ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.
ಈ ಬಗ್ಗೆ ನಾ.ದಿವಾಕರ ಅವರು ಬರೆದಿರುವ ‘ಪ್ರಸನ್ನ ಮತ್ತೊಬ್ಬ ಅಣ್ಣಾ ಹಜಾರೆಯಂತೆ ಕಾಣುತ್ತಾರೆ’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.
ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.
ಇದೀಗ ಡಿ.ಎಸ್. ರಾಮಸ್ವಾಮಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ-
ಡಿ.ಎಸ್. ರಾಮಸ್ವಾಮಿ
ಹೌದು ನಾ. ದಿವಾಕರ ಅವರ ವಾದವನ್ನು ಸಮರ್ಥಿಸಲೇ ಬೇಕು. ಪವಿತ್ರ ಎನ್ನುವ ಪದವೇ ಸ್ಥಾಪಿತ ವ್ಯವಸ್ಥೆ ಸೃಷ್ಟಿಸಿರುವ ಹೊಂಡ ಅಥವಾ ಖೆಡ್ಡ. ಇದನ್ನು ದಾಟಿ ಮುಂದುವರೆಯಲು ಪ್ರಯಾಸದ ಜೊತೆಗೇ ಆರ್ಥಿಕತೆಯ ಸರಿಯಾದ ತಿಳುವಳಿಕೆಯ ಅಗತ್ಯವಿದ್ದೇ ಇದೆ. ಪವಿತ್ರ ಆರ್ಥಿಕತೆ ಎಂದು ಬಿಂಬಿಸುತ್ತಿರುವ ಪದ ಕೂಡ ಅಂಥದ್ದೇ.
ಪ್ರಸನ್ನ ಅವರ ನಿರಶನದ ಉದ್ದೇಶವನ್ನು ಇಲ್ಲಿ ಪ್ರಶ್ನಿಸುತ್ತಿಲ್ಲ. ಆದರೆ ಜಾಗತೀಕರಣದ ಕಾಲದಲ್ಲಿ ಬದಲಾದ ಅರ್ಥಶಾಸ್ತ್ರದ ಪರಿಜ್ಞಾನವೇ ಇಲ್ಲದೆ ಸುಮ್ಮನೆ ಬೊಂಬಡ ಬಡಾಯಿಸುತ್ತಿರುವವರನ್ನು ಹಾಗೇ ತನ್ನ ಮೂಗಿನ ನೇರದ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಾ ದೇಶದ ಜನಸಾಮಾನ್ಯರ ನಿತ್ಯ ಜೀವನವನ್ನು ಕಂಗೆಡಿಸುತ್ತಿರುವ ಕೇಂದ್ರ ಸರ್ಕಾರವನ್ನೂ ಎದುರಿಸುವ ತಾಕತ್ತು ಇಂಥ ಚಳವಳಿಗಳ ಮೂಲಕವಾದರೂ ಹುಟ್ಟಲಿ ತನ್ಮೂಲಕ ಆರ್ಥಿಕ ಕ್ಷೇತ್ರದ ಬಿಕ್ಕಟ್ಟುಗಳಿಗೆ ಪರ್ಯಾಯ ಚಿಂತನೆಯ ದಾರಿಯಾಗಿ ಬದಲಾಗಲಿ ಎನ್ನುವುದು ಹಾರೈಕೆ.

ಆರ್ಥಿಕ ನೀತಿಗಳಿಗೆ ಪವಿತ್ರ, ಅಪವಿತ್ರ ಎನ್ನುವುದು ಇರುವುದಿಲ್ಲ. ಚರ್ಮದ ನಾಣ್ಯಗಳನ್ನೂ ಬೆಳ್ಳಿ, ಬಂಗಾ,ರ ತಾಮ್ರದ ಹಣಕ್ಕೆ ಸಮನಾಗಿ ಕಂಡ ಇತಿಹಾಸ ಇದ್ದೇ ಇದೆಯಲ್ಲ.
ಖಾಸಗಿ ಮತ್ತು ಸರ್ಕಾರಿ ವ್ಯವಸ್ಥೆಗಳ ವ್ಯತ್ಯಾಸ ಮತ್ತು ಅವನ್ನು ಮುನ್ನಡೆಸುವ ವ್ಯಕ್ತಿಗಳ ಬೌದ್ಧಿಕತೆ ದೇಶದ ಅರ್ಥ ವ್ಯವಸ್ಥೆಯ ಹಿಂದಣ ಶಕ್ತಿಗಳು. ವಸ್ತುವೊಂದರ ಉತ್ಪಾದನೆ ವಿತರಣೆ ಮತ್ತು ನಿಯಂತ್ರಣವೇ ಅರ್ಥಶಾಸ್ತ್ರ. ಜಾಗತೀಕರಣ ಮತ್ತು ನವ ಉದಾರವಾದ ಸೃಷ್ಟಿಸಿದ್ದ ಭ್ರಮಾಲೋಕ ಸ್ವಲ್ಪ ಸ್ವಲ್ಪವಾಗಿ ಕರಗಿ ಅದು ಹಿರಿಯಣ್ಣನ ತೆಕ್ಕೆಯ ಕನಸ ಕೂಸೆಂಬುದು ಸ್ಪಷ್ಟವಾಗುತ್ತಿದೆ. ಪವಿತ್ರ ಆರ್ಥಿಕತೆ ಅನ್ನುವುದು ಕೂಡ ಹೊಸ ನಿಘಂಟು ಟಂಕಿಸಿದ ಅರ್ಥ ರಹಿತ ಪದ.
ಸದ್ಯ ನಮ್ಮೆಲ್ಲರ ಸಮಸ್ಯೆಗಳಿಗೆ ಯಂತ್ರ ನಾಗರಿಕತೆ ಕಾರಣವಲ್ಲ ಬದಲಿಗೆ ಅದು ಯಂತ್ರ ನಾಗರಿಕತೆಯ ವಾರಸುದಾರರ ಲಾಭಕೋರತನದ ಪರಾಕಾಷ್ಠೆಯಷ್ಟೇ.
ಆದರೂ ಪ್ರಸನ್ನ ಅವರ ಹರತಾಳ ಏನೆಲ್ಲವನ್ನೂ ನುಂಗಿ ನೊಣೆದಿರುವ ವ್ಯವಸ್ಥೆಯ ವಿರುದ್ಧ ಸಶಕ್ತವಾಗಿ ನಿಲ್ಲಬಲ್ಲುದೆ ಮತ್ತದಕ್ಕೆ ಆರ್ಥಿಕತೆಯ ಕುರಿತಾಗಿ ಸ್ಪಷ್ಟ ನಿಲುವುದಿಯೇ ಎನ್ನುವುದೂ ಇಲ್ಲಿ ಮುಖ್ಯ.






ಪವಿತ್ರ ಆರ್ಥಿಕತೆ ಪದದ ಬಗ್ಗೆ ಆಕ್ಷೇಪಗಳು ಏನೇ ಇದ್ದರೂ ಪ್ರಸನ್ನ ಹರತಾಳ ನೈತಿಕವಾಗಿ ಸರಿ ಇದೆ.ವ್ಯವಸ್ಥೆಯ ದುರ್ವರ್ತನೆಗಳ ಬಗ್ಗೆ ಮೂಕರಾಗಿ ಬಿಟ್ಟರೆ ನಾಳೆ ನಮ್ಮೆಲ್ಲರ ಬುಡಕ್ಕೆ ಬೆಂಕಿ ಬೀಳುವುದು ಗ್ಯಾರಂಟಿ. ಹೊಸ ಅರ್ಥಶಾಸ್ತ್ರ, ಜಾಗತೀಕರಣದ ತತ್ವ ಮತ್ತು ಮಾತುಗಳು ಏನೇ ಇರಲಿ ,ವ್ಯವಸ್ಥೆಯ ಕೆಟ್ಟ ಮುಖದ ವಿರುದ್ಧವಾಗಿ ನಿಲ್ಲುವುದು,ತನ್ನ ಪ್ರತಿಭಟನೆಯನ್ನು ಹೊರ ಹಾಕುವುದು ಒಂದು ಒಳ್ಳೆಯ ಮತ್ತು ನೈತಿಕತೆಯ ದಾರಿ.ಗಾಂಧಿ ಬಂದು 150 ವರ್ಷಗಳಾದ ಈ ಸಂದರ್ಭದಲ್ಲಿ ಒಂದು ಮಹತ್ವದ ಪ್ರತಿಭಟನೆ ಎನ್ನಬಹುದು.ಕನಿಷ್ಠ ಕಟ್ಟಿ ಕಡೆಯ ಪ್ರಜೆಗೂ ಪ್ರಸನ್ನರ ಸತ್ಯಾಗ್ರಹ ಒಂದು ಬಲ ನೀಡುತ್ತದೆ ಎಂದು ಆಶಿಸುತ್ತೇನೆ.