‘ದೇಶ ಕುಲಕರ್ಣಿ ಇನ್ನಿಲ್ಲ’ ಎಂಬ ಸುದ್ದಿ ಕೇಳಿದ ತಕ್ಷಣ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಜೊತೆ ಮಾತನಾಡುತ್ತಾ ನಿಂತಿದ್ದ ಜಯಂತ ಕಾಯ್ಕಿಣಿ ‘ಸೋಲೋ’ ಕಥಾ ಸಂಕಲನ ನೆನಪಿಸಿಕೊಂಡರು. ಎಷ್ಟು ಚೆನ್ನಾಗಿತ್ತು ಆ ಕಥೆಗಳು ಎಂದರು
ನವ್ಯ ಚಳವಳಿಯಲ್ಲಿ ‘ದೇಕು’ ‘ಮಾಕು’ ಎಂಬ ವಿಮರ್ಶಕ ಜೋಡಿ ಹೆಸರು ಮಾಡಿತ್ತು. ಅದು ದೇಶ ಕುಲಕರ್ಣಿ (ದೇಕು) ಹಾಗೂ ಮಾಧವ ಕುಲಕರ್ಣಿ (ಮಾಕು). ದೇಶ ಕುಲಕರ್ಣಿ ಸದ್ದು ಗದ್ದಲವಿಲ್ಲದ ವ್ಯಕ್ತಿ. ಅವರ ವಿಮರ್ಶೆಯಂತೆ. ಯಾವುದೇ ಸಾಹಿತ್ಯ ಕಾರ್ಯಕ್ರಮಗಳಲ್ಲೂ ಇದ್ದರೋ ಇಲ್ಲವೊ ಎನ್ನುವಂತೆ ಇದ್ದು ಹೋಗುತ್ತಿದ್ದವರು.
ಅವರು ನೆಪವಿಲ್ಲದ ಪ್ರೀತಿ, ಕೊಂಪೆಯಲ್ಲಿ ಕೋಗಿಲೆ, ಕೊಂಪೆ- ಋತು ಸಂಹಾರ, ಪಂಪಾ ಯಾತ್ರೆ, ಕೂಡಿಕೊಂಡ ಸಾಲು, ಪದ್ಯಗಂಧ ಕವಿತಾ ಸಂಕಲಗಳನ್ನು ಹೊರತಂದಿದ್ದಾರೆ.
ಸೋಲೋ ಅವರ ಏಕೈಕ ಕಥಾ ಸಂಕಲನ, ಪಾರುಪತ್ಯ ನಾಟಕ ಸಂಕಲನ. ನಿರೀಕ್ಷೆ, ಅಂತರ, ಸಹಜ ವಿಮರ್ಶಾ ಕೃತಿಗಳು. ಆಧುನಿಕ ಇಂಗ್ಲಿಷ್ ಕವನಗಳು ಇವರು ಸಂಪಾದಿಸಿದ ಕೃತಿ.
ಎಚ್ ಎಲ್ ಪುಷ್ಪ ದೇಶ ಕುಲಕರ್ಣಿ ಅವರ ಪದ್ಯಗಂಧಕ್ಕೆ ಮುನ್ನುಡಿ ಬರೆದಿದ್ದರು. ‘ಅಡಿಗರ ನಂತರದ ಕಾವ್ಯ ದಾರಿಗೆ ಇನ್ನಷ್ಟು ಕಸುವು ನೀಡಲು ಹೆಗಲು ಕೊಟ್ಟ ಕವಿ’ ಎಂದು ಬಣ್ಣಿಸಿದ್ದರು. ‘ದೇಶ ಕುಲಕರ್ಣಿ ಅವರ ಕಾವ್ಯ ಮಾನವನ ಕುದಿಯುವ ಅಂತರಂಗದ ಮಾತುಗಳಿಗೆ ಓಗೊಡುತ್ತದೆ. ಗತದ ಶ್ರೀಮಂತಿಕೆ ಕಳೆದುಹೊದದ್ದರ ಬಗ್ಗೆ ವಿಷಾಧವಿದ್ದಂತೆಯೇ ಸಮಕಾಲೀನ ವಿಷಯಗಳ ಬಗ್ಗೆ ಕುತೂಹಲ ಇದೆ. ಹೀಗೆ ದೇಶ ಕುಲಕರ್ಣಿ ಕಾವ್ಯ ವರ್ತಮಾನದಲ್ಲಿ ನಿಂತು ಭೂತವನ್ನು ಗ್ರಹಿಸುವುದರ ಮೂಲಕ ಮುಂದಿನದ್ದನ್ನು ಕಾಣುವ ಪ್ರಯತ್ನ ಎಂದು ಬಣ್ಣಿಸಿದ್ದಾರೆ.






0 Comments