ಚೇತನಾ ತೀರ್ಥಹಳ್ಳಿ
ಎಷ್ಟೊಂದು ಕಂಬ ಸಾಲು?
ಕಂಬ ಕಂಬ ತಬ್ಬಿ ನಿಂತಿವೆ ಉಪ್ಪಿನಾಟದ ಮಕ್ಕಳು.
ಎಲ್ಲಿ ಹೋದವು ಆ ನನ್ನ ದಿನಗಳು?
ಉಪ್ಪು ಬೇಕಾ ಉಪ್ಪು…
ಉಪ್ಪಿನ ಋಣ ತೀರಿಸಬೇಕಿನ್ನೂ.
ಅರಳಿ ಮರದ ಕೆಳಗೆ ಅನಾಥೆ, ಅಳುತ್ತಿದ್ದೆನಂತೆ.
ಅಂಗೈಲಿಟ್ಟು ಸಾಕಿದರು. ನಿಜ.
ಕಣ್ರೆಪ್ಪೆ ಹಾಗೆ ಕಾದರು.
ಈಗಿನ ಕಾಲದಲ್ಲಿ ಹೀಗೆ… ಅಪರೂಪದ ಜನ-
ಅಪ್ಪ, ಅಮ್ಮ.
ಅವರ ಮನೆಗೆ ಹೀಗೊಬ್ಬ ಬರುತ್ತಾನೆ ಯಾವಾಗಲೂ…
ಹದಿನಾಲ್ಕಕ್ಕೇ ಮದುವೆಯಾಗಿತ್ತಂತೆ.
ಈಗ ಇಪ್ಪತ್ತು. ಚೊಚ್ಚಲ ಬಾಣಂತಿ ಹೆಂಡತಿ, ಹಾಗೇ ಹೊರಟುಹೋದಳು.
ಅಂವ ಪುರೋಹಿತ.
ಹೆಂಡತಿ ಸತ್ತು ಹೊಟ್ಟೆಪಾಡಿಗೆ ಸೊನ್ನೆ.
ಮದುವೆ, ಮುಂಜಿ, ತಿಥಿ…
ಜೀವನ ನಡೆಯಬೇಕು.
ಛೆ! ನಾನು ನೆರೆಯಲೇಬಾರದಿತ್ತು.
ವಾರಗೆಯ ಹುಡುಗಿಯರೀಗ ಹೈಸ್ಕೂಲು ಮುಗಿಸುತ್ತಾರೆ.
ಓ! ನಾಳೆ ತಪ್ತ ಮುದ್ರಾಂಕ ಧಾರಣೆ ನನಗೆ!!
ಯಾವ ಜಾತಿಯೋ… ನಾನು ಯಾವ ಕುಲವೋ?
ದೋಷವೆಲ್ಲ ಸುಟ್ಟುಹೋಗುವುದಂತೆ!
ಅಮ್ಮ ಯಾರ ಹತ್ತಿರವೋ ಹೆಳುತ್ತಿದ್ದಾರೆ-
“ಜೋಡು ಜಡೆಯ ಪುಟ್ಟ ಭಾಗೀರಥಿ,
ಇನ್ನು “ಆಚಾರ್ರ ಹೆಂಡತಿ”ಯಾಗುತ್ತಾಳೆ…
ಭಾಗಮ್ಮಳಾಗಿ, ಅವರಿವರಿತ್ತ ಬಾಗಿನ ಹೊರುತ್ತಾಳೆ!”
Nice poem
ಎಲ್ಲಿ ಹೋದವು ಆ ನನ್ನ ದಿನಗಳು?
ಉಪ್ಪು ಬೇಕಾ ಉಪ್ಪು…
ಉಪ್ಪಿನ ಋಣ ತೀರಿಸಬೇಕಿನ್ನೂ. These nice lines