’ಪುಕುಶಿಮಾ ದುರಂತಕ್ಕೆ ಮೂರು ವರುಷ…’ – ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್


2011ರ ಎರಡನೆಯ ಸುನಾಮಿ ದುರಂತ ನಿಸರ್ಗ ಕೊಡುತ್ತಿರುವ ಮುನ್ನಚ್ಚರಿಕೆ ಎಂದು ಪರಿಗಣಿಸಬೇಕಿದೆ. ಇದು 2004 ರ ಹಿಂದೂಮಹಾಸಾಗರದಲ್ಲಿ ಎದ್ದ ಸುನಾಮಿಯಷ್ಟು ಪ್ರಬಲವೂ ವಿಸ್ತಾರವೂ ಅಲ್ಲದಿದ್ದರೂ ಅತ್ಯಂತ ಎಚ್ಚರಿಕೆಯ ನಡೆಗಳನ್ನು ನಮಗೆ ಮನದಟ್ಟು ಮಾಡಿಕೊಟ್ಟಿದೆ. ನಿಸರ್ಗದ ಮೇಲಿನ ಮಾನವ ದೌರ್ಜನ್ಯಕ್ಕೆ ಅದರ ಪ್ರತಿರೋಧವೇ ಈ ರೀತಿಯಲ್ಲಿ ಹೊರಹೊಮ್ಮುತಿರುವುದು ತಿಳಿಯದ ವಿಷಯವೇನಲ್ಲ.. ಆದ್ರೆ 2011ರ ಸುನಾಮಿಯು 2ನೇ ಬಾರಿ ಜಪಾನ್ ದೇಶ ತನ್ನ ‘ಅಣು’ ತಂತ್ರಜ್ಞಾನಕ್ಕೆ ತಾನೇ ಬಲಿಯಾಗುವಂತೆ ಮಾಡಿತು.
1945ರಲ್ಲಿ ಅಮೇರಿಕೆಯು ಎರಡನೆಯ ಮಹಾಯುದ್ದದ ಸಮಯದಲ್ಲಿ ಜಪಾನಿನ ಹಿರೋಷಿಮಾ-ನಾಗಸಾಕಿ ನಗರಗಳನ್ನು ಅಣ್ವಸ್ತ್ರ ಬಳಸಿ ಧ್ವಂಸಗೊಳಿಸಿದ್ದನ್ನು ಇತಿಹಾಸವೇನು.. ವರ್ತಮಾನದಲ್ಲಿ ಬದುಕುತ್ತಿರುವ ಜನ ಕೂಡ ಮರೆಯಲಾರರವು. ಆ ವಿಷಗಳಿಗೆಯ ನರಹಂತಕ ನಿರ್ಧಾರಗಳನು ಮುಂದಿನ ಪೀಳಿಗೆಯ ಜನ ಕ್ಷಮಿಸಲಾರರು. ಆದರೂ ಅದೆಲ್ಲವನ್ನೂ ಮರೆಯುವಂತೆ ದಶಕಗಳಲ್ಲಿ ಇಡೀ ಜಪಾನ್ ದೇಶ ಪಶ್ಚಿಮದೇಶಗಳು ಮಮ್ಮಲ ಮರುಗುವಂತೆ ಬೆಳೆಯಿತು. ವಿಜ್ಞಾನ, ತಂತ್ರಜ್ಞಾನ, ಎಲೆಕ್ಟಾನಿಕ್ಸ್, ಕೃಷಿ ಎಲ್ಲದರಲ್ಲೂ ಮುನ್ನುಗ್ಗಿತು… ಅದೇ ‘ಅಣು’ ತಂತ್ರಜ್ಞಾನದಲ್ಲೂ ಸಹ. ಜಪಾನ್ ನಾಗರಿಕ ಸೇವೆಗಳಿಗೆ ಬಳಸಲು ಶುರು ಮಾಡಿತ್ತಾದರೂ ಅಣು ತ್ಯಾಜ್ಯ ಎಂದಿಗೂ ಮಾನವಕಂಟಕವೇ ಅಲ್ಲವೇ? 2011 ರ ಸುನಾಮಿಯಲ್ಲಿ ‘ಫುಕುಶಿಮಾ ಅಣು ಸ್ಥಾವರ’ದಲ್ಲಿ ಉಂಟಾದ ಅಣು ವಿಕಿರಣದ ಸೋರಿಕೆಯಿಂದ ರಕ್ಷಿಸಲು 3 ಲಕ್ಷದಷ್ಟು ಜನರನ್ನು ಸ್ಥಳಾಂತರಗೊಳಿಸಿ.. ತಾತ್ಕಾಲಿಕ ವ್ಯವಸ್ತೆಗಳನ್ನು ಕಲ್ಪಿಸಲಾಯಿತು.. ಆಸ್ಪತ್ರೆಗಳಿಗೆ ಸೇರಿಸಲಾಯಿತು.. ನೀರು, ನೆಲ, ಗಾಳಿ ಎಲ್ಲವೂ ವಿಕಿರಣಮಯವಾಯಿತು.. ಬದುಕು ದುಸ್ತರವಾಯಿತು.. ಅಣು ವಿಕಿರಣ ನಿಸರ್ಗವನ್ನಷ್ಟೆ ಅಲ್ಲ.. ಜೀವರಾಶಿಗಳಿಗೂ ಕಂಟಕಪ್ರಾಯ.. ಮಾನವನಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ. ಅಂದಿನ ಚಿತ್ರಣಗಳನ್ನು ನಾವೆಲ್ಲ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ನೋಡಿದ್ದೇವೆ.. ಕಡೆಗೆ ಇಡೀ ಪ್ರಾಂತ್ಯವನ್ನೇ ಜನನಿರ್ಬಂಧಗೊಳಿಸಲಾಯಿತು.. ಕಳೆದ ಜನವರಿಯಲ್ಲಿ ಮೂರು ವರ್ಷಗಳ ನಂತರ ಅಲ್ಲಿಗೆ ಪುನಃ ಜನಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಅದೂ ತಿಂಗಳಿಗೆ ಒಮ್ಮೆ, ಹಗಲು ಮಾತ್ರ ತಮ್ಮ ಮನೆಗಳಿಗೆ ಭೇಟಿನೀಡಬಹುದಾಗಿದೆ.
ಜಪಾನಿನ ಸರ್ಕಾರ ಹಾಗೂ ಅಲ್ಲಿರುವ ಪ್ರಕೃತಿ ವಿಕೋಪಗಳಿಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಅದರ ಬಗೆಗೆ ಅಲ್ಲಿರುವ ಕಾರ್ಯಶೀಲ ನೀತಿನಿರೂಪಣೆಗಳು ಪರಿಸ್ತಿತಿಯನ್ನು ತಹಬಂದಿಗೆ ತರಲು ಸಹಕಾರಿಯಾದವು. ಆದ್ರೆ ನಮ್ಮಂತಹ ದೇಶಗಳ ಗತಿಯೇನು?! ಜಪಾನ್ ತನ್ನೆಲ್ಲ ಅಣು ಸ್ಥಾವರಗಳನ್ನು ಸದ್ಯಕ್ಕೆ ಮುಚ್ಚಿದೆ.. ಅದಾಗಲೇ ಜರ್ಮನಿ ಅಣುವಿದ್ಯುತ್ ನಿಲ್ಲಿಸಿ ಸೌರವಿದ್ಯುತ್ ಕಡೆಗೆ ಮುಖ ಮಾಡಿದೆ…
ಹಾಗಿದ್ರೆ ನಮ್ಮ ಕಥೆ ಏನು?
120+ ಕೋಟಿ ಜನಸಂಖ್ಯೆಯ ಭಾರತಕ್ಕೆ ಎಷ್ಟು ಉತ್ಪಾದಿಸಿದರೂ ಕೊರತೆ ನೀಗುವುದಿಲ್ಲ… ಬಹುತೇಕ ಎಲ್ಲ ರಾಷ್ಟ್ರಗಳು ಸಧ್ಯಕ್ಕೆ ಅಣುವಿಜ್ಞಾನವನ್ನು ನಾಗರಿಕ ಸಂಪನ್ಮೂಲಗಳಿಗಾಗಿ ಬಳಸುತ್ತಿದ್ದಾರೆ. ಜಗತ್ತಿನಾದ್ಯಂತ ಅಣು ದುರಂತಗಳು ಸಂಭವಿಸುತ್ತಲೇ ಇರುವಾಗ ನಮ್ಮವು ಸುರಕ್ಷಿತವಾಗಿವೆ ಎಂದೇ ಇಲ್ಲಿನ ಸರ್ಕಾರಗಳು ಹೇಳುತ್ತವೆ… ಆದರೆ ಎಷ್ಟರ ಮಟ್ಟಗಿನ ಸುರಕ್ಷಿತತೆ? ಹೊರದೇಶಗಳೊಂದಿಗೆ ಆಗಿರುವ ಅಣು ಒಪ್ಪಂದವೇನು? ಅಣು ತ್ಯಾಜ್ಯದ ರವಾನೆ-ನಿರ್ವಹಣೆ ಹೇಗೆ? ಈ ಎಲ್ಲ ಗೊಂದಲಗಳಿಗೂ ಇನ್ನೂ ಸ್ಪಷ್ಟವಾದ ವರದಿಗಳು ಸಿಕ್ಕಿಲ್ಲ. ಸಾಮಾನ್ಯ ಜನರಲ್ಲಿ ‘ಅಣು ವಿಜ್ಞಾನ’ ಕುರಿತು ಅಂತಹ ತಿಳುವಳಿಕೆಗಳು ಇಲ್ಲವೇ ಇಲ್ಲ.
ಅಣು ಶಕ್ತಿಯ ಉತ್ಪಾದನೆ ಇವತ್ತು ಕೇವಲ ನಾಗರಿಕ ಸಂಪನ್ಮೂಲಕ್ಕೆ ಮಾತ್ರವೆನಿಸಿದರೂ ಅವುಗಳ ಹಿಂದೆ ದೊಡ್ಡ ದೇಶಗಳ ವ್ಯಾಪಾರ ಅಡಗಿದೆ, ಹಾಗೂ ತಂತ್ರಜ್ಞಾನಗಳ ಮೇಲಿನ ಹಿಡಿತ, ಆಧುನಿಕ ವಸಾಹತುಶಾಹಿ ಲಕ್ಷಣಗಳಾಗಿ ಗೋಚರಿಸುತ್ತಿವೆ… ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಅನಿವಾರ್ಯವಾಗಿ ಇವುಗಳಿಗೆಲ್ಲ ಪಾಲ್ಗೊಳ್ಳಲೇಬೇಕಾದ ಸಾಂಸ್ಥಿಕ ಬಿಕ್ಕಟ್ಟುಗಳು ನಿರ್ಮಾಣವಾಗಿವೆ. ದೇಶದಲ್ಲಿ ಮತ್ತೆ ಮತ್ತೆ ಬಹುದೊಡ್ಡ ಕೈಗಾರಿಕೆಗಳು ನಿರ್ಮಾಣವಾಗುತ್ತಿವೆ, ಜನಸಂಖ್ಯೆ ಏರು ಮುಖವಾಗುತ್ತಲೆ ಇದೆ.. ವಿದ್ಯುತ್ ಬೇಡಿಕೆಗೆ ಈಗಿರುವ ಜಲ ವಿದ್ಯುದ್ಗಾರಗಳ ಉತ್ಪತ್ತಿ ಸಾಲುತ್ತಿಲ್ಲ. ಇದರ ನಿವಾರಣೆಗೆ ಮತ್ತೆ ಇನ್ನೊಂದಷ್ಟು ಅಣು ಸ್ಥಾವರಗಳ ನಿರ್ಮಾಣ. ಯಾವುದೇ ಸರ್ಕಾರಗಳು ಬಂದರೂ ಇಲ್ಲಿನ ನೀತಿ-ನಿರೂಪಣೆಗಳು ಬದಲಾಗಲು ಸಾದ್ಯವಿಲ್ಲ. ನಾವು ಜನರೇ ಇಂತಹ ವಿಷಯಗಳಲ್ಲಿ ಮೊದಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ವಿದ್ಯುತ್ ಅವಲಂಬನೆ ಕಡಿಮೆ ಮಾಡಿ ಸೌರವಿದ್ಯುತ್ ಬಳಸಲು ಅನುವಾಗಬೇಕು. ಪ್ರತಿಯೊಂದಕ್ಕೂ ಸರ್ಕಾರಗಳ ಕಾರ್ಯಯೋಜನೆಗೆ ಕಾಯುದನ್ನು ಬಿಟ್ಟು ಪ್ರತಿ ಮನೆಯು ತನ್ನದೇ ಶಕ್ತಿ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಳ್ಳಬೇಕು. ಶಕ್ತಿಯ ಅಪವ್ಯಯ ತಡೆಗಟ್ಟಬೇಕು.
ಹೊಸ ಅಣುಸ್ಥಾವರಗಳಿಗೆ ಅವಕಾಶ ಕೊಡಬಾರದು. ಜಪಾನಿನ ಒನಗವ & ಪುಕುಶಿಮಾ , ರಷ್ಯಾದ ಚರ್ನೋಬಿಲ್ ಅಣುದುರಂತಗಳ ಪ್ರತ್ಯಕ್ಷ ನಿದರ್ಶನ ಇರುವಾಗ ನಾವು ಎಚ್ಚೆತ್ತುಕೊಳ್ಳಲಿಲ್ಲವಾದ್ರೆ ಮುಂದೆ ಬಹು ದೊಡ್ಡ ದುರಂತಗಳಿಗೆ ಸಾಕ್ಷಿಯಾಬೇಕಾದ ಪ್ರಮೇಯ ಬಂದಿತು. ಈ ಪುಟ್ಟ ಟಿಪ್ಪಣಿಯನ್ನು ಬರೆದು ಮುಗಿಸುವ ವೇಳೆಗೆ ಜಪಾನ್ ಪ್ರಧಾನಿ ಶಿಂಜ಼ೋ ಅಬೆ ಆ ದೇಶದ ಎಲ್ಲ ಅಣು ಸ್ಥಾವರಗಳು ಸುರಕ್ಷಿತವಾಗಿದ್ದು ಪುನರಾರಂಭವನ್ನು ಮಾಡುವುದಾಗಿ ಅವರ ಸಂಸತ್ತು ‘ಡಯೆಟ್’ ನಲ್ಲಿ ಖಚಿತಪಡಿಸಿದ್ದಾರೆ! ಅಣ್ವಸ್ತ್ರಗಳು, ಅಣು ಸ್ಥಾವರಗಳು ಮೆದುಳು ಕೊಳೆಯುವ ರೋಗದಂತೆ ನಮ್ಮನ್ನು ನಾಶಪಡಿಸದೆ ಬಿಡವು ಎಂಬ ವಿಷಾದ ಅದಾಗಲೇ ನಮಗೂ ಖಚಿತವಾಗುತ್ತ ಇದೆ… ಆದಾಗ್ಯೂ ಭಾರತದ ಜನ ಇಂತಹ ಅಣು ಸಂಬಂಧಿ ಕಾರ್ಯಕ್ರಮಗಳಿಂದ ದೂರವಾಗಬೇಕಾದ ಅಗತ್ಯತೆ ಇವತ್ತಿಗೆ ಇದೆ. ಮುಂದಿನ ಪೀಳಿಗೆಗಳ ಬದುಕು ದೃಷ್ಟಿಯಿಂದ ಸ್ವಯಂ ನಿಯಂತ್ರಣ ಹೇರಿಕೊಳ್ಳುವುದು ಒಳಿತು.
 
ಅಣುಚರಿತೆಯ ರಕ್ತಹೆಪ್ಪಿಟ್ಟ ಬಟ್ಟಲಿನಿಂದ
ದೇಶದೇಶಗಳ ಖಜಾನೆಯನ್ನು
ನುಂಗಿಬಿಟ್ಟೆ
ಬಡವನ ಅನ್ನದ ಬಟ್ಟಲು ಖಾಲಿಯಿತ್ತು
ನಿನ್ನ ಬೋಗುಣಿ ತುಂಬಿಸಿಕೊಂಡೆ
ಜಗದ ರಕ್ತ ಹೆಪ್ಪುಗಟ್ಟಿದೆ ಅಲ್ಲಿ.
***
ಲೋಕದ ಕೊರಳು ಕುಯ್ಯಲು
ನಿನ್ನ ಮಸೆದು ಮಸೆದು
ಪೂರ್ಣಕುಂಭಗಳಲಿ ತುಂಬಿದ್ದಾರೆ
‘ಅಣು’ವೇ
ನೀನು ಸಾವಾಣು..
ನಿನ್ನ ಸೋಂಕು ಎಲ್ಲಿಯವರಗೆ?
ಅಹಮ್ಮುಗಳು ಗಡೀಪಾರು ಆಗುವವರೆಗೇನು!
ಅದಾಗುವುದಿಲ್ಲ ಆವರಿಸು.. ಆವರಿಸು..
ಜಗತ್ತು ಬಾಗಿದೆ!
***
ಇಲ್ಲಿ .. ಈ ಉಪಖಂಡದಲ್ಲಿ ನಿನ್ನ ಹೆಜ್ಜೆಗಳು
ಸ್ಪಷ್ಟವಾಗುತ್ತಿವೆ
ಅಳಿಯದ ಹೆಜ್ಜೆಗುರುತುಗಳು
ಜಗದ ಜೀವಕೋಟಿ ನಗುವ ಊರಿನಲ್ಲಿ
ವಿಷದ ಬಾಂಬೆ ಮಿಠಾಯಿ ನೀನು
ಹಂಚಲು ನಿಂತಿರುವರು
ಜೀವದಲ್ಲಾಳಿ ನಾಯಕರು.
ಗಾಂಧಿಯ ಆತ್ಮಕ್ಕೆ ನೇಣು ಬೀಗಿದವರು!

‍ಲೇಖಕರು G

March 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Avinash Kannammanavar

    ನಮ್ಮ ಸರ್ಕಾರಗಳು ನಡೆದು ಹೋದ ಘಟನೆಗಳಿಂದ ಕಲಿಯುವುದಿಲ್ಲ, ನೋಡಿ ಕುಮ್ಬಕೋಣ೦ ಅಲ್ಲಿ ಸ್ತಾಪಿಸಿರುವ ಅಣುಸ್ಥಾವರ ಜಗತ್ತಿನಲ್ಲಿಯೇ ಮೊದಲ ಭಾರಿಗೆ ಬೇರೆ ಯಾವೋದು ಹೊಸ ಕಾರ್ಯ ವಿಧಾನ ಹೊಂದಿರುವ೦ತಹದು, ಬೇರೆ ದೇಶಗಳ ವ್ಯಾಪಾರಿ ಹುನ್ನಾರವನ್ನು ಅರಿಯದೆ ನಮ್ಮ ಸರ್ಕಾರಗಳು ತನ್ನ ಪ್ರಜೆಗಳ ಮೇಲೆಯೇ ಸಾವಿನ ಸವಾರಿ ಮಾಡುತ್ತಿದೆ, ವಿರೋದಿಸಿದವರನ್ನು ದೇಶದ್ರೋಹಂದಂತಹ ಕಲಮುಗಳಲ್ಲಿ ಬಂಧಿಸುತ್ತಿದೆ. ನಾವೆಲ್ಲ ನಾಗರಿಕತೆಯ ಅವನತಿಯತ್ತ ಸಾಗುತ್ತಿದೇವೆ ಅಷ್ಟೇ !

    ಪ್ರತಿಕ್ರಿಯೆ
  2. Rajendra Prasad

    @ಅವಿನಾಶ್ : ಅದು ಕುಂದಂಕೂಳಂ ಅಣುಸ್ಥಾವರ.. “the harbinger of the large-size LWR technology” ಅನ್ನು ಭಾರತದಲ್ಲಿ ಮೊದಲ ಬಾರಿಗೆ ಬಳಸಲಾಗಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: