿಕೊಳ್ಳುವ ತಯಾರಿಯಲ್ಲಿತ್ತು. ಜಿರಳೆಯ ಮೇಲೆ ಕಣ್ಣಿಟ್ಟುಕೊಂಡು ಮಾತನಾಡೋಣ ಎಂದರೆ ಮನೆಯೊಳಗೆ ಸಿಗ್ನಲ್ ಸರಿಯಾಗಿ ಸಿಗುತ್ತಿರಲಿಲ್ಲ.
ಮೊಬೈಲ್ ಎತ್ತಿ ಮಾತು ಶುರು ಮಾಡಿದೆ.ಆ ಕಡೆಯಿಂದ ಗೆಳತಿಯ ಸ್ವರ.ಫೋನ್ ಕೆಳಗಿಡುವಾಗ ಅರ್ಧ ಗಂಟೆಯಾಗಿತ್ತು. ಈಗ ಪೊರಕೆ ಹಿಡಿದುಕೊಂಡೇ ಒಳ ಪ್ರವೇಶಿಸಿದೆ.
ಜಿರಳೆ ಆಗ ನೋಡಿದ ಜಾಗದಿಂದ ಸ್ವಲ್ಪ ಮುಂದೆ ಹೋದಂತಿತ್ತು.
ಅಷ್ಟರಲ್ಲಿ ಹೊರಗಿನ ಕರೆಗಂಟೆ ಭಾರಿಸಿತು. ಪೊರಕೆಯನ್ನು ಕಾಣದಂತೆ ಮೂಲೆಗೆ ಸರಿಸಿ ಹೊರಗೆ ಧಾವಿಸಿದೆ. ಪಕ್ಕದ ಮನೆಯವರು ತಮ್ಮಲ್ಲಿನ ಕೆಲವು ಗಿಡಗಳ ಕಟ್ಟಿಂಗ್ಸ್ ಹಿಡಿದುಕೊಂಡು ನಿಂತಿದ್ದರು.ಅವರೆದುರಿಗೆ ಮನೆಯಲ್ಲಿ ಜಿರಳೆ ಇದೆ ಎಂದರೆ ನನಗೆ ಅವಮಾನವಲ್ಲವೇ. ಬಂದವರನ್ನು ಸ್ವಾಗತಿಸಿ. ಕೂರಿಸಿ,ಅವರ ಜೊತೆ ಮಾತನಾಡುತ್ತಲೇ ಗಿಡಗಳನ್ನು ಚಟ್ಟಿಗಳಲ್ಲಿ ಊರಿ ಅವರನ್ನು ಬೀಳ್ಕೊಟ್ಟು ಒಳಗೆ ಬರುವಾಗ ಮತ್ತೊಂದು ಗಂಟೆ ಕಳೆಯಿತು.
ಜಿರಳೆ ಅಲ್ಲೇ ಇತ್ತು. ಆದರೆ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿತ್ತು.
ಕೈ ಪೊರಕೆಯನ್ನು ಎತ್ತಿಕೊಳ್ಳಲೆಂದು ಬಗ್ಗಿದ್ದಷ್ಟೇ. ಮಂಡಿ ಸಡನ್ನಾಗಿ ಉಳುಕಿದಂತಾಗಿ ಕುಸಿದೆ. ಹೇಗೋ ಸಾವರಿಸಿಕೊಂಡು ಎದ್ದು, ನೋವಿನ ಶಮನಕ್ಕೆ ಮನೆಯಲ್ಲಿದ್ದ ನೋವು ನಿವಾರಿಸುವ ಸ್ಪ್ರೇ, ಬಾಮ್ ಎಲ್ಲವನ್ನೂ ಲೇಪಿಸಿಕೊಂಡು ಪೊರಕೆಯೊಂದಿಗೆ ಸರ್ವ ಸನ್ನದ್ಧಳಾಗಿ ಅಡುಗೆ ಮನೆಗೆ ಬಿಜಯಂಗೈದೆ.ಜಿರಳೆ ಇನ್ನೂ ಅಲ್ಲೇ ಇತ್ತು.
ಜಿರಳೆಯ ಹತ್ತಿರ ಹೋಗಿ ಹೊಡೆಯಲೆಂದು ಪೊರಕೆ ಎತ್ತಿದೆ. ಎತ್ತಿದ ಕೈ ಹಾಗೇ ಕೆಳಗಿಳಿಯಿತು. ಅದು ಕೇವಲ ಜಿರಳೆಯ ರೆಕ್ಕೆಯಾಗಿದ್ದು ನಾಲ್ಕಾರು ಇರುವೆಗಳು ಅದನ್ನು ಹೊತ್ತುಕೊಂಡು ಹೋಗುತ್ತಿದ್ದವು
ಈಗಲೂ ಜೀರಲೆ ಅಲ್ಲೆ ಇರಬಹುದೆನೋ?
Katheya anthya chennagide.