’ಪೇಂಟಿಂಗ್ ನಲ್ಲಿ ಚಲನೆ ಇರುತ್ತೆ…’ – ಕೆ.ಟಿ.ಶಿವಪ್ರಸಾದ್

ಸಿ.ಸುವರ್ಣ ಹಾಸನ

ಕಳೆದ ವಾರ ಗೆಳೆಯ ನಾಗರಾಜ್ ಹೆತ್ತೂರು ಪೋನ್ ಮಾಡಿ ಏನ್ ಸುವರ್ಣ, ಮೇಡಂ ಕೆ.ಟಿ.ಶಿವಪ್ರಸಾದ್ ಸರ್ ಹೊಸ ಪೇಂಟಿಂಗ್ ಮಾಡಿದ್ದಾರೆ ನೋಡಲು ಹೋಗಿದ್ರ ಅಂದ. ನಾನು ಇಲ್ಲಪ್ಪ, ಹೋಗಿ ನೋಡಬೇಕು ನೀನು. . . ಹೋಗಿದ್ದಾ, ? ಆರ್ಟ್ ಹೇಗಿದೆ ನಾಗರಾಜ್ ? ಅಂದೆ. ಫೆಂಟಾಸ್ಟಿಕ್ ಮೇಡಂ ಅದನ್ನು ಒಮ್ಮೆ ನೋಡಬೇಕು ರೋಮಾಂಚನವಾಗುತ್ತೇ ಎಷ್ಟು ಸಾರಿ ನೋಡಿದರು ಪುನಃ. . . ಪುನಃ ನೋಡಬೇಕು ಅನಿಸುತ್ತೆ ಎಂತಹ ಕೈಚಳಕ ಅಬ್ಬ. . . . ! ಅಂದ. ನನಗೆ ಅವನು ಹೇಳಿದ ಮೇಲೆ ತುಂಬಾ ಕುತೂಹಲ ಉಂಟಾಯಿತು. ತಕ್ಷಣ ಕೆ.ಟಿ.ಸರ್ ಗೆ ಪೋನ್ ಮಾಡಿದೆ. ಅವರು ಪೋನ್ ರಿಸೀವ್ ಮಾಡಿ ಏನವ್ವ , ಹೇಗಿದ್ದಿಯಾ ? ಏನ್ ಸಮಾಚಾರ ಎನ್ನುತ್ತಾ ನಮ್ಮ ಕುಟುಂಬವರ್ಗದವರ ಬಗ್ಗೆ ಕುಶಲೋಪಚಾರ ವಿಚಾರಿಸಿಕೊಂಡ್ರು. ನಾನು ಅಳುಕುತ್ತಲೇ ಮೆಲುದನಿಯಲ್ಲಿ ಸರ್ ಹೊಸ ಪೇಂಟಿಂಗ್ ಮಾಡಿದ್ದಿರಂತೆ. . . . .ಅಂದೆ ಅದಕ್ಕೆ ಅವರು ಹೌದು. . . ನಿನಗೆ ಯಾರು ಹೇಳಿದ್ದು ಅಂದ್ರು. ನಾನು ಮೊನ್ನೆ ಹೆತ್ತೂರು ಪೋನ್ ಮಾಡಿದ್ದರು ಅವರು ಹೇಳಿದ್ದು ಸಾರ್ . ಆ ಪೇಂಟಿಂಗ್ ನಾನು ನೋಡಬೇಕಿತ್ತಲ್ಲ ಎಂದೆ. ಅಯ್ಯೋ ಕತೆಯೇ . . . ಸರಿಕಣವ್ವ ಬಂದು ನೋಡು ನಾನು ನಿಮಗೆ ಬ್ಯಾಡ ಅಂತಿನಾ . . . . ಅಂದ್ರು. ಅವರು ಅಂದಿದ್ದೆ ತಡ ಅವರ ಮನೆಯತ್ತ ದೌಡಾಯಿಸಿದೆ. ಮನೆಯಲ್ಲಿ ವಿಶಾಲವಾದ ಅವರ ಡ್ರಾಯಿಂಗ್ ರೂಂನಲ್ಲಿ ಚಿತ್ರಕಲೆ ಇಟ್ಟಿದ್ದರು. ಕೈ ತೋರಿಸಿ ನೋಡು ಅಲ್ಲಿದೆ ಎಂದರು.

ಅಲ್ಲಿ ಹೋಗಿ ನೋಡಿದರೆ ನಿಜಕ್ಕೂ ನಾಗರಾಜ ಹೇಳಿದ್ದಂತೆ ಅದ್ಬುತ , ರೋಮಾಂಚನದ ಜೊತೆಗೆ ಮನಕಲಕುವಂತೆಯೂ ಗೋಚರಿಸುತ್ತಿತ್ತು. ನಾನು ಆ ಚಿತ್ರಕಲೆಯನ್ನು ತದೇಕ ಚಿತ್ತದಿಂದ ವೀಕ್ಷಿಸುತ್ತಿದ್ದೆ. ಶಿವಪ್ರಸಾದ್ ಸರ್ ನನ್ನನ್ನು ಸೂಕ್ಷ್ಮವಾಗಿ ಗಮನಿಸಿ ಚಿತ್ರಕಲೆಯನ್ನು ಯಾವತ್ತು ದೂರದಿಂದ ವೀಕ್ಷಿಸಬೇಕು ಅದನ್ನು ಮುಟ್ಟಬಾರದು ಎಂದು ಹೇಳುತ್ತಾ ನನ್ನತ್ತ ತಿರುಗಿ ಹೇಗಿದೆ ಅವ್ವ ಪೇಂಟಿಂಗ್ ಅಂದ್ರು. ನಾನು ಕೆಲವೊತ್ತು ಮೌನಕ್ಕೆ ಶರಣಾದೆ. ಅದಕ್ಕೆ ಅವರು ನಸು ನಕ್ಕು ಪರವಾಗಿಲ್ಲ. . . . . ಹೇಳಿ ಮೇಡಂ , ಅವರವರ ಭಾವನೆಗೆ, ಕಲ್ಪನೆಗೆ ಯಾವುದೇ ಕಲೆ ಒಳಪಟ್ಟಿರುತ್ತದೆ. ಪ್ರತಿಯೊಂದು ಕಲೆಯಲ್ಲಿಯೂ ಚಲನಶೀಲತೆ ಇರುತ್ತೆ ಅಂದ್ರು. ನಾನು ಧೈರ್ಯವಾಗಿ ನನ್ನ ಅನಿಸಿಕೆ ಹೇಳುತ್ತಾ. . .. . .! ಸರ್ ಸೃಜನಶೀಲತೆ ಅಂದ್ರೆ ಈ ಪೇಂಟಿಂಗ್ ಸರ್. ಕುಂಚ ಬುದ್ಧ ಬಿಡಿ ನೀವು, ಈ ಚಿತ್ರದಲ್ಲಿ ಚಲನೆ ಇದೆ. ಹುಡುಗಿ ಎಲ್ಲಿ ಇದ್ದಾಳೆ ಅಂತಹ ಹುಡುಕುತ್ತಿದ್ದೇನೆ ಅಂದೆ. ಅದಕ್ಕೆ ಅವರು ನಸು ನಕ್ಕರು. ನಾನು ಮನಸ್ಸಿನಲ್ಲಿಯೆ ಥೂ ನಿಮಗೆ ಪೇಯಿಟಿಂಗ್ ನೋಡುವುದಕ್ಕೆ ಬರೋಲ್ಲ ನಾನು ನಿಮ್ಮ ಬಳಿ ಏನು ತಲೆ ಕೆಚ್ಚಿಕೊಳ್ಳಲಿ ಅನ್ನುತ್ತಿದ್ದಿರಲ್ಲವಾ ? ಅಂದುಕೊಂಡು ಸರ್ ಅದಕ್ಕೆ ನೀವು ಅಂತರರಾಷ್ಟ್ರೀಯ ಚಿತ್ರಕಲಾವಿದರಾಗಿರುವುದು ಸರ್. ನಾನು ನಿಮ್ಮ ಕಲೆಯನ್ನು ವಿಮರ್ಶೆ ಮಾಡುವಷ್ಟು ದೊಡ್ಡವಳಲ್ಲ ಎಂದು ಹೇಳಿದೆ.

ಈ ಚಿತ್ರದಲ್ಲಿರುವ ಹುಡುಗಿ ಎಲ್ಲಿಯೂ ಪೂರ್ಣವಾಗಿ ಕಾಣುತ್ತಿಲ್ಲ. ಒಮ್ಮೆ ನೋಡಿದರೆ ಅವಳ ಒಂದು ಕೈ ಕಾಣುವುದಿಲ್ಲ. ಹುಡುಗಿ ಹೊದ್ದಿರುವ ದುಪ್ಪಟದ ಒಂದು ಚೂರು ಕೆಳಭಾಗದಲ್ಲಿ ಕಾಣುತ್ತಿದ್ದರೆ ಮತ್ತೊಂದು ಕಡೆ ಇನ್ನೊಂದಷ್ಟು ಕಾಣಿಸುತ್ತಿದೆ. ಮಗದೊಂದು ಕಡೆ ಅವಳ ಮುಖ ಉಲ್ಟಾ ಮಾಡಿ ಸೈಡ್ ಪೋಸ್ ನಲ್ಲಿ ಮೂಡಿಸಿದ್ದಾರೆ. ಹುಡುಗಿಯ ಮುಖದಲ್ಲಿ ಅಸಹಾಯಕತೆ ಎದ್ದು ಕಾಣುತ್ತಿರುವುದು ನೋಡಿದರೆ ಹೆಣ್ಣಿನ ದುಃಖದ ಅನುಸಂಧಾನ ಕಾಣುತ್ತದೆ. ಹುಡುಗಿ ನಿಂತಿರುವುದು ಗೋಡೆಯ ಹಿಂದೆ ಎಂದು ಒಮ್ಮೆ ಅನಿಸಿದರೆ ಮಗದೊಮ್ಮೆ ಅವಳು ಮುಂದೆ ಬರುತ್ತಿದ್ದಾಳೆನೋ ಅನಿಸುತ್ತದೆ. ಮತ್ತಷ್ಟು ಯೋಚಿಸಿದರೆ ಗೋಡೆಯ ಮಧ್ಯದಲ್ಲಿ ಸೇರಿಕೊಂಡು ಬಿಟ್ಟಿದ್ದಾಳೆ ಎಂದು ಗೋಚರವಾಗುತ್ತದೆ ಒಟ್ಟಾರೆ ಚಿತ್ರವನ್ನು ಯಾರೇ ನೋಡಿದರೂ ಚಿಂತನೆಗೆ ಒಳಪಡಿಸುತ್ತದೆ. ಬಣ್ಣದ ಮೂಲಕ ಜೀವ ತುಂಬಿರುವುದು ಅದ್ಭುತವಾಗಿದೆ. ಈ ಪೇಂಟಿಂಗ್ನಲ್ಲಿ ಟೈಮ್ ಅಂಡ್ ಸ್ಪೇಸ್ನ್ನು ನಾವು ಕಾಣಬಹುದು . ಅದಕ್ಕೆ ಕೆ.ಟಿ. ಸರ್ ಟೈಮ್ ಅಂಡ್ ಸ್ಪೇಸ್ ಇಸ್ ಮೆಂಟಲ್ ಕನ್ಷ್ರಕ್ಷನ್ (ಕಾಲ ಮತ್ತು ಸ್ಪೇಸ್ ನಮ್ಮ ಕಲ್ಪನೆ) ಇದನ್ನು ನಾವು ಮಾಡಿಕೊಂಡಿರುವುದು. ಮೌಢ್ಯತೆ ಇದ್ದಲ್ಲಿ ಎಲ್ಲವೂ ತಟಸ್ಥವಾಗಿರುತ್ತದೆ. ಎಲ್ಲಿ ಮೌಢ್ಯತೆ ಇರುವುದಿಲ್ಲವೂ ಅಲ್ಲಿ ಚಲನೆ ಇರುತ್ತದೆ. ಮೌಡ್ಯತೆ ದುಃಖವನ್ನುಂಟು ಮಾಡುತ್ತದೆ ಆದರೆ ಚಲನೆ ದುಃಖವನ್ನು ದೂರ ಮಾಡುತ್ತದೆ ಅಂದ್ರು.

ಪೇಂಟಿಂಗ್ ನಲ್ಲಿ ಚಲನೆ ಇದೆ:

ನಾನು ಅದಕ್ಕೆ ಸರ್ ಪೇಯಿಟಿಂಗ್ ನಲ್ಲಿ ಚಲನೆ ಇದೆಯಾ ? ಅಂದೆ. ಅದಕ್ಕೆ ಅವರು ಹೌದು ಕಣವ್ವ ಸಂಗೀತ, ಬರಹ, ಕಲೆ ಮನುಷ್ಯರನ್ನು ಚಲನಶೀಲರನ್ನಾಗಿ ಮಾಡಿದರೆ ಅದು ವಿಶಿಷ್ಟವಾದುದು. ನೋಡುಗರಿಗೆ ಅದರಲ್ಲಿ ಚಲನಶೀಲತೆ ಇರುತ್ತದೆ. ಕತೆ, ಪೇಟಿಂಗ್ ಎಲ್ಲವೂ ಒಂದೇ . ನಮ್ಮಷ್ಟಕ್ಕೆ ನಾವು ಸೌಂದರ್ಯ, ಕುರೂಪಿ, ಸರಿ ತಪ್ಪು, ಚನ್ನಾಗಿದೆ, ಚನ್ನಾಗಿಲ್ಲ, ಸುಳ್ಳು, ನಿಜ , ನಾನು ಶ್ರೇಷ್ಠ , ನೀನು ಅನಿಷ್ಟ ಹೀಗೆ ವಿರುದ್ಧಾರ್ಥವನ್ನ ನಾವೇ ಹುಟ್ಟಿ ಹಾಕಿಕೊಳ್ಳುವುದು. ಇಲ್ಲಿ ನಾವು ಮುಖ್ಯರೂ ಅಲ್ಲ ಅಮುಖ್ಯರೂ ಅಲ್ಲ. ಪೇಂಟಿಂಗ್ ಅಂದ್ರೆ ಏನು ನೋಡುತ್ತೇವೆಯೋ ಅದನ್ನು ಬರೆಯುವುದು ಅಂದುಕೊಂಡಿದ್ದೀರಾ ಮೇಡಂ ಅದು ಅಲ್ಲ .ಚಿತ್ರಕಲೆ ಒಂದು ಹೊಸಹೊಸ ಸಂಬಂಧಗಳನ್ನು ಬೆಳೆಸುತ್ತದೆ. ಆದ್ದರಿಂದ ಅದರಲ್ಲೂ ಚಲನೆ ಇರುತ್ತೆ ಅಂದ್ರು. ಸರಿ ಸಾರ್ ನೀವು ಹೇಳುವುದು ನಿಜಕ್ಕೂ ಸರಿ ಈ ಹುಡುಗಿಯ ಚಿತ್ರದಲ್ಲಿ ಕಾಲ ಮತ್ತು ಸ್ಪೇಸ್ ಜೊತೆಗೆ ಚಲನೆ ಇದೆ ಅಂದೆ.

ಅದರ ಪಕ್ಕದಲ್ಲಿ ಮತ್ತೊಂದು ಚಿತ್ರಕಲೆ ಇತ್ತು. ಅದು ಈ ಹುಡುಗಿಯ ಚಿತ್ರಕಲೆಗಿಂತಲ್ಲೂ ಡಿಫರೆಂಟ್ ಆಗಿತ್ತು. ಇದೇನು ಸಾರ್ ಮಾರಮ್ಮ ಆ ಮ್ಯಾನ್ ಕ್ವೀನ್ ಎಲ್ಲಿಯಾದರೂ . . .    ಯಾವ ಕಾಲಕ್ಕೂ ಮಾರಮ್ಮ ಹಾಗೂ ಮ್ಯಾನ್ ಕ್ವೀನ್ (ಅಂದರೆ ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳನ್ನು ಹಾಕಿ ನಿಲ್ಲಿಸಿರುವ ಬೊಂಬೆಗಳು) ಯಾವತ್ತೂ ಒಂದಕ್ಕೊಂದು ಸಂಧಿಸುವುದಿಲ್ಲ… ಆದರೆ ಕೆ.ಟಿ.ಶಿವಪ್ರಸಾದ್ ಅವು ಇಂದು ಸಂಧಿಸದಿದ್ದರೂ ಮುಂದೊಂದು ದಿನ ಅವು ಸಂಧಿಸುತ್ತದೆ ಒಬ್ಬರಿಗೊಬ್ಬರು ಮಾತನಾಡುವ ಕಾಲ ಬರುತ್ತದೆ ಎನ್ನುವುದನ್ನು ಆತ್ಯಾಕರ್ಷಕವಾಗಿ ಕುಂಚದ ಮೂಲಕ ಮೂಡಿಸಿದ್ದರು. ಅದನ್ನು ನನಗೆ ತೋರಿಸಿ ನೋಡು ಪೇಟಿಂಗ್ ಅಂದ್ರೆ ಏನು ನೋಡುತ್ತೇವೆಯೋ ಅದನ್ನು ಬರೆಯುವುದು ಅಂದುಕೊಂಡಿದ್ದೀಯಲ್ಲ ಅದು ತಪ್ಪು ಪೇಂಟಿಂಗ್ ಹೊಸಹೊಸ ಸಂಬಂಧಗಳನ್ನು ಚಿಂತನೆಗಳನ್ನು ಬೆಳೆಸುತ್ತದೆ ಅಂದ್ರು.ಈ ಕಲೆಗಳು ಮುಂದಿನವಾರ ಬಾಂಬೆಯಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದರು. ನಾನು ಸರ್ ಗೆ ವಿಶ್ ಮಾಡಿ ಬಂದೆ.

 

‍ಲೇಖಕರು avadhi

July 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. chalam

    ನಿಮ್ಮಚಿತ್ರಕಲಾಸಕ್ತಿ ಇಷ್ಟವಾಯಿತು.ನಮ್ಮಂತವರಿಗೂ ಕೇಟಿ ಸರ್ ಅರ್ಥವಾಗಲಿ.ಕೇಟಿ ಅರ್ಥವಾಗಬೇಕು ಅಂದ್ರೆ ಬುದ್ದನ ಮಾರ್ಗ ಅರ್ಥವಾಗಿರಬೇಕು.ಬುದ್ದ ಹೊರಗೆ ಕಂಡರೆ ಕೊಂದುಬಿಡಿ ಎಂಬ ದಾರ್ಶನಿಕರ ಮಾತಿನಂತೆ ನಾನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಇದ್ದೇನೆ.

    ಪ್ರತಿಕ್ರಿಯೆ
  2. Suvarna.c

    ಚಿತ್ರಕಲೆಯನ್ನು ನೋಡಿ ಅನುಭವಿಸಬೇಕು. ಆ ಅನುಭವದಿಂದ ಜ್ಜಾನಪಡೆದುಕೂಳ್ಳಬಹುದು. ಅದು ಪೇಂಟಿಂಗ್.

    ಪ್ರತಿಕ್ರಿಯೆ
  3. VENKATESH

    ಮೌಢ್ಯತೆ ಇದ್ದಲ್ಲಿ ಎಲ್ಲವೂ ತಟಸ್ಥವಾಗಿರುತ್ತದೆ ಎಂಬುದು ಸತ್ಯ.ಆದರೆ ಚಿತ್ರಕಲೆ ಮೂಲಕ ಜಗತ್ತಿಗೆ ಮೌಢ್ಯತೆಯನ್ನು ತೊಗಿಸಲು ಕೆ.ಟಿ. ಆವರ ಒಳ್ಳೆಯ ಚಿಂತನೆ ಇದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ಕುಂಚ ಬುದ್ಧ ಬಿಡಿ ನೀವು,ಎಂದು ಸುವರ್ಣ ಮೇಡಂ ಬರೆದಿರುವುದು ನೀಜಕ್ಕೂ ಸತ್ಯ ಸರ್…. ಕೆ,ಟಿ ಅವರ ಚಿಂತನೆ ಇಂದಿಗೂ ಪ್ರಸ್ತುತ , ಆವರ ಕಲೆಯನ್ನು ನೋಡಿ ಅರ್ಥಯಿಸಿಕೊಳ್ಳಬೇಕು.

    ಪ್ರತಿಕ್ರಿಯೆ
  4. raghu

    ಚಿತ್ರಕಲೆಯನ್ನು ನೋಡಿ ಅನುಭವಿಸಬೇಕು.ಸುವರ್ಣ ಮೇಡಂ ಕೆ.ಟಿ.ಶಿವಪ್ರಸಾದ್ ಸರ್ ಅವರ ಚಿತ್ರಕಲೆಯ ಬಗ್ಗೆ ಬರೆದಿರುವುದು ತುಂಬಾ ಅದ್ಬುತವಾಗಿದೆ. ನಿಜಕ್ಕೂ ಕೆ.ಟಿ. ಕುಂಚ ಬುದ್ದ ನೆಮೌಢ್ಯತೆ ಇದ್ದಲ್ಲಿ ಎಲ್ಲವೂ ತಟಸ್ಥವಾಗಿರುತ್ತದೆ ಎಂಬುದು ಸತ್ಯ.ಆದರೆ ಚಿತ್ರಕಲೆ ಮೂಲಕ ಜಗತ್ತಿಗೆ ಮೌಢ್ಯತೆಯನ್ನು ತೊಗಿಸಲು ಕೆ.ಟಿ. ಆವರ ಒಳ್ಳೆಯ ಚಿಂತನೆ ಇದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು.

    ಪ್ರತಿಕ್ರಿಯೆ
  5. ಲಿಂಗರಾಜು ಬಿ.ಎಸ್.

    ಬುದ್ಧ ಮತ್ತು ಆನಂದನ ನಡುವಿನ ಒಂದು ಸಂಭಾಷಣೆ ಹೀಗಿದೆ. ” ಸಾಮಾನ್ಯ ಜನರಿಂದ ಹಿಡಿದು ಸಾಮ್ರಾಟರವರೆಗೂ ನಿಮ್ಮನ್ನು ಮಹಾ ತತ್ವéಜ್ಞಾನಿ ಎಂದೇ ಸಂಬೋಧಿಸುತ್ತಾರೆ. ಬುದ್ಧ ಎನ್ನುವುದು ಅದಕ್ಕಿಂತಲೂ ದೊಡ್ಡದೆನ್ನುವುದು ನನ್ನ ಭಾವನೆ” ಎನ್ನುತ್ತಾನೆ. ಅದಕ್ಕೆ ಬುದ್ಧ ಹೌದೆ! ನನಗದು ಕೇಳಿಸಿಯೇ ಇಲ್ಲ ಎನ್ನುತ್ತಾನೆ. ಇದನ್ನು ಕೇಳಿ ಅಚ್ಚರಿಗೊಳಗಾಗುವುದು ಆನಂದನ ಸರದಿ.
    ಅರ್ಥವಾಗಲಿಲ್ಲ ಎಂದು ಆನಂದ ಹೇಳುತ್ತಾನೆ. ಬುದ್ಧನಾಗುವುದು ಸಾಧನೆಯಿಂದ, ತತ್ವಜ್ಞಾನಿ ಆಗುವುದು ಕೂಡ ಹಾಗೆಯೇ. ಆದರೆ ಎಲೆಯಾಗದೆ ಗಿಡವಾಗಬಹುದು, ಆದರೆ ಮರವಾಗಲು ಸಾಧ್ಯವಿಲ್ಲ. ತತ್ವಜ್ಞಾನಿಯಾಗುವುದು ಎಲೆಯಾಗದೆ ಗಿಡವಾದಂತೆ, ಆದರೆ ಮರವಾಗುವುದು ಎಂದರೆ ಬುದ್ಧನಾಗುವುದು ಎಂದರ್ಥ. ಆದರೆ ನಾನಿನ್ನೂ ಮರವಾಗಿಲ್ಲ. ಇನ್ನೂ ಎಲೆಯಾಗಿಯೇ ಮರವಾಗಲು ಯತ್ನಿಸುತ್ತಿದ್ದೇನೆ ಎಂದು ಉತ್ತರಿಸುತ್ತಾನೆ.
    ಆದರೆ ಕೇಳಿಸಿಲ್ಲ ಎಂದಿರಲ್ಲ ಯಾಕೆ ಎನ್ನುತ್ತಾನೆ. ಆಗ ಬುದ್ಧ ಹೊಗಳುವುದು ಮೆಚ್ಚಿಸಲು, ನನಗೂ ಇದೆಲ್ಲಾ ಗೊತ್ತು ಎಂದು ತೋರಿಸಿಕೊಳ್ಳಲು, ಇವರೆಲ್ಲರಿಗೂ ಮುಕ್ತ ಮನಸ್ಸಿದ್ದರೆ ನಾನು ರಾಜನಾಗಿಯೋ ಇಲ್ಲ ಒಳ್ಳೇ ಗಂಡನಾಗಿ, ಉತ್ತಮ ತಂದೆಯಾಗಿ ಅಲ್ಲಿಯೇ ಉಳಿದಿರುತ್ತಿದ್ದೆ ಎಂದುತ್ತರಿಸಿದ. ಆನಂದ ಮೌನವಾಗುಳಿದ. ಬುದ್ಧ ಎದ್ದು ಕೊಳದ ಕಡೆಗೆ ನಡೆದ.
    ಸುವರ್ಣರವರು ಕೆ.ಟಿ.ಶಿವಪ್ರಸಾದ್ ರನ್ನು ಕುಂಚ ಬುದ್ಧ ಎಂದಿದ್ದಕ್ಕೆ ಈ ಪ್ರಸಂಗ ನೆನಪಾಯಿತು.ಲೇಖನ ಚೆನ್ನಾಗಿದೆ.
    ನೀವು ಕುಂಚ ಬುದ್ಧ ಎಂದಾಗ ಕೆ.ಟಿ.ಶಿವಪ್ರಸಾದ್ ಹೇಗೆ ಪ್ರತಿಕ್ರಿಯಿಸಿದರೋ ಗೊತ್ತಿಲ್ಲ. ಬಹುಶಃ ತಂಬಾಕಿನ ತುಟಿಯಲುಗಿಸಿ ನಕ್ಕು ಸುಮ್ಮನಾಗಿರಬೇಕು.

    ಪ್ರತಿಕ್ರಿಯೆ
  6. ನಾಗರಾಜ್ ಹೆತ್ತೂರ್

    ನಿಜ ಹೇಳಬೇಕೆಂದರೆ ಕೆ.ಟಿ. ನಮ್ಮೊಳಗಿನ ಬೆಳಕು. ನಾನು ಎಲ್ಲೋ ಕಳೆದು ಹೋಗುತ್ತಿದ್ದೇನೆ ಎಂದು ನನಗೆ ಅನ್ನಿಸಿದಾಕ್ಷಣ ಕೆ.ಟಿ. ಮಾತನಾಡಿಸಲು ಹೋಗುತ್ತೇನೆ. ಅವರ ಮಾತುಗಳ ಪ್ರಭಾವದಿಂದ ಒಂದಷ್ಟು ನಿರಾಳತೆ. ಏಕತಾನತೆ… ನಾವು ಅವರೊಂದಿಗೆ ಬದುಕುತಿದ್ದೇವೆ ಎನ್ನುವುದೇ ನಮ್ಮ ಪುಣ್ಯ ಅದು ಅವರ ನೆಚ್ಚಿನ ಶಿಶ್ಯಂದಿರಾಗಿ…

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Suvarna.cCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: