ಪಂಜು ಗಂಗೊಳ್ಳಿ ಕನ್ನಡ ಮಣ್ಣಿಗೆ ಮರಳಿದ್ದಾರೆ, ಈ ಹೊತ್ತಿನಲ್ಲಿ ‘ಅವಧಿ’ ಅವರ ಬಗ್ಗೆ ಆತ್ಮೀಯ ಸಾಲುಗಳನ್ನು ಬರೆಯಿತು.
ಅದಕ್ಕೆ ಪಂಜು ಗಂಗೊಳ್ಳಿ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕೆಗಳು ಯಾವತ್ತೂ ಜನಪರ. ಹಾಗಾಗಿಯೇ ಇವು ಯಾವತ್ತೂ ಆಡಳಿತ ವ್ಯವಸ್ಥೆಯ `ವಿರೋಧಿ’ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಈ ವಿರೋಧ ಯಾವತ್ತೂ ಋಣಾತ್ಮಕವಾಗಿರದೆ ಧನಾತ್ಮಕವಾಗಿರುವುದು ಇದರ ವಿಶೇಷತೆ.
ನನ್ನ ಪತ್ರಿಕೋದ್ಯಮ ಯಾತ್ರೆಯನ್ನು ಇಂತಹ ಒಂದು ಪತ್ರಿಕೆಯಿಂದಲೇ ಶುರು ಮಾಡುವ ಅವಕಾಶ ಸಿಕ್ಕಿತು. ಅದೇ ಮುಂಗಾರು. ಮೇಲಿನ ಅಂಶಗಳನ್ನು ನಾನು ಅಲ್ಲಿ ವಡ್ಡರ್ಸೆ ರಘುರಾಮ ಶೆಟ್ಟರಲ್ಲದೆ ನನ್ನದೇ ಅಥವಾ ನನಗಿಂತ ತುಸು ಹೆಚ್ಚು ಪ್ರಾಯದವರಾದ ದಿನೇಶ್, ತ್ಯಾಗರಾಜ್, ಹನೀಫ್, ಕೃಪಾಕರ್, ವಿಜೂ, ಪ್ರಕಾಶ್ ಅಬ್ಬೂರ್, ಪ್ರಹ್ಲಾದ್ ಅಗಸನಕಟ್ಟೆ ಮೊದಲಾದವರಿಂದಲೂ ಕಲಿತೆ.
ಆದರೆ, ಲಂಕೇಶ್ ಪತ್ರಿಕೆಯಲ್ಲಿ ನಾನು ಕಲಿತದ್ದು ಮತ್ತು ಅಲ್ಲಿ ನನಗೆ ಸಿಕ್ಕ ಅವಕಾಶ ಅಗಾಧವಾದುದು. ಕೆಲವೇ ಸಾಲುಗಳಲ್ಲಿ ಅದನ್ನು ಬರೆಯಲು ಸಾಧ್ಯವಿಲ್ಲ…
ನಂತರದ ೩೦ ವರ್ಷಗಳ ಇಂಗ್ಲೀಷ್ ಪತ್ರಿಕೋದ್ಯಮ ನನಗೆ ತುಸು ಮಟ್ಟದ ಆರ್ಥಿಕ ಭದ್ರತೆ ಕೊಡುವುದರ ಜೊತೆಯಲ್ಲಿ ಗಾಂಧಿಯನ್ನು ಪರಿಚಯಿಸಿ ಕೊಟ್ಟಿತು. ನನ್ನ `ಮರಳಿ ಮಣ್ಣಿಗೆ’ಯಾತ್ರೆಗೆ ಇದೇ ದೊಡ್ಡ ಪ್ರೇರಣೆ.
ನನ್ನ ಈ ಯಾತ್ರೆಯೂ ಮೊದಲಿನಿಂದಲೂ ಜನಪರ, ಆಡಳಿತ ವ್ಯವಸ್ಥೆ ವಿರೋಧಿ ನೆಲೆಯಲ್ಲಿ ಗುರುತಿಸಿಕೊಳ್ಳುವ ಒಂದು ಪತ್ರಿಕೆಯ ಮೂಲಕವೇ ಶುರುವಾಗುತ್ತಿರುವುದು ನಾನು ಸರಿಯಾದ ದಾರಿಯಲ್ಲಿದ್ದೇನೆ ಎಂಬ ಆತ್ಮವಿಶ್ವಾಸವನ್ನು ನೀಡುತ್ತಿದೆ. ನನ್ನ ಈ ಮಣ್ಣಿನ ಯಾತ್ರೆ ನನ್ನ ವೃತ್ತಿ ಜೀವನ ಮತ್ತು ನನ್ನ ಬದುಕು ಎರಡರದ್ದೂ ಆಗಿದೆ.
೫೦ ಸಂವತ್ಸರಗಳ ನಂತರವೂ ಮನುಷ್ಯನ ಬದುಕು ಸಮಾಜಮುಖಿಯಾಗದಿದ್ದರೆ ಇನ್ಯಾವಾಗ?
0 ಪ್ರತಿಕ್ರಿಯೆಗಳು