ಯಾವುದೋ ಅನಾದಿ ನೋವೊಂದು ಜಾಗ ಬದಲಾಯಿಸುತ್ತಿದೆ
ಅನಂತ ಗಾಯಗಳು ಮೈಮುರಿಯುತ್ತಿವೆ ಒಡಲಾಳದಲ್ಲಿ
ಏಕೆ ಹೀಗೆ ಎಂದು ಯಾರನ್ನೂ ಕೇಳಬಾರದು
ನೀಲ ನಕ್ಷತ್ರವೇ
ನಿನಗಾಗಿ ಸಾವಿರ ಕಣ್ಣಿನ ಅಸಂಖ್ಯ ನವಿಲ ರಕ್ತಗಂಬನಿ
ಸತ್ಯವ ಹೇಳುತ್ತೇವೆ ಶಕ್ತಿಯ ಎದುರೇ
ಏಕಲವ್ಯನ ಹೆಬ್ಬೆರಳು ತುಂಡರಿಸಿದವರೇ ಇಂದು ನಿನ್ನ ಕತ್ತು ಹಿಸುಕಿದರು
ನಮ್ಮ ನಾಳೆಗಳಲ್ಲಿ
ನಕ್ಷತ್ರಗಳು ನೆಲದ ಮೇಲೂ ಉರಿಯುತ್ತವೆ
ಬೆಳಕಿಗೆ, ಬವಣೆಗೆ, ಎಲ್ಲದಕ್ಕೂ
ಸುಮ್ಮನಿರುವ ಮಾತೇ ಇಲ್ಲ
-ವೀರಣ್ಣ ಮಡಿವಾಳರ
ನೀನು ನಕ್ಷತ್ರಗಳನ್ನು ಪ್ರೀತಿಸುವುದೇ
ನಿಜವಾಗಿದ್ದರೆ
ಅವುಗಳನ್ನು ಇಲ್ಲಿಂದಲೂ ಪ್ರೀತಿಸಬಹುದಿತ್ತು
ಅವುಗಳೆಡೆಗೆ ಹೋಗುವ ಅಗತ್ಯವಿರಲಿಲ್ಲ
-ಕು ಸ ಮಧುಸೂಧನ್
ಇವು ಪದಗಳಲ್ಲ..
ಈ ಸಮಾಜದೆದರು,
ನಮ್ಮೆಲ್ಲರ ಬೊಗಸೆಗೆ..
ಈ ಹುಡುಗ
ಇಟ್ಟು ಹೋಗಿರುವ
ಕೆಂಡದಂಥಹ
ಸುಡುವ ಪ್ರಶ್ನೆಗಳು..
-ಟಿ ಕೆ ದಯಾನಂದ್
ನಮ್ಮ ನಾಳೆಗಳಲ್ಲಿ
ನಕ್ಷತ್ರಗಳು ನೆಲದ ಮೇಲೂ
ಉರಿಯುತ್ತವೆ – ಉರಿಯಲಿ ಬಿಡಿ ,
ಅವುಗಳನ್ನೇ ಬಳಸಿಕೊಂಡು
ಅಡುಗೆಮಾಡಿದರಾಯ್ತು,
ಬದುಕಿನಲ್ಲಿ ಆಶಾವಾದಿತ್ವ ತುಂಬಿರಲಿ
-ಶಂಭುಲಿಂಗ ರಾಮಚಂದ್ರ ಚಿಗರಿ
ದುಃಖದಲ್ಲಿದ್ದಾಗಲೇ ಹೇಳಿಬಿಡಬೇಕು
ಸುಡಿ ನಿಮ್ಮ ಜಾತಿಗಳನ್ನು
ಧರ್ಮದ ಕಟ್ಟಳೆಗಳನ್ನು
ಮನುಷ್ಯ ಮನುಷ್ಯನನ್ನು ದ್ವೇಶಿಸಿ ಕೊಲ್ಲುತ್ತಿರುವ
ನಿಮ್ಮ ಸುಳ್ಳು ಆತ್ಮೋದ್ದರಾದ ಭೊಗಳೆ
ಪವಿತ್ರ ಅಪವಿತ್ರ
ಮೇಲು ಕೀಳಿನ
ಜಾತಿ ಪದ್ದತಿ ಕಲ್ಮಶ ಮನಸ್ಸುಗಳನ್ನು
ಇಲ್ಲವಾದಲ್ಲಿ ಈ ಸೃಷ್ಟಿಯಲ್ಲಿ
ಉಳಿಯುವುದು
ಕೇವಲ ಸಾಯಿಸುವ ಅಸ್ತ್ರಗಳು
ಅಸ್ತಿಪಂಜರಗಳು
ಕೃಷ್ಣ
ನೀನು ನಕ್ಷತ್ರವಾಗಿಹೆ ಎಂದು
ಕತ್ತಲಾಗುವುದನು ಕಾಯುತ್ತಿದ್ದೆ
ನಾ ಇಲ್ಲಿಂದ..
ನೀನು
ನೊಂದುಕೊಂಡು ಉಸಿರ
ಹಾಸಿದ ನೆಲದ ಮೇಲೆ
ಬಿದ್ದುಕೊಂಡು
ನಿನ್ನ ಹುಡುಕುತ್ತಿದ್ದೇನೆ
ಕಣ್ಣಲಿ ತುಂಬಿದ ನೀರಿನಲಿ
ಆದರೆ..
ನಕ್ಷತ್ರಗಳೆಲ್ಲ ಮಂಜಾಗಿ ನೀ ಕಾಣದಾಗಿಹೆ
ಹನಿ ಇಂಗಿ ಹೋದ ನೆಲದಲಿ
ನಿನ್ನ ನೆನಪ ಹುದುಗಿಸಿದ್ದೇನೆ
ಮುಂದೊಂದು ದಿನ ಬಿದ್ದ ಹನಿ
ಗಂಟಲ ಸೇರಿ
ಗ್ರಹ-ನಕ್ಷತ್ರಗಳೆನಿಸಿದವರ ಎದೆ
ತಟ್ಟಬಹುದು ಎಂದು
ನನ್ನ ಗೆಳೆಯರು ಹೀಗೆ ಮಾಡುತ್ತಿದ್ದಾರೆ
ನೀ ಕೊರಳೊಡ್ಡಿ ಸಾವಿನನುಭವದ
ಅನ್ನವಿಕ್ಕಿದ್ದಿ
ಉಣ್ಣಲಾಗುತ್ತಿಲ್ಲ
ಹನಿ ನೀರ ಹುಡುಕುತ್ತಾ
ಕತ್ತಲಿಗೆ ಬಂದಿದ್ದೇನೆ
ಕತ್ತಲು ಕಳೆದು
ವಿಜ್ಞಾನ ಸೂರ್ಯ ಬರಲಿದ್ದಾನೆ
ನಿನ್ನೆಲ್ಲ ನಕ್ಷತ್ರಗಳು
ವಿಜ್ಞಾನ ಸೂರ್ಯರಲ್ಲವೇ…
– ಪ್ರಗಾಥ ಮೋಹನ
…………………….