– ಗೋಪಾಲ ವಾಜಪೇಯಿ
“ಫಿರ್ ಕಬ್ ಮಿಲೋಗೆ…?”
ಕಾಕಾ… ನಿನ್ನ ಅಭಿನಯವೇ ಅಭಿನಯ. ಕಣ್ಣಲ್ಲಿ, ತುಟಿಯಲ್ಲಿ, ಬೆರಳಲ್ಲಿ ನೀನು ಹೇಳಬೇಕಾದ್ದನ್ನು ಹೇಳದೆಯೇ ತಿಳಿಸಿಬಿಡುತ್ತಿದ್ದೆ. ಅರಳು ಕಂಗಳಿನ ಆಶಾ ಪಾರೇಖಳೊಂದಿಗೆ, ಗುಳಿ ಗಲ್ಲದ ಶರ್ಮಿಳಾಳೊಂದಿಗೆ, ಕನಸಿನ ಕನ್ಯೆ ಹೇಮಾಳೊಂದಿಗೆ, ಮೊಂಡು ಮೂಗಿನ ಸುಂದರಿ ಮುಮತಾಜಳೊಂದಿಗೆ, ಮುದ್ದುಮುಖದ ನಂದಾಳೊಂದಿಗೆ, ತುಂತುರು ಹನಿಯಂತೆ ಮಾತಾಡುವ ತನುಜಾಳೊಂದಿಗೆ ನೀನು ನಟಿಸಿದ ಚಿತ್ರಗಳು ನಮ್ಮ ನೆನಪಿನಲ್ಲಿ ಉಳಿದದ್ದು ‘ಇತ್ತಫಾಕ್’ ಏನಲ್ಲ.
ನೀನು ‘ಆನಂದ’ವನ್ನ ‘ಆರಾಧನಾ’ಭಾವದಲ್ಲಿ ಕಾಣುತ್ತಿದ್ದವನು. ಎಲ್ಲ ಪಡ್ಡೆಗಳು ಡಿಂಪಲ್ ಕಪಾಡಿಯಾಳ ಹುಚ್ಚು ಹಿಡಿಸಿಕೊಂಡು ತಿರುಗುತ್ತಿದ್ದಾಗ ಅವಳನ್ನು ‘ಮನೆ ತುಂಬಿಸಿಕೊಂಡು’ ಅವರೆಲ್ಲರಲ್ಲಿ ಈರ್ಷ್ಯೆ ಮೂಡಿಸಿದವನು. ಅದೇ ಹೊತ್ತಿಗೆ ನಿನ್ನನ್ನು ಮನದಲ್ಲೇ ಮುದ್ದಾಡುತ್ತಿದ್ದ ಲಕ್ಷ ಲಕ್ಷ ಕಾಲೇಜು ಕನ್ಯೆಯರ ಮನಕ್ಕೂ ಗಾಸಿ ಮಾಡಿದವನು. ಎರಡು ನಕ್ಷತ್ರಗಳನ್ನು ನಿನ್ನ ಕೈಗಿತ್ತ ಡಿಂಪಲ್ ಕೈಕೊಟ್ಟಾಗ ‘ಕಟೀ ಪತಂಗ ಹೈ’ ಎಂದೆಲ್ಲ ಅತ್ತುಕೊಂಡು ತಿರುಗಾಡಿದವನು. ಅದೇ ನೋವಿನಲ್ಲಿ ಮದಿರೆಗೆ ಶರಣಾದವನು.
ಮೊನ್ನೆ ಮೊನ್ನೆ ನಿನ್ನನ್ನು ಅದಾವುದೋ ಪ್ರಶಸ್ತಿ ಸಮಾರಂಭದಲ್ಲಿ ನೋಡಿದಾಗ ಕರುಳು ಕಿವಿಚಿದಷ್ಟು ಸಂಕಟವಾಯಿತು ನನಗೆ. ನಿನ್ನ ಅಭಿನಯವೇ ಅಭಿನಯ. ಅದಕ್ಕೇ ನೀನು ನಮ್ಮೆಲ್ಲರ ಅಚ್ಚುಮೆಚ್ಚಿನ ‘ಬಾವರ್ಚಿ.’ ಭಾರತೀಯರೆಲ್ಲರ ಅಭಿಮಾನದ ‘ಸೂಪರ್ ಸ್ಟಾರ್.’
ಎಲ್ಲರೂ ಒಂದು ದಿನ ಹೋಗಲೇಬೇಕು ನಿಜ… ಆದರೆ ನೀನು ”ಅಚ್ಚಾ ತೋ ಹಂ ಚಲತೆ ಹೈಂ…” ಎಂದು ಹೇಳಿ ಹೋಗುತ್ತೀ ಅಂದುಕೊಂಡಿದ್ದೆ. ನೀನು ಹೇಳದೆ ಕೇಳ್ದೆ ಹೋಗಿಬಿಟ್ಟೆ. ಇರಲಿ. ನಾವೆಲ್ಲಾ ನಿನಗೆ ಕೇಳುವುದೊಂದೇ ಪ್ರಶ್ನೆ : ”ಫಿರ್ ಕಬ್ ಮಿಲೋಗೆ…”







ಬಹುಶಃ ಕಾಕಾ ಅದಕ್ಕೆ “ಘುಂಗರೂಂಕಿ ತರಾ..ಬಜತಾಹೀ ರಹಾ ಹೂಂ ಮೈ…ಕಭೀ ಇಸ ಪಲ ಮೇ,,ಕಭೀ ಉಸ ಪಲಮೇ..ಬಂದತಾಹೀ ರಹಾ ಹೂಂ ಮೈ….” ಅಂತ ಹಾಡುತ್ತಿರಬೇಕು……
excellent ….ನಿಮ್ಮ ಬರಹ ಓದುವುದೇ ಒಂದು ವಿಸಿಸ್ಟ ಅನುಭವ, ನನಗಂತೂ ಹೊಸ ಥ್ರಿಲ್ ….. ನಿಮ್ಮ ಚಿಂತನೆ, ಬರಹ ,ನನಗಿನ್ನಿಲ್ಲದ ಕುಶಿ ತಂದು ಕೊಡುತ್ತಿವೆ. ಇತ್ತೀಚಿಗೆ ಹಳೆ ಸಂವಾದ ಓದುತ್ತಿದ್ದೆ,ಅದು ಸಂಗೀತದ ವಿಶೇಷಾಂಕ ,ಅಲ್ಲಿ ನಿಮ್ಮ ಲೇಖನ ಓದಿ ಒಂದಿಸ್ತೊತ್ತು ಮೈಮರೆತು ಬಿಟ್ಟಿದ್ದೆ .
ರವಿವರ್ಮ ಹೊಸಪೇಟೆ
ಅವರ ಆನಂದ್ ಸಿನೆಮ ಯಾವಾಗಲು ನೆನಪಾಗುತಿರುತ್ತದೆ , ಹಾಗೆ ಹೋಗಿ ಬಿಟ್ಟರು.
ಡಿಂಪಲ್ ಕೈಕೊಟ್ಟಿದ್ದು ಅಂದ್ರಲ್ಲಾ ಗುರುಗಳೇ ಕಾಕಾನೇ ಟೀನಾರ ಸಂಪರ್ಕದಲ್ಲಿದ್ರು ಅನ್ನುವ ಅಂಬೋಣವೂ ಇತ್ತಲ್ಲ,ಗಮನಿಸಿ. ಡಿಂಪಲ್ ಕೈಕೊಟ್ಟಿದ್ರೆ ಮತ್ತೆ ಯಾಕೆ ಸಾಥ ನೀಡುತ್ತಿದ್ದಳು. ನೋವಿಗೆ ಕಷ್ಟಕ್ಕೆ ಜೊತೆಯಾದಳಲ್ವಾ? ಯಾಕೆ ಪ್ರತಿಬಾರಿಯೂ ಹೆಣ್ಣಿಗೆ ಬಲಿಪಶುವಾಗುವ ಭಾಗ್ಯ?! ರಾಜೇಶ ಖನ್ನಾರ ಮೇಲೆ ಗೌರವ, ಪ್ರೀತಿ, ಆದರ ಎಲ್ಲವೂ ಇವೆ. ಆದರೂ,,,,, ಆ ರೀತಿಯ ಶಬ್ದಗಳ ಬಳಕೆ ಬೇಡ ಅನ್ಸುತ್ತೆ ಗುರುಗಳೇ.