ಶುರುವಾಯ್ತು ನಿಮ್ಮೊಳಗೆ ಭಾವನೆಯ ಅಲೆ ಎಬ್ಬಿಸುವ ಆಟ
ಒಂದು ಫೋಟೋ- ನೂರಾರು ಕವಿತೆ
ಕಾಡುವ ಒಂದು ಫೋಟೋ ಕೊಡುತ್ತೇವೆ
ನೀವು ಕವಿತೆ ಬರೆದು ಕಳಿಸಿ
ಜೊತೆಗೆ ನಿಮ್ಮ ಫೋಟೋ ಸಹಾ ಕಳಿಸಿ
‘ಅವಧಿ’ ಸಂಪಾದಕ ಮಂಡಳಿ ಆಯ್ಕೆ ಮಾಡಿದ ಕವಿತೆಗಳನ್ನು ಪ್ರಕಟಿಸುತ್ತಾ ಹೋಗುತ್ತದೆ
ಪ್ರತೀ ಫೋಟೋ ಕವಿತೆಗೂ ಒಬ್ಬೊಬ್ಬ ಗಣ್ಯರು ಅತಿಥಿಯಾಗಿರುತ್ತಾರೆ
ಹಾಗೆ ಪ್ರಕಟಗೊಂಡ ಕವಿತೆಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಕೊಡುತ್ತಾರೆ
ಅದಕ್ಕೆ ಬಹುಮಾನವಿದೆ
ಬಹುಮಾನದ ಪ್ರಾಯೋಜಕರು- ಯುವ, ಉತ್ಸಾಹಿ ಕ್ಯಾಮೆರಾ ಆರ್ಟಿಸ್ಟ್ ನಾಗರಾಜ ಸೋಮಯಾಜಿ.
ಈಗ ತಾನೇ ‘ಫೋಕಸ್’ ಎನ್ನುವ ಒಂದು ಕನಸಿನ ತಾಣವನ್ನು ಸೃಷ್ಟಿಸಿದ್ದಾರೆ
ಕವಿತೆ ಕಳಿಸಲು ಕಡೆ ದಿನಾಂಕ ಅಂತ ಇದೆಯಾ??-
ಇಲ್ಲ, ಆದರೆ ನಾವು ಇನ್ನೊಂದು ಹೊಸ ಫೋಟೋ ‘ಅವಧಿ’ಯಲ್ಲಿ ಪ್ರಕಟಿಸುವವರೆಗೆ ಮಾತ್ರ ಕಳಿಸಬಹುದು
ಈ ಬಾರಿಯ ಅತಿಥಿ- ಜೋಗಿ
ಅದಿರಲಿ, ಈ ಫೋಟೋ ತೆಗೆದವರ ಹೆಸರು ಹೇಳಿ ಅಂತ ಕೇಳ್ತೀರಿ ಗೊತ್ತು
ಒಂದು ಕುತೂಹಲದ ಕಥೆ ಇದೆ, ಜೋಗಿ ಆಯ್ಕೆಯ ಜೊತೆಗೆ ಇದನ್ನು ಪ್ರಕಟಿಸುತ್ತೇವೆ
ಪಂಪಾಪತಿ, ಹಂಪಿ
ನೀಳವೇಣಿಯರಿಗಿದು ಕಾಲವಲ್ಲ
ಬಾಬ್’ಕಟ್ಟಿಗಿದು ಸಕಾಲ…
ಬೆಳಗ್ಗಿನ ಕುಕ್ಕರ್ ಕೂಗಿಸಿ
ಮಕ್ಕಳ ರೆಡಿಯಾಗಿಸಿ
ಗಂಡ ಆಫೀಸಿಗೆ ಅಟ್ಟಿ
ತಾನು ಆಫೀಸಿಗೆ ರೆಡಿಯಾಗುವಾಗ
ಬಾಬ್’ಕಟ್ಟಿನ ಮಹಿಮೆ
ಕೊಂಡಾಡುವರೆ ಎಲ್ಲಾ…
ನೀಳವೇಣಿಯರಿಗಿದು ಕಾಲವಲ್ಲ…
ಆಧುನಿಕ ದುಶ್ಯಾಸನನರು
ಬೀದಿಬೀದಿಯಲಿ ಇರುವಾಗ
ಅವರ ಕೈಗಳಿಗೆ ಸಿರಿಮುಡಿ ಸಿಗದೆ
ಜಾಣತನದಿ ಅಡ್ಡಾಡುವಾಗ
ಬಾಬ್’ಕಟ್ಟಿನ ಮಹಿಮೆ
ಕೊಂಡಾಡುವರೇ ಎಲ್ಲಾ…
ನೀಳವೇಣಿಯರಿಗಿದು ಕಾಲವಲ್ಲ…
ಪಾಲಪೋಷಣೆಯು ಬೇಡ
ತನ್ಮಯಳಾಗಿ ಬಾಚುವುದು ಬೇಡ
ಗಡಿಬಿಡಿಯ ಬದುಕಿನ ಅನುಕೂಲ
ಇಷ್ಟೆಲ್ಲಾ ಅನುಕೂಲವಿರುವಾಗ
ಬಾಬ್’ಕಟ್ಟಿನ ಮಹಿಮೆ
ಕೊಂಡಾಡುವರೇ ಎಲ್ಲಾ…
ನೀಳವೇಣಿಯರಿಗಿದು ಕಾಲವಲ್ಲ…
ರೋಷದ ರಕ್ತದಿ ತಣಿದ
ದ್ರೌಪದಿಯ ಸಿರಿಮುಡಿಯು
ವಚನಗಳ ಅಕ್ಕಾನ
ಮಾನಮುಚ್ಚಿದ ಸಿರಿಮುಡಿಯು
ಗಂಡಸಿನ ಗುಣಗಾನ ಪಾಡುತ
ಮಾಯವಾದ ಕಲಿಗಾಲ..
ಪವಿತ್ರ
ಅರಳಿದ ಯೌವ್ವನವೊಂದು
ಗೆಜ್ಜೆಕಟ್ಟದೆ ನಿಂತಲ್ಲೆ ಕುಣಿಯುತ್ತಿದೆ
ಹೃನ್ಮನಗಳು ತಣಿಯುವಂತೆ
ಕೆತ್ತಿದ ಶಿಲ್ಪಿಯ ಕಣ್ಣುಗಳಲ್ಲಿನ
ಯಾವ ರಾಗದೊಳಗೆ
ಹಿಡಿತಗೊಂಡಿತ್ತೊ ಹೆಣಿಕೆಗಳು??
ಆ ಹೆಣಿಕೆಗಳ ಮಧ್ಯೆ ಈಗಲೂ
ಹಾದುಹೋಗುವ ಬೆರಳುಗಳು
ಸಮ್ಮೋಹನ ರಾಗದೊಂದಿಗೆ
ಮಿಳಿತಗೊಂಡಂತೆ ರೋಮಾಂಚನಗೊಳ್ಳುತ್ತವೆ
ಸಣ್ಣ ನಡುವಿನ ಕಡಲೀಗ ಸೆಳೆಯುತ್ತಿದೆ
ಜಲಪಾತಗಳಾಗಿ ಧುಮ್ಮಿಕ್ಕಿ ಹರಿಯುವ
ಎಲ್ಲ ನದಿಗಳನ್ನು ಜೀವಂತವಾಗಿಯೆ…
ಎಂದೂ ಮಾಸದ ಲಾವಣ್ಯದ ಗುರುತಾಗಿ
ಬಣ್ಣವಿಲ್ಲದ ಭಾವಶಿಲೆಯ ಆತ್ಮದೊಳಗೆ
ದಿನವೂ ಚಿಗುರುವುದೇನೋ
ಹೂವಿನಂತಹ ವಿಶ್ವಾಸ??
ಪಂಪಾಪತಿ ಹಂಪಿ ಅವರ ಕವಿತೆ ಆಧುನಿಕ ಜಗತ್ತಿನ ಹೆಣ್ಣಿನ ಧಾವಂತ ತೆರೆದಿಟ್ಟಿದೆ. ಪವಿತ್ರ ಅವರ ಕವಿತೆ ಸೊಗಸಾಗಿದೆ.
kavithe sogasagide….