ಸುಚಿತ್ ಕೋಟ್ಯಾನ್ ಕುರ್ಕಾಲು
ಅನೇಕ ವರುಷಗಳ ಬಳಿಕ ನಾನು ಕಲಿತ ಶಂಕರಪುರ ಹೈಸ್ಕೂಲಿಗೆ ಹೋಗಿದ್ದೆ. ಶಾಲೆಯಲ್ಲಾದ ಬದಲಾವಣೆಗಳನ್ನು ಕಂಡು ಸುಮ್ಮನೇ ಗಮನಿಸುತ್ತಿದ್ದ ನನಗೆ ಈ ‘Honesty Shop’ ಕಂಡು ಅಚ್ಚರಿಯಾಯಿತು.
ವೇಲ್ಸ್ ದೇಶದಲ್ಲಿರುವ ‘ಹೇ ಆನ್ ವೇ’ ಪುಸ್ತಕದೂರಲ್ಲಿ ‘ಆನೆಸ್ಟಿ ಶಾಪು’ಗಳಿವೆಯೆಂದು ಓದಿದ್ದೆ. ಜರ್ಮನಿಯಲ್ಲಿ ಒಂದು ಕಡೆ ಅಂಗಡಿಯೊಂದರಲ್ಲಿ ‘ಆನೆಸ್ಟಿ ಶಾಪಿ’ನ ರೀತಿಯೊಂದನ್ನು ನೋಡಿದ್ದೆ. ಈಗ ನೋಡಿದರೆ ನಮ್ಮೂರಿನ ಶಾಲೆಯಲ್ಲೂ ಆನೆಸ್ಟಿ ಶಾಪು ಬಂದಿದೆ!
ಅಸಲಿಗೆ ಈ ಆನೆಸ್ಟಿ ಶಾಪ್ಗೆ ಮಾಲೀಕರಿಲ್ಲ, ನೋಡಿಕೊಳ್ಳಲು ಕೆಲಸದವರೂ ಇಲ್ಲ. ಇಲ್ಲಿ ಸತ್ಯವೇ ಮಾಲೀಕ. ಪ್ರಾಮಾಣಿಕತೆಯೇ ವ್ಯವಹಾರದ ಮೂಲ ಮಂತ್ರ. ಇಂತಹದ್ದೊಂದು ಕಲ್ಪನೆಯನ್ನು ನನ್ನ ಶಾಲೆಗೆ ತಂದದ್ದು ಶಂಕರಪುರದ ಜೇಸಿ ಸಂಸ್ಥೆ. ಜೇಸಿಸ್ ಸಂಸ್ಥೆಯಲ್ಲಿ ಈ ಹಿಂದೆ ಕೆಲವು ವರುಷ ನಾನೂ ಇದ್ದೆ ಎನ್ನುವ ಖುಷಿ ನನಗಿದೆ. ಜೇಸಿಸ್ ಸಂಸ್ಥೆಗಳು ಇಂತಹದ್ದನ್ನು ಹಲವು ಶಾಲೆಗಳಲ್ಲಿ ಆರಂಭಿಸಿವೆ ಎಂದು ಕೇಳಲ್ಪಟ್ಟೆ.

ಜೇಸಿ ಸಂಸ್ಥೆ ಸ್ವತಃ ಪ್ರಾಯೋಜಕತ್ವ ನೀಡಿ ಮಕ್ಕಳಿಗೆ ಬೇಕಾದ ಪೆನ್ನು, ಪೆನ್ಸಿಲ್, ರಬ್ಬರ್, ಸ್ಕೇಲು, ಕೋನ ಮಾಪಕ, ಪೇಪರ್, ಗ್ರಾಫ್ ಶೀಟುಗಳನ್ನು ಖರೀದಿಸಿ ಇಲ್ಲಿ ಇಡುತ್ತದೆ. ಜೊತೆಗೊಂದು ದುಡ್ಡು ಹಾಕಲು ಡಬ್ಬಿ. ಮಕ್ಕಳು ತಮ್ಮ ಅಗತ್ಯಕ್ಕೆ ಬೇಕಾದ ಸ್ಟೇಷನರಿಗಳನ್ನು ಇಲ್ಲಿಂದಲೇ ತೆಗೆದುಕೊಳ್ಳುತ್ತಾರೆ. ಅದರಲ್ಲಿ ನಮೂದಿಸಿದ ದುಡ್ಡನ್ನು ಪ್ರಾಮಾಣಿಕವಾಗಿ ಡಬ್ಬಿಗೆ ಹಾಕುತ್ತಾರೆ.
ಒಂದು ವೇಳೆ ದುಡ್ಡು ಹಾಕದೆ ವಸ್ತು ತೆಗೆದರೆ ಯಾರೂ ಗದರಿಸುವುದಿಲ್ಲ. ಆದರೆ ಆತ್ಮಸಾಕ್ಷಿಗೆ ಬೆಲೆಕೊಡಬೇಕೆನ್ನುವ ಪಾಠ ಕಲಿಸುವ ಈ ಆನೆಸ್ಟಿ ಶಾಪಿನ ಮುಂದೆ ಯಾರೂ ಮೋಸ ಮಾಡುವುದಿಲ್ಲ. ಇಲ್ಲಿ ಸಂಗ್ರಹವಾದ ದುಡ್ಡು ಶಾಲೆಗೆ ಹೋಗುತ್ತದೆ. ಆ ಮೂಲಕ ಈ ಕೈಂಕರ್ಯ ಮುಂದುವರಿಯುತ್ತದೆ.
‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು-ಬಳಗ’ ಎಂದು ಕ್ಲಾಸಿನಲ್ಲಿ ಹಾಡುವ ಮಕ್ಕಳಿಗೆ ಸತ್ಯದ ಶಕ್ತಿ, ಪ್ರಾಮಾಣಿಕತೆಯ ಬೆಲೆ ಏನೆಂದು ನಿಜಾರ್ಥದಲ್ಲಿ ಶಾಲಾ ಕಾರಿಡಾರಿನ ಈ ಅಂಗಡಿ ಪರಿಚಯಿಸುತ್ತಿದೆ.

ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಅಂಗಡಿ ಇನ್ನಷ್ಟು ಹುಮ್ಮಸ್ಸಿನಿಂದ ಮುಂದುವರೆಯಲಿ ಎಂಬುದು ನನ್ನ ಹಾರೈಕೆ. ಇಂತಹದ್ದೊಂದು ಯೋಜನೆ ಆರಂಭಿಸಿದ ಶಂಕರಪುರ ಜಾಸ್ಮಿನ್ ಜೇಸಿಸ್ ಸಂಸ್ಥೆಗೂ, ಪ್ರೋತ್ಸಾಹಿಸಿ ಮುನ್ನಡೆಸುತ್ತಿರುವ ಸೈಂಟ್ ಜೋನ್ಸ್ ಶಾಲೆಗೂ ಅಭಿನಂದನೆ.








0 Comments