ಸಂಪಾದಕೀಯ
‘ಸಾಹಿತ್ಯಕ್ಕೂ ಪತ್ರಿಕೆಯೇ?’ ಎನ್ನುವುದು ಈಗ ಹುಬ್ಬೇರಿಸುವ ಸಂಗತಿ.
ಸಾಪ್ತಾಹಿಕ ಪುರವಣಿಗಳ ಮೂಲಕವೇ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿದ್ದ ಪತ್ರಿಕೆಗಳೇ ಈಗ ಅದನ್ನು ನಿರ್ದಾಕ್ಷಿಣ್ಯವಾಗಿ ಬದಿಗೆ ಸರಿಸುತ್ತಿರುವಾಗ ‘ಅವಧಿ’ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುತ್ತಿದೆ.
ಸಾಹಿತ್ಯ ಎನ್ನುವುದು ಲಾಭ ತಂದುಕೊಡುವ ಪ್ರಾಡಕ್ಟ್ ಅಲ್ಲ ಎನ್ನುವುದು ಟಿವಿ ಚಾನಲ್ ಗಳಿಗೆ ಈ ಮೊದಲೇ ಗೊತ್ತಿತ್ತು. ಪತ್ರಿಕೆಗಳು ಈಗ ಅರಿತುಕೊಂಡಿವೆ. ತಮ್ಮ ಕಿರೀಟಕ್ಕೆ ಒಂದು ಗರಿ ಇರಲಿ ಎನ್ನುವಂತೆ, ಗಾಳಿಪಟಕ್ಕೊಂದು ಬಾಲಂಗೋಚಿ ಎನ್ನುವಂತಾಗಿ ಹೋಗಿದ್ದ ಪುರವಣಿಗಳು ಕೋವಿಡ್ ಬಂದದ್ದನ್ನೇ ನೆಪವಾಗಿಸಿಕೊಂಡು ಅದರ ಉಸಿರನ್ನು ತಣ್ಣಗಾಗಿಸಿದೆ.
ಮಾಧ್ಯಮ ಎನ್ನುವುದೇ ‘ಝಣ ಝಣ ಕಾಂಚಣದಲ್ಲಿ, ಅಮೇರಿಕಾದ ಲಾಂಛನದಲ್ಲಿ, ಎಲ್ಲ ಮಾಯ, ಕೊನೆಗೆ ನಾವೇ ಮಾಯ’ ಎನ್ನುವ ಹಾಡಿಗೆ ಪ್ರೂಫ್ ಒದಗಿಸಲೆಂದೇ ದುಡಿಯುತ್ತಿವೆ.
ಸಾಹಿತ್ಯ ಎನ್ನುವುದು ಸದಾ ಆರೋಗ್ಯಕರ ಪ್ರತಿಪಕ್ಷ. ಹಾಗಾಗಿ ಇಂದಿನ ಮಾಧ್ಯಮದ ಸ್ಟ್ರಕ್ಚರ್ ಗೆ ಇದು ಹೊಂದುವ ಸಾಧ್ಯತೆಯೇ ಇಲ್ಲ. ಇದನ್ನು ಮಾಧ್ಯಮ ಕಂಪನಿಗಳ ಸಿಇಓಗಳು ಕಂಡುಕೊಂಡಿದ್ದಾರೆ.
ಇಂತಹ ಸಂಕ್ರಮಣ ಕಾಲದಲ್ಲಿ ‘ಅವಧಿ’ ಮತ್ತಷ್ಟು ಹುರುಪಿನಿಂದ ಬರುತ್ತಿದೆ. ನಮಗೆ ‘ಅವಧಿ’ಯನ್ನು ಮಿಣಿ ಮಿಣಿ ದೀಪವಾಗಿಯಾದರೂ ಉಳಿಸಿಕೊಳ್ಳಬೇಕೆಂಬ ಹಂಬಲ.
ನಾವು ವೆಂಚರ್ ಕ್ಯಾಪಿಟಲ್ ಗಳ ಹಿಂದೆ ಬಿದ್ದಿಲ್ಲ. ಬರಹಗಾರರನ್ನು ಒಂದು ಸಂಖ್ಯೆಯಾಗಿಸಿಕೊಂಡು ಅದನ್ನು ಇನ್ನೊಬ್ಬರ ಮುಂದಿಟ್ಟು ವ್ಯವಹಾರವಾಗಿಸುವ ಆಟದಲ್ಲಿಲ್ಲ.
ನಮಗೆ ಬರವಣಿಗೆ ಎನ್ನುವುದು ಸಹ ಉಸಿರಾಟ ನಡೆಸುವ ತಾಣ. ಸಮಾಜದಲ್ಲಿ ಮಾಯವಾಗಿ ಹೋಗುತ್ತಿರುವ ಈ ಉಸಿರಿನ ತಾಣಗಳನ್ನು ರಕ್ಷಿಸಿಕೊಳ್ಳುವತ್ತ ಗಮನ.
ನಮ್ಮೊಂದಿಗಿರಿ,
ಇಂದು ಸ್ವಾತಂತ್ರ್ಯದ ದಿನ. ಖ್ಯಾತ ನ್ಯಾಯಾಧೀಶ ವಿ ಎಸ್ ಕೃಷ್ಣಯ್ಯರ್ ಹೇಳಿದ್ದರು,
‘ನಮ್ಮ ಪೂರ್ವಜರು ನಾವು ಕೋಲಾ ಕುಡಿಯಲೆಂದು ಸ್ವಾತಂತ್ರ್ಯಕ್ಕಾಗಿ ಸೆಣಸಲಿಲ್ಲ’ ಎಂದು.
ಇದನ್ನೂ ನೆನಪಿಡೋಣ.
-ಜಿ ಎನ್ ಮೋಹನ್
ಅನೇಕ ಯುವ, ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹದೊಂದಿಗೆ ಮುನ್ನೆಲೆಗೆ ತಂದಿರುವ ಅವಧಿ ನೂರಾರು ವರ್ಷ ಚಿರಕಾಲವಾಗಿ ಉಳಿಯಲಿ. ಅವಧಿಯ ಹೊಸ ಆಕರ್ಷಕ ವಿನ್ಯಾಸ ಓದುಗರಲ್ಲಿ ಮತ್ತು ಬರಹಗಾರರಲ್ಲಿ ಇನ್ನಷ್ಟು ಹುರುಪನ್ನು ತಂದಿದೆ.
ಬದಲಾದ ಸ್ವರೂಪದ ಮೆಚ್ಚಿನ “ಅವಧಿಗೆ ಪ್ರೀತಿಯ ಶುಭಾಶಯಗಳು… ಸಾಹಿತ್ಯವನ್ನು ಮುಖ್ಯನೆಲೆಯಲ್ಲಿ ನಿಲ್ಲಿಸುವ ಮಹದಾಶೆಯ ಸಂಪಾದಕರಾದ, ಜಿ. ಎನ್. ಮೋಹನ್ , ನಿಮಗೂ ಹಾರ್ದಿಕ ಅಭಿನಂದನೆಗಳು…
ಅವಧಿಯ ಹೊಸ ಸ್ವರೂಪಕ್ಕೆ ಹಾರ್ದಿಕ ಶುಭಾಶಯಗಳು. ಇನ್ನಷ್ಟು ಜನರನ್ನು ತಲುಪಲಿ. ಇನ್ನಷ್ಟು ಲೇಖಕರನ್ನು ಬರೆಯುವಂತೆ ಪ್ರೋತ್ಸಾಹಿಸಲಿ.
ಅವಧಿ, ಬರೆಯಲು ತುಡಿಯುವ ಹೃದಯಗಳಿಗೆ ಪ್ರೋತ್ಸಾಹದ ತನಿರಸವನ್ನೆರೆಯುವ ಅಕ್ಷರಜಾಲ ! ಈ ತಿಳಿವಿನ ಸೆಲೆ ನಿರಂತರವಿರಲಿ! ಅಭಿನಂದನೆ ಅವಧಿ ಬಳಗಕ್ಕೆ.
ಅವಧಿಯ ನಿಲುವು ಅಭಿನಂದನಾರ್ಹ.