ನೀನಾಸಂ ಯಾವಾಗಲೂ ಅತ್ಯಂತ ಉತ್ಸಾಹಭರಿತವಾಗಿ ತಮ್ಮ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದೇ ಆಸೆಯಿಂದ ಬಂದ ನನ್ನ 10 ವರ್ಷದ ಮಗಳು ನಾಟಕದ ಕೊನೆಯವರೆಗೂ ಬೆವರಿಳಿಸಿಕೊಳ್ಳುತ್ತಾ ನೋಡಿ ಉಡುಪಿಯಿಂದ ಮನೆಯವರೆಗೆ ಬರುವ ದಾರಿಯಲ್ಲಿ ಅದರ ಬಗ್ಗೆ ವಿಶ್ಲೇಷಣೆಯಲ್ಲಿ ತೊಡಗಿದ್ದು ನನಗೆ ವಿಶೇಷವಾಗಿ ಕುತೂಹಲ ಹುಟ್ಟಿಸಿತು. ಇದುವರೆಗೆ ಆಕೆ ನೋಡಿದ ಯಾವುದೇ ನಾಟಕವನ್ನು ಅಷ್ಟು ವಿಶ್ಲೇಶಿಸಿದ್ದು ನಾನು ನೋಡಿರಲಿಲ್ಲ.
ಪ್ರತಿಯೊಂದು ಮಾಧ್ಯಮದ ಪ್ರೇಕ್ಷಕರು ಅದರದ್ದೇ ಆದ ಪೂರ್ವಗ್ರಹ ಪೀಡಿತರಾಗಿ ಆ ಮಾಧ್ಯಮವನ್ನು ನೋಡಬಯಸುತ್ತಾರೆ. ಚಲನಚಿತ್ರಕ್ಕೆ ಅದರದೇ ಆದ ಮಸಾಲೆ ಇದ್ದರೆ, ಯಕ್ಷಗಾನಕ್ಕೆ ಬೇರೆಯದೇ ಒಂದು. ಒಂದು ಮಾಧ್ಯಮ ಅದರ ಎಲ್ಲೆ ಮೀರಿ ಇನ್ನೊಂದರ ಹಾಗೆ ಆಗಲು ಹೋದಾಗ ಪ್ರೇಕ್ಷಕ ಚಡಪಡಿಸುತ್ತಾನೆ ಎಂಬುವುದಕ್ಕೆ ನೀರಿನ ನಿಲುತಾಣ ಒಳ್ಳೆಯ ಉದಾಹರಣೆ. ಶಾಸ್ಟ್ರೀಯ ಸಂಗೀತದಲ್ಲಿ ಅತಿ ವಿಲಂಬಿತ ಲಯ ಆಸ್ವಾದಿಸುವ ನಾವು ನಾಟಕದಲ್ಲಿ ಅದನ್ನು ಯಾಕೆ ಇಷ್ಟ ಪಡುವುದಿಲ್ಲ? ಛಾಯಾಚಿತ್ರವನ್ನು ಆಸ್ವಾದಿಸುವಾಗ ಅದರಲ್ಲಿ ಇಲ್ಲದ ಚಲನೆಯನ್ನು ನಾವು ಹೇಗೆ ಕಂಡುಕೊಳ್ಳುತ್ತೇವೆ?
ಫ್ಯಾನಿನ ತಂಪು ಗಾಳಿಯಿದ್ದಿದ್ದರೆ ನೀರಿನ ಚೊಳಚೊಳ ಸದ್ದಿನ ಜೊತೆಗೆ ಪ್ರೇಕ್ಷಕರ ಗೊರಕೆಯ ಸದ್ದೂ ಮಿಶ್ರಿತವಾಗುವುದೆಂಬ ಭಯದಿಂದ ನಮ್ಮನ್ನೆಲ್ಲಾ ಬೆವರಿನ ನಿಲುತಾಣ ಮಾಡಿದ್ದು ಹಲವರಿಗೆ ತೊಂದರೆ ಕೊಟ್ಟಿರಬೇಕು. ನಾಟಕದ ನಡುವಿನಲ್ಲಿ ಕೈಕೊಟ್ಟ ವಿದ್ಯುತ್ ಹಲವಾರು ಪ್ರೇಕ್ಷಕರನ್ನು ಕತ್ತಲಲ್ಲೇ ನಾಟಕ ಬಿಟ್ಟು ಹೊರಗೊಡುವಂತೆ ಸಹಾಯ ಮಾಡಿತ್ತು.
ಜೀವನದ ಉದ್ದಕ್ಕೂ ನಡೆಯುವ ಎಲ್ಲಾ ಘಟನೆಗಳನ್ನು ನಿದಾನದಲ್ಲಿ ತೆರೆದಿಡುವ ಈ ನಾಟಕ ಕತೆಯ ಹಂದರ ಇಲ್ಲದಿದ್ದರೂ, ನಾವು ಎಲ್ಲಾ ನಾಟಕಗಳಲ್ಲಿ ನಿರೀಕ್ಷಿಸುವ ಅಭಿವ್ಯಕ್ತಿಯನ್ನು ಕೊಟ್ಟದ್ದು,ವಿಭಿನ್ನ ಪ್ರೇಕ್ಷಕರಿಗೆ ತಮ್ಮದೇ ಆದ ರೀತಿಯಲ್ಲಿ ಅದರ ಅರ್ಥವನ್ನು interpret ಮಾಡಲು ಪ್ರೇರಿಪಿಸಿದ್ದು ಕುತೂಹಲಕರವಾಗಿತ್ತು. ಒಂದು ವಿಶಿಷ್ಟ ಅನುಭವವನ್ನು ಕೊಟ್ಟ ಈ ನಾಟಕದ ಇಲ್ಲರಿಗೂ ಅಭಿನಂದನೆಗಳು.








‘ನೀರಿನ ನಿಲುತಾಣ’ ವಿಭಿನ್ನ ಅನುಭವ ಕೊಡುವ ನಾಟಕ ಎಂಬುದು ಸತ್ಯ. ಇದಕ್ಕೆ ಅದರ ನಿಧಾನಗತಿ ಒಂದೇ ಕಾರಣವಲ್ಲ.ಸಿನಿಮಾ,ನಾಟಕ,ಸಂಗೀತ,ಚಲನಶಿಲ್ಪ,ಶಬ್ದ ನೃತ್ಯ ಮತ್ತು ಈಚೆಗೆ ಹೆಚ್ಚಾಗಿ ಕೇಳಿಬರುವ ವೀಡಿಯೋ ಇನ್ಸ್ಟಲೇಶನ್ ತಂತ್ರಗಳನ್ನು ಬಳಸುವ ಮೂಲಕ ನಾಟಕದ ಸಾಂಪ್ರದಾಯಿಕ ಶೈಲಿಯ ಚೌಕಟ್ಟನ್ನು ಮುರಿದು ಹೊಸರೀತಿಯ ರಂಗಚೌಕಟ್ಟನ್ನು ಬಳಸಿರುವುದು ಈ ವಿನೂತನ ಶೈಲಿಯಲ್ಲಿ ಕಾಣುತ್ತದೆ. ಆದರೆ ಪ್ರತಿಮೆ ಮತ್ತು ಸಾಂಕೇತಿಕೆಯಲ್ಲಿ ಮಾತ್ರ ಸಾಂಪ್ರದಾಯಿಕತೆಯನ್ನು ಮೀರಲಾಗಿಲ್ಲ. ದೊಂಬಿ, ವಾಚಾಳಿತನ, ಅತಿಚಟುವಟಿಕೆಗಳಿಂದ ತುಂಬಿರುತ್ತಿದ್ದ ನೀನಾಸಂ ಶೈಲಿಯ ರಂಗಚಿಂತನೆ ಈ ರಂಗಕೃತಿಯಲ್ಲಿ ಬದಲಾಗಿರುವುದು ನೀನಾಸಂಗೇ ಸ್ವಾಗತಾರ್ಹ ಎನಿಸಿರಬೇಕು. ನಿರ್ದೇಶಕರು ಮತ್ತು ನಟರು ಗಾಢವಾಗಿ ತೊಡಗಿಸಿಕೊಂಡು ಸೃಜಿಸಿದ ನಾಟಕ ಇದು.ಇದನ್ನು ಆರಿಸಿಕೊಂಡಿರುವ ಕಾಲಘಟ್ಟ ಎಡಪಂಥೀಯ ದರ್ಶನ ಹಿಂದೆಸರಿದು, ಸಾಮಾಜಿಕತೆ ದುರ್ಬಲವಾಗಿ ವ್ಯಕ್ತಿಪಾರಮ್ಯತೆಯೇ ಬಲವಾಗುತ್ತಿರುವ ಆಧುನಿಕೋತ್ತರ ಚಿಂತನೆಯ ಕಾರ್ಪೊರೇಟಿಸಂನ ವಿಜೃಂಭಣೆಯ ಕಾಲ. ಫೋರ್ಡ್ ಫೌಂಡೇಶನ್ ಹಣಸಹಾಯ ಪಡೆದು ಗಾಂಧಿಪ್ರಣೀತ ಪಾಸಿಫೈಯರ್ ಪಾತ್ರವನ್ನು ನಿರ್ವಹಿಸುತ್ತಾ ಕರ್ನಾಟಕದಲ್ಲಿ ಎಡಪಂಥೀಯ ಚಿಂತನೆಯನ್ನು, ಚಿಂತಕರನ್ನು ಜತನದಿಂದ ದೂರವಿಟ್ಟಿರುವ ನೀನಾಸಂ, ಜಪಾನಿನ ಕಮ್ಯೂನಿಸ್ಟ ಪಕ್ಷವನ್ನು ಅಸಹನೆಯಿಂದ ನೋಡುವ ನಾಟಕಕಾರನ ಕೃತಿಯನ್ನು ತನ್ನ ಮರುತಿರುಗಾಟಕ್ಕೆ ಆರಿಸಿಕೊಂಡಿರುವುದು ಕೇವಲ ಕಾಕತಾಳೀಯವಲ್ಲ. ಪ್ರಸಕ್ತ ಜೀವನದ ಬರಡುತನದಿಂದ ರೋಸಿಹೋಗಿ ಹಾಸ್ಯ, ಧಾರ್ಮಿಕತೆ ಮತ್ತು ರಿಚುಅಲ್ ಗಳಿಗೆ ಹಾತೊರೆಯುತ್ತಿರುವ ಮಧ್ಯಮವರ್ಗೀಯರಿಗೆ ಈ ನಾಟಕ ಒಂದು ಆಪ್ಯಾಯಮಾನವಾದ ಬದಲಾವಣೆಯಾಗಿಬಂದಿದೆ. ಪ್ರೇಕ್ಷಕರ ತೀವ್ರ ರೀತಿಯ ಪ್ರತಿಕ್ರಿಯೆಗಳಲ್ಲಿ ಕಾಣಿಸುವುದು ಇದೇ.ಮರೆಸುವ-ತೆರೆಸುವ ಶಕ್ತಿಯನ್ನು ಏಕಕಾಲಕ್ಕೆ ಬಳಸುವ ನಾಟಕ ಏನನ್ನು ಹೇಳುತ್ತಿದೆ ಎನ್ನುವುದು ಎಷ್ಟು ಮುಖ್ಯವೋ ಏನನ್ನು ಮುಚ್ಚಿಡುತ್ತಿದೆ ಎನ್ನುವುದೂ ಅಷ್ಟೇ ಮುಖ್ಯ.ಪಾತ್ರಗಳ ರೂಪ, ದಿರಿಸು,ಚಲನೆಗಳು ಬಿಡಿಬಿಡಿಯಾಗಿವೆ, ವ್ಯಕ್ತಿಗತವಾಗಿವೆ ಹಾಗೂ ಗ್ರಾಮೀಣ ಬದುಕಿನ ಆಚೆಗಿವೆ ಎಂಬುದು ಗಮನಿಸಬೇಕಾದ ಅಂಶ
ವಿ.ಎನ್.ಲಕ್ಷ್ಮೀನಾರಾಯಣ